ಶನಿವಾರ, ಆಗಸ್ಟ್ 24, 2013
ಅರೆಯೂರು ಚಿ.ಸುರೇಶ್ ರವರ ಪರಿಚಯ
ಸಂಪಾದಕರಾದ ಅರೆಯೂರು ಚಿ.ಸುರೇಶ್ ರವರು ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ಅರೆಯೂರು ಗ್ರಾಮದ ಶ್ರೀಮತಿ ಜಯಮ್ಮ, ಶ್ರೀ. ಚಿಕ್ಕಮಾದಯ್ಯನವರ ದ್ವಿತೀಯ ಪುತ್ರನಾಗಿ 1983 ರ ಆಗಸ್ಟ್ 30 ನೇ ತಾರೀಖು ಜನಿಸಿದರು ಇವರ ಮೊದಲ ಹೆಸರು ಲೋಕೇಶ್ ನಂತರ ಮನೆಯವರು ಪ್ರೀತಿಯಿಂದ ಸೂರಿ ಎಂದು ಕರೆದು, ಶಾಲೆಯಲ್ಲಿ ಎ.ಸಿ ಸುರೇಶ್ ಎಂದು ಹೇಳಿದರು, ಅರೆಯೂರು ಚಿಕ್ಕಮಾದಯ್ಯ ಸುರೇಶ್ ಅಲಿಯಾಸ್ರೆಯೂರು ಚಿ.ಸುರೇಶ್ ರವರು ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಅರೆಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅರೆಯೂರು ಗ್ರಾಮದ ಶ್ರೀ ಸಿದ್ಧಗಂಗಾ ಗ್ರಾಮಾಂತರಶಾಲೆಯಲ್ಲಿ ಪರೀಕ್ಷೆಶಿಕ್ಷಣವನ್ನು ಮುಗಿಸಿ ಹಾಲನೂರು ಗ್ರಾಮದ ಶ್ರೀ ಸಿದ್ಧಗಂಗಾ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ತುಮಕೂರು ನಗರದ ಶಿರಾಗೇಟ್ನಲ್ಲಿರುವ ಕ್ರಿಶ್ಚಿಯನ್ ಯೂನಿಯನ್ ಶಾಲೆಯಲ್ಲಿ ಬಿ.ಎ. ಪದವಿ ಮುಗಿಸಿ, ವಿದ್ಯೋದಯ ಕಾನೂನು ಕಾಲೇಜಿಗೆ ಎರಡು ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿ, ತಮ್ಮ ಓದನ್ನು ಅರ್ಧದಲ್ಲೇ ಮೊಟಕುಗೊಳಿಸಿ, ತುಮಕೂರಿನ ಅಮರ ಸಂದೇಶ ಸಂಜೆ ಪತ್ರಿಕೆ, ತುಮಕೂರು ವಾರ್ತೆ, ನಗೆಮುಗುಳು, ಪತ್ರಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ, ಕಥೆ, ಕವಿತೆ, ಹಾಸ್ಯ ಲೇಖನ, ವ್ಯಂಗ್ಯಚಿತ್ರ, ಚುಟುಕು ಸೇರಿದಂತೆ ಹಲವು ಸಾಹಿತ್ಯ ಪ್ರಾಕಾರಗಳಲ್ಲಿ ಕೃಷಿ ಮಾಡಿರುವ ಅರೆಯೂರು ಚಿ.ಸುರೇಶ್ ರವರು, ಅರೆಯೂರು ಚಿ.ಸುರೇಶ್, ಅರೆಯೂರು ಸುರೇಶ್, ಕಾವ್ಯ ಮಧುಗಿರಿ, ಮಾಣಿಕ್ಯ ಮಡಿಕೇರಿ, ಅರೆಯೂರು ಶ್ರೀ ವೈದ್ಯಸುತ, ಅಚಿಸು, ನಾದಪ್ರಿಯ, ಭಾರತಿಪ್ರಿಯ, ಅರೆಯೂರು ಕಾವ್ಯಸುತ, ಎಂಬ ಹಲವಾರು ಕಾವ್ಯನಾಮದಿಂದ ಹಲವಾರು ಲೇಖನಗಳನ್ನು, ಕಥೆ ಕವನಗಳನ್ನು ರಚಿಸಿದ್ದಾರೆ
ಅರೆಯೂರು ಚಿ.ಸುರೇಶ್ ರವರ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಪ್ರಮುಖವಾದವುಗಳೆಂದರೆ ಪ್ರಜಾವಾಣಿ, ಸುಧಾ ಮಯೂರ, ತುಷಾರ, ಉದಯವಾಣಿ, ಉದಯಕಾಲ,,ಮಲ್ಲಿಗೆ ಮಾಸಪತ್ರಿಕೆ, ನವರಾಗಸಂಗಮ, ಸಖಿ, ನಿಮ್ಮೆಲ್ಲರ ಮಾನಸ, ಮಾಣಿಕ್ಯ, ಓ ಮನಸೇ, ಹಾಯ್ ಬೆಂಗಳೂರು, ಸಂಜೆವಾಣಿ, ಗೃಹಶೋಭ, ಯುಗಪುರುಷ, ನಗೆಮುಗುಳು, ಪ್ರಜಾಪ್ರಗತಿ, ಪ್ರಜಾಮನ, ತುಮಕೂರು ಮಿತ್ರ, ಗೋವ ರಾಜ್ಯದಿಂದ ಪ್ರಕಟವಾಗುತಿದ್ದ ಗೋವ ದರ್ಪಣ, ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ
ಅಂತರ್ಜಾಲ ಪತ್ರಿಕೆಗಳಾದ ಪಂಜು, ಅವಧಿ, ಸಂಪದ, ವಿಶ್ವ ಕನ್ನಡಿಗ ನ್ಯೂಸ್, ಕನ್ನಡ ಆನ್ ಲೈನ್ ನ್ಯೂಸ್, ಕನ್ನಡ ನ್ಯೂಸ್ ನೌ ಸೇರಿದಂತೆ ಹಲವು ತಾಣಗಳಲ್ಲಿ ಲೇಖನ, ಕಥೆ ಕವಿತೆ ಪ್ರಕಟಗೊಂಡಿವೆ
ಅರೆಯೂರು ಚಿ.ಸುರೇಶ್ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕೆಗಳು ಅರೆಯೂರು ಪತ್ರಿಕೆ, ಅರೆಯೂರು ನ್ಯೂಸ್, ಬಡವರ ಕೂಗು, ಸುದ್ದಿ ಸಮಾಚಾರ, ಕನ್ನಡ ಇ ನ್ಯೂಸ್, ತುಳು ನ್ಯೂಸ್ ಪ್ರಮುಖವಾದವುಗಳು
ವಾಲ್ಮೀಕಿ ಮಿತ್ರ ಪತ್ರಿಕೆಯಲ್ಲಿ ಕಾರ್ಯಕಾರಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದು, ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಗುಬ್ಬಿ ತಾಲ್ಲೂಕು ವರದಿಗಾರರಾಗಿ, ಪ್ರಜಾಮನ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ತುಮಕೂರು ವಾರ್ತೆ, ಅಮರ ಸಂದೇಶ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ
ಅರೆಯೂರು ಚಿ.ಸುರೇಶ್ ರವರಿಗೆ ಕಾವ್ಯಶ್ರೀ, ಹೆಮ್ಮೆಯ ಕನ್ನಡಿಗ, ಕನ್ನಡ ಮಾಣಿಕ್ಯ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ
ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದ ಅರೆಯೂರು ಚಿ.ಸುರೇಶ್ ರವರು ದೂರದ ಕರಾವಳಿ ಭಾಗದ ತುಳು ಭಾಷೆಯ ತುಳು ನ್ಯೂಸ್ ಆನ್ಲೈನ್ ಪತ್ರಿಕೆ ಮಾಡಿ ತುಳು ನಾಡಿನ ತುಳು ಭಾಷಿಕರಿಗೆ ತುಳು ಭಾಷೆಯಲ್ಲಿ ಸುದ್ದಿ ನೀಡುತ್ತಿರುವ ಕಾರ್ಯ ಶ್ಲಾಘನೀಯ
ಅರೆಯೂರು ಚಿ.ಸುರೇಶ್ ರವರ ಪ್ರಕಟಿತ ಕೃತಿಗಳು
ಶಿರ್ಷಿಕೆ | ಪ್ರಕಾರ | ಪ್ರಕಟಿತ ವರ್ಷ
ಕಾವ್ಯಮಂಜರಿ (ಕವನ ಸಂಕಲನ) 2012
ಮಾಣಿಕ್ಯ (ಕಥಾಸಂಕಲನ) 2014
ಅನಾಮಿಕ (ಕಾದಂಬರಿ) 2016
ಕನಸು (ಕವನ ಸಂಕಲನ) 2014
ಪ್ರೇಮಾಯಣ (ಕಥಾಸಂಕಲನ) 2017
ಮಂಥನ (ಲೇಖನ ಸಂಗ್ರಹ) 2017
ಆರೋಗ್ಯವಾಗಿರೋಣ... (ಲೇಖನ ಸಂಗ್ರಹ) 2019
ಶ್ರೀ ವೈದ್ಯನಾಥೇಶ್ವರ ಸ್ವಾಮಿ ಚರಿತ್ರೆ (ಲೇಖನ ಸಂಗ್ರಹ) 2013
ನಮ್ಮೂರ ಇತಿಹಾಸ (ಲೇಖನ ಸಂಗ್ರಹ) 2013
(ಎಲ್ಲಾ ಕೃತಿಗಳ ಪ್ರಕಾಶಕರು: ಶಮಿತಾ ಪಬ್ಲಿಕೇಶನ್, ಪಡುಬಿದ್ರಿ, ಉಡುಪಿ)
![]() |
ಶುಕ್ರವಾರ, ಜುಲೈ 12, 2013
ಭಾನುವಾರ, ಜೂನ್ 30, 2013
- ಹಿಟ್ಲರ್ಗಾಗಿ ಸತ್ತು ಬದುಕಿದ್ದ ಮಾರ್ಗೋಟ್!
- ಹಿಟ್ಲರ್ಗಾಗಿ ಪ್ರತಿದಿನವೂ ಸತ್ತು ಬದುಕಿದ್ದ ಮಾರ್ಗೋಟ್..!
ಜರ್ಮನಿಯನ್ನು ಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಭಾರೀ ಪುಕ್ಕಲ. ಯಾರಾದರೂ ತನಗೆ ಆಹಾರದಲ್ಲಿ ವಿಷ ಸೇರಿಸಿ ಸಾಯಿಸಬಹುದೆಂಬುದು ಭೀತಿ ಆತನನ್ನು ಸದಾ ಕಾಡುತ್ತಿತ್ತು. ಹೀಗಾಗಿ ತನಗೆ ಸಿದ್ಧಪಡಿಸಿದ್ದ ಆಹಾರ ಪರೀಕ್ಷಿಸಲೆಂದೇ 15 ಮಹಿಳೆಯರ ನೇಮಿಸಿಕೊಂಡಿದ್ದ. ಅವರೆಲ್ಲಾ ಆಹಾರ ತಿಂದ ಮೇಲೂ ಬದುಕಿದ್ದಾರೆ ಎಂಬುದನ್ನು ಖಚಿತಡಿಸಿಕೊಂಡ ಬಳಿಕವಷ್ಟೇ ಆತ ತಾನು ಆಹಾರ ತಿನ್ನುತ್ತಿದ್ದ. ಹೀಗೆ ಆಕಸ್ಮಿಕವಾಗಿ ಆತನ ಕೈಗೆ ಸಿಕ್ಕು, ಆಹಾರ ಪರೀಕ್ಷೆಯ ಕೆಲಸಕ್ಕೆ ನಿಯೋಜಿಸಲ್ಪಟ್ಟಿದ್ದು ಮಾರ್ಗೋಟ್ ವೋಕ್ ಎಂಬ ಮಹಿಳೆ.
ಹಿಟ್ಲರ್ ಸಸ್ಯಾಹಾರಿ..!
ಎರಡನೇ ಮಹಾಯುದ್ಧದ ವೇಳೆ ಪತಿ ಜರ್ಮನ್ ಸೇನೆಯಲ್ಲಿ ಸೇವೆಗೆ ತೆರಳಿದ ವೇಳೆ, ಈಕೆ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹಿಟ್ಲರ್ನ ಕೈಗೆ ಸಿಕ್ಕಿಬಿದ್ದಿದ್ದಳು. ಆತ ಮಾರ್ಗೋಟ್ಳನ್ನು ಆಹಾರ ಪರೀಕ್ಷೆ ಕೆಲಸಕ್ಕೆ ಸೇರಿಸಿಕೊಂಡಿದ್ದ. ಶುದ್ಧ ಸಸ್ಯಾಹಾರಿಯಾಗಿದ್ದ ಹಿಟ್ಲರ್ನ ಆಹಾರವನ್ನು ತಿನ್ನುವುದೇ ಮಾಗೋìಟ್ ಸೇರಿದಂತೆ 15 ಮಹಿಳೆಯರ ಏಕೈಕ ಕೆಲಸವಾಗಿತ್ತು. ಪ್ರತಿ ಬಾರಿ ಆಹಾರ ಬಾಯಿಗಿಟ್ಟಾಗಲೂ ಎಲ್ಲರೂ ಜೀವಭಯಕ್ಕೆ ಒಳಗಾಗಿರುತ್ತಿದ್ದರು. ರುಚಿಯಾದ ಆಹಾರ ಬಾಯಲ್ಲಿದ್ದರೂ, ಅದರಲ್ಲಿ ವಿಷ ಇರಬಹುದೇನೂ ಎಂಬ ಆತಂಕ ಅವರನ್ನೆಲ್ಲಾ ಕಾಡುತ್ತಿತ್ತು.
ಇಷ್ಟೆಲ್ಲಾ ಭದ್ರತೆ ಇದ್ದರೂ, 1944ರಲ್ಲಿ ಹಿಟ್ಲರ್ನ ಆಪ್ತ ಬಳಗದಲ್ಲಿದ್ದ ವ್ಯಕ್ತಿಯೋರ್ವನೇ ಬಾಂಬ್ ದಾಳಿ ನಡೆಸಿ ಹಿಟ್ಲರ್ ಹತ್ಯೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಹಿಟ್ಲರ್ ಬದುಕುಳಿದ. ಈ ಸ್ಫೋಟದ ಘಟನೆಯ ಸಮಯದಲ್ಲೇ ಆಪ್ತರ ಸಲಹೆ ಮೇರೆಗೆ ಮಾರ್ಗೋಟ್ ಹಿಟ್ಲರ್ನ ಆವಾಸಸ್ಥಾನದಿಂದ ಪರಾರಿಯಾಗಿ ಬರ್ಲಿನ್ ಸೇರಿಕೊಂಡಿದ್ದಳು. ಆದರೆ ಉಳಿದ 14 ಜನ ಸೇವಕಿಯರು ಹಿಟ್ಲರ್ ಬಳಿಯೇ ಉಳಿದುಕೊಂಡಿದ್ದರು.
ಮುಂದೆ ಕೆಲವೇ ದಿನಗಳಲ್ಲಿ ಸೋವಿಯತ್ ಒಕ್ಕೂಟದ ಪಡೆಗಳು ಜರ್ಮನ್ ಮೇಲೆ ದಾಳಿ ನಡೆಸಿ ದೇಶವನ್ನು ಕೈವಶ ಮಾಡಿಕೊಂಡವು. ಸೋವಿಯತ್ ಪಡೆಗಳು ಹಿಟ್ಲರ್ನ ಎಲ್ಲಾ 14 ಆಹಾರ ಪರೀಕ್ಷಕಿಯರನ್ನು ಗುಂಡಿಟ್ಟು ಹತ್ಯೆ ಮಾಡಿದವು. ಇತ್ತ ಹಿಟ್ಲರ್ನಿಂದ ಪಾರಾಗಿದ್ದ ಮಾರ್ಗೋಟ್ ರಷ್ಯಾ ಸೈನಿಕರ ಕೈಯಲ್ಲಿ ಸತತ 14 ದಿನ ಅತ್ಯಾಚಾರಕ್ಕೆ ತುತ್ತಾದಳು.
ಮುಂದೆ ಯುದ್ಧ ಮುಗಿದ ಮೇಲೆ ಆಕೆ ಹೊಸ ಜೀವನ ಕಂಡುಕೊಂಡಿದ್ದಳು. ಆದರೆ ತಾನು ಹಿಟ್ಲರ್ನ ಆಹಾರ ಪರೀಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ವಿಷಯವನ್ನೂ ಮಾರ್ಗೋಟ್ ಯಾರಿಗೂ ತಿಳಿಸಿರಲಿಲ್ಲ. ತಿಳಿಸಿದರೆ ಯಾರಾದರೂ ಹತ್ಯೆ ಮಾಡುವ ಭಯ ಆಕೆಯನ್ನು ಕಾಡುತ್ತಿತ್ತು. ಇದೀಗ ಜೀವನದ ಕಡೆಯ ಕ್ಷಣಗಳನ್ನು ಎಣಿಸುತ್ತಿರುವ ಮಾರ್ಗೋಟ್, ತನ್ನ ಅನುಭವಗಳನ್ನೆಲ್ಲಾ ಬಯಲು ಮಾಡಿದ್ದಾಳೆ. ಅದರಲ್ಲಿ ಆಕೆ ತನ್ನ ಈ ಕಥೆ ಹೇಳಿಕೊಂಡಿದ್ದಾಳೆ.
ಸೋಮವಾರ, ಮೇ 13, 2013
ಗುಬ್ಬಚ್ಚಿ ಕಣ್ಣಿಗೇಕೋ ಕಾಣದಮ್ಮ.....
ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಮಾನವೀಯ ಸಂಬಂಧಗಳ ಕೊಂಡಿ ಕಳಚುತ್ತಿರುವ ಇಂದಿನ ದಿನಗಳಲ್ಲಿ ಪಕ್ಷಿಗಳೆಡೆಗಿನ ಪ್ರೀತಿ- ವಾತ್ಸಲ್ಯವನ್ನು ಕಾಪಾಡಡಲು ಪ್ರಯತ್ನಿಸುತ್ತಿರುವ ಇಂತಹ ಕೆಲವು ಪರಿಸರ ಪ್ರೇಮಿಗಳ ಪ್ರಯತ್ನಗಳು ಎಲ್ಲರಿಗೂ ಮಾದರಿಯಾಗಲಿ. ಪರಿಸರ ಸಮತೋಲನ ಕಾಪಾಡಲು ಪ್ರಯತ್ನಿಸಿ, ಕಳೆದುಕೊಳ್ಳುತ್ತಿರುವ ಬಾಂಧವ್ಯ, ಪರಿಸರದ ಕೊಂಡಿಯನ್ನು ಮತ್ತೆ ಕೂಡಿಸಲು ಪ್ರಯತ್ನಿಸೋಣ. ಪಕ್ಷಿಗಳು ಮತ್ತೆ ನಮ್ಮ ನಮ್ಮ ಮನೆಯಂಗಳದಲಿ ಚಿಲಿಪಿಲಿಗುಟ್ಟಲಿ. ಅವುಗಳ ಅಳಿವು-ಉಳಿವಿನೊಂದಿಗೆ ನಮ್ಮ ಬದುಕೂ ಅಂಟಿದೆ- ಭಾವನಾತ್ಮಕ ನಂಟಿದೆ. ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವ ಯಾರನ್ನು ?ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು? ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನನ್ನು? ಎಂದು ಮತ್ತೆ ಹಾಡೋಣ. ನಮ್ಮ ಆತ್ಮೀಯ ಜನ-ಪ್ರಿಯ ಗುಬ್ಬಕ್ಕನನ್ನು ಮತ್ತೆ ನಮ್ಮ ಮನ-ಮನೆಯಂಗಳಕ್ಕೆ ತರಲು ಪ್ರಯತ್ನಿಸೋಣ.
ಶನಿವಾರ, ಏಪ್ರಿಲ್ 27, 2013
“ಅವಳ ಬಾಳ ಪುಟಗಳಿಂದ”
ಗುರುವಾರ, ಡಿಸೆಂಬರ್ 1, 2011
ಬುಧವಾರ, ನವೆಂಬರ್ 30, 2011
ಗುರುವಾರ, ನವೆಂಬರ್ 3, 2011
ಯಾಕೆ ಕಾಡುತಿದೆ ಸುಮ್ಮನೆ ನನ್ನನು ಈ …ಹಾಡು?
-ಅರೆಯೂರು ಚಿ.ಸುರೇಶ್
ಬುಧವಾರ, ಜುಲೈ 6, 2011
ಪ್ರೀತಿಯ ಹುಡುಗಿ
ಪ್ರೀತಿಯ ಹುಡುಗಿ, ನೀನು ನಾನಗಲು ಸಾಧ್ಯವಿಲ್ಲ, ನಾನು ನೀನಾಗಲು ಸಾಧ್ಯವಿಲ್ಲ. ನೀನು ನಾನಾಗಿ ನಾನು ನೀನಾದರೂ ನನ್ನಲ್ಲಿರುವ ನೀನು ನಿನ್ನಲ್ಲಿರುವ ನಾನು ಬೇರೆ ಬೇರೆಯೇ. ನೀನು ನಿನಗಾಗಿ ನಾನಾಗುವುದು, ನಾನು ನನಗಾಗಿ ನೀನಾಗುವುದು, ನಾನು ನಿನ್ನಲ್ಲಿಯ ನನ್ನನ್ನು, ನೀನು ನನ್ನಲ್ಲಿಯ ನಿನ್ನನ್ನು ನೋಡಿಕೊಳ್ಳುವ ಆಸೆಯಿಂದ ಮಾತ್ರ. ನೀನು ನನಗಾಗಿ ನಾನಾಗುವ ಬದಲು, ನಾನು ನಿನಗಾಗಿ ನೀನಾಗುವ ಬದಲು, ನಾನು ನಾನಾಗಿಯೇ ಇದ್ದು ನೀನು ನೀನಾಗಿಯೇ ಇದ್ದು, ನನ್ನಲ್ಲಿರುವ ನಿನ್ನನ್ನ ನನ್ನೊಳಗೆ ಕಂಡು ನಿನ್ನಲ್ಲಿರುವ ನನ್ನನ್ನು ನಿನ್ನೊಳಗೆ ಕಂಡುಕೊಳ್ಳುವುದೇ ಬದುಕು ಅರಿತು ಕೊಳ್ಳುವುದೆಂದರೆ ಅದೇ ತಾನೆ? ಪ್ರೀತಿಯ ಹುಡುಗಿ,
ನೀನು
ನಾನಗಲು ಸಾಧ್ಯವಿಲ್ಲ, ನಾನು ನೀನಾಗಲು ಸಾಧ್ಯವಿಲ್ಲ. ನೀನು ನಾನಾಗಿ ನಾನು ನೀನಾದರೂ ನನ್ನಲ್ಲಿರುವ ನೀನು ನಿನ್ನಲ್ಲಿರುವ ನಾನು ಬೇರೆ ಬೇರೆಯೇ.ನೀನು ನಿನಗಾಗಿ ನಾನಾಗುವುದು, ನಾನು ನನಗಾಗಿ ನೀನಾಗುವುದು, ನಾನು ನಿನ್ನಲ್ಲಿಯ ನನ್ನನ್ನು, ನೀನು ನನ್ನಲ್ಲಿಯ ನಿನ್ನನ್ನು ನೋಡಿಕೊಳ್ಳುವ ಆಸೆಯಿಂದ ಮಾತ್ರ. ನೀನು ನನಗಾಗಿ ನಾನಾಗುವ ಬದಲು, ನಾನು ನಿನಗಾಗಿ ನೀನಾಗುವ ಬದಲು, ನಾನು ನಾನಾಗಿಯೇ ಇದ್ದು ನೀನು ನೀನಾಗಿಯೇ ಇದ್ದು, ನನ್ನಲ್ಲಿರುವ ನಿನ್ನನ್ನ ನನ್ನೊಳಗೆ ಕಂಡು ನಿನ್ನಲ್ಲಿರುವ ನನ್ನನ್ನು ನಿನ್ನೊಳಗೆ ಕಂಡುಕೊಳ್ಳುವುದೇ ಬದುಕುಅರಿತು ಕೊಳ್ಳುವುದೆಂದರೆ ಅದೇ ತಾನೆ?
ಭಾನುವಾರ, ಮಾರ್ಚ್ 27, 2011
ನಮ್ಮ ಮನೆಯ ಬಂಗಾರ
ಭಾನುವಾರ, ಮಾರ್ಚ್ 20, 2011
"ಬೆಳಕಿಗೊಂದು ಹಣತೆ" ಕವನ ಸಂಕಲನ ಬಿಡುಗಡೆ
ಗುರುವಾರ, ಜನವರಿ 13, 2011
ಗುರುವಾರ, ಡಿಸೆಂಬರ್ 9, 2010
ಅಮರ ಪ್ರೇಮದ ಕಥೆ.
ಕಥೆ. `ಪ್ರೀತಿ' ಎಂಬ ಎರಡಕ್ಷರಕ್ಕೆ ಇರುವ ತಾಕತ್ತು ಎಂಥದೆಂಬುದಕ್ಕೆ ಸಾಕ್ಷಿಯಾಗುವಂಥ
ಕಥೆ.
ನಮ್ಮ ಕಥಾನಾಯಕಿ, ಒಂದಿಡೀ ತಲೆಮಾರಿಗೇ ಆದರ್ಶವಾಗುವಂಥವಳು. ಅವಳ ಹೆಸರು ರೀನೀ ಕ್ಲೈನ್. ಥೇಟ್ ಅಪ್ಸರೆಯಂತಿರುವ ಆಕೆ, ತನ್ನ ಬಹುಕಾಲದ ಗೆಳೆಯ ಟೈ ಜೀಗೆಲ್ನನ್ನು
ಮದುವೆಯಾಗಿದ್ದಾಳೆ. ಅರೆ, ಪ್ರಿಯತಮನನ್ನು ಮದುವೆಯಾದರೆ, ಅದರಲ್ಲಿ ವಿಶೇಷವೇನು ಬಂತು
ಎಂದಿರಾ? ಕೇಳಿ, ವಿಶೇಷ ಇರುವುದೇ ಅಲ್ಲಿ. ಏನೆಂದರೆ, ಟೈ ಜೀಗೆಲ್ಗೆ ಒಂದು
ಕಣ್ಣಿಲ್ಲ. ಒಂದು ಕೈ ಇಲ್ಲ. ಎರಡೂ ಕಿವಿಗಳಿಲ್ಲ. ಮೂಗು, ಇರಬೇಕಾದ ಸ್ಥಿತಿಯಲ್ಲಿಲ್ಲ.
ಹಲ್ಲುಗಳಿಗೆ ಒಂದು ಆಕಾರವಿಲ್ಲ. ತಲೆಯಲ್ಲಿ ಕೂದಲೂ ಇಲ್ಲ. ಹತ್ತು ವರ್ಷಗಳ ನಂತರ
ಜೇಗೆಲ್ ಬದುಕಿರುತ್ತಾನಾ ಎಂಬ ವಿಷಯವಾಗಿ ಯಾವ ಡಾಕ್ಟರೂ ಗ್ಯಾರಂಟಿ ಕೊಡುತ್ತಿಲ್ಲ.
ಇದೆಲ್ಲ ಗೊತ್ತಿದ್ದರೂ, ನಂಗೇ ಅವನೇ ಬೇಕು ಎಂದು ರೀನೀ ಕ್ಲೈನ್ ಪಟ್ಟು
ಹಿಡಿದಿದ್ದಾಳೆ. ಅವನನ್ನು ದಕ್ಕಿಸಿಕೊಂಡಿದ್ದಾಳೆ ಮತ್ತು ನೂರಾರು ಜನರ ಸಮ್ಮುಖದಲ್ಲಿ
ಅವನನ್ನು ಮದುವೆಯಾಗಿದ್ದಾಳೆ.
ನಿಜ ಹೇಳಬೇಕೆಂದರೆ, ಒಂದು ಕಾಲದಲ್ಲಿ ರೀನೀ ಕ್ಲೈನ್ಗಿಂತ ನಾಲ್ಕು ಪಟ್ಟು
ಚೆಂದಕ್ಕಿದ್ದವನು ಟೈ ಜೀಗೆಲ್. ಅವನ ಕಟ್ಟುಮಸ್ತಾಗಿದ್ದ `ಬಾಡಿ' ನೋಡಿಯೇ ನಾನು ಮೊದಲ
ನೋಟದಲ್ಲೇ ಕ್ಲೀನ್ಬೋಲ್ಡ್ ಆಗಿಬಿಟ್ಟೆ ಎಂದವಳು ರೀನಿ. ಹಾಗೆ, ಸುರಸುಂದರಾಂಗನಂತಿದ್ದ
ಟೈ ಜೀಗೆಲ್, ಕೈ ಇಲ್ಲದ, ಕಿವಿಯಿಲ್ಲದ, ಕೆನ್ನೆಯ ನೈಸ್ನೈಸ್ ಎಂಬಂಥ ಭಾಗವೂ ಇಲ್ಲದ,
ಮೂಗೇ ಇಲ್ಲದ ಕುರೂಪಿಯಾದದ್ದು ಏಕೆ ಮತ್ತು ಹೇಗೆ? ಇಂಥ ಕುರೂಪಿಯನ್ನೂ ಮದುವೆಯಾಗಲು
ರೀನೀ ಕ್ಲೈನ್ಗಿದ್ದ ಕಾರಣವಾದರೂ ಏನು? ಇಂಥ ಕುತೂಹಲದ ಪ್ರಶ್ನೆಗೆ ಉತ್ತರವಾಗಿ
ಬಿಚ್ಚಿ ಕೊಳ್ಳುವುದೇ ಜೀಗೆಲ್-ರೀನೀಯ ಅಮರ ಪ್ರೇಮದ ಕಥೆ.
***
ಅಮೆರಿಕದ ನೌಕಾಪಡೆಯಲ್ಲಿ ಸಾರ್ಜೆಂಟ್ ಆಗಿದ್ದವನು ಟೈ ಜೀಗೆಲ್. ಹೇಳಿ ಕೇಳಿ ಮಿಲಿಟರಿ
ಅಸಾಮಿಯಲ್ಲವೆ? ಹುಡುಗ ಕಟ್ಟುಮಸ್ತಾಗಿದ್ದ. 21ನೇ ವಯಸ್ಸಿಗೇ ಸಾರ್ಜೆಂಟ್
ಪದವಿಗೇರಿದ್ದರೂ ಅಹಮಿಕೆಯಿಂದ ದೂರವೇ ಉಳಿದಿದ್ದ. ಟೂ ಸಿಂಪಲ್ ಎಂಬಂತೆ
ಬದುಕುತ್ತಿದ್ದ. ಈ ಸರಳತೆಯೇ ರೇನೀ ಕ್ಲೈನ್ಳನ್ನು ಅವನ ಹತ್ತಿರ ತಂದಿತು. ಅವಳಾದರೂ
ದೂರದವಳಲ್ಲ. ಅವನದೇ ಸ್ಕೂಲಿನಲ್ಲಿ ಓದಿದವಳು. ಅವನಿಗಿಂತ ಮೂರು ವರ್ಷ ಚಿಕ್ಕವಳು.
ಒಂದು ಸಂತೋಷವೆಂದರೆ, ಈ ಜೋಡಿಯ ಪ್ರೀತಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಲಿಲ್ಲ.
ಅಂತಸ್ತುಗಳ ಅಂತರ ಅಡ್ಡಬರಲಿಲ್ಲ. ಖಳನಾಯಕರ ಕಾಟವೂ ಇರಲಿಲ್ಲ.
ಈ ಕಾರಣದಿಂದಲೇ ನಾವುಂಟು, ಮೂರು ಲೋಕವುಂಟು ಎಂದು ಮೆರೆದಾಡಿದರು ಜೀಗೆಲ್-ರೀನೀ.
ಹೀಗಿದ್ದಾಗಲೇ ರೀನೀಯ ತಂದೆ ಅಪಘಾತವೊಂದರಲ್ಲಿ ಸತ್ತುಹೋದ. ಆ ನಂತರದಲ್ಲಿ ಗೆಳತಿಯ
ಬಗ್ಗೆ ಜೀಗೆಲ್ ಅದೆಷ್ಟು ಕಾಳಜಿ ತಗೊಂಡನೆಂದರೆ -ಏಕಕಾಲಕ್ಕೆ ಅವಳಿಗೆ ಫ್ರೆಂಡ್,
ಲವರ್, ಫಿಲಾಸಫರ್, ಫಾದರ್, ಗೈಡ್.... ಹೀಗೆ ಎಲ್ಲವೂ ಆಗಿಬಿಟ್ಟ. ತಂದೆಯ ನೆನಪಲ್ಲಿ
ಅವಳು ಡಿಪ್ರೆಷನ್ಗೆ ಈಡಾಗಲಿಕ್ಕೆ, ಅಪ್ಪನನ್ನು ನೆನಪು ಮಾಡಿಕೊಂಡು ಕಂಬನಿ
ಸುರಿಸುವುದಕ್ಕೆ ಈತ ಅವಕಾಶವನ್ನೇ ಕೊಡಲಿಲ್ಲ. ಅಷ್ಟೊಂದು ಮುತುವರ್ಜಿಯಿಂದ ನೋಡಿಕೊಂಡ.
ಹೀಗಿದ್ದಾಗಲೇ ಅಮೆರಿಕಾ-ಇರಾಕ್ ಮಧ್ಯೆ ಯುದ್ಧ ಶುರುವಾಯಿತು. ಈತ ನಿಂತ ನಿಲುವಲ್ಲಿಯೆ
ಯುದ್ಧಕ್ಕೆ ಹೊರಟು ನಿಂತ. ಹೋಗೋನು ಹೋಗ್ತಾ ಇದೀಯ. ಅದಕ್ಕಿಂತ ಮುಂಚೆ ನನ್ನನ್ನು
ಮದುವೆಯಾಗಿಬಿಡು. ನಾಲ್ಕು ಜನ ಆ ಸಂಭ್ರಮಕ್ಕೆ ಸಾಕ್ಷಿಯಾಗಲಿ. ಅವರೆಲ್ಲರ ಮುಂದೆ ಇವಳೇ
ನನ್ನ ಹೆಂಡ್ತಿ ಎಂದು ಹೇಳಿ ಹೋಗಿಬಿಡು ಎಂದು ರೀನೀ ದುಂಬಾಲು ಬಿದ್ದಳು. ಹೀಗೆಂದಾಗ
ಅವಳಿಗೆ 19 ವರ್ಷವಾಗಿತ್ತು. ಜೀಗೆಲ್ಗೆ 21.
ಆದರೆ, ರೀನಿಯ ಆಹ್ವಾನವನ್ನು ನಯವಾಗಿ ತಳ್ಳಿಹಾಕಿದ ಜೀಗೆಲ್ ಹೇಳಿದನಂತೆ; `ಅಂಥ ಅವಸರ
ಏನಿದೆ? ಯುದ್ಧ ಬೇಗ ಮುಗಿಯುತ್ತೆ, ರಜೆಗೆ ಬರ್ತೀನಲ್ಲ? ಆಗ ಮದುವೆಯಾಗೋಣ. ಸಾವಿರಾರು
ಮಂದಿಯ ಸಮ್ಮುಖದಲ್ಲಿ ದಂಪತಿಯರಾಗೋಣ. ಆಮೇಲೆ ನಮ್ಮಿಷ್ಟದ ತಾಣಕ್ಕೆ ಹನಿಮೂನ್ಗೆ
ಹೋಗೋಣ...' ಇಷ್ಟು ಹೇಳಿದವನೇ ಕಡಗದಂತಿದ್ದ ಒಂದು ದೊಡ್ಡ ರಿಂಗ್ ತಂದು ರೀನಿಯ
ಮೊಣಕಾಲಿಗೆ ಹಾಕಿ ಹೇಳಿದನಂತೆ: `ನಿಂಗೇ ಗೊತ್ತಲ್ಲ? ನಮ್ದು ಸ್ಪೆಷಲ್ ಲವ್, ಅದೇ
ಕಾರಣಕ್ಕೆ ನಿನ್ನ ಕಾಲಿಗೆ ರಿಂಗ್ ಹಾಕಿದೀನಿ. ಇವತ್ತು ನಮ್ಮ ಎಂಗೇಜ್ಮೆಂಟ್
ಆಗಿಹೋಯ್ತು ಅಂತ ತಿಳ್ಕೊ. ಮುಂದಿನ ವರ್ಷ ಮದುವೆಯಾಗೋಣ. ಈಗ ನಾನು ಹೋಗಿಬರ್ತೀನಿ.
ಒಂದು ಬೆಸ್ಟ್ ಆಫ್ ಲಕ್ ಹೇಳಿ ಕಳಿಸು...' ಇಷ್ಟು ಹೇಳಿ, ಜೀಗೆಲ್ ಯುದ್ಧಭೂಮಿಗೆ
ಹೊರಟೇಹೋದ. ಅವತ್ತು ಆಗಸ್ಟ್ 13, 2003. ಅದು, ರೀನೀಯ ಹುಟ್ಟುಹಬ್ಬದ ದಿನ.
ಆನಂತರದಲ್ಲಿ ಇರಾಕ್ನ ಯುದ್ಧಭೂಮಿಯಿಂದ ಅಮೆರಿಕದಲ್ಲಿದ್ದ ಅಮ್ಮನ ಮನೆಗೆ
ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಜೀಗೆಲ್. ಆಗೆಲ್ಲ ಈ ಬೆಡಗಿ ರೀನೀ ತಾನೂ ಅವನ
ಮನೆಗೆ ಹೋಗಿಬಿಡುತ್ತಿದ್ದಳು. ತಾನೂ ಒಂದಷ್ಟು ಮಾತಾಡುತ್ತಿದ್ದಳು. ಜೋಕು ಹೊಡೆದು
ಗೆಳೆಯನನ್ನು ನಗಿಸುತ್ತಿದ್ದಳು. ಏನೋ ಸುಳ್ಳು ಹೇಳಿ ಹೆದರಿಸುತ್ತಿದ್ದಳು. ಅಲ್ಲಿಂದ
ಯಾವಾಗ ಬರ್ತೀಯ? ನಂಗೆ ಏನು ತರ್ತೀಯ ಎಂದೆಲ್ಲ ವಿಚಾರಿಸಿಕೊಂಡು, ಭಾವಿ
ಅತ್ತೆಯೊಂದಿಗೆ ಒಂದಿಷ್ಟು ಹರಟಿ ಎದ್ದು ಬರುತ್ತಿದ್ದಳು. ಈ ವೇಳೆಗೆ, ಜೀಗೆಲ್
ಅಮೆರಿಕಕ್ಕೆ ಬರುವ ದಿನ ಯಾವುದೆಂದು ಅವಳಿಗೆ ತಿಳಿದುಹೋಗಿತ್ತು. ಆತ ತಾಯ್ನಾಡಿಗೆ ಬಂದ
ಹದಿನೈದನೇ ದಿನವೇ ಮದುವೆಯಾಗುವುದೆಂದು ಆಕೆ ನಿಶ್ಚಯಿಸಿದ್ದಳು. ಇದಕ್ಕಾಗಿ ಸಕಲ
ಸಿದ್ಧತೆಯಲ್ಲಿ ತೊಡಗಿದ್ದಳು. ಹೀಗಿದ್ದಾಗಲೇ,ಜೀಗೆಲ್ನ ಆಗಮನಕ್ಕೆ ಇನ್ನೂ ಎರಡು
ತಿಂಗಳು ಬಾಕಿಯಿದ್ದಾಗಲೇ, ಅದೊಂದು ಬೆಳಗ್ಗೆ ಜೀಗೆಲ್ನ ಮನೆಯಿಂದ ಫೋನ್ ಬಂತು:
`ತಕ್ಷಣವೇ ಮನೆಗೆ ಬಂದು ಹೋಗು' ಎಂಬುದು ಫೋನ್ ಕರೆಯ ಸಾರಾಂಶ.
ಓಹ್, ಯುದ್ಧ ಬೇಗ ಮುಗಿದಿರಬೇಕು. ಗೆದ್ದ ಖುಷಿ ದೊಡ್ಡದಿದೆ. ಹಾಗಾಗಿ ಜೀಗೆಲ್ ಬೇಗ
ಬಂದಿದಾನೆ ಅನ್ಸುತ್ತೆ. ನನಗೆ ಸರ್ಫ್ರೈಜ್ ಕೊಡಲಿಕ್ಕೆಂದೇ ಬೇರೆಯವರಿಂದ ಫೋನ್
ಮಾಡಿಸಿದ್ದಾನೆ ಕಳ್ಳ... ಎಂದುಕೊಂಡು ದೊಡ್ಡ ಸಂಭ್ರಮದಿಂದಲೇ ಭಾವೀ ಗಂಡನ ಮನೆಗೆ
ಹೋದಳು ರೀನಿ. ಅಲ್ಲಿ ಸ್ಮಶಾನ ಮೌನವಿತ್ತು. ಏನಾಯ್ತೆಂದು ಈಕೆ ಕೇಳುವುದರೊಳಗೇ,
ಇವಳನ್ನು ಕಂಡದ್ದೇ ಜೀಗೆಲ್ನ ಮನೆಮಂದಿ ಜೋರಾಗಿ ಅತ್ತರು. ಈ ಮಧ್ಯೆಯೇ ಒಬ್ಬರು
ಸುದ್ದಿ ಹೇಳಿದರು. ಇರಾಕ್ನ ಆತ್ಮಹತ್ಯಾ ದಳದ ಉಗ್ರರು ಜೀಗೆಲ್ನ ತಂಡದವರ ಮೇಲೆ
ಬಾಂಬ್ ಎಸೆದಿದ್ದಾರೆ. ಈ ದುರಂತದಲ್ಲಿ ಜೀಗೆಲ್ಗೆ ತುಂಬಾ ಪೆಟ್ಟು ಬಿದ್ದಿದೆಯಂತೆ.
ಬದುಕೋದು ಕಷ್ಟ ಎಂದು ಡಾಕ್ಟರೇ ಹೇಳಿದ್ದಾರಂತೆ. ಅವನೀಗ ಸ್ಯಾನ್ ಆಂಟೋನಿಯೋದ ಮಿಲಿಟರಿ
ಆಸ್ಪತ್ರೇಲಿ ಇದಾನಂತೆ... ಮುಂದಿನದೇನನ್ನೂ ಕೇಳಿಸಿಕೊಳ್ಳುವ ತಾಳ್ಮೆ ರೀನೀಗೆ
ಇರಲಿಲ್ಲ. ಕಣ್ಣೀರು ಹಾಕಲಿಕ್ಕೆ ಇದು ಸಮಯವಲ್ಲ ಎಂದು ನಿರ್ಧರಿಸಿದವಳೇ ಚಿಕ್ಕದೊಂದು
ಲಗೇಜು ಜತೆ ಮಾಡಿಕೊಂಡು ಸ್ಯಾನ್ ಆಂಟೋನಿಯಾದ ಮಿಲಿಟರಿ ಆಸ್ಪತ್ರೆಗೆ ಬಂದೇಬಿಟ್ಟಳು.
ಅವಳು ನೀಡಿದ ವಿವರ ಗಮನಿಸಿದ ವೈದ್ಯರು- `ಈ ಪೇಷಂಟ್ ಐಸಿಯುನಲ್ಲಿ ಇದ್ದಾನೆ' ಎಂದರು.
ಉಸಿರು ಬಿಗಿಹಿಡಿದು ವೈದ್ಯರೊಂದಿಗೆ ಹೆಜ್ಜೆಹಾಕಿದ ರೀನೀಗೆ ಎದುರಾದದ್ದು -ಮೈ ಪೂರಾ
ಬ್ಯಾಂಡೇಜು ಮೆತ್ತಿಕೊಂಡಿದ್ದ ಒಂದು ದೇಹ. ಅದನ್ನು ಕಂಡು ರೀನೀ ಬೆರಗಿನಿಂದ
ಹೇಳಿದಳಂತೆ; ಡಾಕ್ಟರ್, ನಾನು ಕೇಳಿದ್ದು ಸಾರ್ಜೆಂಟ್ ಟೈ ಜೀಗೆಲ್ ಅವರನ್ನು. ನೀವು
ಇದ್ಯಾರೋ ಬೇರೆ ಆಸಾಮಿಯನ್ನು ತೋರಿಸ್ತಾ ಇದೀರ. ಅವನು ಹೀಗಿರಲಿಲ್ಲ. ಟಾಲ್, ಸ್ವೀಟ್
ಅಂಡ್ ಹ್ಯಾಂಡ್ಸಮ್. ಹಾಗಿದ್ದ ನನ್ನ ಹುಡುಗ. ಅವನನ್ನು ತೋರಿಸಿ ಪ್ಲೀಸ್...'
ಡಾಕ್ಟರು ಮಾತಾಡದೆ ಸುಮ್ಮನೆ ನಿಂತರು.
ಅಷ್ಟೆ. ಪರಮ ವಿಕಾರವಾಗಿದ್ದ ಆ ದೇಹದ ಒಡೆಯನೇ ಜೀಗೆಲ್ ಎಂದು ರೀನೀಗೆ
ಅರ್ಥವಾಗಿಹೋಯಿತು. ಆತನಿಗೆ ಆಗಿರುವ ಗಾಯದ ಪೆಟ್ಟಿನ ತೀವ್ರತೆ ಎಂಥದೆಂದು ವೈದ್ಯರು
ನಿಧಾನವಾಗಿ ವಿವರಿಸಿದರು. ನಂತರ ನಿರ್ಧಾರದ ಧ್ವನಿಯಲ್ಲಿ ಹೇಳಿದರು. `ಬಾಂಬ್ ಸೋಟದ
ತೀವ್ರತೆಗೆ ಜೀಗೆಲ್ನ ಎಡಭುಜದ ನರ-ಮೂಳೆಗಳೆಲ್ಲ ನುಜ್ಜುಗುಜ್ಜಾಗಿವೆ. ಹೀಗಾಗಿ ಅವನ
ಎಡಗೈನ ಭಾಗವನ್ನು ಪೂರ್ತಿಯಾಗಿ ತೆಗೆದು ಹಾಕಿದೀವಿ. ಬಲಗೈನಿಂದ ಮೂರು ಬೆರಳುಗಳೇ
ಹಾರಿಹೋಗಿವೆ. ತಲೆಯ ಎಡಭಾಗಕ್ಕೂ ದೊಡ್ಡ ಪೆಟ್ಟು ಬಿದ್ದಿದೆ. ಎರಡೂ ಕಿವಿಗಳು ತುಂಡಾಗಿ
ಬಿದ್ದೇ ಹೋಗಿವೆ. ಒಂದು ಕಣ್ಣೂ ಹೋಗಿದೆ. ದವಡೆಯ ಹಲ್ಲುಗಳು ಉದುರಿವೆ. ಕೆನ್ನೆಯ
ಮಾಂಸಖಂಡಗಳೂ ನುಜ್ಜುಗುಜ್ಜಾಗಿವೆ. ಇಷ್ಟೆಲ್ಲ ಪೆಟ್ಟಾಗಿದ್ರೂ ಜೀಗೆಲ್ ಬದುಕಿದ್ದಾನೆ.
ಈಗ ಅವನಿಗೆ ಮಿದುಳಿನ ಆಪರೇಷನ್ ಮಾಡ್ತೇವೆ. ಒಂದರ್ಥದಲ್ಲಿ ಅವನಿಗೆ ಮುಖವೇ ಇಲ್ಲ ನಿಜ.
ಆದರೆ, ತೊಡೆಸಂದಿನ ಮಾಂಸವನ್ನು ಕತ್ತರಿಸಿ ಅವನ್ನು ತುಟಿಗಳ ಜಾಗಕ್ಕೆ ಸೇರಿಸಿ, ಒಂದು
ಶೇಪ್ ಕೊಡ್ತೇವೆ. ಅಷ್ಟು ಮಾತ್ರ ನಮ್ಮಿಂದ ಸಾಧ್ಯ. ನಮ್ಮ ಪ್ರಯತ್ನವನ್ನು ನಾವು
ಮಾಡ್ತೇವೆ. ಉಳಿದದ್ದು ಜೀಸಸ್ಗೆ ಬಿಟ್ಟದ್ದು...'
ಇಷ್ಟು ಹೇಳಿ ವೈದ್ಯರು ಚಿಕಿತ್ಸೆ ಆರಂಭಿಸಿದಾಗ, ಹೊಸದೊಂದು ಪ್ರಶ್ನೆ ರೀನೀಗೆ
ಎದುರಾಯಿತು. ಮಿದುಳು ಆಪರೇಷನ್ ಮಾಡಿದ ನಂತರ ಬೈಛಾನ್ಸ್ ಜೀಗೆಲ್ಗೆ ನೆನಪಿನ ಶಕ್ತಿಯೂ
ಕಳೆದುಹೋದರೆ ಗತಿ ಏನು? ಅಥವಾ ತನ್ನ ಈಗಿನ ಸ್ಥಿತಿ ಕಂಡು ಆತನಿಗೆ ಹುಚ್ಚು ಹಿಡಿದರೆ
ಮಾಡುವುದೇನು? ಆಸ್ಪತ್ರೆಯ ವಾರ್ಡ್ನಲ್ಲಿ ಕೂತು, ಹೀಗೆ ಯೋಚಿಸಿ ಯೋಚಿಸಿ ಹಣ್ಣಾದಳು
ರೀನೀ. ಪುಣ್ಯಕ್ಕೆ ಹಾಗೇನೂ ಆಗಲಿಲ್ಲ. ಜೀಗೆಲ್ ಎಲ್ಲ ಚಿಕಿತ್ಸೆಗೆ ಸಕಾರಾತ್ಮಕವಾಗಿ
ಸ್ಪಂದಿಸಿದ. ಒಂದೂವರೆ ವರ್ಷದ ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಛಾರ್ಜ್ ಕೂಡ
ಆದ. ಆದರೆ, ಮನೆಗೆ ಹೊರಟವನಿಗೆ ಒಂದು ಕೈ ಇರಲಿಲ್ಲ. ಕಿವಿಗಳೂ ಇರಲಿಲ್ಲ. ಬಲಗೈನ ಮೂರು
ಬೆರಳಿರಲಿಲ್ಲ. ಒಂದು ಕಣ್ಣಿರಲಿಲ್ಲ. ತಲೆಯಲ್ಲಿ ಕೂದಲಿರಲಿಲ್ಲ. ನಿಲ್ಲಲು ತ್ರಾಣವೂ
ಇರಲಿಲ್ಲ. ಇಂಥ ಸಂದರ್ಭದಲ್ಲಿ ಅವನನ್ನು ಪುಟ್ಟ ಮಗುವಿನಂತೆ ನೋಡಿಕೊಂಡಳು ರೀನೀ.
ಆದರೂ, ತನ್ನ ಗಾಯದ ಕಲೆ ನೋಡಿಕೊಂಡಾಗ ಜೇಗೆಲ್ ಬಿಕ್ಕಳಿಸಿ ಅಳುತ್ತಿದ್ದ.
ಅಂತರ್ಮುಖಿಯಂತೆ ಕೂತುಬಿಡುತ್ತಿದ್ದ. ಅಂಥ ಸಂದರ್ಭದಲ್ಲೆಲ್ಲ ರೀನೀ ಅವನಿಗೆ
ಅಮ್ಮನಾಗುತ್ತಿದ್ದಳು. ತಂದೆಯಂತೆ ಸಮಾಧಾನ ಹೇಳುತ್ತಿದ್ದಳು. ದಿನದ ಹೆಚ್ಚು ಸಮಯವನ್ನು
ಮನೆಯೊಳಗೇ ಕಳೆದರೆ ಅವನಿಗೂ ಡಿಪ್ರೆಶನ್ ಕಾಡಬಹುದು ಅನ್ನಿಸಿದಾಗ ವಾಕಿಂಗ್
ಕರೆದೊಯ್ಯಲು ನಿರ್ಧರಿಸಿದಳು ರೀನೀ. ಆಗ ಜೀಗೆಲ್ ಹೊಸದೊಂದು ಬೇಡಿಕೆ ಇಟ್ಟ. `ನಾನು
ಸನ್ಗ್ಲಾಸ್ ಹಾಕ್ಕೊಂಡು ಹೊರಗೆ ಬರ್ತೇನೆ..'
`ನಿಜವಾದ ಸಂಕಟ ಎದುರಾದದ್ದೇ ಆಗ. ಏಕೆಂದರೆ ಸನ್ಗ್ಲಾಸ್ ಹಾಕಿಕೊಳ್ಳಲು ಅಗತ್ಯವಿದ್ದ
ಕಿವಿಗಳೇ ಜೀಗೆಲ್ಗೆ ಇರಲಿಲ್ಲ. ಹಾಗೆಂದು ಹೇಳಿದರೆ ಅವನಿಗೆ ನೋವಾಗುತ್ತದೆ ಎಂದು
ಕಾರಣಕ್ಕೆ, ಅವನಿಗೆ ಏನೂ ಹೇಳಲಿಲ್ಲ ರೀನೀ. ಬದಲಿಗೆ, ಅವನ ತಲೆಯ ಸುತ್ತ ಎಲಾಸ್ಟಿಕ್
ಹಾಕಿ ಸನ್ಗ್ಲಾಸ್ ತೊಡಿಸಿಯೇ ಬಿಟ್ಟಳು. ಮುಂದೆ ನಿಧಾನವಾಗಿ ತನ್ನ ಪರಿಸ್ಥಿತಿ
ಹೇಗಿದೆ ದೇಹದ ಯಾವ್ಯಾವ ಭಾಗ ಅಸ್ತಿತ್ವ ಕಳೆದುಕೊಂಡಿದೆ ಎಂದು ಜೀಗೆಲ್ಗೆ
ಅರ್ಥವಾಯಿತು. ಆತ ಅದೊಂದು ದಿನ ರೀನೀ ಹಾಗೂ ತನ್ನ ಬಂಧುಗಳನ್ನು ಜತೆಯಲ್ಲಿ
ಕೂರಿಸಿಕೊಂಡು ಹೇಳಿಬಿಟ್ಟ `ಮುಂದೆ, ನನ್ನ ಹಣೇಲಿ ಬರೆದಂತಾಗಲಿ. ನಾನು ಇರುವಷ್ಟು ದಿನ
ಒಂಟಿಯಾಗಿ ಬದುಕ್ತೇನೆ. ರೀನೀ ಬೇರೆ ಯಾರನ್ನಾದ್ರೂ ಮದುವೆಯಾಗಲಿ. ನಾವೇ ಮುಂದೆ ನಿಂತು
ಅವಳ ಮದುವೆ ಮಾಡೋಣ... ಅವಳ ಭವಿಷ್ಯ ಹಾಳಾಗೋದು ಬೇಡ. ನನ್ನಂಥ ಕುರೂಪಿ ಅವಳ
ಜತೆಯಾಗೋದು ಬೇಡ...'
ಜೀಗೆಲ್ನ ಮಾತಿಗೆ ಎಲ್ಲರೂ ಒಪ್ಪಿದರು. ಆದರೆ ರೀನೀ ಒಪ್ಪಲಿಲ್ಲ. ಆಕೆ ಜೀಗೆಲ್ನ
ಎದುರು ನಿಂತು ಹೀಗೆಂದಳು: `ಹುಚ್ಚಾ, ನಾನು ಪ್ರೀತಿಸಿದ್ದು ನಿನ್ನ ದೇಹವನ್ನಲ್ಲ ಕಣೋ.
ನಿನ್ನ ಮನಸ್ಸನ್ನು ಪ್ರೀತಿಸ್ದೆ ನಾನು. ಈಗ ಇದೀಯ ನೋಡು, ಅದಕ್ಕಿಂತಲೂ
ಕುರೂಪಿಯಾಗಿದ್ದೆ ಆಸ್ಪತ್ರೇಲಿ. ಆಗ ನಿನ್ನ ದೇಹ ಕೊಳೆತು ವಾಸನೆ ಹೊಡೀತಿತ್ತು.
ಅದನ್ನು ನಗುತ್ತಲೇ ಸಹಿಸಿಕೊಂಡೆ. ಅಂಥ ನನಗೆ ನಿನ್ನನ್ನು ಈಗ ನಿನ್ನನ್ನು
ಒಪ್ಪಿಕೊಳ್ಳೋಕೆ ಕಷ್ಟವಾಗ್ತಿಲ್ಲ. ಬದುಕು ಅನ್ನೋದಿದ್ರೆ ಅದು ನಿನ್ನ ಜತೆ ಮಾತ್ರ.
ಮೊದಲು ಪ್ರೀತಿಸ್ತಿದ್ದೆ ನೋಡು, ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಈಗ ನಿನ್ನನ್ನು
ಪ್ರೀತಿಸ್ತಿದೀನಿ ಕಣೋ...' ರೀನೀಯ ನಿಷ್ಕಪಟ ಮಾತು ಕೇಳಿ ಜೇಗೆಲ್ ಮಾತೇ ಹೊರಡದೆ
ನಿಂತುಬಿಟ್ಟ. ಅವನ ತಾಯಿ ಧಾವಿಸಿ ಬಂದು ರೀನಿಯನ್ನು ತಬ್ಬಿಕೊಂಡು ಅಳತೊಡಗಿದಳು.
ಜೀಗೆಲ್ನ ತಂದೆ ಈ ಹುಡುಗಿಗೆ ನಿಂತಲ್ಲೇ, ಕೈಮುಗಿದು ಕಣ್ಣೊರಸಿಕೊಂಡ.
***
ಮುಂದೆ 2005ರ ಅಕ್ಟೋಬರ್ 7ರಂದು ತುಂಬಾ ಅದ್ಧೂರಿಯಾಗಿ ಜೀಗೆಲ್- ರೀನೀಯ ಮದುವೆ
ನಡೆಯಿತು. ಶುದ್ಧ ಪ್ರೀತಿಗೆ ಎಂದಿಗೂ ಸಾವಿಲ್ಲ, ಮಧುರ ಪ್ರೀತಿ ಎಂದಿಗೂ ಸೋಲಲ್ಲ ಎಂಬ
ಮಾತಿಗೆ ಸಾಕ್ಷಿಯೂ ಆಯಿತು. ಅಂದಹಾಗೆ, ಇದು ಇಂಟರ್ನೆಟ್ನಲ್ಲಿ ಸಿಕ್ಕ ಮಾಹಿತಿ.
ಮುಖವಿಲ್ಲದವನನ್ನೂ ಮುದ್ದಿನ ಗಂಡ ಎಂದು ಒಪ್ಪಿಕೊಂಡ ರೀನೀಗೆ ಜೈ ಹೋ.
"ಜಾಹೀರಾತು ಪ್ರೇಮ" ಪತ್ರ !
ನೀನೇ ನನ್ನ TVS SCOOTY (first love) ಮತ್ತು ನನ್ನ AIWA (pure passion). ನಾನು ಯಾವತ್ತೂ BPL (believe in the best) ಮತ್ತು ನೀನೇನಿದ್ದರೂ SANSUI (better
than the best).
ನೀನು ನನಗೆ DOMINO'S PIZZA (delivering a million smiles**) ಇದ್ದ ಹಾಗೆ.
ಇದು ನನ್ನಲ್ಲಿ COLGATE ENERGY GEL (seriously fresh) ಭಾವನೆ
ಉಂಟುಮಾಡುತ್ತಿದೆ.
ನೀನು ನನ್ನ ಜೀವನ ಸಂಗಾತಿಯಾಗಬೇಕೆಂದು ನಾನು ಬಯಸುತ್ತೇನೆ, ಆದರೆ ನೀನು KAWASAKI
BAJAJ CALIBER (The unshakable ) ಆಗಿರುವ ನಿನ್ನಪ್ಪನ ಬಗ್ಗೆ ಚಿಂತಿತಳಾಗಿದ್ದೀ
ಅಂತ ನನಗೆ ಗೊತ್ತು. ನನ್ನಪ್ಪನೂ CEAT (born tough ). ಆದರೆ ಚಿಂತಿಸದಿರು, ನಾನು
ಕೂಡ FORD ICON (the josh machine) ಮತ್ತು ನನ್ನ ಮನೆಯ ಇತರ ಮಂದಿ KELVINATORS
(the coolest ones).
ಅವರೆಲ್ಲಾದರೂ ಬೇಡ ಅಂತ ಹೇಳಿದರೆ, ನಾವು ಓಡಿ ಹೋಗಿ ಮದುವೆಯಾಗೋಣ ಮತ್ತು PHILIPS
(let's make things better) ಮಾಡೋಣ. ಆಗವರು MIRINDA (zor ka jhatka dhire
se lage) ಅಂತ ಭಾವಿಸುತ್ತಾರೆ. ಆದರೆ ನಾನು ಯಾವತ್ತೂ COCA COLA (Jo chahe ho
jaye)ದಲ್ಲಿ ನಂಬಿಕೆ ಇಟ್ಟಿರುವವ.
ನಮ್ಮ ಮದುವೆಗೆ SAMSUNG DIGITALL (everyone's invited) ಮತ್ತು ಮದುವೆಯ ಬಳಿಕ
ನಾವಿಬ್ಬರೂ WHIRLPOOL (U and me — the world's best homemakers).
ಯಾವತ್ತಿಗೂ NOKIA (connecting people) ದಂತಿರುವ, ಎಲ್ಲರನ್ನೂ ಪ್ರೀತಿಸುವ ದೇವರ
ಮೇಲೆ ನಂಬಿಕೆ ಇಡು. ಈಗ ಪ್ರೀತಿಯ ಗೀತೆಯನ್ನು HYUNDAI (we are listening).,
ಪ್ರೀತಿ ಎನ್ನುವುದು DAIRY MILK (real taste of life ) ಅಂತ ನೀನು ಯಾವತ್ತೂ
ತಿಳಿದಿರಬೇಕು. ಅಲ್ವೇ?
ಆದ್ದರಿಂದ ಯಾವತ್ತೂ ನನ್ನನ್ನು ಮರೆಯಬೇಡ. Ok bye!
ನಾನೀ ಪತ್ರದಲ್ಲಿ ಬರೆದದ್ದು ಸ್ವಲ್ಪ ಮಾತ್ರ, ಆದ್ರೆ... PEPSI (Yeh dil mange more)!!!
LG (digitally yours)
xyz
ಅಪರಿಚಿತೆಗೊಂದು ಪ್ರೇಮ ಪತ್ರ
ಇನ್ನೇನು ಕರಿಯಲಿಕ್ಕೆ ಸಾಧ್ಯ,ನಾನು ನಿನ್ನ ಒಂದು ದಿನ ನೋಡಿದ್ದಸ್ಟೇ ,ಅದೂ
ಕ್ಷಣವಸ್ಟೇ.ನಿನಗೆ ಗೊತ್ತಿಲ್ಲ ಬಿಡು, ನಾನಿನ್ನ ನೊಡಿದ್ದು, ನಿನ್ನನ್ನು ನನ್ನಲ್ಲಿ
ತುಂಬಿಕೊಂಡಿದ್ದು.
ಎಂದೋ ಅಪರೂಪಕ್ಕೆ ಸ್ವಲ್ಪ ತಡವಾಗಿಯೇ ಜಾಗಿಂಗ್ ಹೋಗುತ್ತಿದ್ದ ನಾನು, ಅಂದು ಮುಂಜಾನೆಯೇ ಚುಮು ಚುಮು ಚಳಿಯಲ್ಲಿ ಸಣ್ಣದೊಂದು ಮಫ್ಲರ್ ಸುತ್ತಿ ಹೊರಟಿದ್ದೆ.ಈ ಬೆಳಗು
ಅನ್ನೋದು ತುಂಬಾ ಆಶ್ಚರ್ಯ ಮತ್ತು ಸುಂದರ , ಯಾಕೆ ದಿನ ಪೂರ್ತಿ ಹೀಗೇ ಇರಬಾರದು ಅಂಥ
ಯೊಚಿಸ್ತಾ ಓಡುತ್ತಿದ್ದೆ, ಇಬ್ಬನಿಯ ಆಸ್ವಾದಿಸುತ್ತಾ, ಹಕ್ಕಿಗಳ ಕಲರವ ಕೇಳುತ್ತಾ.
ಇಷ್ಟು ದಿನವೂ ಏನೂ ಕಾಣಿಸದಿದ್ದ ಆ ಮನೆ ಮುಂದೆ ಅವೋತ್ತು ಮೊದಲು ನೀ ಕಂಡಿದ್ದು,
ಮಲ್ಲಿಗೆಯ ಘಮ ಮೂಗಿಗೆ ಅಡರಿದಾಗ ಜೊತೆಗೆ ಕೋಗಿಲೆ ಕಂಠದಿಂದ ಬಂದ ಆ ಹಾಡು ಕೇಳಿದಾಗ...
ಮೂಡಲ ಮನೆಯ
ಮುತ್ತಿನ ನೀರಿನ
ಎರಕವ ಹೊಯ್ದ,ನುಣ್ಣನೇ ಎರಕವ ಹೊಯ್ದ
ಬಾಗಿಲು ತೆರೆದು
ಬೆಳಕು ಹರಿದು
ಜಗವೆಲ್ಲಾ ತೋಯ್ದ,ಹೊಯ್ತೋ ಜಗವೆಲ್ಲಾ ತೋಯ್ದು
ಸೂರ್ಯೋದಯಕ್ಕೆ ಅರಳಲು ಕಾದಿರುವ ಮಲ್ಲಿಗೆಯನ್ನು ಬಿಡಿಸುತ್ತಾ, ಹಾಡನ್ನು ಹೇಳುತ್ತಾ,
ಮಲ್ಲಿಗೆಯಂತೆಯೇ ಇರುವ ನಿನ್ನನ್ನು ಎವೆಯಿಕ್ಕದೇ ನೋಡಿದ್ದೆ ಮತ್ತು ನನ್ನೇ ನಾನು
ಮರೆತಿದ್ದೆ. ನೀನು ಮಾತ್ರ ನನ್ನನ್ನು ಕಿರುಗಣ್ಣಿನಲ್ಲಿಯೂ ನೋಡಲಿಲ್ಲ. ಹಾಡು
ಮುಗಿಯಿತೋ , ಮಲ್ಲಿಗೆ ಮುಗಿಯಿತೋ ನೀನು ಒಳಗೆ ಹೋಗಿದ್ದೆ, ನಿನ್ನ ಬಿಂಬವನ್ನು ನನ್ನ
ಕಣ್ಣಲ್ಲಿ ಬಿಟ್ಟು, ಹೃದಯಕ್ಕೆ ಲಗ್ಗೆಯಿಟ್ಟು, ನಾಳೆ ಮತ್ತೆ ಸಿಗುವೆಯೆಂಬ ನಿರೀಕ್ಷೆಯ
ಹುಟ್ಟಿಸಿ.
ಕೇಳು ಗೆಳತಿ..
ಅಂದಿನಿಂದ ಇಂದಿನವರೆಗೆ ನಾನು ಒಂದು ದಿನವೂ ಜಾಗಿಂಗ್ ತಪ್ಪಿಸಲಿಲ್ಲ. ಆ ಮನೆಯ ಮುಂದೆ
ಹತ್ತು ನಿಮಿಷ ಕಾಯದೇ ಹೋಗುವುದಿಲ್ಲ. ಆದರೆ ಪ್ರತಿದಿನವೂ ನಿರಾಸೆ, ಕಾಣುವುದು
ಕಂಪೋಂಡ್ ಮತ್ತು ಹೂವೇ ಇಲ್ಲದ ಮಲ್ಲಿಗೆ ಬಳ್ಳಿ ಮಾತ್ರ.
ಆದರೆ ನನ್ನ ಹೃದಯ ಹೇಳುತಿದೆ ನೀನು ಸಿಕ್ಕೇ ಸಿಗುತ್ತೀಯ ಎಂದು. ನಮ್ಮ ಮನೆಯ ಎಲ್ಲಾ
ಪಾಟಿನಲ್ಲಿ ಈಗ ಮಲ್ಲಿಗೆ ಬಳ್ಳಿ ಮಾತ್ರ, ದಿನಾ ಅದಕ್ಕೆ ನೀರು ಗೊಬ್ಬರ ಹಾಕಲು
ಮರೆಯುವುದಿಲ್ಲ. ಹೂವು ಬಿಡುವ ಸಮಯ ಸನ್ನಿಹಿತವಾಗಿದೆ ಗೆಳತಿ, ನಿರಾಸೆ ಮಾಡದೇ
ಬರುತ್ತೀಯಲ್ಲಾ?
ನಿನಗೆ ಬೇಕಾದಷ್ಟು ಹೂವು ಕೊಯ್ದುಕೋ, ಎಲ್ಲಾ ಹೂವು ನಿಂದೇ.. ಆದರೆ ಆ ಘಮ, ಆ ಹಾಡು..
ಗಿಡಗಂಟಿಯ ಕೊರಳೊಳಗಿಂದ
ಹಕ್ಕಿಗಳಾ ಹಾಡು, ಹೊರಟಿತು ಹಕ್ಕಿಗಳಾ ಹಾಡು..
ಮತ್ತು ನೀನು, ಇವೆಲ್ಲಾ ನಂದೇ..
ಒಪ್ಪುತ್ತೀಯಲ್ಲಾ?
ಗುರುವಾರ, ನವೆಂಬರ್ 25, 2010
ಶುಕ್ರವಾರ, ನವೆಂಬರ್ 12, 2010
ಹೊಸ ವರ್ಷಕ್ಕೆ ಎರಡು ಹೊಸ ಜೀವಗಳ ನಿರೀಕ್ಷೆ...

ಹೌದು, ಹೊಸ ವರ್ಷ ೨೦೧೧ಕ್ಕೆ ನಮ್ಮ ಮನೆಗೆ ಎರಡು ಹೊಸ ಜೀವಗಳ ಆಗಮನವಾಗುತ್ತವೆ.
ಮೊದಲಿಗೆ, ನನ್ನ ಮುದ್ದಿನ ತಂಗಿ, ಅಮ್ಮಯ್ಯನ, (ಶ್ರೀಮತಿ ಶಶಿಕಲಾರುದ್ರೇಶ್, ಮಲ್ಲಸಂದ್ರ.) ಹೊಟ್ಟೆಯಲ್ಲಿ, ಹುಟ್ಟುವ ಆ ಹೊಸ ಜೀವ ನಮಗೆಲ್ಲ ಹೊಸ ಉತ್ಸಾಹ, ಬರವಸೆ ಮೂಡಿಸಿದೆ
ಹುಟ್ಟುವ ಆ ಹೊಸ ಜೀವ, ಹೆಣ್ಣಾಗಲಿ ಎಂಬುದು ನಮ್ಮನೆಯವರ ಆಶೆ. ಗಂಡಾಗಲಿ, ಎಂಬುದು ಮಲ್ಲಸಂದ್ರದವರ ಆಶೆ. ಗಂಡಾಗಲಿ, ಹೆಣ್ಣಾಗಲಿ, ನಮ್ಮನೆಗಂತೂ ಒಂದು ಹೊಸ ಜೀವ ಆಗಮನವಾಗುತ್ತದೆ.
ಸೋಮವಾರ, ಅಕ್ಟೋಬರ್ 25, 2010
ಮಳೆ
ಅನಿರೀಕ್ಷಿತ ಮಳೆಯಾದರೆ ಸಂದರ್ಭ ತಂತಾನೆ ಒದಗಿ ಬಂದಹಾಗಾಗುತ್ತೆ. ದಿನಗಟ್ಟಲೆ ತಡೆದಿಟ್ಟುಕೊಂಡಿರುವ ಯಾರದೋ ಮೇಲಿನ ಸಿಟ್ಟು, ಫಲಕೊಡದ ನನ್ನ ಪಾಕಪ್ರಯೋಗಗಳು, ಬ್ಲಾಗ್ ಅಪ್ಡೇಟ್ ಮಾಡಲು ಹೊರಟಾಗ ಡೌನಾಗುವ ಸರ್ವರ್ರು..ಇವೆಲ್ಲದರ ಮೇಲೆ ನಾನು ಆಗಾಗಲೇ ಕಿರ್ಚಾಡಿದರೆ ಜನ ಹುಬ್ಬೇರಿಸುತ್ತಾರೆ…ಶಾಂತ ಸ್ವಭಾವದವರು ಹೀಗೆ ಜ್ವಾಲಾಮುಖಿಯಂತೆ ಹೇಗಾದರಪ್ಪಾ ಅಂತ.ಅದಕ್ಕೆ ಯಾರ್ಗೂ ಗೊತ್ತಾಗ್ದೆ ಇರೋ ಹಾಗೆ ಅಳ್ಬೇಕು ಯಾವಾಗ್ಲು. ನಮ್ಮ ಅಳು, ದುಃಖ ಮತ್ತು ಕೋಪದ ಕಾರಣ ಕೇಳುವಷ್ಟು ವಿವೇಕಿಗಳಾಗಿಲ್ಲ ಜನ ಇನ್ನು…ಕೋಪಕ್ಕೆ ಕೋಪವೇ ಉತ್ತರ ಅಷ್ಟೆ ಅನ್ನೋ ಲೆವೆಲ್ಲಲ್ಲೇ ಇದಾರೆ…ಇರ್ಲಿ ಪಾಪ…ಇಷ್ಟಾ ಬಂದಾಗ ಮೇಲೆ ಬರ್ಲಿ ಜನ.No compulsion.
ಇನ್ನೊಂದು ಮಳೇಲಿ ನೆನೆಯುತ್ತಾ ಅಳೋದು. ಇದು ನನ್ನ ಫೇವರೆಟ್. ಛತ್ರಿ ನಾಮ್ಕೆ ವಾಸ್ತೆ ಇಟ್ಕೊಳ್ಳೋದು. ದುಪಟ್ಟ ನ ಸ್ಕಾರ್ಫ್ ಹಾಗೆ ಸುತ್ತ್ಕೊಳ್ಳೋದು…ರಸ್ತೆಯ ನೀರಲ್ಲಿ ಟಪ ಟಪ ಕಾಲ್ ಹಾಕೋದು…ಬೇಕಂತಲೇ ಹೈ ಹೀಲ್ಡ್ ಚಪ್ಪಲಿ ಹಾಕಿ ಕಾಲ್ ಉಳುಕಿಸಿಕೊಳ್ಳೋದು…ಛತ್ರಿ ಮುಚ್ಚಿ, ಕಾಲ್ ಎಳೆದುಕೊಂಡು ಕುಂಟುತ್ತಾ ನಡೆಯೋದು. ಅದು ಅಳುವಿಗೆ ಸ್ಟಾರ್ಟಿಂಗ್ ಪಾಯಿಂಟು. ಕುಂಟುತ್ತಾ ಅತ್ಕೊಂಡ್ ಹೋಗ್ತೀವಲ್ಲಾ…ಸಾರ್ಥಕ ಅಳು ಅದು. ಜೀವನದಲ್ಲಿ ನಾವು ತಪ್ಪು ಬೇಕಂತಲೇ ಮಾಡಿರ್ತಿವೋ, ಗೊತ್ತಿಲ್ದೇ ಮಾಡಿರ್ತಿವೋ…ಎಲ್ಲಾ ಆವಾಗ್ಲೆ ನಮ್ಮ ಕೈಕೊಟ್ಟ ಹೀಲ್ಸ್ ಚಪ್ಪಲಿ ರೂಪದಲ್ಲಿ ನೆನಪಾಗ್ತವೆ. ನಮಗರಿವಿಲ್ಲದಂತೆಯೇ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿರುತ್ತೇವೆ.
ಇನ್ನು ನಾಸ್ಟಾಲ್ಜಿಯಾ ಅಳು. ಈ ಅಳುಗೆ ಮನೆಯ ಬಾಲ್ಕನಿ ಸರಿಯಾದ ಜಾಗ. ಬಾಲ್ಕನಿ ಇಲ್ದೇ ಇದ್ದೋರು ಅವರ ರೂಮಿನ ಕಿಟ್ಕಿಗೆ compromise ಮಾಡ್ಕೊಳ್ಳಿ. ಕೈಯಲ್ಲಿ ಒಂದು ಕಪ್ ಕಡಕ್ ಚಹಾ…(ಮಳೇಲಿ ಕಾಫಿ ರುಚಿಸೊಲ್ಲ…time tested ಸತ್ಯ ಇದು) ಹೆಗಲ ಮೇಲೆ ದಪ್ಪ ಕರ್ಚೀಫು.. ಉಯ್ಯಾಲೆಯೋ ಚೇರೋ ನೆಲವೋ..ಯಾವ್ದಾದ್ರು ಸರಿ..ಅದರಮೇಲೆ ಕೂತು… ಹಿಂದೆ ಯಾರೊಂದಿಗೋ ಕುಡಿದ ಕಾಫಿ/ಟೀ/ ಜ್ಯೂಸು ನೆನೆಸಿಕೊಂಡು ಸಂತೋಷಕ್ಕೋ ದುಃಖಕ್ಕೋ ಅಳೋದು…ಇನ್ನು ಆ ಸಮಯ ಬರಲ್ವಲ್ಲಾ…ಅಂತ. ಅಥ್ವಾ…ಇಂಥಾ ಮಳೆಲಿ ಅವನ/ಅವಳ ಜೊತೆ ಬಿಸಿಬಿಸಿಯಾಗಿ ಚಹಾ ಹೀರುತ್ತಾ ಬೆಚ್ಚಗೆ ಇರ್ಬಹುದಿತ್ತು… ನಾ ಹೋಗಲಾರದೇ/ ಅವಳು ಸಿಗಲಾರದೇ/ ಅವ ಕರೆಯದೇ/ ನಾನ್ ಕೇಳದೇ..ಅನ್ಯಾಯ ಮಳೆ ವೇಸ್ಟ್ ಆಗೋಯ್ತಲ್ಲಾ ಅನ್ನೋ ಜಿಗುಪ್ಸೆ…ಮೊಟ್ಟಮೊದಲ ಕ್ರಶ್ಷ್ಹು…ಅವ ಬೇರೆ ಹುಡ್ಗಿ ಗೊತೆ ಹೋದಾಗ ಆದ ಹಾರ್ಟ್ ಬ್ರೇಕು..ಮತ್ತೊಂದಿಷ್ಟು ಬ್ರೇಕಪ್ಪು ಪ್ಯಾಚಪ್ಪುಗಳು…ಪ್ರೊಪೋಸಲ್ , ರಿಜೆಕ್ಷನ್ ಗಳು…ಹ್ಮ್ಮ್ಮ್ಮ್ಮ್…ಇವೆಲ್ಲಾ ನೆನೆಸ್ಕೊಂಡ್ ಚೆನ್ನಾಗಿ ಅತ್ತುಬಿಡಬೇಕು…ಅಮೇಲೆ ತಪ್ಪದೆ ಶುಂಟಿ ಹಾಕಿದ ಚಹಾ ಕುಡಿಬೇಕು. ತಲೆ ನೋವಿದ್ದ್ರೆ ಮುಂದಿನ ಮಳೆಯಲ್ಲಿ ಅಳಕ್ಕೆ interest ಇರಲ್ಲ.
ಹೀಗೆ ಅತ್ತ ಮೇಲೆ ಯಾರಿಗೇನಾಗತ್ತೋ ಬಿಡತ್ತೋ, ನನಗಂತೂ ಒಂಥರಾ ಸಮಾಧಾನ ಆಗತ್ತೆ. ಮನುಷ್ಯರಿಗೆ ನನ್ನ ಮಾತು ಕೇಳುವ ವ್ಯವಧಾನ ಇದ್ಯೋ ಇಲ್ವೊ, ಆ ಪ್ರತ್ಯೊಂದು ಮಳೆಹನಿ ನನ್ನ ಮಾತು ಕೇಳಿಸಿಕೊಂಡ ಹಾಗಾಗತ್ತೆ ನನಗೆ. ಜನ ನನ್ನ ಮಾತನ್ನು ಮುಂದೆ ಹೊಗಳಿ ಹಿಂದೆ ತೆಗಳಬಹುದು…ಆದ್ರೆ ಈ ಮಳೆ ಹನಿಗಳು ನಿಶ್ಕಲ್ಮಷ. ಅವು ಸ್ಪಂದನೆಯ ಮುಖವಾಡ ಹಾಕೊಲ್ಲ, ನಿಜವಾಗಿಯೂ ಸ್ಪಂದಿಸುತ್ತವೆ. ಅವುಗಳ ಸ್ಪರ್ಶದಲ್ಲಿ ಅದೆಂಥದ್ದೋ ಮಮತೆ, ಅದೆಂಥದ್ದೋ ಸಾಂತ್ವನ. ಮನುಷ್ಯರು ತಿಪ್ಪರ್ಲಾಗ ಹಾಕಿದ್ರೂ ಕೊಡಕ್ಕಾಗಲ್ಲ ಇಂಥಾ ಸಂತ್ವಾನ ನ.
ನನಗೆ ಮಳೆಯಲ್ಲಿ ಯಾಕಪ್ಪಾ ಅಳಾಬೇಕು ಅನ್ನಿಸತ್ತೆ ಅಂದ್ರೆ ಮೇಲಿಂದ ಕೆಳಗೆ ಬಿದ್ದು ಒಡೆದರೂ ಮಳೆ ಹನಿ ಮತ್ತೆ ಒಟ್ಟುಗೂಡಿ ಹನಿಯಾಗುತ್ತದೆ. ಇಂಥದ್ದೇ ಜಲಮೂಲಗಳ ಆಸೆಯಿಲ್ಲದೇ ಎಲ್ಲದರಲ್ಲೂ ಒಂದೇ ಭಾವದಿಂದ ಒಡಗೂಡುತ್ತದೆ. ಮಣ್ಣಿಗೆ ಹೋದರೂ ಕೆಳಗೆ ಸೇರಿ ಮುಂದೆ ಬಾವಿಯಾಗುತ್ತದೆ. ಬದುಕಿನ ಹೋರಾಟದಲ್ಲಿ ಕಾದಾಡಿ ಸುಸ್ತಾದವರಿಗೆ ಮಳೆ ಹೋರಾಟ ಮುನ್ನಡೆಸಲು ಸಾಂತ್ವನಪೂರ್ವಕ ಚೈತನ್ಯ ನೀಡುತ್ತದೆ. ಇದನ್ನು ಅನುಭವಿಸಲಿಕ್ಕಾದರೂ ಮಳೆಯಲ್ಲಿ ಅಳಬೇಕು !
ನನ್ನನ್ನು ತುಂಬಾ ಜನ ಕೇಳುವುದುಂಟು..ನೀನು ಜನರ ಹತ್ತಿರ ಹೆಚ್ಚು ಭಾವನಾತ್ಮಕವಾಗಿಲ್ಲ, ಸಖತ್ practical. ಕಡ್ಡಿ ತುಂಡಾದ ಹಾಗೆ ಮಾತಾಡ್ತೀಯ. ಆದ್ರೆ ಪ್ರಕೃತಿಯ ಹತ್ತಿರ ಹೆಚ್ಚು ಭಾವನಾತ್ಮಕವಾಗಿರ್ತಿ…ಯಾಕೆ ಅಂತ. ನಾನನ್ನುವೆ – “ Earth deserves emotions, world does not ” ಅಂತ. ಇದು ಅರ್ಥವಾಗಬೇಕಿದ್ದರೆ ಒಮ್ಮೆ ಮಳೆಯಲ್ಲಿ ಅಳಬೇಕು !
ಆತ್ಮಹತ್ಯೆ
ಆದರೆ ಅದು ಅವೆರಡರ ಸಮಾನಾಂಶವಾದ ಭೀಕರತೆಯನ್ನು ಹೇರಳವಾಗಿ ಹೊಂದಿತ್ತು.
ತಾಳ್ಮೆ ತಲೆಯ ತಾರ್ಸಿಯಿಂದ ಎಂದಿಗೋ ಹಾರಿಹೋಗಿತ್ತು. ಬುದ್ಧಿಯೂ ಆವಿಯಾಗಿ ಅನಂತ ದಿಙ್ಮೂಢತೆ ವ್ಯಾಪಿಸಿತ್ತು. ಮನೆಯಿಂದ ಆ ಕ್ಷಣವೇ ಹೊರಟುಬಿಟ್ಟೆ. ಎಲ್ಲಿಗೆ ಪಯಣ ಅಂತ ನನಗೇ ಗೊತ್ತಿಲ್ಲ. ಕಾಲು ಹೋದ ಕಡೆ ದೇಹ ಚಲಿಸುತ್ತಿತ್ತು, ಆದರೆ ಮನಸೆಲ್ಲಿ ಹಾರಿಹೋಗಿತ್ತೋ !
ನಮ್ಮ ಮನೆಯಿಂದ ಅನತಿದೂರದಲ್ಲಿ ಒಂದು ಪಾಳು ಬಾವಿ ಇದೆಯೆಂದು ನನಗೆ ನ್ಯೂಸ್ ಪೇಪರ್ ಮುಖಾಂತರ ಗೊತ್ತಿತ್ತು. ಯಾಕಂದರೆ ಅಲ್ಲಿ ಆತ್ಮಹತ್ಯೆಗಳು ಬಹಳವಾಗಿ ಆಗುತ್ತಿತ್ತು. ಆ ಬಾವಿಯನ್ನು ಮುಚ್ಚಲು ಶತಪ್ರಯತ್ನ ನಡೆದಿದ್ದರೂ ಅದನ್ನು ಮಾಡಲು ಎಲ್ಲರೂ ಹೆದರುತ್ತಿದ್ದರು. ಮುನ್ನೆಡೆಯುತ್ತಿರುವ ಭಾರತ ದೇಶದ ಬುದ್ಧಿವಂತಿಕೆಗೆ ಅಪವಾದವೆಂಬಂತೆ ದೆವ್ವ ಭೂತಗಳ ಮತ್ತು ಪ್ರೇತಲೀಲೆಯ ನಂಬಿಕೆಗಳೂ ಅಲ್ಲಿ ತಾಂಡವವಾಡುತ್ತಾ, ಜನರ ಧೈರ್ಯಗೆಡಿಸಿ, ಆ ಬಾವಿ ಹಾಗೇ ಪಾಳುಬಿದ್ದಿತ್ತು. ಆ ಬಾವಿ ಸಾಕ್ಷಾತ್ ಮೃತ್ಯುಕೂಪವೆಂದೂ, ಅಲ್ಲಿ ಸತ್ತವರು ಅಂತರ್ಪಿಶಾಚಿಯಾಗಿಯೇ ಆಗುತ್ತಾರೆಂದು, ಎಲ್ಲಿ ಸತ್ತರೂ ಅಲ್ಲಿ ಮಾತ್ರ ಸಾಯಬಾರದೆಂಬ ಕುಖ್ಯಾತಿಯನ್ನು ಆ ಬಾವಿ ಪಡೆದಿತ್ತು. ಆದರೆ, ಈ ಬಾವಿ ಎಲ್ಲಿದೆ ಎಂದು ನಿಖರವಾಗಿ ನನಗೆ ಗೊತ್ತಿರಲಿಲ್ಲ.
ದುಡ್ದು ಮರೆತರೂ, ನನ್ನ ಹೆಸರನ್ನೇ ಮರೆತರೂ ನನ್ನ ನೋಕಿಯಾ ನ್ಯಾವಿಗೇಟರ್ ಮೊಬೈಲನ್ನು ನಾನು ಮರೆಯುತ್ತಲೇ ಇರಲಿಲ್ಲ. ಮನೆಯಲ್ಲಿ ಎಷ್ಟೇ ಘೋರವಾದ ಯುದ್ಧ ವಾಗ್ವಾದಗಳು ನಡೆದಿದ್ದರೂ ನನ್ನ ಕೈ ನನ್ನ ಮೊಬೈಲನ್ನು ಕೈಬಿಟ್ಟಿರಲಿಲ್ಲ. ನನ್ನ ಕೈಯ ಜಾಣ್ಮೆಯನ್ನು ಮೆಚ್ಹಿದೆ. ನ್ಯಾವಿಗೇಟರ್ ನಲ್ಲಿ ಬಾವಿಯನ್ನು ಹುಡುಕಿ, ಅಲ್ಲಿ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸಿನ ಮೂಲೆ ಮೂಲೆಗಳಲ್ಲಿದ್ದ ಧೈರ್ಯವನ್ನು ಒಟ್ಟುಗೂಡಿಸಿ ದೃಢ ನಿರ್ಧಾರ ಮಾಡಿದೆ. ನಿರ್ವಿಘ್ನವಾಗಿ, ಮೊದಲನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿ ಸಾಯಬೇಕೆಂದು ನಿರ್ಧರಿಸಿ ನನ್ನ ಸಾವು ನಿರ್ವಿಘ್ನವಾಗಿ ನೆರವೇರಲಿ ಎಂದು ಗಣಪತಿಯಲ್ಲಿ ಬೇಡಿಕೊಂಡೆ.
ಆದರೆ ನನ್ನ ಪ್ರಾರ್ಥನೆ ದೇವರನ್ನು ಮುಟ್ಟಲಿಲ್ಲ ಎಂಬುದು ” ನೊ ಮ್ಯಾಚಸ್ ಫೌಂಡ್ ” ಎಂಬ ನನ್ನ ನ್ಯಾವಿಗೇಟರ್ ಉತ್ತರದಿಂದ ಗೊತ್ತಾಯ್ತು. ಏನೇ ಟೈಪಿಸಿದರೂ ಇದೇ ಉತ್ತರ! ವೆಲ್ಲ್, ಓಲ್ಡ್ ವೆಲ್ಲ್, ಎಂಬುದು ಎಲ್ಲೂ ಕಾಣಿಸಲಿಲ್ಲ. ಮಿಕ್ಕೆಲ್ಲ ಬಿಲ್ಡಿಂಗಿನ , ರಸ್ತೆಗಳ ನಕ್ಷತ್ರ ಕುಲ ಗೋತ್ರಗಳು ಮೊಬೈಲಲ್ಲಿ ರಾರಾಜಿಸುತ್ತಿದ್ದವು, ಪಾಳು ಬಾವಿ ಮತ್ತು ಅದರ ಕಡೆಗೆ ಹೋಗುವ ದಾರಿಯೊಂದನ್ನು ಬಿಟ್ಟು. ದೇವರು ಕೈಬಿಟ್ಟರೇನೆ ಮನುಷ್ಯ ಸಾಯುವುದು ಎಂಬುದು ತಲೆಗೆ ತೋಚಿತು. ಆ ಸಮಯದಲ್ಲಿ ನಾನು ವೇದಾಂತದ ಉತ್ತುಂಗಕ್ಕೆ ಹೋಗಿದ್ದೆನೇನೋ, ಎಲ್ಲವೂ ನಶ್ವರ ಎಂದು ಒಂದು ವಿಕಟನಗೆ ಬೀರಿದೆ.
ಮನೆಯಲ್ಲಿ ಸತ್ತಿದ್ದರೇನೇ ಚೆನ್ನಾಗಿತ್ತು ಅನ್ನಿಸಿತು ನನಗೆ ಒಂದು ನಿಮಿಷ. ಆದರೆ ಅಲ್ಲಿ ಕೆಲವು ಸಮಸ್ಯೆಗಳಿದ್ದವು. ನೇಣು ಹಾಕಿಕೊಲ್ಳಲು ಸೀರೆ, ಫ್ಯಾನುಗಳಿದ್ದವಾದರೂ ನಿಲ್ಲಲು ಸರಿಯಾದ ಎತ್ತರದ ಸ್ಟೂಲಿರಲಿಲ್ಲ. ಮಂಚದ ಮೇಲೆ ನಿಂತುಕೊಂಡು ನೇಣು ಹಾಕಿಕೊಳ್ಳಲು ಆಗುವುದಿಲ್ಲ. ವಿಷದ ಬಾಟಲಿಯನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಮತ್ತೆ ಮನೆಯವರ ಬಳಿ ಕೈಚಾಚುವುದು ನನ್ನ ಸ್ವಾಭಿಮಾನಕ್ಕೆ ಧಕ್ಕೆ. ಫೆನಾಯಿಲು ಮುಗಿದಿದೆ ಎಂದು ಕೆಲಸದವಳು ನೆನ್ನೆಯೇ ಹೇಳಿಬಿಟ್ಟಿದ್ದಳು. ನಿದ್ರೆ ಮಾತ್ರೆ ನಮ್ಮ ಮನೆಯಲ್ಲಿ ದುರದೃಷ್ಟವಷಾತ್ ಯಾರೂ ನುಂಗುತ್ತಿರಲಿಲ್ಲ. ಮನೆಯಲ್ಲಿ ಸಾಯುವ ಯಾವ ದಾರಿಯೂ ನನಗೆ ಅನುಕೂಲಕರವಾಗಿರಲಿಲ್ಲ. ಹೊರಗೆ ಸಾಯದೇ ವಿಧಿಯಿರಲಿಲ್ಲ.
ಮನಸ್ಸಿಗೆ ಬಂದ ಯೋಚನೆಯನ್ನು ನೀರಿನ ಗುಳ್ಳೆ ಒಡೆದಂತೆ ಒಡೆದು ಹಾಕಿ, ಈಗ ಬಾವಿಯ ವಿಳಾಸ ಪತ್ತೆ ಮಾಡುವ ದಾರಿ ಯೋಚಿಸತೊಡಗಿದೆ. ಬೆಂಗಳೂರಿನಂಥಾ ಮಹಾನಗರದಲ್ಲಿ ಮನೆಗಳನ್ನ ಹುಡುಕುವುದೇ ಮಹಾಕಷ್ಟ. ಇನ್ನು ಬಾವಿಗಳನ್ನು ಹುಡುಕುವುದು ಹೇಗೆ ? ಕೇವಲ ೨೭ ಪ್ರತಿಶತ ಕನ್ನಡಿಗರನ್ನು ಮಾತ್ರ ಹೊಂದಿರುವ ಈ ಭವ್ಯ ನಗರಿಯಲ್ಲಿ ಹತ್ತು ಜನರಿಗೆ ಇಬ್ಬರು ಕನ್ನಡಿಗರು ಸಿಗುತ್ತಾರೆ. ಬೆಂಗಳೂರಿಗರಲ್ಲದವರು, ಕನ್ನಡೇತರರಿಗೆ ಆಂಗ್ಲದಲ್ಲಿ ಕೇಳಿದರೆ ಅತೀ ಸುಲಭದ ಉತ್ತರವಾದ ” I don’t know” ಕೇಳಸಿಗುತ್ತದೆ. ಮತ್ತೆ ಕೆಲವರು ಎಫ್ ಎಮ್ ಕೇಳುವಲ್ಲಿ ಲೀನರಾಗಿರುತ್ತಾರಾದ್ದರಿಂದ, ನಮ್ಮ ಪ್ರಶ್ನೆ ಅವರಿಗೆ ಕೇಳಿತೋ ಬಿಟ್ಟಿತೋ, ಅಡ್ಡಡ್ಡ ತಲೆಯ್ಲಲ್ಲಾಡಿಸುತ್ತಾರೆ. ಇನ್ನು ಕನ್ನಡಿಗರು ಸಿಕ್ಕರೂ ಅವರಿಗೆ ವಿಳಾಸ ಗೊತ್ತಿರಲಿ ಬಿಡಲಿ, ನಾವು ಯಾಕೆ ಆ ವಿಳಾಸಕ್ಕೆ ಹೋಗುತ್ತಿದ್ದೇವೆ ಎಂಬ ಕೆಟ್ಟ ಕುತೂಹಲವಂತೂ ಇದ್ದೇ ಇರುತ್ತದೆ. ನಾನು “ಪಾಳು ಬಾವಿ ಎಲ್ಲಿದೆ ಹೇಳ್ತಿರಾ ?” ಎಂದು ಕೇಳಿ, ಅವರು ” ನೀವು ಸಾಯಕ್ಕೆ ಹೋಗ್ತಿದೀರಾ ? ಸಾಯಕ್ಕೆ ನಿಮಗೇನ್ ಬಂದಿದೆ ಧಾಡಿ ?” ಎಂದೆಲ್ಲ ಮರುಪ್ರಶ್ನೆಗಳ ಸುರಿಮಳೆಗರೆದು, ನನ್ನನ್ನು ಬಾಯಿ ತೆರೆಯಲೂ ಬಿಡದೆ “ಸಾಯ್ಬೇಡಿ! ಹಾಗೆಲ್ಲಾ ಸಾಯೋ ಯೋಚನೆ ಮಾಡ್ಬಾರ್ದು. ಈಸಬೇಕು ಇದ್ದು ಜೈಸಬೇಕೆಂದು ದಾಸರು ಹೇಳಿಲ್ಲವೇ ? ” ಎಂದೆಲ್ಲಾ ವೇದಾಂತ ಶುರು ಮಾಡುತ್ತಾರೆ. ಇದನ್ನು ಕೇಳುತ್ತಲೇ ಕ್ಷಣ ಮಾತ್ರದಲ್ಲೇ ಜನ ಜಮಾಯಿಸಿ ಎಲ್ಲರೂ ನಾವೇಕೆ ಸಾಯಲು ಹೊರಟಿದ್ದೇವೆ, ಸಾಯಲು ಇರುವ ಕಾರಣ ಸಾಧುವೇ ಅಲ್ಲವೇ ಎಂಬಿತ್ಯಾದಿ ಮಹತ್ವದ ವಿಚಾರಗಳ ಬಗ್ಗೆ ಬೇಡದಿದ್ದರೂ ಚರ್ಚಿಸಿ, ನಮಗೆ ಕೇಳುವ ಇಚ್ಛೆಯಿಲ್ಲದಿದ್ದರೂ ತಮ್ಮ ಇಂಗಿತ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ನಮ್ಮನ್ನು ಇಬ್ಬಂದಿಗೆ ಸಿಕ್ಕಿಸುತ್ತಾರೆ. ಆದ್ದರಿಂದ ಸಾಯಲು ಹೋಗುವಾಗ ನಾವು ಯಾರನ್ನೂ ಮಾತಾಡಿಸದಿದ್ದರೆ ಒಳಿತು. ಆಗ ನಾವು ಹೇಗೆ ಸಾಯಬೇಕು ಎಂಬುದರ ಬಗ್ಗೆ ಮತ್ತಷ್ಟು ಏಕಾಗ್ರತೆಯಿಂದ ಯೋಚನೆ ಮಾಡಬಹುದು.
ಆದ್ದರಿಂದ ನಾನು ಪಾಳು ಬಾವಿಯ ವಿಳಾಸ ಯಾರನ್ನೂ ಕೇಳಬಾರದೆಂದು ನಿರ್ಧರಿಸಿದೆ. ಹೇಗೂ ಮನೆಬಿಟ್ಟಾಗಿದೆ, ಬಾವಿಯನ್ನು ಹುಡುಕಿ ಸತ್ತೇ ಸಾಯಬೇಕೆಂದು ತೀರ್ಮಾನಿಸಿದೆ. ಗಣಪತಿ ಕೈಬಿಟ್ಟರೇನು ? ಅವರಪ್ಪ ಶಿವನಿಲ್ಲವೇ ? ಅವನ ಪಾದ ಸೇರಬೇಕೆಂಬ ನನ್ನ ಉತ್ಕಟವಾದ ಆಕಾಂಕ್ಷೆಯನ್ನು ಶಿವ ನೆರವೇರಿಸಿಯೇ ತೀರುತ್ತಾನೆಂದು ಬಲವಾದ ನಂಬಿಕೆಯಿತ್ತು. ಆ ನಂಬಿಕೆಯಿಂದಲೇ ನಡೆದೂ ನಡೆದೂ ಮುಖ್ಯ ರಸ್ತೆಗೆ ಬಂದು ತಲುಪಿದೆ.
ರಸ್ತೆಯಲ್ಲಿ ಎಲ್ಲಿ ನಿಂತು ನನ್ನ ಮುಂದಿನ ಯೋಜನೆಗಳ ಬಗ್ಗೆ ಯೋಚನೆ ಮಾಡುವುದು ಎಂಬುದು ನನ್ನ ಮುಂದಿನ ಸಮಸ್ಯೆ ಆಯ್ತು. ರಸ್ತೆ ಮಧ್ಯದಲ್ಲಿ ನಿಂತು ಯೋಚನೆ ಮಾಡಲು ನಾನು ಸಿನೆಮ ಹೀರೋ ಅಲ್ಲ. ಫುಟ್ ಪಾತ್ ಎಂಬುದು ಮಹಾನಗರದಲ್ಲಿ ಇನ್ನು ನಾಮಾವಶೇಷ ಮಾತ್ರ, ನಡೆಯಲು ದಾರಿಗೊತ್ತಿಲ್ಲ, ಪಯಣದಲ್ಲಿ ಸಂಗಡಿಗರಿಲ್ಲ. ಇಂತಹ ಬರಗೆಟ್ಟ ಪರಿಸ್ಥಿತಿಯನ್ನು ನಾನು ಹಿಂದೆಂದೂ ಎದುರಿಸಿರಲಿಲ್ಲ. ಇದ್ದಿದ್ದರಲ್ಲಿ ಸೇಫ್ ಜಾಗವೆಂದು ಒಂದು ಶಾಪಿಂಗ್ ಕಾಂಪ್ಲೆಕ್ಸ್ ಮುಂದೆ ನಿಂತೆ.
ದಾರಿತೋರದೇ ನಾನು ಓದಿದ ಪಾಳು ಬಾವಿ ಆತ್ಮಹತ್ಯಾಕಾಂಡದ ತುಣುಕುಗಳನ್ನು ನೆನಪಿಸಿಕೊಳ್ಳತೊಡಗಿದೆ. “….ಪಾಳು ಬಾವಿಯಲ್ಲಿ ಬಿದ್ದು ಸತ್ತಿದ್ದಾರೆ…..ಸುತ್ತ ಮುತ್ತಲಿನ ಮಾಂಸದಂಗಡಿಯವರ ಕಣ್ಣು ತಪ್ಪಿಸಿ…. “ಎಂದು ನೆನಪಾದೊಡನೇ ನನಗೆ ಪಾಳು ಬಾವಿಯ ದಾರಿ ಹೊಳಿಯಿತು. ದಾರಿಯಲ್ಲಿರುವವರನ್ನು “ಮಾಂಸದಂಗಡಿ ಬೀದಿ ಎಲ್ಲಿದೆ ಹೇಳ್ತಿರಾ” ಎಂದರೆ ಹೆಚ್ಚು ಪ್ರಶ್ನೆ ಕೇಳದೇ ದಾರಿ ತೋರಿಸುತ್ತಾರೆಂದು ಸಂತೋಷಿಸಿ, ಒಬ್ಬರನ್ನು ಕೇಳಿದೆ. ಅವರು ” ಮುಂದೆ ಒಂದು ಬಸ್ ಸ್ಟಾಪ್ ಬರತ್ತೆ…ಅಲ್ಲಿಂದ ಮುಂದೆ ಹೋಗಿ ಎಡಕ್ಕೆ ತಿರುಗಿ, ಅದೇ ಬೀದಿ ” ಎಂದರು. ನಾನು ನನ್ನ ಕೃತಜ್ಞತೆಯನ್ನು ನಗೆಯಲ್ಲಿ ಸೂಚಿಸಿ ಮುಂದೆ ನಡೆದೆ.
ಬ್ರಾಹ್ಮಣ ಸಂಪ್ರದಾಯದವರು ನಾವು.ಬೀಟ್ ರೂಟನ್ನೇ ಮಾಂಸದ ಸಮಾನವೆಂದು, ತಿನ್ನಬಾರದೆಂದು ನಮ್ಮ ಅಜ್ಜಿ ತಾತ ಕಟ್ಟಪ್ಪಣೆಗೈದಿದ್ದರು. ನಾನು, ಮನೆಯ ಕುಲಪುತ್ರಿ,ಮಾಂಸದ ಬೀದಿಯಲ್ಲಿ ಎಡಗಾಲಿನ ಉಂಗುಷ್ಟವನ್ನಿಟ್ಟರೂ ಮಾನಸ ಸರೋವರದಲ್ಲಿ ಮುಳುಗಿ ಪಾಪ ತೊಳೆದುಕೊಳ್ಳಬೇಕೆಂದು ಕಟ್ಟಾಜ್ಞೆ ಹೊರಡುತ್ತಿತ್ತು. ನಡೆದುಕೊಂಡೇ ಹೋಗೆನ್ನುತ್ತಿದ್ದರೇನೋ ಹಿರಿಯರು…ಪಾಪ ಸವೆಯಲಿ ಅಂತ. ಮನೆಯವರೇ ನನ್ನ ಕಡೆಗಾಣಿಸಿದಮೇಲೆ ಕಟ್ಟಲೆಗಳ ಕಾಟವೇಕೆ ಎಂದುಕೊಂಡು ಧೈರ್ಯವಾಗಿ ಮಾಂಸದ ಅಂಗಡಿ ಬೀದಿಯಲ್ಲಿ ಬಲಗಾಲಿಟ್ಟೆ.
ಕಾಲಿಟ್ಟ ಕೂಡಲೆ ಮೇಕೆ ಕುರಿಗಳ, ಕೋಳಿಗಳ ಆರ್ತನಾದ ಕೇಳಿಸಿ ಮನಸ್ಸನ್ನು ಕಡೆಗೋಲು ಹಾಕಿ ಕಡೆದಂತಾಯ್ತು. ಕತ್ತೆತ್ತಿ ನೋಡಲು ಧೈರ್ಯವಿಲ್ಲ, ರಕ್ತ ಕಂಡರೆ ಭಯ ಬೇರೆ ! ಅದಕ್ಕೆ ನಾನು ಪ್ರಾಣ ಹೋದರೂ ಡಾಕ್ಟರ್ ಆಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೆ. ಕತ್ತು ಬಗ್ಗಿಸಿ ನಡೆದರೆ ಜನರಿಗೆ ಅನುಮಾನ ಬಂದು ಅವರು ನನ್ನ ಆತ್ಮಹತ್ಯೆಯ ಪ್ರಯತ್ನಕ್ಕೆ ಭಂಗ ತಂದರೆ ? ಕತ್ತೆತ್ತಿ ನೋಡಿದರೆ ಪ್ರಾಣಿ ಹತ್ಯೆ ಕಂಡು ನನಗೆ ಭಯವಾಗಿ ನಾನು ಕಿಟಾರನೆ ಚೀರುತ್ತೇನೆಂದು ಗೊತ್ತಿತ್ತು. ಕಣ್ಮುಚ್ಚಿ ನಡೆಯುವುದು ಅಸಾಧ್ಯ. ಏನಪ್ಪಾ ಈ ಗತಿ ಬಂತು ನನಗೆ ಅಂತ ನನ್ನನ್ನು ನಾನೇ ಹಳಿದುಕೊಂಡೆ. ಕಡೆಗೆ, ಲೋಕಾಭಿರಾಮವಾಗಿ ಎಲ್ಲೆಡೆ ನೋಡುತ್ತಾ ನಡೆದರೆ ಜನರಿಗೆ ಅನುಮಾನ ಬರುವುದಿಲ್ಲ ಅಂತ ಅನ್ನಿಸಿ, ಸಾಯುವಾಗ ಧೈರ್ಯ ಇರ್ಬೇಕು…ಸಾಯೋ ಪ್ರಾಣಿಗಳನ್ನ ನೋಡಿ ಧೈರ್ಯ ತಗೋಬೇಕೆಂದು ತೀರ್ಮಾನಿಸಿದೆ. ಸ್ಲೋ ಮೋಷನ್ನಲ್ಲಿ ಕತ್ತೆತ್ತುವುದು ಹೇಗೆ ಮಾಡಬೇಕೆಂದು ಜನ ನನ್ನನ್ನ ನೋಡಿ ಕಲಿಯಬೇಕೆಂದೆಸಿತು…ಅಷ್ಟು ನಿಧಾನಕ್ಕೆ ಕತ್ತೆತ್ತಿದೆ.
ಅಷ್ಟೊತ್ತಿಗೆ ಯಾವ್ದೋ ಅಂಗಡಿಯಲ್ಲಿ ಹೆಂಗಸೊಬ್ಬಳು ಕುರಿ ಬೇಕು..ಅಂದಳು. ಅವ ಕುರಿಯನ್ನು ಎಳೆತಂದ. ಅದೇ ಸಮಯದಲ್ಲಿ ರೇಡಿಯೋ ನಲ್ಲಿ “ಕೊಲ್ಲೇ ನನ್ನನ್ನೇ…”ಅಂತ ಶುರುವಾಗಿದ್ದೇ ಅವ ಅತ್ಯುತ್ಸಾಹದಿಂದ ಕುರಿಯ ತಲೆಯನ್ನು ಕಚಕ್ಕನ್ನಿಸಿದ. “ಬ್ಯಾ ಬ್ಯಾ” ಎಂಬ ಆರ್ತ ಧ್ವನಿಯಲ್ಲಿ ಕುರಿ ಅಸು ನೀಗಿತು. ನಾನು ನನ್ನ ಜೀವನದಲ್ಲಿ ಅದೇ ಮೊದಲು ಪ್ರಾಣಿ ಹತ್ಯೆಯನ್ನು ನೋಡಿದ್ದು. ಚೀರಲೂ ಸಹ ನನ್ನಲ್ಲಿ ಶಕ್ತಿಯುಳಿಯಲಿಲ್ಲ..ಅದೆಷ್ಟು ಬೇಗ ಆಗಿಹೋಯ್ತೆಂದರೆ…ನಾನು ಕಣ್ಣನ್ನೂ ಮಿಟುಕಿಸಿರಲಿಲ್ಲ!
ನಾನೇ ಕುರಿಯೆಂಬಂತೆ, ಆ ಮಾತುಗಳೇ ಮಚ್ಚಾಗಿ, ಸಮಾಜವೆಂಬ ಬಲಿಪೀಠದ ಮೇಲೆ ನಮ್ಮ ಮನೆಯವರೇ ನನ್ನನ್ನು ಬಲಿ ಹಾಕುತ್ತಿರುವ ಹಾಗೆ ಭಾಸವಾಯ್ತು ನನಗೆ. ಸತ್ತ ಮೇಲೆ ಎಲ್ಲಾ ಸರಿಹೋಗತ್ತೆ ಅನ್ನಿಸಿತು. ನೋವಾದರು ಅದು ಕ್ಷಣಿಕ, ಶಾಶ್ವತ ಮುಕ್ತಿ ಮುಖ್ಯ ಅನ್ನಿಸಿತು. ಸಾವು ತನ್ನ ತೋಳ್ಬೀಸಿ ನನ್ನನ್ನು ಕರೆದಂತೆ ಆಯ್ತು . ಆ ಕರೆಯಲ್ಲಿ ನನಗೆ ಎಲ್ಲಿಲ್ಲದ ಆತ್ಮೀಯತೆ ಕಂಡುಬಂತು. ಕರೆಗೆ ಓಗೊಟ್ಟು ಬಾವಿಯಲ್ಲಿ ಬಿದ್ದು ಸಾಯಲೇಬೇಕೆಂದು ದಡ ದಡ ಧಾವಿಸಿದೆ. ಆ ಓಟದಲ್ಲಿ ನಾನು ರಸ್ತೆ ಕೊನೆ ತಲುಪಿದೆನೆ ಹೊರತು ಹೊರತು ಬಾವಿ ಕಾಣಲಿಲ್ಲ. ಬಲಕ್ಕೆ ತಿರುಗಲೋ ಏದಕ್ಕೆ ತಿರುಗಲೋ ಎನ್ನುವುದು ನನ್ನ ಮುಂದಿನ ಸಮಸ್ಯೆಯಾಯ್ತು. ಬಲಕ್ಕೆ ನೋಡಿದೆ. ಅಲ್ಲಿ ಜನರ ಸಂಚಾರ ಹೆಚ್ಚಿತ್ತು. ಎಡಕ್ಕೆ ತಿರುಗಿದೆ. ಅಲ್ಲೊಂದು ಮುರಿದು ಬಿದ್ದ ಗೇಟಿತ್ತು. ಪಾಳು ಬಿದ್ದಂತಾ ಜಾಗ, ಮುರುಕಲು ಮನೆ. ಇದೇ ಪಾಳು ಬಾವಿಯ ಜಾಗ ಎಂದು ನನ್ನ ಅತೀಂದ್ರಿಯ ಪ್ರಜ್ಞೆ ಹೇಳಿತು. ಎಲ್ಲೇ ಹೋದರೂ ಮೊದಲು ಬಲಗಾಲಿಟ್ಟು ಹೋಗಬೇಕಾದ್ದರಿಂದ, ಯಶಸ್ವಿಯಾಗಿ ಸಾಯಲು ಇಚ್ಛಿಸಿ ಆ ಪಾಳು ಬಾವಿಯ ಜಾಗಕ್ಕೆ ಬಲಗಾಲಿಟ್ಟೆ.
ಒಳಬಂದು ಆ ಜಾಗವನ್ನು ಸ್ಥೂಲವಾಗಿ ಪರೀಕ್ಷಿಸಿದೆ. ಹುಲ್ಲೆಲ್ಲಾ ಎತ್ತರೆತ್ತರಕ್ಕೆ ಬೆಳೆದಿತ್ತು. ಇನ್ನೂ ಎಂಥೆಂತದೋ ಗಿಡಗಳು. ಹೆಸರು ಹುಡುಕುವ ಗೋಜಿಗೆ ಹೋಗಲಿಲ್ಲ. ಗಿಡದ ಮಧ್ಯ ಹಾವಿದ್ದು, ಅದು ನನ್ನನ್ನೇ ಹುಡುಕಿಕೊಂಡು ಬಂದು ಕಚ್ಚಿ, ಬೇಗ ಪ್ರಾಣ ಹೋಗಲಪ್ಪಾ…ಬದುಕು ನನಗೆ ಸಾಕಾಗಿ ಹೋಗಿದೆ ಎನ್ನಿಸಿತು. ಹುಲ್ಲುಗಳ ಮಧ್ಯವೇ ನಡೆದೆ. ಹಾವಿರಲಿ…ನನ್ನ ಬರಗೆಟ್ಟಾ ಹಣೇಬರಹಕ್ಕೆ ಇರುವೆಯೂ ಕಚ್ಚಲಿಲ್ಲ. ಹುಲ್ಲು ಗಿಡಗಳ ಆಚೆ, ಕಡೆಗೂ ನಾನು ನೋಡಲು ಆಶಿಸುತ್ತಿದ್ದ, ಬೀಳಲು ತವಕಿಸುತ್ತಿದ್ದ ಪಾಳು ಬಾವಿ ಕಾಣಿಸಿತು. ಆದರೆ ಬಾವಿ ಕಟ್ಟೆಯ ಮುಂದೆ ಕಪಾಳಕ್ಕೆ ಹೊಡೆದಂತೆ ಒಂದು ಬೋರ್ಡ್ ಕಾಣಿಸಿತು – “ Closed for renovation”
ಬೋರ್ಡ್ ನೋಡಿದ ತಕ್ಷಣ ನನ್ನ ಜಂಘಾಬಲವೇ ಉಡುಗಿ ಹೋಯಿತು. ನಾನು ಸಾಯುವ ದಿನವೇ ಇವರಿಗೆ ನವೀಕರಣಕ್ಕೆ ಸುಮುಹೂರ್ತವೇ ? ನನ್ನ ಗ್ರಹಚಾರ ಈಮಟ್ಟಿಗೆ ಕೆಟ್ಟಿದೆ ಎಂದು ನಾನು ಖಂಡಿತಾ ಎಣಿಸಿರಲಿಲ್ಲ. ಆ ಕ್ಷಣಕ್ಕೆ ಆತ್ಮಹತ್ಯೆಯ ಬೇರೆ ವಿಧಾನಗಳೂ ತೋಚಲಿಲ್ಲ. ತಲೆ ತಿರುಗಿದ ಹಾಗಾಯ್ತು. ಆದರೂ, ಇಷ್ಟೆಲ್ಲಾ ಕಷ್ಟಪಟ್ಟ ಮೇಲೆ ಸಾಯದಿದ್ದರೆ ನಾನು ಸಾಯಲು ಪಟ್ಟ ಇಚ್ಛೆಗೇ ಅವಮಾನ ಅನ್ನಿಸಿತು.”Break the rules purposefully”ಅನ್ನೋದೂ ಒಂದು ನಿಯಮ. ಇದನ್ನ ಭಾರತೀಯರು ಅತ್ಯಂತ ಶಿಸ್ತಿನಿಂದ ಪಾಲಿಸುತ್ತಾರಾದ್ದರಿಂದ ಅಪ್ಪಟ ಭಾರತೀಯಳಾದ ನಾನು ಇದನ್ನು ಪಾಲಿಸಲು ಇಚ್ಛಿಸಿದೆ. ಬೋರ್ಡನ್ನು ಒಮ್ಮೆ ಅತಿ ತಿರಸ್ಕಾರ ಭಾವದಿಂದ ನೋಡಿ, ಅದನ್ನು ದಾಟಿ ಬಾವಿಕಟ್ಟೆಯ ಬಳಿಗೆ ಬಂದೇಬಿಟ್ಟೆ. ಇನ್ನೇನು ಎಗರಿ ಬೀಳಬೇಕು…..ಅಷ್ಟರಲ್ಲಿ, ” ಬೀಳಬೇಡಿ…ನಿಲ್ಲಿ !!!!!” ಅಂತ ಕೂಗಿದರು ಯಾರೋ. ನಾನು ಆ ಕೂಗನ್ನೂ ಸಹ ಕಡೆಗಾಣಿಸಿ ಎಗರಲು ಮುಂದೆ ವಾಲಿದೆ.
ಇನ್ನೇನು ಬಾವಿಯೊಳಗೆ ಬೀಳಬೇಕಿತ್ತು ನಾನು…ನನ್ನ ಕೈ ಹಿಡಿದು ಹಿಂದಕ್ಕೆ ಯಾರೋ ಎಳೆದ ಹಾಗಾಯ್ತು. ನಾನೋ…ದೊಡ್ಡ ಮನುಷ್ಯಳು…ಬಾವಿಯನ್ನು ದಿಟ್ಟಿಸಿ ನೋಡಲು ಭಯವಾಗಿ ಕಣ್ಣನ್ನು ಮುಚ್ಚಿಬಿಟ್ಟಿದ್ದೆ. ಹಿಂದೆ ಇಂದ ಬಂದ ಆಗಂತುಕ ನನ್ನನ್ನು ಎಳೆದಿದ್ದೇ ತಡ, ಎಲ್ಲಿ ಬೀಳುತ್ತಿದ್ದೇನೆ ಎಂಬ ಅರಿವಿಲ್ಲದೇ, ಏನಾಗುತ್ತಿದೆ ಎಂಬ ಸುಳಿವಿಲ್ಲದೇ, ನನ್ನನ್ನು ಹಿಡಿದೆಳೆದ ಕಡೆ ಬಿದ್ದೆ. ನೀರಲ್ಲಿ ಬಿದ್ದಾಗ ಬರುವ ಶಬ್ದ ಬರಲಿಲ್ಲವಾದ್ದರಿಂದ ನೆಲದ ಮೇಲೆ ಬಿದ್ದಿರುವೆ ಎಂದು ನಾನು ಬಿದ್ದ ಮೇಲೆ ಗೊತ್ತಾಯ್ತು. ಹಾಗೆ ಬಿದ್ದರೂ ತಲೆಗೆ ಪೆಟ್ಟು ಬೀಳದ ಹಾಗೆ ಬಿದ್ದೆ…ನನ್ನ ದುರದೃಷ್ಟ, ಹಾಗೂ ನಾನು ಸಾಯಲಿಲ್ಲ !
ನನ್ನ ಕರ್ಮವನ್ನು ಮನಸಾರೆ ಬೈದುಕೊಳ್ಳುತ್ತಾ ಮೆಲ್ಲಗೆ ಕಣ್ಣು ಬಿಟ್ಟೆ. ನನ್ನನ್ನು ಸಾಯುವುದಕ್ಕೆ ಬಿಡದ ಆ ಪಾಪಾತ್ಮ ಯಾರು ಅಂತ ಸುತ್ತೆಲ್ಲಾ ಒಮ್ಮೆ ನೋಡಿದೆ. ಒಂದೈದು ಅಡಿ ದೂರದಲ್ಲಿ ಒಬ್ಬ ಯುವಕ ನಿಂತಿದ್ದ. ನನಗೆ ಒಮ್ಮೆಲೆ ಅನುಮಾನ ಶುರುವಾಯ್ತು. ವಯಸ್ಸು ಇಪ್ಪತ್ತಾರು ಮೀರಿರಲಿಕ್ಕಿಲ್ಲ..ಇವನೊಬ್ಬನೇ ಇಲ್ಲ್ಯಾಕೆ ಬಂದ ? ನೋಡಕ್ಕೆ ಬೇರೆ ಚೆನ್ನಾಗಿದ್ದಾನೆ. ನನ್ನ ಹಿಂದೆಯೇ ಯಾಕೆ ಬಂದ ? ನನ್ನನ್ನು ಉಳಿಸಿ ಇವನು ಹೀರೋ ಆಗಬೇಕಂತ ನಿರ್ಧರಿಸಿದ್ದಾನಾ ?ಆಥವಾ ಇವನು ಅಂಡರ್ವರ್ಲ್ಡ್ ಕಡೆಯವನಾ ? ಈ ಪ್ರಶ್ನೆಗಳ ಮಧ್ಯದಲ್ಲಿ ನಾನು ಸಾಯಲು ಬಂದಿದ್ದೇನೆ ಅನ್ನೋದು ಮರೆತೇ ಹೋಗಿತ್ತು ನನಗೆ…ಅವನು ಮಾತನಾಡಿಸುವವರೆಗೂ !
“ಏನ್ ಮೇಡಮ್…ಕಣ್ಣು ಕಾಣಲ್ವಾ ನಿಮಗೆ ? ಬೋರ್ಡ್ ಹಾಕಿದ್ದೀವಿ ಅಲ್ಲಿ…ಕಾಣಲ್ಲ ? ಅಲ್ಲಿ ಬಾವಿಯ ಸ್ವಲ್ಪ ಕೆಳಗೆ ಗ್ರಿಲ್ ಹಾಕಿ ಮುಚ್ಚಿಲ್ಲ ? ಕಣ್ಮುಚ್ಕೊಂಡ್ ಸಾಯ್ತಾರೆ ! ಇಲ್ಲಿ ಬಿದ್ದರೆ ಬರಿ ಮೂಳೆ ಮುರಿಯತ್ತೆ ಹೊರತು ನಿಮ್ಮ ಪ್ರಾಣ ಹೋಗಲ್ಲ, ತಿಳ್ಕೊಳಿ. ಆಮೇಲೆ ಕಾಪಾಡಿ ಕಾಪಾಡಿ ಅಂತ ಕಿರುಚಿಕೊಳ್ಳೂತ್ತೀರಾ ಬೇರೆ ! ನಾವ್ ಬಂದು..ನಿಮ್ಮನ್ನ ಮೇಲಕ್ಕೆ ಎತ್ತಬೇಕು ! ಏನ್ ಕರ್ಮ !” ಅಂದ.
ನನಗಂತೂ ಸಿಕ್ಕಾಪಟ್ಟೆ ಕೋಪ ಬಂತು. ಅವನಷ್ಟೇ ಎತ್ತರದ ದನಿಯಲ್ಲಿ ನಾನು ಉತ್ತರಿಸಿದೆ ” ನಿಮ್ಮನ್ನ ಕಾಪಾಡಿ ಅಂತ ಕೇಳಿದೆನೇನ್ರಿ ನಾನು ? ಹಾಂ ? ಬಿದ್ದು ಉಪವಾಸ ಸಾಯ್ತಿದ್ದೆ ಹೊರತು ನಿಮ್ಮನ್ನು ಕಾಪಾಡಿ ಅಂತ ಕೇಳ್ತಿರ್ಲಿಲ್ಲ…ಇದನ್ನ ನೀವೂ ತಿಳ್ಕೊಳೀ ! ನನ್ನ ಪಾಡಿಗೆ ನಾನು ನೆಮ್ಮದಿಯಾಗಿ ಸಾಯಣಾ ಅಂತ ಬಂದ್ರೆ…ನೀವು ನನ್ನ ಬದುಕಿಸಿ ಹೀರೋ ಆಗ್ಬೇಕೂ ಅಂತ ಇದ್ದೀರಾ ? ಅದೂ ಅಲ್ದೇ…ಸಾಯಕ್ಕೆ ಅಂತ ಬಂದಿರೋರ್ಗೆ ವರದ ಹಾಗೆ ಈ ಪಾಳು ಬಾವಿ ಇದ್ರೆ, ಇದನ್ನ renovate ಮಾಡ್ತಿದ್ದೀರಲ್ಲ..ಬುದ್ಧಿ ಇದ್ಯೆನ್ರಿ ನಿಮಗೆ ? ಎಲ್ಲಿ ಸಾಯ್ಬೇಕ್ ಮತ್ತೆ ನಾವು ?” ಹತಾಶಳಾಗಿ ಕೇಳಿದೆ.
“ನೀವು ನಿಜ್ವಾಗ್ಲು ಸೀರಿಯಸ್ಸಾಗಿ ಸಾಯ್ಬೇಕೂ ಅಂತ ಇದ್ದೀರಾ ?”
“ಇನ್ನೇನು ಇದೇನು ಆಟ ನಾ ? start , end, restart ಅಂತೆಲ್ಲಾ ಬಟನ್ ಒತ್ತಿಕೊಂಡು ಇರಕ್ಕೆ ?ಅಥವಾ ಇದೇನು ನಾಟಕ ನಾ? ಫಿಲಮ್ಮಾ ? rehearsal ಒಂದು ಸರ್ತಿ…take ಒಂದ್ಸರ್ತಿ…ಜೋಕ್ ಒಂದ್ ಸರ್ತಿ…ಸೀರಿಯಸ್ ಒಂದ್ ಸರ್ತಿ ಅಂತೆಲ್ಲಾ ಆಡಕ್ಕೆ ?” ಸ್ವಲ್ಪ ಜೋರಾಗಿಯ ಹೇಳಿದೆ.
“ನಿಮಗೆ ನಿಜವಾಗೂ ಸಾಯಕ್ಕೆ ಇಷ್ಟ ಇದ್ದರೆ ನನ್ನ ಜೊತೆ ಬನ್ನಿ.”
“ನಾನು ಬರಲ್ಲ.”
“ಯಾಕೆ ಮೇಡಮ್ ? ನನ್ನನ್ನು ಧೈರ್ಯವಾಗಿ ನಂಬಿ. ನಾವು ಸಾಯುವವರನ್ನು ತಡೆಯುವವರಲ್ಲ…ಅವರಿಗೆ ಸರಿಯಾಗಿ ಸಾಯುವ ಮಾರ್ಗ ತೋರುವಂಥರು” ಅಂದ.
“ಸರಿಯಾಗಿ ಸಾಯುವ” ಅನ್ನೋ ಪದವನ್ನ ಅವನು ಒತ್ತಿ ಹೇಳಿದ್ರಿಂದ ನನ್ನ ಅನುಮಾನ ಕಡಿಮೆಯಾಗುವ ಬದಲು ಇನ್ನಷ್ಟು ಜಾಸ್ತಿಯಾಯ್ತು.ಇವನು ಟೋಪಿ ಹಾಕುವ ಪಾರ್ಟಿಯೇ ಅಂತ ನನಗೆ ನಂಬಿಕೆಯಾಯ್ತು. ಸತ್ತರೆ ನೀಟಾಗಿ ಸಾಯಬೇಕು. ಹೆಂಗೆಂಗೋ ಸತ್ತರೆ ಮನೆಯ ಮಾನ ಮರ್ಯಾದೆ ? ಮಾಡೋ ಕೆಲಸ ನ ನೀಟಾಗಿ ಮಾಡಬೇಕು ಅಂತ ಶಾಲೆಯಲ್ಲಿ ಕಡ್ಡಿ ಏಟು ಕೊಟ್ಟು ಹೇಳಿಕೊಟ್ಟಿದ್ದರು. ಸರಿಯಾಗಿ ಸಾಯಿಸುತ್ತೇನೆ ಅಂದು ನನಗೆ ಮತ್ತು ಬರಿಸುವ ಔಷಧಿ ಕೊಟ್ಟುಬಿಟ್ಟರೆ ? ನನ್ನನ್ನು ಬೇರೆ ಎಲ್ಲೋ ಕರೆದುಕೊಂಡು ಹೋಗಿಬಿಟ್ಟರೆ ? ಏನೆಲ್ಲಾ ಭಯ ! ನಾನು -” ಏನೇ ಮಾಡಿದ್ರೂ ಬರಲ್ಲ” ಅಂದೆ. ಅದಕ್ಕೆ ಅವ,
” ಅಲ್ಲಿ ಮನೆ ಕಾಣ್ತಿದ್ಯಲ್ಲ, ಅಲ್ಲಿ ನಿಧಾನಕ್ಕೆ ಕೂತು, ಒಂದಷ್ಟ್ ತಿಂಡಿ ಊಟ ತಿಂದು,ಶಕ್ತಿ ಬರಿಸಿಕೊಂಡು ಸಾಯ್ತಿರಂತೆ…ಸಾಯೋದ್ ಸಾಯ್ತಿರಾ..ನೀಟಾಗಿ ಸಾಯ್ರಿ.ನಾವು ಸಹಾಯ ಮಾಡ್ತಿವಿ”
“ಇಲ್ಲ…ನೀವೆ ಸಾಯ್ಸಿಬಿಡ್ತಿರಾ…ನಾನೇ ಸಾಯ್ಬೇಕು. ಇದು ಆತ್ಮಹತ್ಯೆ ಆಗ್ಬೇಕು…ಕೊಲೆಯಲ್ಲ”
“ಮೇಡಮ್…ನಿಮ್ಮನ್ನ ಖಂಡಿತಾ ಕೊಲೆ ಮಾಡಲ್ಲ…ನೀವು ಆತ್ಮಹತ್ಯೆ ನೆ ಮಾಡ್ಕೊತೀರಂತೆ…ಪ್ಲೀಸ್ ಬನ್ನಿ..ಈ ಮುಚ್ಚಿದ ಬಾವಿಯ ಹಿಂದಿನ ರಹಸ್ಯ ತಿಳ್ಕೊಳ್ಳಕ್ಕಾದ್ರು ಬನ್ನಿ..”
ಇನ್ಯಾವ ಚಿದಂಬರ ರಹಸ್ಯ ಇರಬಹುದು ಇದು ಎಂದು ತಿಳಿಯಲು ನಾನು ಧೈರ್ಯ ಮಾಡಿ ಹೊರಟೆಬಿಟ್ಟೆ ಅವನ ಹಿಂದೆ.
ನಾನು ಸುಮ್ಮನೆ ಇದ್ದೆ. ಅವನೇ ಮಾತು ಶುರು ಮಾಡಿದ. “ಯಾಕ್ ಸಾಯ್ತಿದಿರಿ ?”
“ನಮ್ಮ ಮನೆಯರ ನನಗೆ ಸಿಕ್ಕಾಪಟ್ಟೆ ಅವಮಾನ ಮಾಡಿದ್ರು…ನಿನಗೆ ಏನೂ ಮಾಡಕ್ಕೆ ಬರಲ್ಲ…ನೀನು ನಿಷ್ಪ್ರಯೋಜಕಿ ಅಂತೆಲ್ಲಾ ಅಂದುಬಿಟ್ರು…ಅದಕ್ಕೆ ನನಗೆ ಸಾಕ್ಕೆ ಬರತ್ತೆ ಅಂತ ತೋರ್ಸಕ್ಕೆ ಸಾಯ್ತಿದಿನಿ” ಅಂದೆ.
“ಭೇಷ್ ! ಮೆಚ್ಚದೆ ನಿಮ್ಮ ಶೌರ್ಯ ನಾ ! “
“ಥ್ಯಾಂಕ್ಸ್”
” ನೀವು ನನಗೆ ಸಿಕ್ಕಿದ್ದು ಒಳ್ಳೆದೇ ಆಯ್ತು”
ಅವನ ಕಡೆ ಹುಬ್ಬೇರಿಸಿ ನೋಡಿದೆ.
“ನೀವು ಸಾಯಕ್ಕೆ ನಿಶ್ಚಯ ಮಾಡಿದ್ದೀರಿ ಅಂದ ಮೇಲೆ ನಾನು ನಿಮಗೆ ನಮ್ಮ ಸಂಘದ ಬಗ್ಗೆ ಹೇಳಲೇ ಬೇಕು”
“ಎಂಥಾ ಸಂಘ ? “
“ಆತ್ಮಹತ್ಯೆ incognito”
“ಅಯ್ಯೋ…ಸಾಯ್ಬೇಡಿ ಅಂತ ಲೆಕ್ಚರ್ರ್ ಕೊಡ್ತಿರಾ ? ನನಗೆ ಗೊ..”
“ಶ್ !!!!!!!!!!!!! ಮಾತಾಡ್ಬೇಡಿ…ನಾವು ಸಾಯೋರನ್ನ ತಡೆಯುವವರಲ್ಲ…ಸಾಯಲು ದಾರಿ ತೋರಿಸುವವರು ಅಂತ ಆಗಲೆ ಹೇಳಿದೆನಲ್ಲ ! ನಾವು ಯಾರ್ಯಾರು ಯಾವ್ಯಾವ ರೀತಿ ಸಾಯಬಹುದೆಂದು ಸಲಹೆ ನೀಡುವ consultants.”
ನಾನು ಪಿಳಿ ಪಿಳಿ ನೋಡಿದೆ. ಅಲ್ಲಾ…ಸಾಯೋದು ಬೇಡ ಎಂದು ಕೌನ್ಸೆಲ್ ಮಾಡುವವರನ್ನು ನೋಡಿದ್ದೇನೆ. ಇದೆಂಥದ್ದು ಸಾಯಲು consultancy ? ಇವನು ಖಂಡಿತಾ ತಲೆ ಸರಿಯಿಲ್ಲದ ಮನುಷ್ಯ ಎಂದುಕೊಂಡು ಇವನಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಕಣ್ಣಲ್ಲೇ ಹುಡುಕತೊಡಗಿದೆ.
“ನನ್ನಿಂದ ತಪ್ಪಿಸಿಕೊಳ್ಳಕ್ಕೆ ಆಗಲ್ಲ ನೀವು”
ದೇವ್ರೆ ! ಏನಪ್ಪಾ ಇವನು mind read ಮಾಡ್ತಿದಾನೆ ! ಛೆ…ದೇವ !ನಾನು ಏನು ಒಲಂಪಿಕ್ಸ್ ಪದಕ ಕೇಳಿದೆನೆ ಅಥವಾ ನೊಬೆಲ್ ಪಾರಿತೋಷಕ ಕೇಳಿದೆನೆ ನಿನ್ನ ? ಜಸ್ಟ್ ಸಾಯ್ಬೇಕು ಅಂತ ಅಷ್ಟೇ ಕೇಳಿದ್ದು. ಅದಕ್ಕೆ ನೀನು ಇಷ್ಟು ಕಾಡಿಸಬಹುದೇ ? ಈ ದೇಹದಿಂದ ದೂರವಾಗು ಬೇಗ ಆತ್ಮನೇ…ಈ ಸಾವು ಖಂಡಿತಾ ನ್ಯಾಯವೇ…ಎಲ್ಲಾ ಜಡ್ಜುಗಳ ಮೇಲಾಣೆ ! ಎಂದುಕೊಳ್ಳುತ್ತಿರುವಾಗಲೇ ಒಂದು ಪಾಳು ಬಿದ್ದ ಮನೆಯ ಹತ್ತಿರ ಬಂದುಬಿಟ್ಟಿದ್ದೆವು. ನಾನು ಬಂದ ಗೇಟೆಲ್ಲಾದರೂ ಕಂಡೀತೆ ಎಂದು ಹುಡುಕಿದೆ. ಅದನ್ನೂ ಗ್ರಹಿಸಿದ ಆ ಯುವಕ,
“ನೀವು ಬಂದ ಗೇಟು ಈ ಕಡೆ ಇಲ್ಲ. ಹುಡುಕಿ ಪ್ರಯೋಜನ ಇಲ್ಲ ” ಎಂದು ಆ ಪಾಳುಮನೆಯ ಬಾಗಿಲನ್ನು ಬಡಿದ. ನನಗೆ ಯಾಕೋ ಆಲಿಬಾಬನ ಕಥೆ ನೆನಪಾಯ್ತು. ಬಾಗಿಲು ತೆರೆದಿದ್ದು ಮತ್ತೊಬ್ಬ ಹುಡುಗ. ಇವನಷ್ಟೇ ವಯಸ್ಸಿರಬಹುದು ಅಥವಾ ಚಿಕ್ಕವನಿರಬಹುದು..ಕೈಯಲ್ಲಿ ಲ್ಯಾಪ್ ಟಾಪ್ ಪೊಂದನ್ನು ಹಿಡಿದಿದ್ದ. ನನ್ನನ್ನು ನೋಡಿದ ತಕ್ಷಣ “Welcome to ಆತ್ಮಹತ್ಯೆ incognito” ಎಂದು ಅಲ್ಲೇ ಇದ್ದಿದ್ದರಲ್ಲಿ ಸ್ವಲ್ಪ ನೀಟಾಗಿದ್ದ ಪಾಳು ಬಿದ್ದ ಹಾಲಲ್ಲಿ ಚೇರು ಹಾಕಿ ನಮ್ಮನ್ನುಕೂರಿಸಿ laptop ನನ್ನ ಕೈಯಲ್ಲಿ ಇಟ್ಟ. ನಾನು ಫುಲ್ಲ್ ಖುಷ್ ! ಮನೆಯಲ್ಲಿ ಇದ್ದ ಐದು ವರ್ಷ ಹಳೆಯ ಕಂಪ್ಯೂಟರ್ರಿಗೆ ಆರು ಜನ ಸರದಿಯಲ್ಲಿ ನಿಲ್ಲುತ್ತಿದ್ದೆವು. ನಾನು ಪ್ರಾಜೆಕ್ಟ್ ಗೆ ಪ್ರಿಪೇರ್ ಆಗುವಾಗಲೇ ಅಣ್ಣನಿಗೆಯಾಹೂ ನಲ್ಲಿ ಅವನ ಮಿತ್ರ ವರ್ಗದ ಕಾನ್ಫೆರೆನ್ಸು, ಅಕ್ಕನಿಗೆ ಸ್ಕೈಪಲ್ಲಿ ಕಾಲು, ಅಪ್ಪನಿಗೆ ಈಮೈಲು, ಅಮ್ಮನಿಗೆ ಚಾಟು,ತಮ್ಮನಿಗೆ ಆರ್ಕುಟ್ಟು ! ನನ್ನದು ಅಂತ ಒಂದು ಲ್ಯಾಪ್ ಟಾಪ್ ಇರಬೇಕೆಂದು ನನಗೆ ಬಹಳಾ ಆಸೆ ಇತ್ತು ! ಇವ ನನ್ನ ಕೈಲಿ ಅದನ್ನ ಇಟ್ಟಮೇಲೆ ನಾನು ಸಾಯಲು ಬಂದಿದ್ದೇನೆಂದುಮರೆತೇ ಹೋಗಿತ್ತು…ಈ ಯುವಕ ನೆನಪಿಸುವ ವರೆಗೂ !
“ಮೇಡಮ್, ನೀವು ಸಾಯಕ್ಕೆ ಬಂದಿದ್ದೀರ ಹೌದಲ್ಲ? ಇದು ಮೊದಲನೇ ಮೆಟ್ಟಿಲು. ಸ್ವಿಚ್ ಆನ್ ಮಾಡಿ.”
ಕೈಯಲ್ಲಿ ಎಂದೂ ಲ್ಯಾಪ್ ಟಾಪನ್ನು ಹಿಡಿಯದಿದ್ದ ನಾನು ಸ್ವಿಚ್ಚಿಗೆ ಹುಡುಕತೊಡಗಿದೆ. ಅವನು laptop ನ ಹಿಂದೆಗೆದುಕೊಂಡು ಅವನೇ ಸ್ವಿಚ್ ಆನ್ ಮಾಡಿದ. ನನ್ನ ಮೂಡ್ ಸ್ವಿಚ್ ಆಫ್ ಆಯ್ತು ! ನೆಟ್ಟಗೆ ನೋಡಲೂ ಬಿಡದೇ ಐದೇ ಸೆಕೆಂಡುಗಳಲ್ಲಿ ಲ್ಯಾಪ್ಟಾಪ್ ಕಸಿದುಕೊಂಡದ್ದಕ್ಕೆ ನನಗೆ ಕೋಪವೂ ಬಂತು. ಆದರೆ ಎಲ್ಲೂ ಎದ್ದು ಹೋಗುವ ಹಾಗಿರಲಿಲ್ಲ. ಮಿಕಿ ಮಿಕಿ ನೋಡಿದೆ. ಆಮೇಲೆ ಅವನು ಮಾನಿಟರ್ ತಿರುಗಿಸಿ, “ಇದು ಒಂದು ಸಣ್ಣ application form. ಇದನ್ನ fill up ಮಾಡಿ . ಇದು ಎರಡನೇ ಮೆಟ್ಟಿಲು.”ಅಂದ.
“ನೀವು ಆತ್ಮಹತ್ಯೆ ನ ಮೊದಲನೇ ಅಟೆಂಪ್ಟಿನಲ್ಲೇ successful ಆಗಿ ಮಾಡ್ಕೋಬೇಕಂತ coaching classes ಶುರು ಮಾಡಿದ್ದೀರಾ ? ಅದಕ್ಕೇನಾ ಫಾರ್ಮು ?
good guess..detailed coaching class ಅಲ್ಲ,crash course. ಒಂದು ಹತ್ತು ಹದಿನೈದು ನಿಮಿಷ ಅಷ್ಟೇ !
ನನ್ನ ಗೆಸ್ಸುಗಳು ಎಂದೂ ತಪ್ಪಾಗುತ್ತಿರಲಿಲ್ಲ. ನಾನು ಕೆಲವೊಮ್ಮೆ ಹೀಗಾಗಬಹುದೆಂದು ನುಡಿದಿದ್ದರೆ ಹಾಗೇ ಆಗುತ್ತಿತ್ತು. ಮನೆಯಲ್ಲಿ ಎಲ್ಲರೂ ನನ್ನನ್ನು ಶಕುನದ ಪಕ್ಷಿ ಅಂತ ಕರೆಯುತ್ತಿದ್ದರು. ನನ್ನನ್ನು ಹಾಗಂತ ಗೌರವದಂದ ನಡೆಸಿಕೊಳ್ಳುತ್ತಿದ್ದರು ಅಂತ ಅಲ್ಲ…ನಾನು ಹೇಳಿದ್ದು ಎಲ್ಲಿ ನಿಜ ಆಗತ್ತೋ ಅಂತ ಹೆದರಿ ನನ್ನೊಂದಿಗೆ ಯಾರೂ ಮಾತಿಗೆ ಬರುತ್ತಲೇ ಇರಲಿಲ್ಲ. ನನ್ನ ಬುದ್ಧಿ ಮೇಲೆ ನನಗೇ ನಂಬಿಕೆ ಹೊರಟುಹೋಗಿತ್ತು.ಇದನ್ನೆಲ್ಲಾ ಯೋಚಿಸುತ್ತಿರುವಾಗ ಫಾರ್ಮಿನ ಮೊದಲನೇ ಪೇಜು ತೆರೆಯ ಮೇಲೆ ಮೂಡಿಬಂತು. ಆಂಗ್ಲದಲ್ಲದೇ,ಫೀಲ್ಡ್ ಗಳು ಕನ್ನಡದಲ್ಲಿಯೂ ಇದ್ದಿದ್ದು ನನಗೆ ಖುಷಿ ತಂತು.user interface ಕೂಡಾ ನೋಡಲು ತುಂಬಾ ಆಕರ್ಷಣೀಯವಾಗತ್ತು. ನಾನು,
“ವಾವ್ ರಿ…ಎಂಥಾ ಅದ್ಭುತವಾದ ಟೆಕ್ನಾಲಜಿ ಇಟ್ಟಿದ್ದೀರಾ..ಯಾರು ಡೆವೆಲಪ್ ಮಾಡಿದ್ದು ರಿ ಈ ಸಾಫ್ಟ್ ವೇರ್ ನಾ ?”
“ಅದೆಲ್ಲಾ ನಿಮಗೆ ಕಡೆಯಲ್ಲಿ ತಳಿಸುವೆ. ಮೊದಲು ಫಾರಮ್ ಭರ್ತಿಮಾಡಿ. all fields are compulsory”
ನಾನು ತಲೆಯಲ್ಲಾಡಿಸಿ ಅಲ್ಲಿರುವ ಫೀಲ್ಡ್ ಗಳನ್ನ ಸೂಕ್ಷ್ಮವಾಗಿ ನೋಡಿದೆ. ಹೆಸರು, ತಂದೆ ತಾಯಿ ಹೆಸರು, ಮನೆ ವಿಳಾಸ ,ಫೋನ್,ಮೊಬೈಲ್ ಎಲ್ಲಾ ಇದ್ದವು.
“ಇದೆಲ್ಲಾ ಯಾಕ್ ಬೇಕು ನಿಮಗೆ ?”
“ನೀವು ಈಗ ಮನೆಯಿಂದ ಕಾಣೆಯಾಗಿದ್ದೀರ.ನಿಮ್ಮವರು ಪೋಲಿಸ್ ಮೊರೆ ಹೋಗುವ ಹೊತ್ತಿಗೆ ನೀವು ಪರಲೋಕ ಸೇರಿರುತ್ತೀರ.ನಿಮ್ಮ ದೇಹ ಕೊಳೆತು ಹಾಳಾದ ಮೇಲೆ ನಿಮ್ಮವರೆಲ್ಲಾ ಗೋಳಾಡಲು ಹೆಚ್ಚು ಸಮಯ ಸಿಗಲ್ಲ. ಸಂಸ್ಕಾರ ಮಾಡಿಬಿಡಬೇಕಾಗತ್ತೆ. ನಿಮ್ಮವರು ನಿಮ್ಮನ್ನ ನೆನಸಿಕೊಂಡು ಇನ್ನೂ ಚೆನ್ನಾಗಿ ಅಳಲಿ ಅನ್ನೋ ಸದುದ್ದೇಶದಿಂದ ನಾವು ನೀವು ಸತ್ತ ತಕ್ಷಣ ಫೋನಾಯಿಸುತ್ತೇವೆ. ಪೋಲೀಸಿಗೆ ಮತ್ತೆ ನಿಮ್ಮ ಬಾಂಧರಿಗೆ. ನಿಮ್ಮನ್ನು ಗೋಳಾಡಿಸಿದವರು ಗೋಳಾಡಬೇಕಲ್ಲವೇ ?
ಹೌದ್ ಹೌದ್. ಒಳ್ಳೇದು. ಆದರೆ ನೀವ್ ಫೋನ್ ಮಾಡಿದರೆ ಅವರಿಗೆ ನಿಮ್ಮ ಮೇಲೆ ಅನುಮಾನ ಬರಲ್ವಾ ?
ಯಾಕ್ ಬರತ್ತೆ ? we are incognito, ಅನುಮಾನ ಬರಲ್ಲ.
“ಭೇಷ್ !” ಅಂದು ಎಲ್ಲಾ ವಿವರವನ್ನು ಸಾಂಗೋಪಾಂಗವಾಗಿ ನೀಡಿದೆ. ಮುಂದಿನ ಪೇಜ್ ಗೆ ಹೋಗಲು ಕ್ಲಿಕ್ಕಿಸಿದೆ.
ಮುಂದಿನ ಪೇಜಿನ ಫೀಲ್ಡ್ ಒಂದು ಹೀಗಿತ್ತು: ನೀವು ಸಾಯುತ್ತಿರುವ ಕಾರಣ ?
ನಾನು ಜಿಗುಪ್ಸೆ ಎಂದು ಬರೆದೆ.
ತಕ್ಷಣ ಇನ್ನೊಂದು ಪಾಪ್ ಅಪ್ ವಿಂಡೋ ಲಿ- ” ಜಿಗುಪ್ಸೆ ಎಷ್ಟಿದೆ ? ಯಾವುದಾದರೂ ಒಂದನ್ನು ಟಿಕ್ ಮಾಡಿ: ಸ್ವಲ್ಪ(basic),ಹೆಚ್ಚು (medium ), ಸಿಕ್ಕಾಪಟ್ಟೆ ಜಾಸ್ತಿ (high).
ನಾನು ಆ ಹುಡುಗನನ್ನ ಕೇಳಿದೆ..” ಏನ್ರಿ ಇದು ? ಮೇಕಪ್ ನಲ್ಲಿ ಬೇಸಿಕ್, ಮೀಡಿಯಮ್ ಮತ್ತು ಹೈ ಅಂತೆಲ್ಲಾ ಇರೋ ಹಾಗ ಇದ್ಯಲ್ಲ ?” ಎಷ್ಟೇ ಆಗಲಿ ಮೂರ್ನಾಲ್ಕು ಮದುವೆಗಳಿಗೆ ಐದಾರು ಸಲ ಪಾರ್ಲರ್ ಸುತ್ತಿದವಳು ನಾನು ಅಲ್ಲವೇ ?ಅವನು ನಕ್ಕ.
“you are right ! ನೀವು ಸತ್ತೋಗ್ತಿರಾ. ಪೋಲೀಸ್ ನವರು ನಿಮ್ಮವರನ್ನೆಲ್ಲಾ ಹಿಡಿದು ಪ್ರಶ್ನಿಸುತ್ತಿರುತ್ತಾರೆ. how was the mental makeup ? ಅಂತ ಕೇಳ್ತಾರೆ. ಇವರು ಉತ್ತರಿಸಿದ್ದು ಸರಿಯ ತಪ್ಪೋ ಅಂತ ದೃಢಪಡಿಸಲು ನಾವು ಈ ಫಾರ್ಮ್ ಅನ್ನು ನಿಮ್ಮ ಹೆಣದ ಜೊತೆ ಇಟ್ಟಿರುತ್ತೇವೆ.ಅದನ್ನು ನೋಡಿ ಅವರಿಗೆ ಸತ್ಯ ಗೊತ್ತಾಗುತ್ತೆ. ನಾನು ಆಕ್ಷಣಕ್ಕೆ ನಂಬಿದೆನಾದರೂ, “ಅಲ್ಲಾ…ಫಾರ್ಮ್ ನಲ್ಲಿ ನಿಮ್ಮ ಸಂಘದ ಹೆಸರು ಕಂಡು ನಿಮ್ಮ ಮೇಲೆ ಅನುಮಾನ ಪಟ್ಟರೆ ? “ಎಂದು ಕೇಳಿದೆ. ಅದಕ್ಕೆ ಅವನಂದ ” ನಾವು ಫಾರಂ ನ ಹೆಸರು ಕಾಣದ ಹಾಗೆ ಪ್ರಿಂಟ್ ತೆಗೆಸ್ತಿವಿ. ನಮ್ಮ ಸಂಘದ ಹೆಸರು ಯಾರಿಗೂ ಗೊತ್ತಾಗಲ್ಲ. ನಿಮ್ಮ ಫಾರ್ಮನ್ನು ನ ಆ ಪಾಳು ಬಾವಿಯ ಬಳಿ ಇಟ್ಟು ನಾವು ಹೊರಟು ಹೋಗುತ್ತೇವೆ. ಪಾಳು ಬಿದ್ದ ಈ ಮನೆಯಲ್ಲಿ ಯಾರೂ ಇಲ್ಲವೆಂದುಕೊಂಡಿದ್ದಾರೆ ಪೋಲೀಸ್ ನವರು. ನಾವು ಇಲ್ಲಿರುವುದು ಯಾರಿಗೂ ಗೊತ್ತಿಲ್ಲ !”
“ಏನ್ talented ರಿ ನೀವು ! Perfect incognito !” ಎಂದು ಉದ್ಗರಿಸಿದೆ ನಾನು. ಅವನು ಒಮ್ಮೆ ನಕ್ಕ. ನಾನು ಮತ್ತೆ ಫಾರ್ಮಿನ ಕಡೆ ಗಮನ ನೀಡಿದೆ. ಮುಂದಿನ ಫೀಲ್ಡ್ ಗಳಲ್ಲಿ ನಾನು ಸಾಯಲು ಒಂದು ಬಲವಾದ ಕಾರಣ ನೀಡಬೇಕೆಂದು ಕೇಳಿ 1024 characters ಮಾತ್ರ ನಿಗದಿಪಡಿಸಲಾಗಿತ್ತು. ಅಷ್ಟು ಎಲ್ಲಿ ಸಾಕಾಗತ್ತೆ ನನ್ನ ಕಾರಣಗಳ ಪಟ್ಟಿಗೆ ? ಸಮುದ್ರಕ್ಕೆ ಸ್ಪೂನಲ್ಲಿ ನೀರು ಹಾಕಿದ ಹಾಗೆ ! ಏನೇನು ಬರೆಯಲಿ ? ಚಿಕ್ಕ ವಯಸ್ಸಿನಲ್ಲಿ ಸೈಕಲ್ಲು ಕೊಡಿಸಲಿಲ್ಲ ಅಂತ ಹೇಳಿ ಈಗ ಸತ್ತೆ ಅಂತ ಬರೆಯಲೇ ? ತಮ್ಮ ನನ್ನ ಮುದ್ದಿನ ಟೆಡ್ಡಿ ಬೇರನ್ನು ಹರಿದು ಹಾಕಿದ್ದಿಕ್ಕೆ ಸತ್ತೆ ಅಂತ ಬರೆಯಲೆ ? ಅಥವಾ ಅಕ್ಕ, ಅಣ್ಣ ನಾನು ಓದಿದ್ದು ಕಡಿಮೆ, ಅಲೆದಿದ್ದು ಜಾಸ್ತಿ, ದುಡ್ಡನ್ನು ಯರ್ರಾ ಬಿರ್ರಿ ಖರ್ಚು ಮಾಡ್ತಾಳೆ, ಬಸ್ ಪಾಸಿದ್ದರೂ ಆಟೋ ಲಿ ಓಡಾಡ್ತಾಳೆ ಅಂತ ಬೈತಾರೆ ಅಂತ ಸತ್ತೆ ಅಂತ ಬರೆಯಲೆ ?ಎಂಭತ್ತು ಪರ್ಸೆಂಟು ತಗೊಂಡರೂ ನೀವು ” ಸಾಲದು !” ಅಂತ ಅಂದು ನನಗೆ ನಿರಾಸೆ ಮಾಡಿದ್ದೀರಿ ಅಂತ ಬರೆಯಲೆ ?ಕ್ಯಾಂಪಸ್ಸು ಸೆಲೆಕ್ಷನ್ನು ಲೇಟಾಗಿ ಆತಂಕ ತಡಿಯಲಾಗದೇ ಸತ್ತೆ ಅಂತ ಬರೆಯಲೆ ? ನೀವೆಲ್ಲಾ ಬೈದು ಬೈದು ನನ್ನ ಮನಸ್ಸು ನೋಯಿಸಿದಿರಾ…ಇವತ್ತಂತೂ ಸಿಕ್ಕಾಪಟ್ಟೆ ಬೈದಿದ್ದೀರಾ..ನನಗೆ ಏನೂ ಮಾಡಕ್ಕೆ ಬರಲ್ಲ ಅಂತ ತೇಜೋವಧೆ ಮಾಡಿದ್ದೀರ. ನನಗೆ ಸಾಯಕ್ಕೆ ಬರತ್ತೆ ಅಂತ ತೋರಿಸವುದಕ್ಕೆ ಸತ್ತೆ ಅಂತ ಬರೆಯಲೆ ? ಏನು ಬರೆಯಲಿ ?
ಹತ್ತು ನಿಮಿಷ ಯೋಚನೆ ಮಾಡಿದ ಮೇಲೆ ಕಡೆಯ ಕಾರಣ ಸರಿಯೆಂದು ತೋಚಿತು. ಅದನ್ನೇ ಬರೆದೆ. ಅದಾದ ಮೇಲೆ ಇನ್ನೊಂದು ಫೀಲ್ಡ್ ಇತ್ತು. ನೀವು ಬಾವಿಯಲ್ಲಿ ಹೇಗೆ ಸಾಯಬಯಸುತ್ತೀರಿ ಎಂದು ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಟಿಕ್ ಮಾಡಿ:
- ಬಾವಿಯ ನೀರು ಬಿಸಿಯಿರುತ್ತದೆ. ಮೊದಲು ಉಗುರಬೆಚ್ಚಿಗೆ ಇದ್ದು, ಆಮೇಲೆ ಅದು ಕೊತ ಕೊತ ಕುದಿಯುವ ಹಾಗಾಗುತ್ತದೆ. ನೀವು ಕುದಿಯುವ ನೀರಲ್ಲಿ ಬೆಂದು ಸಾಯಬಯಸುವುದಾರೆ ಇಲ್ಲಿ ಕ್ಲಿಕ್ಕಿಸಿ. ನೀವು ಸಾಯುವ ಬಗೆಯನ್ನು ಪೂರ್ವವಿಕ್ಷಣೆ preview ಮಾಡಲು ಇಲ್ಲಿ ಕ್ಲಿಕ್ಕಿಸಿ.
- ಬಾವಿಯನ್ನು renovate ಮಾಡಿದ ಮೇಲೆ roller ಬ್ಲೇಡುಗಳನ್ನು ಹಾಕಿಸಾಗುತ್ತದೆ. ನಿಮ್ಮ ಕೈ ಕಾಲುಗಳನ್ನುಕತ್ತರಿಸಿ, ನೀವು ಮಿಕ್ಸಿಯಲ್ಲಿ ರುಬ್ಬಿದಂತೆ ನುಣ್ಣಗೆ ಸಾಯಬಹುದು. ಸ್ಪೀಡನ್ನು ನೀವೆ ನಿಗದಿಪಡಿಸಿ. ಪ್ರಿವ್ಯೂ…
- ಪೂರ್ತಿ ತಣ್ಣಗಿರುವ ನೀರು. ನೀವು ಹಾಗೆಯೇ ಮುಳುಗಿ ಸಾಯುತ್ತೀರಿ. ಹೆಣ ಮೇಲೆ ಎತ್ತುವಾಗ ಕೈ ಕಾಲು ಏನಾದರೂ ಆದರೆ ನಿಮ್ಮವದ್ದೇನೂ ತಕರಾರಿರಬಾರದು. ಪ್ರಿವ್ಯೂ..
ಆನಂತರ ಮುಂದಿನ ಪೇಜ್ ಗೆ ಹೋದೆ. ಅಲ್ಲಿ ನನ್ನ ಹವ್ಯಾಸಗಳು, ಆಸಕ್ತಿ , ಸಾಧನ, ಇವುಗಳ ಬಗ್ಗೆ ಪ್ರಶ್ನೆ ಇದ್ದವು. ನಾನು ಪ್ರಶ್ನಿಸಲು ಬಾಯ್ಬಿಡುವಷ್ಟರಲ್ಲಿ ಆ ಯುವಕನೇ ಉತ್ತರಿಸಿದ.
“ಮಾರ್ಕೆಟಿಂಗ್ ಗೆ ಮೆಡಮ್…ಎಂಥೆಂಥಾ ಅತಿರಥಮಹಾರಥರು ನಮ್ಮ ಬಳಿ ಕೋರ್ಸ್ ತೆಗೆದುಕೊಂಡು ಸತ್ತಿದ್ದಾರೆ ಅಂತ freshers ಗೆ ತೋರ್ಸಕ್ಕೆ. left ನಲ್ಲಿ ಒಂದು ಲಿಂಕ್ ಇದೆ. ಅಲ್ಲಿ ಹೋಗಿ ನೋಡಿ ಅಂದ. ನಾನು ಅದನ್ನು ಕ್ಲಿಕ್ಕಿಸಿದೆ. ಅಲ್ಲೊಂದು ಎಂಟು ಹತ್ತು ಜನರ ಚಿತ್ರಗಳಿದ್ದವು. ಎಲ್ಲರ ಫೋಟೋ ಪಕ್ಕದಲ್ಲಿ ಅವರು ಸತ್ತ ಕಾರಣವನ್ನು ಬರೆಯಲಾಗಿತ್ತು. ಒಬ್ಬ ಸ್ನೇಹಿತರ ಜೊತೆ ಬೆಟ್ಟು ಕಟ್ಟಿ ಸೋತು ಅವಮಾನ ತಾಳಲಾರದೇ ಸತ್ತಿದ್ದರೆ, ಮತ್ತೊಬ್ಬಳು ಆಫೀಸಿನ ಯಾವುದೋ ಹೇಳಲಾಗದ ತೊಂದರೆಯಲ್ಲಿ ಸಿಕ್ಕಿ ಸಾವನ್ನಪ್ಪಿದ್ದಳು. ಇನ್ನೊಬ್ಬ ಪಿಯುಸಿ ವಿದ್ಯಾರ್ಥಿ ಗಣಿತದ ಭಯದಿಂದ ಅಸುನೀಗಿದ್ದರೆ, ಇನ್ನೊಬ್ಬ ಗಾಂಜಾ ಅಫೀಮಿನ ಧಂಧೆಯಲ್ಲಿ ಸಿಕ್ಕಿಬಿದ್ದು ಸಾವಿನ ಮಾರ್ಗ ಹಿಡಿದಿದ್ದ. ಇವರೆಲ್ಲರ ಕಾರಣಗಳಿಗಿಂತ ನನ್ನ ಮನೆಯ ಜಗಳ ದೊಡ್ಡದೇನಲ್ಲ ಅಂತ ನನಗೆ ಅನಿಸಲು ಶುರುವಾಯ್ತು. ಆದರೂ ನನ್ನ ಅಹಂಕಾರಕ್ಕೆ ಪೆಟ್ಟು ಬಿದ್ದಿತ್ತು. ಅದನ್ನು ಸುಲಭದಲ್ಲಿ ಮರೆಯಲು ಸಾಧ್ಯವೇ ? ಅದಕ್ಕೆ ನಾನು ಬದುಕಿ ಏನನ್ನು ಸಾಧಸಿದರೂ ನನ್ನ ಫೋಟೋ ಪೇಪರ್ನಲ್ಲಾಗಲಿ ಅಂತರ್ಜಾಲ ತಾಣದಲ್ಲಾಗಲೀ ಬರಲು ಯಾವ ಅವಕಾಶವೂ ಇರಲಿಲ್ಲ. ನಾನು ಸತ್ತಾಗಲಾದರೂ “ಸತ್ತು ಸಾಧಿಸಿದವಳು” ಅಂತ ಬಿರುದು ಕೊಟ್ಟು ನನ್ನ ಫೋಟೋ ಎಲ್ಲಾದರು ಒಂದು ಕಡೆ ಬಂದರೆ ಅದೇ ನನ್ನ ಭಾಗ್ಯಆಂದುಕೊಂಡು ಮತ್ತೆ ಹಳೆಯ ಪೇಜಿಗೆ ಬಂದು ನನ್ನ ಆಸಕ್ತಿ, ಅಭಿರುಚಿ ಎಲ್ಲಾ ಬರೆದೆ. ನಾನು ಚಿಕ್ಕಂದಿನಲ್ಲಿ ಗೆದ್ದ ಪುಟ್ಟ ಪ್ರೈಜಿನಿಂದ ಹಿಡಿದು ಡಿಗ್ರಿಯಲ್ಲಿ ಗೆದ್ದ ಶೀಲ್ಡಿನವರೆಗೂ ಚಾಚೂ ತಪ್ಪದೆ ನನ್ನಎಲ್ಲಾ ಸಾನೆಗನ್ನ ಬರೆದೆ.ಅದನ್ನ ಬರೆಯುವಾಗ ಅದೇನೋ ಹೆಮ್ಮೆ ! ನನ್ನ ಫೇವರೈಟ್ ಕವಿ ಡಿ.ವಿ.ಜಿ ಎಂದಾಗ ಆ ಯುವಕ ನನ್ನನ್ನ ಕೇಳಿದ – “ಕಗ್ಗ ಓದಿದ್ದೀರಾ ?”
ನಾನು ಹೂಂ ಎಂದೆ. ಅವನು ನಕ್ಕ.
ನಾನು ನೆಕ್ಸ್ಟ್ ಪೇಜ್ ಗೆ ಬಂದಾಗ ಆತ್ಮಹತ್ಯೆಯ ಪಾಠ ಆರಂಭವಾಯ್ತು. ನೀವು ಸಾಯಲು ತಯಾರಿದ್ದೀರಾ ? ಅಂತ ಪ್ರಶ್ನೆ ಕೇಳಿ ನಾನು ಆಯ್ಕೆ ಮಾಡಿದ್ದ ರೀತಿಯ ವಿಡಿಯೋ ಕೆಳಗಿತ್ತು. ನಾನು ನಿರ್ಭಯವಾಗಿ “ಎಸ್” ಕ್ಲಿಕ್ ಮಾಡಿದೆ.
ಅದು ನೋಡಿದರೆ ಒಂದೇ slide show ಇರುವ ಕೋರ್ಸು ! ಅದರಲ್ಲಿ-
- ಸಾಯುವಾಗ ಕಣ್ತೆರೆದು ಅನುಭವಿಸಿ ಸಾಯಿರಿ.ಆಮೇಲೆ ನಿಮ್ಮ ಕಣ್ಣನ್ನು ನಾವು ಮುಚ್ಚುತ್ತೇವೆ.
- ಯಾವುದೇ ಕಾರಣಕ್ಕೂ ನೀವು ಗಲಾಟೆ ಮಾಡುತ್ತಾ, ಕಿರುಚಾಡುತ್ತಾ ಸಾಯಬಾರದು. ಮೌನವಾಗಿ ಸಾಯಬೇಕು.
- ನೀವು ಸತ್ತ ಮೇಲೆ ಬಾವಿಯನ್ನು ಕ್ಲೀನ್ ಮಾಡಿಬೇಕಾಗತ್ತೆ. ಅದಕ್ಕೆ ನೀವು ಮೊದಲೇ ಹಣ ತೆರಬೇಕು. ಹಣವಿಲ್ದಿದ್ದರೆ ಚಿನ್ನದಿಂದಲೂ ಕೆಲ್ಸ ನಡೆಯುತ್ತದೆ. ಅಪ್ಪ/ಅಮ್ಮನ ಕ್ರೆಡಿತ್ ಕಾರ್ಡ್ ನಂಬರ್ ಇದ್ದರೆ ಅತ್ಯುತ್ತಮ.ಹೆದರ ಬೇಡಿ, ನಾವೇನು ಸುಲಿಗೆ ಮಾಡೋದಿಲ್ಲ. ನಮ್ಮ ಫೀಸ್ ಐದು ಸಾವಿರ ಅಷ್ಟೇ !
ಪರಮ ಜುಗ್ಗಿಯಾದ ನಾನು ಇದೊಂದು ವಿಷಯಕ್ಕಾಗಿ ಒಪ್ಪಲೇಬೇಕಾಯ್ತು. ನನ್ನ ಬಳಿ ಹಣವಿರಲಿಲ್ಲ. ಅದಕ್ಕೆ ನಮ್ಮ ತಾತ ನನಗೆ ಕೊಟ್ಟಿದ್ದ ಚಿನ್ನದ ಸರವನ್ನು ಮನಸ್ಸಿಲ್ಲದ ಮನಸ್ಸಿನಿಂದ ಬಿಚ್ಚಿ ಆ ಯುವಕನ ಕೈಲಿತ್ತೆ. ಅವನು..ಮುಂದಿನ ಫಾರ್ಮಾಲಿಟೀಸ್ ಮುಗಿಸಿ ಅಂತ ಸ್ಕ್ರೀನ್ ತೋರಿಸಿದ. ನಾನು next page ಒತ್ತಿದ ಮೇಲೆ ನಾನು ಸಾಯಲು ಯಾವ ರೀತಿಯಲ್ಲಿ ಹಣ ಪಾವತಿಸಿದ್ದೇನೆ ಅಂತ ಬರೆಯಲು ಒಂದು ಕಾಲಂ ಇತ್ತು. ಅದನ್ನು ಭರ್ತಿ ಮಾಡಿ “ಡನ್” ಎಂದು ಒತ್ತಿದ ಮೇಲೆ..”wish you a very happy journey to the heavens” ಎಂಬ ಹಾರೈಕೆಯೊಂದಿಗೆ ನನ್ನ ಆತ್ಮಹತ್ಯೆ ಪಾಠ ಮುಗಿಯಿತು.
ನೆಮ್ಮದಿಯ ನಿಟ್ಟುಸಿರು ಬಿಟ್ಟು ನಾನು ” ಈಗ ಬಾವಿಗೆ ಹೋಗಬಹುದಲ್ವಾ ?” ಅಂದೆ. ಅವನು, “ಇಲ್ಲಾ…ಬೆಳಿಗ್ಗೆ ಬೇಗನೆ ಬಂದು ಒಬ್ಬರು ಕೋರ್ಸ್ ತಗೊಂಡು ಹೋದವರು ಈಗಷ್ಟೇ ಸತ್ತಿದ್ದಾರೆ. ಕ್ಲೀನಿಂಗ್ ನಡಿತಿದೆ. ಇನ್ನೊಂದು ಅರ್ಧ ಘಂಟೆ. ಆಮೇಲೆ ನೀವೇ ಸಾಯೋರು. ಏನಾದ್ರು ತಿಂಡಿ ತರಿಸ್ತಿನಿ. ತಿಂದು ಸಾಯ್ರಿ” ಅಂದ. ನಾನು, “ನೀವು ತಿಂಡಿಯಲ್ಲಿ ವಿಷ ಹಾಕಿ ಯಾಕೆ ಸಾಯಿಸಬಾರದು ?” ಅಂತ ಕೇಳಿದೆ. ಅದಕ್ಕೆ ಅವನಂದ, ” ಅದು ಕೊಲೆಯಾಗತ್ತೆ.” ನಾನು ” ನಮ್ಮ ಕನ್ಸೆಂಟ್ ತಗೊಳ್ಳಿ ಪಾ…ನಾವ್ ಬರ್ಕೊಡ್ತಿವಿ..ನಾವೇ ವಿಷ ತರಿಸಿಕೊಂಡು ತಿಂದು ಸತ್ವಿ” ಅಂತ..” ಅಂದೆ. ಅದಕ್ಕೆ ಅವ “ಈಗ ವಿಷ ನ ನಾವು ತರ್ಕಾರಿ ಥರ ತಗೊಳ್ಳಕ್ಕೆ ಆಗಲ್ಲ. smuggle ಮಾಡ್ಬೇಕು.ಕಷ್ಟ. ಆದ್ರೆ ಅದನ್ನು ಅತಿಶೀಘ್ರದಲ್ಲೇ ಜಾರಿಗೆ ತರ್ತಿವಿ” ಅಂದ. ನನಗೆ ಜುಗಾರಿ ಕ್ರಾಸ್ ಕಾದಂಬರಿ ನೆನಪಾಯ್ತು.
ಅವನು ” ನಿಮ್ಗೇನು ಬೇಕು ?” ಅಂದ. ನಾನು “any pure vegetarian food without onions” ಅಂದೆ. ಅದಕ್ಕೆ ಆ ಯುವಕ ” ಒಂದು ಮೊಸ್ರನ್ನ…ಉಡುಪಿ ಹೋಟೆಲಿಂದ” ಅಂತ ಥೇಟ್ ಹೋಟೆಲ್ ಮಾಣಿ ಥರ ಕೂಗಿದ. ಬಾಗಿಲು ತೆಗೆದು ನನ್ನ ಕೈಗೆ ಲ್ಯಾಪ್ಟಾಪ್ ಕೊಟ್ಟ ಯುವಕ “ಓಕೆ.” ಅನ್ನುತ್ತಾ ಹೊರನಡೆದ. ಎರಡು ನಿಮಿಷದ ನಂತರ ಒಳಬಂದು “ಹೋಟೆಲ್ ಕ್ಲೋಸ್ ಆಗಿದೆ” ಅಂದ. ನನಗೆ ಹೊಟ್ಟೆ ಬೇರೆ ಸಿಕ್ಕಾಪಟ್ಟೆ ಹಸಿಯುತ್ತಿತ್ತು. ಹೊಟ್ಟೆಗೆ ಬಿದ್ದರೆ ಸಾಕಾಗಿತ್ತು. ಸಾಯುವ ಮೂಡ್ ಕೂಡಾ ಇರಲಿಲ್ಲ. ಆಗಿದ್ದ ಆವೇಶ ಈಗ ಇರಲಿಲ್ಲ. ಚಿನ್ನದ ಸರ ಕೊಟ್ಟುಬಿಟ್ಟಿದ್ದೇನೋ ನಿಜ..ಆಗ ಸಾಯಲು ಹವಣಿಸುತ್ತಿದ್ದ ನಾನು ಈಗ ಹಸಿವಿನಿಂದ ತತ್ತರಿಸಿಹೋಗಿದ್ದೆ. ಆದರೆ ಸರ ಕೊಟ್ಟು ರಿಜಿಸ್ಟರ್ ಮಾಡಿಸಿದ ತಪ್ಪಿಗೆ ಈಗ ಸಾಯಲೇ ಬೇಕಿತ್ತು.
ಸರಿ ಖಾಲಿ ಹೊಟ್ಟೆಯಲ್ಲೇ ಸಾಯಲು ನಿರ್ಧರಿಸಿದೆ. ನಾನು ಸತ್ತರೆ , ಹೊಟ್ಟೆ ತುಂಬಾ ತಿಂದು ತೃಪ್ತಿಯಾಗಿ ಸಾಯೋಣ ಅಂತ ಇದ್ದೆ..ಆದರೆ ಅರೆಹೊಟ್ಟೆಯಲ್ಲಿ ಅಸುನೀಗಿ ಉಡುಪಿ ಹೋಟೇಲಿನ ಮೇಲೆ ಅಂತರ್ಪಶಾಚಿಯಾಗಿ ಅಲೆಯಬೇಕು ಅಂತ ಇದ್ದರೆ ನಾನು ಹೇಗೆ ತಾನೆ ವಿರೋಧಿಸಲು ಸಾಧ್ಯ ? ” ಬಾವಿಗೆ ಹೊಗೋಣ” ಅಂದೆ. ಅವನು ” ಒಂದು ನಿಮಿಷ ಇರಿ” ಎಂದು ಇದುವರೆಗೂ ನನಗೆ ಕಾಣಸದಿದ್ದ ಪುಟ್ಟ ಕೋಣೆಯೊಳಗೆ ಹೋದ. ಬರುತ್ತಾ ಅವನ ಕೈಯಲ್ಲಿ ಒಂದು ಲಕೋಟೆಯಿತ್ತು. ಅದನ್ನು ನನ್ನ ಕೈಲಿಟ್ಟು – ” ನಾನು ಬಾವಿಯ ಬಳಿ ಬರಲ್ಲ. ನೀವೇ ಹೋಗಿ ಸಾಯಬೇಕು. ನಾನಿದ್ದರೆ ನಿಮಗೆ ಕಷ್ಟ ಆಗಬಹುದು.ಈಗ ಇದನ್ನು ತೆಗೆದುಕೊಂಡು ಬಾವಿಯ ಹತ್ತಿರ ಹೋಗಿ. ಬೀಳುವ ಮುಂಚೆ ಇದನ್ನ ಓದಿ, ಕಟ್ಟೆಯ ಮೇಲಿಟ್ಟು ಅದರ ಮೇಲೊಂದು ಕಲ್ಲಿಟ್ಟು ಆಮೇಲೆ ಬಿದ್ದು ಸಾಯಿರಿ. All the best !” ಎಂದ.
ನಾನು ಹಲ್ಲುಕಿರಿದೆ. ಮನದೊಳಗೆ ” ಬೇಕಿತ್ತಾ ನಿನಗಿವೆಲ್ಲಾ ?” ಅಂತ ಯಾರೋ ಕೇಳಿದ ಹಾಗಾಯ್ತು. ಉತ್ತರಿಸಲು ಧೈರ್ಯವೇ ಇರಲಿಲ್ಲ !
ಹೀರೋಯಿನ್ ಸ್ಲೋ ಮೋಷನ್ನಲ್ಲಿ ಮನೆ ಬಿಟ್ಟು ಹೊರಬರುವ ಹಾಗೆ ಹೊರಬಂದೆ.ವ್ಯತ್ಯಾಸ ಇಷ್ಟೇ..ಅವಳ ಕೈಯಲ್ಲಿ suitcase ಇರತ್ತೆ, ನನ್ನ ಕೈಯಲ್ಲಿ ಲಕೋಟೆ ಇತ್ತು !
ಹೊರಬಂದಿದ್ದೇ ಮೊದಲು ಪತ್ರವನ್ನೋದಲು ಆಸೆಯಾಗಿ ಲಕೋಟೆ ಒಡೆದೆ. ಅದರಲ್ಲಿ ನಾನು ಫಾರ್ಮನ್ನು ಭರ್ತಿ ಮಾಡಿದರ print out, ಮತ್ತು ಒಂದು ಪುಟ್ಟ ಪತ್ರವಿತ್ತು. ಅದನ್ನ ಓದಲು ಮೊದಲುಮಾಡಿದೆ.
“ಮೇಡಮ್,
ನಿಮಗೆ ಸಾಯಲು ಇಷ್ಟ ಇದ್ದರೂ ನೀವು ಸಾಯುವುದು ಸರಿಯೇ ಅಂತ ಯೋಚಿಸಿ. ನಾವು ನಮ್ಮಿಷ್ಟದಂತೆ ಇರಬೇಕೆಂದು ಬಯಸುತ್ತೇವೆಯಾದರೂ, ಅದು ಸರಿಯೇ ಎಂದು ಮೊದಲು ಯೋಚಿಸುವುದೊಳಿತು.
ನಿಮ್ಮ ಫೇವರೈಟ್ ಕವಿ ಡಿ.ವಿ.ಜಿ ಅಂದಿರಿ. ಕಗ್ಗ ಓದಿರುವೆ ಅಂದಿರಿ. ಇದನ್ನು ಮತ್ತೊಮ್ಮೆ ಅವಗಾಹಿಸಿ.
“ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ |
ತೃಣ ಮೊಳೆಯುವುದು ಮರಳಿಹನಿಯೆರಡು ಬೀಳೆ ||
ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ
ಕುಣಿವುದನುಕೂಲ ಬರೆ- ಮಂಕುತಿಮ್ಮ ||”
ಇನ್ನು ಹೆಚ್ಚು ಬರೆಯುವ ಅವಶ್ಯಕತೆ ಇಲ್ಲ ಅನ್ನಿಸತ್ತೆ. ನೀವು ಸಾಯಲು ಇನ್ನೂ ಬಯಸುತ್ತಿದ್ದರೆ ಸಾಯಬಹುದು.
-ಆತ್ಮಹತ್ಯೆ incognito
ನನಗೆ ಕಪಾಳಕ್ಕೆ ಹೊಡೆದ ಹಾಗಾಯ್ತು.ನನ್ನ ಸಕಲ ಪ್ರಶ್ನೆಗಳನ್ನೂ ಈ ಕಗ್ಗ ಉತ್ತರಿಸಿತ್ತು..ನನ್ನ ಜಿಗುಪ್ಸೆಗೆ ಸಾಂತ್ವನವೂ ನೀಡಿತ್ತು. ನಾನು ಎಂಥಾ ಕ್ಷುಲ್ಲಕ ಕಾರಣಕ್ಕೆ ನನ್ನ ಅದ್ಭುತ ಜೀವನವನ್ನೇ ನಾಶಮಾಹೊರಟಿದ್ದೆ ಅನ್ನೋದು ನನಗೆ ಆಗ ಗೊತ್ತಾಯ್ತು. ಕಣ್ತುಂಬಿ ಬಂತು. ಬಾವಿಯ ಕಡೆಯ ದಾರಿ ಬಿಟ್ಟು ಗೇಟನ್ನು ಹುಡುಕತೊಡಗಿದೆ. ನಾನು ಬದುಕಲು ತವಕಿಸುತ್ತಿದ್ದೆ ! ಏನನ್ನೂ ಮಾಡಿ ಸಾಧಿಸಿ ತೋರಿಸಲು ಸಿದ್ಧಳಿದ್ದೆ !
ಅಷ್ಟರಲ್ಲಿ ಅಮ್ಮನ ಕೂಗು ಎಲ್ಲಿಂದಲೋ ಕೇಳಿಬಂತು – ” ಲೇ…. ಕೋಪ ಮಾಡ್ಕೊಂಡು ಎಲ್ಲೋ ವಾಕಿಂಗ್ ಹೋಗಿರುತ್ತೀಯಾ ಅಂದುಕೊಂಡರೆ ಹೀಗಾ ಮಾಡೋದು? ಸದ್ಯ ಸಿಕ್ಕಿದ್ಯಲ್ಲಾ..” ಅಂತ ಅನ್ನುತ್ತಾ ನನ್ನ ಬಳಿ ಬಂದರು. ಆ ಸಮಯಕ್ಕೆ ಏನೂ ಮಾಡಲೂ ತೋಚದೇ ಆ ಲಕೋಟೆಯನ್ನು ಮುಚ್ಚಿಡಲೂ ಆಗದೇ ಕೈಯಲ್ಲಿ ಇಟ್ಟುಕೊಂಡೇ ಇದ್ದೆ. ಅಪ್ಪ ಅಮ್ಮನ ಹಿಂದೆ ಬಂದರು. ಅಪ್ಪ- “ಎಲ್ಲಾ ವಿಷ್ಯ ಗೊತ್ತಾಯ್ತು. ಆ ಆತ್ಮಹತ್ಯೆ ಸಂಘದವರು ಫೋನ್ ಮಾಡಿದ್ದಕ್ಕೆ ಸರಿ ಹೋಯ್ತು. ನಾನು ಹೋಗಿ ಅವರಿಗೆ ಧನ್ಯವಾದ ಹೇಳಿ ಬರುತ್ತೇನೆ” ಅನ್ನುವ ಹೊತ್ತಿಗೆ ಆ ಯುವಕ ಅಲ್ಲಿ ಪ್ರತ್ಯಕ್ಷ ! ನಮ್ಮ ತಂದೆ ಅವನನ್ನು ಹೊಗಳಿದ್ದೇ ಹೊಗಳಿದ್ದು. ನನಗೆ ಮಾತು ಹೊರಡುತ್ತಲೇ ಇರಲಿಲ್ಲ. ಅವನ್ನು ದಿಟ್ಟಿಸಿ ನೋಡುವ ಧೈರ್ಯವೂ ಇರಲಿಲ್ಲ. ಅವನು ನಮ್ಮ ತಂದೆಯೊಂದಿಗೆ ಮಾತಾಡುತ್ತಾ- ” ನಾನು ಸಾಫ್ಟ್ ವೇರ್ ಇಂಜಿನೀರ್ ಆದರೂ ಕೆಲ್ಸ ಸಿಗಲಿಲ್ಲಾ ಅಂತ ಸಾಯಕ್ಕೆ ಬಂದೆ ಸಾರ್ ! ಆಗ ಇಲ್ಲಿ ಖಾಲಿ ಷೀಷೆ ಪೇಪರ್ ನವನು ಹರಿದ ಪೇಪರ್ ನ ಹಾಕಲು ಬಂದಾಗ ಒಂದು ಹಾಳೆಹಾರಿ ನನ್ನ ಮುಖಕ್ಕೆ ಬಂದು ಬಿತ್ತು. ಆ ಹಾಳೆಯಲ್ಲಿ ಪಾಸಿಟಿವ್ ಥಿಂಕಿಂಗ್ ನ ಒಂದು ಅಂಕಣವನ್ನು ಓದತೊಡಗಿದೆ. ಆ ಅಂಕಣ ಅರ್ಧ ಮಾತ್ರ ಇತ್ತು. ಪೂರ್ತಿ ಹುಡುಕುವ ವರೆಗೂ ಬದುಕುತ್ತೇನೇಂದು ಹಠ ಹಿಡಿದೆ. ಲೈಬ್ರರಿಗಳಲ್ಲಿ ಹುಡುಕಿ ಕಡೆಗೂ ಆ ಪುಸ್ತಕ ಹುಡುಕಿ ಓದಿದೆ. ಆಮೇಲೆ ನನಗನ್ನಿಸಿತು, “ನಾನೇಕೆ ಸಾಯುವವರನ್ನು ಜೀವನ್ಮುಖಿಯಾಗಿಸಬಾರದು ? ಅವರಗೆ ಸಾಯುವ ಬಗೆ ಕೌನ್ಸೆಲ್ ಮಾಡಿದರೆ ಅವರಿಗೆ ಆ ಕ್ಷಣಕ್ಕೆ ಸಹಿಸಲಾಗದು. consultancy firm ತೆರೆದು ಸಾವಿನ ಭೀಕರತೆಯನ್ನ ನಿಧಾನಕ್ಕೆ ಪರಿಚಯಿಸಿದರೆ ಅವರಿಗೆ ಸಾಯಲು ಮನಸ್ಸು ಡೋಲಾಯಮಾನ ಆಗತ್ತೆ. ಹಾಗೂ ಒಂದು ವೇಳೆ ಮುಂದುವರದರೂ ನಾವು ಅವರನ್ನು ಬದುಕಿಸಿಕೊಳ್ಳಬಹುದು “ಎಂದು ಈ ಕಂಪನಿ ಓಪನ್ ಮಾಡಿ ಆ ಸಾಫ್ಟ್ ವೇರ್ ನ ನಾನೇ ಮಾಡಿದೆ ಸಾರ್ ! ನನಗೆ ಸಂಪಾದನೆಗೆ ಈಗ ಪುಸ್ತಕದ ಅಂಗಡಿ ಇಟ್ಟಿದ್ದೇನೆ. ಇದು ನನ್ನ ಸಮಾಜ ಸೇವೆ ! ಆದರೆ ಒಂದು, ನಾವಿಲ್ಲಿದ್ದೇವೆ ಅಂತ ಯಾರಿಗೂ ಹೇಳ್ಬೇಡಿ.” ಅಂದ. ನನ್ನ ಚಿನ್ನದ ಸರವನ್ನು ಮತ್ತೆ ನನಗೇ ಕೊಟ್ಟ !!
ನಾನು ಯಾವ ಸ್ಥಿತಿಯಲ್ಲಿದ್ದೆ ಆಗ ಅಂತ ನನಗೆ ಗೊತ್ತೇ ಆಗಲಿಲ್ಲ. ಕಾರು ಹತ್ತಿದ ಮೇಲೆ ಕಾರ್ ಶುರುವಾದ ಶಬ್ದಕ್ಕೆ ಬೆಚ್ಚಿ ಬಿದ್ದೆ. ಅಮ್ಮ ತಲೆ ನೇವರಿಸಿದರು. ಅದೇ ಮಾಂಸದ ಅಂಗಡಿಯ ಬೀದಿಯ ಮೂಲಕ ಹಾದು ಬಂದೆವು. ಅಮ್ಮ ” ಅಪರಧ ಸಹಸ್ರಾಣಿ…” ಹೇಳಿಕೊಳ್ಳುತ್ತಿದ್ದರು. ಅವರಿಗೆ ನಾನು ಸಿಕ್ಕಿದ್ದೆ. ನನಗೆ ನನ್ನ ಜೀವನವೇ ಸಿಕ್ಕಿತ್ತು. ಮಾನಸ ಸರೋವರದಲ್ಲಿ ನಾನು ಮುಳುಗಿ ಎದ್ದಿದ್ದೆ. ಇವರಿನ್ನು ಮುಳಗಬೇಕಷ್ಟೇ !





















