BREKING NEWS

ಸೋಮವಾರ, ಏಪ್ರಿಲ್ 28, 2025

ಲೇಖನ: ಬಲಪಂಥೀಯರ ಸುಳ್ಳಿನ ಕಥೆಗಳೇ ಇತಿಹಾಸವಾಗುವ ಆತಂಕ

 



ಮನುವಾದಿ ಬಲಪಂಥೀಯರ ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳಿನ ಕಟ್ಟುಕಥೆಗಳೇ ಮುಂದಿನ ತಲೆಮಾರಿಗೆ ನೈಜ ಇತಿಹಾಸವಾಗುವ ಸಾಧ್ಯತೆ ಇದ್ದು ಪ್ರಜ್ಞಾವಂತರು ಎಚ್ಚೆತ್ತು ನೈಜ ಇತಿಹಾಸವನ್ನು  ದಾಖಲಿಸುವ ತುರ್ತು ಇಂದು ಎದುರಾಗಿದೆ

 
ಮನುವಾದಿ ರಾಜಕಾರಣ ಮನುಕುಲ ವಿರೋಧಿ ಎಂಬ ಗಾಢ ಅನುಭವ ಜನರಿಗೆ ಈಗ ಆಗುತ್ತಿದೆ. ಈ ಅನುಭವ ಆಗುತ್ತಿಲ್ಲ ಎಂದರೆ ಆತ ಅಕ್ಷರಶಃ ಅಂಧ ಭಕ್ತ ಅಥವಾ ಮಿದುಳು ನಿಷ್ಕ್ರಿಯಗೊಂಡ ಬೌದ್ಧಿಕ ಗುಲಾಮ ಎಂದೇ ಪರಿಗಣಿಸಬೇಕಾಗುತ್ತದೆ.

ವೈದಿಕರು ಹಿಂದುತ್ವದ ಬೀಜ ಬಿತ್ತಿ ಸ್ವತಂತ್ರ ಭಾರತದಲ್ಲಿ ಸುಮಾರು ನೂರು ವರ್ಷಗಳು ಸಮೀಪಿಸುತ್ತಿವೆ. ವಂಚನೆ, ಕಪಟ, ದ್ವೇಷ, ಹಿಂಸೆ, ಅನ್ಯಾಯಗಳೆಂಬ ಫಸಲನ್ನು ದೇಶಾದ್ಯಂತ ತುಂಬಿದ್ದಾರೆ. ಹಾಗೆ ನೋಡಿದರೆ ಭಾರತ ಎಂಬ ಉಪಖಂಡದಲ್ಲಿ ಎರಡು ಸಾವಿರ ವರ್ಷಗಳಿಂದಲೂ ವೈದಿಕರು ಜನರ ಮಿದುಳನ್ನು ಆಪೋಷನ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಈ ಕುತಂತ್ರಗಳ ವಿರುದ್ಧ ಜನತೆಯನ್ನು ವಿಮೋಚನೆಗೊಳಿಸಲು ಮಹಾವೀರ, ಬುದ್ಧ, ಕಬೀರ, ಬಸವಣ್ಣ ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಜ್ಯೋತಿಬಾಪುಲೆ, ಅಂಬೇಡ್ಕರ್, ಗಾಂಧಿ ಪೆರಿಯಾರ್, ಲೋಹಿಯಾ ಮುಂತಾಗಿ ಸಾವಿರಾರು ದಾರ್ಶನಿಕರು, ಸಮಾಜ ಸುಧಾರಕರು, ಚಿಂತಕರು, ಹೋರಾಟ ರೂಪಿಸುತ್ತಲೇ ಬಂದಿದ್ದರು.

ಈ ಎಲ್ಲಾ ಹೋರಾಟಗಳನ್ನು ನುಂಗಿ ನೊಣೆದಿರುವ, ಹಿಂದುತ್ವ ಎಂಬ ಬ್ರಾಂಡಿನ ರಾಜಕೀಯ ದೇಶವನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದೆ. ಆದರೆ ಅಮಲಿನಲ್ಲಿರುವ ಅಂದ ಭಕ್ತರು ಸ್ಮಶಾನದಲ್ಲಿ ನಿಂತು ಸಹ, ಮೋದಿ ಇರುವುದಕ್ಕೆ ಇಷ್ಟಾದರೂ ಸಹ ಉಳಿದಿದೆ ಎನ್ನುತ್ತಿದ್ದಾರೆ. ಸನಾತನತೆ ಆಧುನಿಕತೆಯ ಹೆಗಲ ಮೇಲೆ ಕುಳಿತು ನಿರಂತರ ಸುಳ್ಳು ಬಿತ್ತಿ ಧರ್ಮದ ಅಮಲನ್ನು ಉಣಿಸಿದ ಪರಿಣಾಮ ಈ ದಿವಾಳಿಯ ಸ್ಥಿತಿ ಬಂದೊದಗಿದೆ.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ, ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂಬ ಹಸಿ ಸುಳ್ಳನ್ನು ಹೇಳಿದರು. ಜನ ಅದನ್ನು ನಂಬಿ ಬಹುಮತವನ್ನು ನೀಡಿದರು. ಅಂದಿನಿದ ಈ ದೇಶದಲ್ಲಿ ಸುಳ್ಳು ಚಲಾವಣೆಗೆ ಬರುತ್ತದೆ ಎಂಬ ಸತ್ಯವನ್ನು ಮನಗಂಡ ಬಲಪಂಥೀಯರು ಸುಳ್ಳಿನ ಕಾರ್ಖಾನೆಯನ್ನು ತೆರೆದು ದೇಶವನ್ನು ದಿಕ್ಕೆಡಿಸಿದರು. ಸಾಮಾಜಿಕ ಜಾಲತಾಣಗಳನ್ನು ಪ್ರಬಲ ಅಸ್ತ್ರವನ್ನಾಗಿಸಿ, ದೇಶದ ಬಹುಸಂಖ್ಯಾತ ಯುವಜನರ ಮಿದುಳನ್ನು ಆಲೋಚನಾ ಕ್ರಮದಿಂದ ನಿಷ್ಕ್ರಿಯಗೊಳಿಸಿರುವುದು ಇಂದಿನ ದುರಂತ.

ಮಾಹಿತಿ ಎನ್ನುವುದು ಜನರನ್ನು ಸದಾ ಜಾಗ್ರತೆಯಲ್ಲಿ ಇರಿಸಲು ಸಹಾಯವಾಗುತ್ತದೆ. ಇದರಿಂದ ಆರೋಗ್ಯಕರ ನಾಗರಿಕ ಸಮಾಜವು ಅಸ್ತಿತ್ವದಲ್ಲಿ ಇರುತ್ತದೆ. ಆದರೆ ಮಾಹಿತಿಗಳು ತಪ್ಪು ಮತ್ತು ಸುಳ್ಳುಗಳಿಂದ ಕೂಡಿದರೆ, ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ. ಇದು ಬಲಪಂಥೀಯ ರಾಜಕಾರಣದ ಬಂಡವಾಳ ಆಗಿದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್ ಬಳಕೆ ಅತ್ಯಧಿಕವಾಗಿದೆ. ಅವನ್ನು ಕೈ ವಶಪಡಿಸಿಕೊಂಡಿರುವ ಮನುವಾದಿಗಳು ಈ ಅವಕಾಶವನ್ನು ಬಳಸಿಕೊಂಡು ಸುಳ್ಳುಗಳ ಮೂಲಕವೇ ಜನರನ್ನು ಅಂಧಕಾರದಲ್ಲಿ ಇಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯನ್ನು ನಾಶಗೊಳಿಸುವ ಹುನ್ನಾರವು ಅವರದ್ದಾಗಿದೆ. ಇದರಲ್ಲಿ ಬಹುತೇಕ ಪತ್ರಿಕಾ ಮತ್ತು ದೃಶ್ಯಮಾಧ್ಯಮಗಳು ಶಾಮೀಲಾಗಿದೆ.

ಇಸ್ಲಾಂ ಧರ್ಮವನ್ನು ದೇಶದ್ರೋಹಿಗಳಂತೆ ಚಿತ್ರಿಸುವುದು, ಮುಸ್ಲಿಮರಿಂದ ಹಿಂದೂ ಧರ್ಮದ ಅವನತಿ ಆಗುತ್ತಿದೆ, ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರಗಳು ನಡೆಯುತ್ತಿವೆ, ನಕ್ಸಲರೂ ಇಸ್ಲಾಂ ಭಯೋತ್ಪಾದಕರೊಂದಿಗೆ ಒಂದಾಗಿದ್ದಾರೆ, ಕಾಂಗ್ರೆಸ್ ಪಾಕಿಸ್ತಾನದ ಪರವಾಗಿದೆ; ಹಿಂದೂ ವಿರೋಧಿಯಾಗಿದೆ, ಬಿಜೆಪಿಯವರು ಪ್ರಾಮಾಣಿಕರು, ದೇಶಭಕ್ತರು, ದೈವಭಕ್ತರು, ಇತರೆ ರಾಜಕೀಯ ಪಕ್ಷಗಳ ನಾಯಕರು ನೀತಿಗೆಟ್ಟವರು, ದೇಶದ್ರೋಹಿಗಳು, ಭ್ರಷ್ಟರು – ಮುಂತಾದ ವಿಷಯಗಳನ್ನು ಮುಖ್ಯ ಸಾರವಾಗಿಟ್ಟುಕೊಂಡು ಕ್ಷಣಕ್ಕೊಂದು ಸುಳ್ಳು ಬಿತ್ತಲಾಗುತ್ತಿದೆ.

ರಾಜ್ಯದಲ್ಲೂ ಈ ಕುತಂತ್ರಗಳು ಬಲಪಂಥೀಯರ ಕೆಲ ಮಾಧ್ಯಮಗಳ ಮೂಲಕ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಸುಳ್ಳುಗಳಿಂದಲೇ ಇತಿಹಾಸವನ್ನು ತಿರುಚಲಾಗುತ್ತಿದೆ. ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಮಾತ್ರವಲ್ಲದೆ ವೈಜ್ಞಾನಿಕ ಕ್ಷೇತ್ರವನ್ನು ಬಿಟ್ಟಿಲ್ಲ. ಕೆಲವರ್ಷಗಳ ಹಿಂದೆ, ಪ್ರಧಾನಿ ಮೋದಿಯವರು ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮ್ಮೇಳನದಲ್ಲಿ, ಕ್ಲೋನಿಂಗ್ ವ್ಯವಸ್ಥೆಯನ್ನು ಮಹಾಭಾರತ ಕಾಲದಲ್ಲಿ ಕಂಡುಹಿಡಿಯಲಾಗಿತ್ತು ಎಂದು ಹೇಳಿದ್ದರು. ರಾಮಾಯಣ ಕಾಲದಲ್ಲಿ ವಿಮಾನವನ್ನು ಕಂಡು ಹಿಡಿದಿದ್ದರೂ ಎಂದು ಭಕ್ತರು ಹೇಳುತ್ತಾರೆ. ಗೋಮೂತ್ರ ಕುಡಿದರೆ ಕೊರೊನಾ ಬರುವುದಿಲ್ಲ ಎಂದು ಸಂಸದೆ ಪ್ರಜ್ಞಾಸಿಂಗ್ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಹಲವು ಕಡೆ ಸಗಣಿಯನ್ನು ಮೈಯಿಗೆ ಬಳಿದುಕೊಂಡು ಗೋಮೂತ್ರ ಕುಡಿಯುವ ಸಮಾವೇಶಗಳು ನಡೆದಿವೆ.

ಬಲಪಂಥೀಯರ ಕೆಲ ಸಂಘಟನೆಗಳು ಮತ್ತು ಮಾಧ್ಯಮಗಳು ಗಲಭೆಗಳಿಗೆ ಪ್ರೇರೇಪಣೆ ನೀಡಿ, ಸಮಾಜದಲ್ಲಿ ಅಶಾಂತಿ ಎಬ್ಬಿಸಲು ನಿರಂತರ ಸುಳ್ಳುಗಳನ್ನು ಹರಡಲಾಗುತ್ತಿದೆ.

ಆಯ್ದ ಒಂದೆರಡು ಘಟನೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತಿದ್ದೇನೆ. 

2018ರ ಅಕ್ಟೋಬರ್ ನಲ್ಲಿ ಪಂಜಾಬ್ ನ ಅಮೃತಸರದಿಂದ ಹೊರಟಿದ್ದ ರೈಲೊಂದು ಭೀಕರ ಅಪಘಾತಕ್ಕೆ ಒಳಗಾಯಿತು. ಆ ಸಂದರ್ಭದಲ್ಲಿ ರೈಲು ಬರುವುದಿಲ್ಲವೆಂದು, ದಸರಾ ಹಬ್ಬದ ರಾವಣ ದಹನ ಕಾರ್ಯಕ್ರಮ ವೀಕ್ಷಿಸುತ್ತಿದ್ದ ನೂರಾರು ಜನ ಸ್ಟೇಡಿಯಂನಲ್ಲಿ ನಿಂತಂತೆ ರೈಲ್ವೆ ಹಳಿಯ ಅಕ್ಕಪಕ್ಕ ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ರೈಲು 60 ಜನರನ್ನು ಆಹುತಿ ತೆಗೆದುಕೊಂಡು ಹಲವು ಜನರಿಗೆ ಗಂಭೀರ ಗಾಯಗಳಾಗಿದ್ದವು.

ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಸಿಹಸಿ ಸುಳ್ಳು ಬಿತ್ತರವಾಯಿತು. ಇದು ಹಿಂದೂಗಳನ್ನು ಸಾಮೂಹಿಕವಾಗಿ ಕೊಲ್ಲುವ ಟ್ರೈನ್ ಜಿಹಾದ್ ಎಂಬ ಮುಸಲ್ಮಾನರ ಪಿತೂರಿ. ಈ ಟ್ರೈನ್ ಚಾಲಕನ ಹೆಸರು ಇಮ್ತಿಯಾಜ್ ಅಲಿ ಎಂದು. ಆತ ಜನರ ಗುಂಪನ್ನು ನೋಡಿ ರೈಲನ್ನು ನಿಲ್ಲಿಸಬಹುದಿತ್ತು. ಆದರೆ ಸಾಮೂಹಿಕವಾಗಿ ಹಿಂದೂಗಳನ್ನು ಹತ್ಯೆಗೈಯ್ಯುವ ಉದ್ದೇಶದಿಂದಲೇ ರೈಲನ್ನು ನಿಲ್ಲಿಸಲಿಲ್ಲ. ಈ ಘಟನೆಯಲ್ಲಿ 250 ಹಿಂದೂ ಬಾಂಧವರು ಮೃತಪಟ್ಟಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಈ ಸುದ್ದಿಗಳನ್ನು ಬಿತ್ತರಿಸಿದವರು ಬಿಜೆಪಿಯ  ಐಟಿ ಸೆಲ್ ನವರು ಮತ್ತು ಮೋದಿಯವರ ಅಭಿಮಾನಿಗಳು.

ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ  ಎ.ಎನ್.ಐ. ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಈ ರೈಲಿನ ಚಾಲಕನ ಹೆಸರು ಅರವಿಂದ ಕುಮಾರ್. ಆದರೆ ಈ ಸತ್ಯ ಹೊರ ಬರುವ ಮುನ್ನವೇ, ಇಮ್ತಿಯಾಜ್ ಆಲಿ ಎಂಬ ವ್ಯಕ್ತಿ ಈ ಘಟನೆಗೆ ಉದ್ದೇಶಪೂರ್ವಕ ಕಾರಣ ಎಂದು ಜನ ನಂಬಿದ್ದರು.

2017ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ, ಕೋಮುಗಲಭೆ ನಡೆದಿತ್ತು. ಈ ಗಲಭೆ ನಡೆದು ಕೆಲ ದಿನಗಳ ಬಳಿಕ ನಾಪತ್ತೆಯಾಗಿದ್ದ ಪರೇಶ್ ಮೇಸ್ತ ಎಂಬ 21 ವರ್ಷದ ಯುವಕನ ದೇಹ ಕೊಳೆತ ಸ್ಥಿತಿಯಲ್ಲಿ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ದಿಡೀರ್ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಜಿಹಾದಿ ಕಾರ್ಯಕರ್ತರೇ ಪರೇಶ್ ಮೇಸ್ತನನ್ನು, ತಲೆ ಕೈಕಾಲು ಕತ್ತರಿಸಿ ಬರ್ಬರ ಕೊಲೆ ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯ ಮುನ್ನವೇ ಘೋಷಿಸಿದರು. ಅವರ ಹೇಳಿಕೆಯನ್ನು ಆಧರಿಸಿ 2018ರ ಡಿಸೆಂಬರ್ 11ರಂದು ಇಂಡಿಯಾ ಟುಡೇ ಸುದ್ದಿವಾಹಿನಿ ಪ್ರಮುಖ ಸುದ್ದಿಯಾಗಿ ಬಿತ್ತರಿಸಿ ಮಸಾಲವನ್ನು ಸೇರಿಸಿತು. ಪರೇಶನ್ ಮೇಲೆ ಕುದಿಯುವ ಎಣ್ಣೆ ಸುರಿದು ಕೈಕಾಲು ರುಂಡಗಳನ್ನು ಬೇರ್ಪಡಿಸಲಾಗಿತ್ತು ಎಂಬ ವರದಿ ಪ್ರಕಟಿಸಿತ್ತು. ಸುದ್ದಿವಾಹಿನಿಗಳಿಗೆ ಟಿ ಆರ್ ಪಿ ಮುಖ್ಯವಾಗುತ್ತದೆ.

ಪೊಲೀಸರು ಮಣಿಪಾಲದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆತನ ಕಳೇಬರವನ್ನು ನೀಡಿದರು. ಕೆಲ ದಿನಗಳ ನಂತರ ಈ ಸಾವಿನ ಬಗ್ಗೆ ತಜ್ಞರು ವರದಿ ನೀಡಿದರು. ವರದಿಯ ಪ್ರಕಾರ ಆಯುಧದಿಂದ ಹಲ್ಲೆ ನಡಿಸಿರುವ ಗುರುತುಗಳು ಇರಲಿಲ್ಲ. ರುಂಡ ಸೇರಿದಂತೆ ಅಂಗಾಂಗಗಳು ಬೇರ್ಪಟ್ಟಿರಲಿಲ್ಲ. ಬಹಳ ದಿನಗಳ ನಂತರ ಶವ ಪತ್ತೆಯಾಗಿದ್ದರಿಂದ ಚರ್ಮ ಕೊಳೆತಿದೆಯೇ ಹೊರತು ಕುದಿಯುವ ಎಣ್ಣೆ ಆತನ ದೇಹದ ಮೇಲೆ ಬಿದ್ದಿರಲಿಲ್ಲ. ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯುವ ಉದ್ದೇಶಕ್ಕಾಗಿ ವಾಟ್ಸಾಪ್ ಗಳಲ್ಲಿ ಈ ರೀತಿ ಸುದ್ದಿಯನ್ನು ಹರಿಯಬಿಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಈ ವಿಷಯವನ್ನು ವಿಷಯ ತಜ್ಞರು ತಿಳಿಸುವ ಮುನ್ನವೇ ಸಂಸ್ಥೆಯು ಹೇಳಿರುವ ಸುಳ್ಳನ್ನೇ ಜನರು ನಂಬಿದ್ದರು.

ಉತ್ತರಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರಾಭವ ಅನುಭವಿಸಿತ್ತು. ಗೋರಖ್ ಪುರ, ಫುಲ್ ಪುರ್ ಮತ್ತು ಖೈರಾನ  ಕ್ಷೇತ್ರಗಳಲ್ಲಿ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ ಗೆದ್ದಿತ್ತು. ಖೈರಾನ ಕ್ಷೇತ್ರದಿಂದ ಗೆದ್ದಿದ್ದ ಬೇಗಂ ತಬ್ಸಂ ಹಸನ್ ಅವರು ಹೇಳಿಕೆ ನೀಡಿ, ಇದು ರಾಮನ ಸೋಲು, ಅಲ್ಲಾಹುವಿನ ಗೆಲುವು ಎಂದಿದ್ದಾರೆ ಎಂದು ಬಿಜೆಪಿ ನಾಯಕ ಕಮಲ್ ತ್ಯಾಗಿ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿ, ಅದು ಪ್ರಸರಣವಾದ ನಂತರ ಡಿಲೀಟ್ ಮಾಡಿದ್ದ. ಆದರೆ ಸಂಸದೆ ತಬ್ಸಂ ಖಳನಾಯಕಿ ಸ್ಥಾನದಲ್ಲಿ ನಿಂತಿದ್ದರು. ಅವರು ಇಂತಹ ಹೇಳಿಕೆಯನ್ನೇ ನೀಡಿಲ್ಲ ಎಂದು ಸ್ಪಷ್ಟನೆ ಕೊಡುವ ಮುನ್ನವೇ ಸುಳ್ಳು ವ್ಯಾಪಿಸಿತ್ತು.

ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ, Hindu girl stabbed to death by a Muslim  ಎಂಬ ಹೆಡ್ಡಿಂಗ್ ಇರುವ ಕ್ಲಿಪ್ಪಿಂಗ್ ವೊಂದನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಹಾಕಿಕೊಂಡು ನಂತರ ಡಿಲೀಟ್ ಮಾಡಿದ್ದರು. ಇದರ ಅಸಲೀಯತ್ತು ಏನು ಎಂದರೆ, ಆ ಪತ್ರಿಕೆಯಲ್ಲಿ  Day after  being stabbed by a stalker  21 year old dies  ಎಂಬ ಹೆಡ್ಡಿಂಗ್ ನೀಡಲಾಗಿತ್ತು ಎಂದು ಆ  ಪತ್ರಿಕೆ  ಟ್ವಿಟರ್ ನಲ್ಲಿ ಸ್ಪಷ್ಟೀಕರಣ ನೀಡಿತ್ತು. ವಾಸ್ತವದಲ್ಲಿ ಭಕ್ತನೊಬ್ಬ ಫೋಟೋಶಾಪ್ ಮಾಡಿ, ಮುಸ್ಲಿಂ ಯುವಕನಿಂದ ಹಿಂದು ಯವತಿಯ ಕೊಲೆ ಎಂದು ಹೆಡ್ಡಿಂಗ್ ವಿರೂಪಗೊಳಿಸಿದ್ದ.

ಮೈಸೂರು ರಂಗಾಯಣದ ನಿರ್ದೇಶಕನೊಬ್ಬ ಟಿಪ್ಪು ನಿಜಕನಸುಗಳು ಎಂಬ ಕಪೋಲಕಲ್ಪಿತ ನಾಟಕ ಬರೆದು ಇಲ್ಲದ ಉರಿಗೌಡ ನಂಜೇಗೌಡರೆಂಬ ಪಾತ್ರಗಳನ್ನು ಸೃಷ್ಟಿಸಿ ಸೌಹಾರ್ದತೆಯಿಂದ ಇರುವ ಮುಸ್ಲಿಂ ಮತ್ತು ಒಕ್ಕಲಿಗ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಿದ

ಈಗ ಕೇರಳ ಸ್ಟೋರಿ ಎಂಬ ಹಿಂದಿ ಚಲನಚಿತ್ರದಲ್ಲಿ ಮೊದಲ ನೋಟಕ್ಕೆ ಕೋಮು ಧ್ರುವೀಕರಣ ಮತ್ತು ಕೇರಳದ ವಿರುದ್ಧ ದ್ವೇಷ ಅಭಿಯಾನ ನಡೆಸುವ ಪ್ರಚಾರದ ಚಿತ್ರವಾಗಿ ಕಾಣಿಸುವ ಹಿಂದಿ ಸಿನಿಮಾ ‘ಕೇರಳ ಸ್ಟೋರಿ’  ಜಾತ್ಯತೀತ ಮತ್ತು ಪ್ರಗತಿಪರ ಮೌಲ್ಯಗಳಿಗೆ ಹೆಸರಾದ ಕೇರಳವನ್ನು ಧಾರ್ಮಿಕ ಮೂಲಭೂತವಾದದ ಕೇಂದ್ರವಾಗಿ ರೂಪಿಸುವ ಸಂಘಪರಿವಾರದ ಪ್ರಚಾರವನ್ನು ಚಲನಚಿತ್ರವು ಬಲಪಡಿಸುತ್ತದೆ ಎಂದು ಸೂಚಿಸುತ್ತದೆ. ಕೇರಳದ ಚುನಾವಣಾ ರಾಜಕೀಯದಲ್ಲಿ ಲಾಭಗಳಿಸಲು ಸಂಘಪರಿವಾರದ ವಿವಿಧ ಪ್ರಯತ್ನಗಳ ಹಿನ್ನೆಲೆಯಲ್ಲಿ ಇಂತಹ ಪ್ರಚಾರದ ಚಲನಚಿತ್ರಗಳು ಮತ್ತು ಮುಸ್ಲಿಂ ಜೀವನದ ಬೆಂಕಿಯ ಚಿತ್ರಣವನ್ನು ನೋಡಬೇಕಾಗಿದೆ.

ಕೇಂದ್ರ ಗೃಹ ಸಚಿವಾಲಯ, ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳಿಂದ ತಳ್ಳಿಹಾಕಲ್ಪಟ್ಟ  'ಲವ್ ಜಿಹಾದ್'  ಎಂಬ ಕಪೋಲಕಲ್ಪಿತ ಆಧಾರದ ಮೇಲೆ ಸಿನಿಮಾ ಮಾಡಲಾಗಿದೆ

 ಕೇರಳವನ್ನು ಉದ್ದೇಶಪೂರ್ವಕವಾಗಿ ಜಗತ್ತಿನ ಮುಂದೆ ಕೆಡಿಸಲು ಈ ಸುಳ್ಳು ಆರೋಪವನ್ನು ಚಿತ್ರದ ಮೂಲಭೂತ ಆಧಾರವನ್ನಾಗಿ ಮಾಡಲಾಗಿದೆ. ಸಂಘಪರಿವಾರವು ಕೋಮು ವಿಷಬೀಜವನ್ನು ಬಿತ್ತಿ ಕೇರಳದಲ್ಲಿ ಇರುವ ಧಾರ್ಮಿಕ ಸೌಹಾರ್ದತೆಯ ವಾತಾವರಣವನ್ನು ಕದಡಲು ಪ್ರಯತ್ನಿಸುತ್ತಿದೆ.  

ಸಂಘಪರಿವಾರದ ಪ್ರಯತ್ನ ಮತ್ತು ಪರೀಕ್ಷಿತ ತಂತ್ರಗಳು ಕೇರಳದಲ್ಲಿ ಫಲ ನೀಡಲಿಲ್ಲ ಮತ್ತು ಆದ್ದರಿಂದ ಅವರು ಸುಳ್ಳು ನಿರೂಪಣೆಗಳನ್ನು ಅವಲಂಬಿಸಿರುವ ಚಲನಚಿತ್ರಗಳ ಮೂಲಕ ತಮ್ಮ ವಿಭಜನೆಯ ರಾಜಕೀಯವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ. ಸಂಘ ಪರಿವಾರದ ಇಂತಹ ದೊಡ್ಡ ಕಥೆಗಳಿಗೆ ಯಾವುದೇ ಆಧಾರ ಅಥವಾ ಪುರಾವೆಗಳಿಲ್ಲ. ಕೇರಳದಲ್ಲಿ 32,000 ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಮತ್ತು ಇಸ್ಲಾಮಿಕ್ ಸ್ಟೇಟ್‌ಗೆ ಸೇರ್ಪಡೆಗೊಳಿಸಲಾಗಿದೆ ಎಂಬುದು  ಸಂಪೂರ್ಣ ಸುಳ್ಳು. ಇಂಥದ್ದೊಂದು ಕಥೆ ಸಂಘಪರಿವಾರದ ಸುಳ್ಳು ಕಾರ್ಖಾನೆಯ ಉತ್ಪನ್ನ.

-ಅರೆಯೂರು ಚಿ.ಸುರೇಶ್
ಲೇಖಕರು, ಪತ್ರಕರ್ತರು
ತುಮಕೂರು ಮೊಬೈಲ್: 7090564603