BREKING NEWS
ಸೋಮವಾರ, ಏಪ್ರಿಲ್ 28, 2025
ಲೇಖನ: ಬಲಪಂಥೀಯರ ಸುಳ್ಳಿನ ಕಥೆಗಳೇ ಇತಿಹಾಸವಾಗುವ ಆತಂಕ
ಮನುವಾದಿ ಬಲಪಂಥೀಯರ ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳಿನ ಕಟ್ಟುಕಥೆಗಳೇ ಮುಂದಿನ ತಲೆಮಾರಿಗೆ ನೈಜ ಇತಿಹಾಸವಾಗುವ ಸಾಧ್ಯತೆ ಇದ್ದು ಪ್ರಜ್ಞಾವಂತರು ಎಚ್ಚೆತ್ತು ನೈಜ ಇತಿಹಾಸವನ್ನು ದಾಖಲಿಸುವ ತುರ್ತು ಇಂದು ಎದುರಾಗಿದೆ
ಮನುವಾದಿ ರಾಜಕಾರಣ ಮನುಕುಲ ವಿರೋಧಿ ಎಂಬ ಗಾಢ ಅನುಭವ ಜನರಿಗೆ ಈಗ ಆಗುತ್ತಿದೆ. ಈ ಅನುಭವ ಆಗುತ್ತಿಲ್ಲ ಎಂದರೆ ಆತ ಅಕ್ಷರಶಃ ಅಂಧ ಭಕ್ತ ಅಥವಾ ಮಿದುಳು ನಿಷ್ಕ್ರಿಯಗೊಂಡ ಬೌದ್ಧಿಕ ಗುಲಾಮ ಎಂದೇ ಪರಿಗಣಿಸಬೇಕಾಗುತ್ತದೆ.
ವೈದಿಕರು ಹಿಂದುತ್ವದ ಬೀಜ ಬಿತ್ತಿ ಸ್ವತಂತ್ರ ಭಾರತದಲ್ಲಿ ಸುಮಾರು ನೂರು ವರ್ಷಗಳು ಸಮೀಪಿಸುತ್ತಿವೆ. ವಂಚನೆ, ಕಪಟ, ದ್ವೇಷ, ಹಿಂಸೆ, ಅನ್ಯಾಯಗಳೆಂಬ ಫಸಲನ್ನು ದೇಶಾದ್ಯಂತ ತುಂಬಿದ್ದಾರೆ. ಹಾಗೆ ನೋಡಿದರೆ ಭಾರತ ಎಂಬ ಉಪಖಂಡದಲ್ಲಿ ಎರಡು ಸಾವಿರ ವರ್ಷಗಳಿಂದಲೂ ವೈದಿಕರು ಜನರ ಮಿದುಳನ್ನು ಆಪೋಷನ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಈ ಕುತಂತ್ರಗಳ ವಿರುದ್ಧ ಜನತೆಯನ್ನು ವಿಮೋಚನೆಗೊಳಿಸಲು ಮಹಾವೀರ, ಬುದ್ಧ, ಕಬೀರ, ಬಸವಣ್ಣ ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಜ್ಯೋತಿಬಾಪುಲೆ, ಅಂಬೇಡ್ಕರ್, ಗಾಂಧಿ ಪೆರಿಯಾರ್, ಲೋಹಿಯಾ ಮುಂತಾಗಿ ಸಾವಿರಾರು ದಾರ್ಶನಿಕರು, ಸಮಾಜ ಸುಧಾರಕರು, ಚಿಂತಕರು, ಹೋರಾಟ ರೂಪಿಸುತ್ತಲೇ ಬಂದಿದ್ದರು.
ಈ ಎಲ್ಲಾ ಹೋರಾಟಗಳನ್ನು ನುಂಗಿ ನೊಣೆದಿರುವ, ಹಿಂದುತ್ವ ಎಂಬ ಬ್ರಾಂಡಿನ ರಾಜಕೀಯ ದೇಶವನ್ನು ಬಲಿಪೀಠಕ್ಕೆ ತಂದು ನಿಲ್ಲಿಸಿದೆ. ಆದರೆ ಅಮಲಿನಲ್ಲಿರುವ ಅಂದ ಭಕ್ತರು ಸ್ಮಶಾನದಲ್ಲಿ ನಿಂತು ಸಹ, ಮೋದಿ ಇರುವುದಕ್ಕೆ ಇಷ್ಟಾದರೂ ಸಹ ಉಳಿದಿದೆ ಎನ್ನುತ್ತಿದ್ದಾರೆ. ಸನಾತನತೆ ಆಧುನಿಕತೆಯ ಹೆಗಲ ಮೇಲೆ ಕುಳಿತು ನಿರಂತರ ಸುಳ್ಳು ಬಿತ್ತಿ ಧರ್ಮದ ಅಮಲನ್ನು ಉಣಿಸಿದ ಪರಿಣಾಮ ಈ ದಿವಾಳಿಯ ಸ್ಥಿತಿ ಬಂದೊದಗಿದೆ.
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ, ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂಬ ಹಸಿ ಸುಳ್ಳನ್ನು ಹೇಳಿದರು. ಜನ ಅದನ್ನು ನಂಬಿ ಬಹುಮತವನ್ನು ನೀಡಿದರು. ಅಂದಿನಿದ ಈ ದೇಶದಲ್ಲಿ ಸುಳ್ಳು ಚಲಾವಣೆಗೆ ಬರುತ್ತದೆ ಎಂಬ ಸತ್ಯವನ್ನು ಮನಗಂಡ ಬಲಪಂಥೀಯರು ಸುಳ್ಳಿನ ಕಾರ್ಖಾನೆಯನ್ನು ತೆರೆದು ದೇಶವನ್ನು ದಿಕ್ಕೆಡಿಸಿದರು. ಸಾಮಾಜಿಕ ಜಾಲತಾಣಗಳನ್ನು ಪ್ರಬಲ ಅಸ್ತ್ರವನ್ನಾಗಿಸಿ, ದೇಶದ ಬಹುಸಂಖ್ಯಾತ ಯುವಜನರ ಮಿದುಳನ್ನು ಆಲೋಚನಾ ಕ್ರಮದಿಂದ ನಿಷ್ಕ್ರಿಯಗೊಳಿಸಿರುವುದು ಇಂದಿನ ದುರಂತ.
ಮಾಹಿತಿ ಎನ್ನುವುದು ಜನರನ್ನು ಸದಾ ಜಾಗ್ರತೆಯಲ್ಲಿ ಇರಿಸಲು ಸಹಾಯವಾಗುತ್ತದೆ. ಇದರಿಂದ ಆರೋಗ್ಯಕರ ನಾಗರಿಕ ಸಮಾಜವು ಅಸ್ತಿತ್ವದಲ್ಲಿ ಇರುತ್ತದೆ. ಆದರೆ ಮಾಹಿತಿಗಳು ತಪ್ಪು ಮತ್ತು ಸುಳ್ಳುಗಳಿಂದ ಕೂಡಿದರೆ, ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ. ಇದು ಬಲಪಂಥೀಯ ರಾಜಕಾರಣದ ಬಂಡವಾಳ ಆಗಿದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್ ಬಳಕೆ ಅತ್ಯಧಿಕವಾಗಿದೆ. ಅವನ್ನು ಕೈ ವಶಪಡಿಸಿಕೊಂಡಿರುವ ಮನುವಾದಿಗಳು ಈ ಅವಕಾಶವನ್ನು ಬಳಸಿಕೊಂಡು ಸುಳ್ಳುಗಳ ಮೂಲಕವೇ ಜನರನ್ನು ಅಂಧಕಾರದಲ್ಲಿ ಇಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯನ್ನು ನಾಶಗೊಳಿಸುವ ಹುನ್ನಾರವು ಅವರದ್ದಾಗಿದೆ. ಇದರಲ್ಲಿ ಬಹುತೇಕ ಪತ್ರಿಕಾ ಮತ್ತು ದೃಶ್ಯಮಾಧ್ಯಮಗಳು ಶಾಮೀಲಾಗಿದೆ.
ಇಸ್ಲಾಂ ಧರ್ಮವನ್ನು ದೇಶದ್ರೋಹಿಗಳಂತೆ ಚಿತ್ರಿಸುವುದು, ಮುಸ್ಲಿಮರಿಂದ ಹಿಂದೂ ಧರ್ಮದ ಅವನತಿ ಆಗುತ್ತಿದೆ, ಹಿಂದೂಗಳ ಮೇಲೆ ಕೊಲೆ, ಅತ್ಯಾಚಾರಗಳು ನಡೆಯುತ್ತಿವೆ, ನಕ್ಸಲರೂ ಇಸ್ಲಾಂ ಭಯೋತ್ಪಾದಕರೊಂದಿಗೆ ಒಂದಾಗಿದ್ದಾರೆ, ಕಾಂಗ್ರೆಸ್ ಪಾಕಿಸ್ತಾನದ ಪರವಾಗಿದೆ; ಹಿಂದೂ ವಿರೋಧಿಯಾಗಿದೆ, ಬಿಜೆಪಿಯವರು ಪ್ರಾಮಾಣಿಕರು, ದೇಶಭಕ್ತರು, ದೈವಭಕ್ತರು, ಇತರೆ ರಾಜಕೀಯ ಪಕ್ಷಗಳ ನಾಯಕರು ನೀತಿಗೆಟ್ಟವರು, ದೇಶದ್ರೋಹಿಗಳು, ಭ್ರಷ್ಟರು – ಮುಂತಾದ ವಿಷಯಗಳನ್ನು ಮುಖ್ಯ ಸಾರವಾಗಿಟ್ಟುಕೊಂಡು ಕ್ಷಣಕ್ಕೊಂದು ಸುಳ್ಳು ಬಿತ್ತಲಾಗುತ್ತಿದೆ.
ರಾಜ್ಯದಲ್ಲೂ ಈ ಕುತಂತ್ರಗಳು ಬಲಪಂಥೀಯರ ಕೆಲ ಮಾಧ್ಯಮಗಳ ಮೂಲಕ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಸುಳ್ಳುಗಳಿಂದಲೇ ಇತಿಹಾಸವನ್ನು ತಿರುಚಲಾಗುತ್ತಿದೆ. ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಮಾತ್ರವಲ್ಲದೆ ವೈಜ್ಞಾನಿಕ ಕ್ಷೇತ್ರವನ್ನು ಬಿಟ್ಟಿಲ್ಲ. ಕೆಲವರ್ಷಗಳ ಹಿಂದೆ, ಪ್ರಧಾನಿ ಮೋದಿಯವರು ಅಂತರರಾಷ್ಟ್ರೀಯ ವಿಜ್ಞಾನಿಗಳ ಸಮ್ಮೇಳನದಲ್ಲಿ, ಕ್ಲೋನಿಂಗ್ ವ್ಯವಸ್ಥೆಯನ್ನು ಮಹಾಭಾರತ ಕಾಲದಲ್ಲಿ ಕಂಡುಹಿಡಿಯಲಾಗಿತ್ತು ಎಂದು ಹೇಳಿದ್ದರು. ರಾಮಾಯಣ ಕಾಲದಲ್ಲಿ ವಿಮಾನವನ್ನು ಕಂಡು ಹಿಡಿದಿದ್ದರೂ ಎಂದು ಭಕ್ತರು ಹೇಳುತ್ತಾರೆ. ಗೋಮೂತ್ರ ಕುಡಿದರೆ ಕೊರೊನಾ ಬರುವುದಿಲ್ಲ ಎಂದು ಸಂಸದೆ ಪ್ರಜ್ಞಾಸಿಂಗ್ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಹಲವು ಕಡೆ ಸಗಣಿಯನ್ನು ಮೈಯಿಗೆ ಬಳಿದುಕೊಂಡು ಗೋಮೂತ್ರ ಕುಡಿಯುವ ಸಮಾವೇಶಗಳು ನಡೆದಿವೆ.
ಬಲಪಂಥೀಯರ ಕೆಲ ಸಂಘಟನೆಗಳು ಮತ್ತು ಮಾಧ್ಯಮಗಳು ಗಲಭೆಗಳಿಗೆ ಪ್ರೇರೇಪಣೆ ನೀಡಿ, ಸಮಾಜದಲ್ಲಿ ಅಶಾಂತಿ ಎಬ್ಬಿಸಲು ನಿರಂತರ ಸುಳ್ಳುಗಳನ್ನು ಹರಡಲಾಗುತ್ತಿದೆ.
ಆಯ್ದ ಒಂದೆರಡು ಘಟನೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತಿದ್ದೇನೆ.
2018ರ ಅಕ್ಟೋಬರ್ ನಲ್ಲಿ ಪಂಜಾಬ್ ನ ಅಮೃತಸರದಿಂದ ಹೊರಟಿದ್ದ ರೈಲೊಂದು ಭೀಕರ ಅಪಘಾತಕ್ಕೆ ಒಳಗಾಯಿತು. ಆ ಸಂದರ್ಭದಲ್ಲಿ ರೈಲು ಬರುವುದಿಲ್ಲವೆಂದು, ದಸರಾ ಹಬ್ಬದ ರಾವಣ ದಹನ ಕಾರ್ಯಕ್ರಮ ವೀಕ್ಷಿಸುತ್ತಿದ್ದ ನೂರಾರು ಜನ ಸ್ಟೇಡಿಯಂನಲ್ಲಿ ನಿಂತಂತೆ ರೈಲ್ವೆ ಹಳಿಯ ಅಕ್ಕಪಕ್ಕ ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ರೈಲು 60 ಜನರನ್ನು ಆಹುತಿ ತೆಗೆದುಕೊಂಡು ಹಲವು ಜನರಿಗೆ ಗಂಭೀರ ಗಾಯಗಳಾಗಿದ್ದವು.
ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಸಿಹಸಿ ಸುಳ್ಳು ಬಿತ್ತರವಾಯಿತು. ಇದು ಹಿಂದೂಗಳನ್ನು ಸಾಮೂಹಿಕವಾಗಿ ಕೊಲ್ಲುವ ಟ್ರೈನ್ ಜಿಹಾದ್ ಎಂಬ ಮುಸಲ್ಮಾನರ ಪಿತೂರಿ. ಈ ಟ್ರೈನ್ ಚಾಲಕನ ಹೆಸರು ಇಮ್ತಿಯಾಜ್ ಅಲಿ ಎಂದು. ಆತ ಜನರ ಗುಂಪನ್ನು ನೋಡಿ ರೈಲನ್ನು ನಿಲ್ಲಿಸಬಹುದಿತ್ತು. ಆದರೆ ಸಾಮೂಹಿಕವಾಗಿ ಹಿಂದೂಗಳನ್ನು ಹತ್ಯೆಗೈಯ್ಯುವ ಉದ್ದೇಶದಿಂದಲೇ ರೈಲನ್ನು ನಿಲ್ಲಿಸಲಿಲ್ಲ. ಈ ಘಟನೆಯಲ್ಲಿ 250 ಹಿಂದೂ ಬಾಂಧವರು ಮೃತಪಟ್ಟಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಈ ಸುದ್ದಿಗಳನ್ನು ಬಿತ್ತರಿಸಿದವರು ಬಿಜೆಪಿಯ ಐಟಿ ಸೆಲ್ ನವರು ಮತ್ತು ಮೋದಿಯವರ ಅಭಿಮಾನಿಗಳು.
ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯನ್ನು ಉಲ್ಲೇಖಿಸಿ ಎ.ಎನ್.ಐ. ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಈ ರೈಲಿನ ಚಾಲಕನ ಹೆಸರು ಅರವಿಂದ ಕುಮಾರ್. ಆದರೆ ಈ ಸತ್ಯ ಹೊರ ಬರುವ ಮುನ್ನವೇ, ಇಮ್ತಿಯಾಜ್ ಆಲಿ ಎಂಬ ವ್ಯಕ್ತಿ ಈ ಘಟನೆಗೆ ಉದ್ದೇಶಪೂರ್ವಕ ಕಾರಣ ಎಂದು ಜನ ನಂಬಿದ್ದರು.
2017ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ, ಕೋಮುಗಲಭೆ ನಡೆದಿತ್ತು. ಈ ಗಲಭೆ ನಡೆದು ಕೆಲ ದಿನಗಳ ಬಳಿಕ ನಾಪತ್ತೆಯಾಗಿದ್ದ ಪರೇಶ್ ಮೇಸ್ತ ಎಂಬ 21 ವರ್ಷದ ಯುವಕನ ದೇಹ ಕೊಳೆತ ಸ್ಥಿತಿಯಲ್ಲಿ ಪೊದೆಯೊಂದರಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ದಿಡೀರ್ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಜಿಹಾದಿ ಕಾರ್ಯಕರ್ತರೇ ಪರೇಶ್ ಮೇಸ್ತನನ್ನು, ತಲೆ ಕೈಕಾಲು ಕತ್ತರಿಸಿ ಬರ್ಬರ ಕೊಲೆ ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯ ಮುನ್ನವೇ ಘೋಷಿಸಿದರು. ಅವರ ಹೇಳಿಕೆಯನ್ನು ಆಧರಿಸಿ 2018ರ ಡಿಸೆಂಬರ್ 11ರಂದು ಇಂಡಿಯಾ ಟುಡೇ ಸುದ್ದಿವಾಹಿನಿ ಪ್ರಮುಖ ಸುದ್ದಿಯಾಗಿ ಬಿತ್ತರಿಸಿ ಮಸಾಲವನ್ನು ಸೇರಿಸಿತು. ಪರೇಶನ್ ಮೇಲೆ ಕುದಿಯುವ ಎಣ್ಣೆ ಸುರಿದು ಕೈಕಾಲು ರುಂಡಗಳನ್ನು ಬೇರ್ಪಡಿಸಲಾಗಿತ್ತು ಎಂಬ ವರದಿ ಪ್ರಕಟಿಸಿತ್ತು. ಸುದ್ದಿವಾಹಿನಿಗಳಿಗೆ ಟಿ ಆರ್ ಪಿ ಮುಖ್ಯವಾಗುತ್ತದೆ.
ಪೊಲೀಸರು ಮಣಿಪಾಲದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಆತನ ಕಳೇಬರವನ್ನು ನೀಡಿದರು. ಕೆಲ ದಿನಗಳ ನಂತರ ಈ ಸಾವಿನ ಬಗ್ಗೆ ತಜ್ಞರು ವರದಿ ನೀಡಿದರು. ವರದಿಯ ಪ್ರಕಾರ ಆಯುಧದಿಂದ ಹಲ್ಲೆ ನಡಿಸಿರುವ ಗುರುತುಗಳು ಇರಲಿಲ್ಲ. ರುಂಡ ಸೇರಿದಂತೆ ಅಂಗಾಂಗಗಳು ಬೇರ್ಪಟ್ಟಿರಲಿಲ್ಲ. ಬಹಳ ದಿನಗಳ ನಂತರ ಶವ ಪತ್ತೆಯಾಗಿದ್ದರಿಂದ ಚರ್ಮ ಕೊಳೆತಿದೆಯೇ ಹೊರತು ಕುದಿಯುವ ಎಣ್ಣೆ ಆತನ ದೇಹದ ಮೇಲೆ ಬಿದ್ದಿರಲಿಲ್ಲ. ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯುವ ಉದ್ದೇಶಕ್ಕಾಗಿ ವಾಟ್ಸಾಪ್ ಗಳಲ್ಲಿ ಈ ರೀತಿ ಸುದ್ದಿಯನ್ನು ಹರಿಯಬಿಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಈ ವಿಷಯವನ್ನು ವಿಷಯ ತಜ್ಞರು ತಿಳಿಸುವ ಮುನ್ನವೇ ಸಂಸ್ಥೆಯು ಹೇಳಿರುವ ಸುಳ್ಳನ್ನೇ ಜನರು ನಂಬಿದ್ದರು.
ಉತ್ತರಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರಾಭವ ಅನುಭವಿಸಿತ್ತು. ಗೋರಖ್ ಪುರ, ಫುಲ್ ಪುರ್ ಮತ್ತು ಖೈರಾನ ಕ್ಷೇತ್ರಗಳಲ್ಲಿ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕದಳ ಗೆದ್ದಿತ್ತು. ಖೈರಾನ ಕ್ಷೇತ್ರದಿಂದ ಗೆದ್ದಿದ್ದ ಬೇಗಂ ತಬ್ಸಂ ಹಸನ್ ಅವರು ಹೇಳಿಕೆ ನೀಡಿ, ಇದು ರಾಮನ ಸೋಲು, ಅಲ್ಲಾಹುವಿನ ಗೆಲುವು ಎಂದಿದ್ದಾರೆ ಎಂದು ಬಿಜೆಪಿ ನಾಯಕ ಕಮಲ್ ತ್ಯಾಗಿ ಎಂಬಾತ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿ, ಅದು ಪ್ರಸರಣವಾದ ನಂತರ ಡಿಲೀಟ್ ಮಾಡಿದ್ದ. ಆದರೆ ಸಂಸದೆ ತಬ್ಸಂ ಖಳನಾಯಕಿ ಸ್ಥಾನದಲ್ಲಿ ನಿಂತಿದ್ದರು. ಅವರು ಇಂತಹ ಹೇಳಿಕೆಯನ್ನೇ ನೀಡಿಲ್ಲ ಎಂದು ಸ್ಪಷ್ಟನೆ ಕೊಡುವ ಮುನ್ನವೇ ಸುಳ್ಳು ವ್ಯಾಪಿಸಿತ್ತು.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ, Hindu girl stabbed to death by a Muslim ಎಂಬ ಹೆಡ್ಡಿಂಗ್ ಇರುವ ಕ್ಲಿಪ್ಪಿಂಗ್ ವೊಂದನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಹಾಕಿಕೊಂಡು ನಂತರ ಡಿಲೀಟ್ ಮಾಡಿದ್ದರು. ಇದರ ಅಸಲೀಯತ್ತು ಏನು ಎಂದರೆ, ಆ ಪತ್ರಿಕೆಯಲ್ಲಿ Day after being stabbed by a stalker 21 year old dies ಎಂಬ ಹೆಡ್ಡಿಂಗ್ ನೀಡಲಾಗಿತ್ತು ಎಂದು ಆ ಪತ್ರಿಕೆ ಟ್ವಿಟರ್ ನಲ್ಲಿ ಸ್ಪಷ್ಟೀಕರಣ ನೀಡಿತ್ತು. ವಾಸ್ತವದಲ್ಲಿ ಭಕ್ತನೊಬ್ಬ ಫೋಟೋಶಾಪ್ ಮಾಡಿ, ಮುಸ್ಲಿಂ ಯುವಕನಿಂದ ಹಿಂದು ಯವತಿಯ ಕೊಲೆ ಎಂದು ಹೆಡ್ಡಿಂಗ್ ವಿರೂಪಗೊಳಿಸಿದ್ದ.
ಮೈಸೂರು ರಂಗಾಯಣದ ನಿರ್ದೇಶಕನೊಬ್ಬ ಟಿಪ್ಪು ನಿಜಕನಸುಗಳು ಎಂಬ ಕಪೋಲಕಲ್ಪಿತ ನಾಟಕ ಬರೆದು ಇಲ್ಲದ ಉರಿಗೌಡ ನಂಜೇಗೌಡರೆಂಬ ಪಾತ್ರಗಳನ್ನು ಸೃಷ್ಟಿಸಿ ಸೌಹಾರ್ದತೆಯಿಂದ ಇರುವ ಮುಸ್ಲಿಂ ಮತ್ತು ಒಕ್ಕಲಿಗ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡಿದ
ಈಗ ಕೇರಳ ಸ್ಟೋರಿ ಎಂಬ ಹಿಂದಿ ಚಲನಚಿತ್ರದಲ್ಲಿ ಮೊದಲ ನೋಟಕ್ಕೆ ಕೋಮು ಧ್ರುವೀಕರಣ ಮತ್ತು ಕೇರಳದ ವಿರುದ್ಧ ದ್ವೇಷ ಅಭಿಯಾನ ನಡೆಸುವ ಪ್ರಚಾರದ ಚಿತ್ರವಾಗಿ ಕಾಣಿಸುವ ಹಿಂದಿ ಸಿನಿಮಾ ‘ಕೇರಳ ಸ್ಟೋರಿ’ ಜಾತ್ಯತೀತ ಮತ್ತು ಪ್ರಗತಿಪರ ಮೌಲ್ಯಗಳಿಗೆ ಹೆಸರಾದ ಕೇರಳವನ್ನು ಧಾರ್ಮಿಕ ಮೂಲಭೂತವಾದದ ಕೇಂದ್ರವಾಗಿ ರೂಪಿಸುವ ಸಂಘಪರಿವಾರದ ಪ್ರಚಾರವನ್ನು ಚಲನಚಿತ್ರವು ಬಲಪಡಿಸುತ್ತದೆ ಎಂದು ಸೂಚಿಸುತ್ತದೆ. ಕೇರಳದ ಚುನಾವಣಾ ರಾಜಕೀಯದಲ್ಲಿ ಲಾಭಗಳಿಸಲು ಸಂಘಪರಿವಾರದ ವಿವಿಧ ಪ್ರಯತ್ನಗಳ ಹಿನ್ನೆಲೆಯಲ್ಲಿ ಇಂತಹ ಪ್ರಚಾರದ ಚಲನಚಿತ್ರಗಳು ಮತ್ತು ಮುಸ್ಲಿಂ ಜೀವನದ ಬೆಂಕಿಯ ಚಿತ್ರಣವನ್ನು ನೋಡಬೇಕಾಗಿದೆ.
ಕೇಂದ್ರ ಗೃಹ ಸಚಿವಾಲಯ, ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳಿಂದ ತಳ್ಳಿಹಾಕಲ್ಪಟ್ಟ 'ಲವ್ ಜಿಹಾದ್' ಎಂಬ ಕಪೋಲಕಲ್ಪಿತ ಆಧಾರದ ಮೇಲೆ ಸಿನಿಮಾ ಮಾಡಲಾಗಿದೆ
ಕೇರಳವನ್ನು ಉದ್ದೇಶಪೂರ್ವಕವಾಗಿ ಜಗತ್ತಿನ ಮುಂದೆ ಕೆಡಿಸಲು ಈ ಸುಳ್ಳು ಆರೋಪವನ್ನು ಚಿತ್ರದ ಮೂಲಭೂತ ಆಧಾರವನ್ನಾಗಿ ಮಾಡಲಾಗಿದೆ. ಸಂಘಪರಿವಾರವು ಕೋಮು ವಿಷಬೀಜವನ್ನು ಬಿತ್ತಿ ಕೇರಳದಲ್ಲಿ ಇರುವ ಧಾರ್ಮಿಕ ಸೌಹಾರ್ದತೆಯ ವಾತಾವರಣವನ್ನು ಕದಡಲು ಪ್ರಯತ್ನಿಸುತ್ತಿದೆ.
ಸಂಘಪರಿವಾರದ ಪ್ರಯತ್ನ ಮತ್ತು ಪರೀಕ್ಷಿತ ತಂತ್ರಗಳು ಕೇರಳದಲ್ಲಿ ಫಲ ನೀಡಲಿಲ್ಲ ಮತ್ತು ಆದ್ದರಿಂದ ಅವರು ಸುಳ್ಳು ನಿರೂಪಣೆಗಳನ್ನು ಅವಲಂಬಿಸಿರುವ ಚಲನಚಿತ್ರಗಳ ಮೂಲಕ ತಮ್ಮ ವಿಭಜನೆಯ ರಾಜಕೀಯವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ. ಸಂಘ ಪರಿವಾರದ ಇಂತಹ ದೊಡ್ಡ ಕಥೆಗಳಿಗೆ ಯಾವುದೇ ಆಧಾರ ಅಥವಾ ಪುರಾವೆಗಳಿಲ್ಲ. ಕೇರಳದಲ್ಲಿ 32,000 ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಮತ್ತು ಇಸ್ಲಾಮಿಕ್ ಸ್ಟೇಟ್ಗೆ ಸೇರ್ಪಡೆಗೊಳಿಸಲಾಗಿದೆ ಎಂಬುದು ಸಂಪೂರ್ಣ ಸುಳ್ಳು. ಇಂಥದ್ದೊಂದು ಕಥೆ ಸಂಘಪರಿವಾರದ ಸುಳ್ಳು ಕಾರ್ಖಾನೆಯ ಉತ್ಪನ್ನ.
-ಅರೆಯೂರು ಚಿ.ಸುರೇಶ್
ಲೇಖಕರು, ಪತ್ರಕರ್ತರು
ತುಮಕೂರು ಮೊಬೈಲ್: 7090564603
ಕಥೆ: ಪ್ರೀತಿಸಿದವಳು ಸಿಗದಿರಲಿ!
ಕೊನೆಗೂ ಅವಳು ತಿರುಗಲಿಲ್ಲ.
ನೀನು ನೋಡುತ್ತಿದ್ದೆ.. ಕವಲು ದಾರಿಯಲ್ಲವಳು ತಿರುಗಿ ಮರೆಯಾಗುವವರೆಗೂ ನೋಡುತ್ತಿದ್ದೆ. ಜಗತ್ತಿನ ಮತ್ಯಾವ ಹೆಣ್ಣಿಗೂ ಇಲ್ಲದ ಆ ಮುದ್ದು ಜಡೆಯನ್ನು ತೂಗಾಡಿಸುತ್ತಾ ನಡೆದುಹೋದ ಮೊಲದಂತಹ ಆ ಹುಡುಗಿ ನಡೆಯುತ್ತಲೇ ಇದ್ದಳು. ಯಾವುದೋ ದೂರ ತೀರಕ್ಕೆ ಹೊರಟ ಹಡಗಿನಂತೆ.. ಆಳ ಕಣಿವೆಯೊಳಕ್ಕೆ ಕೈಜಾರಿ ಉರುಳುತ್ತಿರುವ ನವಿಲುಗರಿಯಂತೆ.. ಇನ್ನೆಂದೂ ಮರಳದ ಸೌಭಾಗ್ಯದಂತೆ... ಕಣ್ಣೆದುರೇ ತೊರೆದುಹೋಗುತ್ತಿರುವ ಪ್ರಾಣದಂತೆ...
ಅವಳು ನಡೆಯುತ್ತಲೇ ಇದ್ದಳು.
ಕೆಲವೇ ನಿಮಿಷದ ಕೆಳಗೆ ಕೊಂಚ ಕೈ ಚಾಚಿದರೂ ಸಿಕ್ಕುಬಿಡುವಷ್ಟು ಸಮೀಪದಲ್ಲಿದ್ದ ಹುಡುಗಿ.. ಕಳೆದ ಎಷ್ಟೋ ವರ್ಷದ ಅಸಂಖ್ಯಾತ ನಿಮಿಷಗಳಿಂದ ನೀನು ಧ್ಯಾನಿಸುತ್ತಲೇ ಬಂದಿರುವ ಹುಡುಗಿ... ಯಾರೆಂದರೆ ಯಾರನ್ನೂ ತನ್ನ ಹತ್ತಿರ ಬಿಟ್ಟುಕೊಳ್ಳದ ಹುಡುಗಿ.. ನಿನ್ನೊಂದಿಗೆ ಮಾತ್ರ ಅದೊಂದು ತೆರನಾದ ಆತ್ಮೀಯತೆಯಿಂದಿದ್ದ ಹುಡುಗಿ.. ನೀನು ಮಾತುಬಿಟ್ಟ ಆ ಸಂಜೆ 'ಯಾಕೆ ನನ್ನೊಂದಿಗೆ ಮಾತಾಡ್ತಿಲ್ಲ?' ಎಂದು ಅಳುಮುಖ ಮಾಡಿಕೊಂಡು ನಿಂತಿದ್ದ ಹುಡುಗಿ.. ನೂರು ಗೆಳತಿಯರ ನಡುವಿನಿಂದಲೂ ನಿನಗೆ ಮಾತ್ರವೇನೋ ಎಂಬಂತಹ ಮುಗುಳ್ನಗು ಬೀರಿದ್ದ ಹುಡುಗಿ.. ಸೀರೆಯುಟ್ಟ ದಿನ ಸಾಕ್ಷಾತ್ ದೇವತೆಯಂತೆ ಕಂಗೊಳಿಸಿದ್ದ ಹುಡುಗಿ..
ಮೊಟ್ಟ ಮೊದಲ ಬಾರಿಗೆ ಖುಷಿಯಲ್ಲಿಯೂ ನಿನ್ನ ಕಣ್ತುಂಬಿಬರುವಂತೆ ಮಾಡಿದ್ದ ಹುಡುಗಿ...
ಅವಳು ಕೊನೆಗೂ ನಿನಗೆ ಸಿಗಲಿಲ್ಲ.
ನೀನವಳನ್ನು ಮರೆಯಲೂ ಇಲ್ಲ.
**************
ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಯಾರದೋ ಮದುವೆಯ ಸ್ವಾಗತ ಫಲಕ.. ನೋಡುತ್ತಿದ್ದಂತೆಯೇ ಎದೆಯೊಳಗೆ ಸಾವಿರ ವೋಲ್ಟ್ ವಿದ್ಯುತ್ ಹರಿದ ಅನುಭವ. ಹತ್ತಾರು ಹೂಗಳನ್ನು ಒಂದಕ್ಕೊಂದು ಪೋಣಿಸಿ ಬರೆದಿರುವ ಆ ಫಲಕದಲ್ಲಿರುವ ಮದುಮಗಳ ಹೆಸರು... ಅದು ಅವಳದೇ! ನಿನಗೆ ಗೊತ್ತು: ಹೆಸರು ಅವಳದಾದ ಮಾತ್ರಕ್ಕೆ ಮದುಮಗಳೂ ಅವಳೇ ಆಗಬೇಕಿಲ್ಲ. ಆದರೂ ಭಯ ನಿನಗೆ! ಒಮ್ಮೆ ಕಲ್ಯಾಣ ಮಂಟಪದೊಳಗೆ ಇಣುಕಿ ನೋಡುವ ಕಾತುರ ಅಲ್ವಾ? ಒಂದುವೇಳೆ ಅವಳೇ ಆಗಿದ್ದರೆ? ಇರಬಹುದು.. ಅವಳೇ ಇರಬಹುದು.. ನೀನು ಏನು ತಾನೇ ಮಾಡಬಲ್ಲೆ? ಕನಸಿನಲ್ಲಿ ನೀನು ನೂರು ಬಾರಿ ಹಿಡಿದು ನಡೆದಿದ್ದ ಆ ಕೈಗಳನ್ನು ಇನ್ಯಾರದೋ ಕೈಗಳೊಂದಿಗೆ ಬೆಸೆದು ನಿಂತಿರುವವಳ ಮೇಲೆ ನಾಲ್ಕು ಅಕ್ಷತೆಕಾಳುಗಳನ್ನು ಹಾಕಿ ಆಶೀರ್ವದಿಸುವುದಲ್ಲದೆ.. 'ಹ್ಯಾಪಿ ಮ್ಯಾರೀಡ್ ಲೈಫ್' ಎಂದು ಹಾರೈಸುವುದಲ್ಲದೆ.. ಇರುಳ ಚಾದರದ ತುಂಬಾ ನಿರ್ನಿದಿರೆಯ ಹೊದ್ದುಕೊಂಡು ಹೊರಳಾಡುವುದಲ್ಲದೆ.. 'ಯಾಕೆ ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೇ ಹೋದೆ?' ಎಂದು ಅವಳ ಹಳೆಯ (ನಿರ್)ಭಾವ ಚಿತ್ರವನ್ನು ಪ್ರಶ್ನಿಸುವುದಲ್ಲದೆ...
ಹೇಳು... ಇನ್ನೇನು ತಾನೇ ಮಾಡಬಲ್ಲೆ?
ಸಾಧ್ಯವಿದೆ..
ಎಲ್ಲಿಗೋ ಹೋಗುತ್ತಿರುವಾಗ ಎಲ್ಲಿಂದಲೋ ಅವಳ ಹೆಸರು ಕೇಳಿಬಂದಾಗ ರಸ್ತೆಯ ನಟ್ಟನಡುವೆ ಥಟ್ಟನೆ ನಿಂತುಬಿಡಬಹುದು. ಹಿಂದೊಮ್ಮೆ ಜೊತೆಯಾಗಿ ನಡೆದ ದಾರಿಯುದ್ದಕ್ಕೂ ಮತ್ತೆ ಮತ್ತೆ ನಡಯುತ್ತಾ ಅವಳ ಹೆಜ್ಜೆಗಳನ್ನು ಹುಡುಕಬಹುದು. ಅವಳ ನೆನಪುಗಳೇ ತುಂಬಿರುವ ಹಾಡೊಂದನ್ನು ಕೇಳಿ ಕೇಳಿ ತಣಿಯಬಹುದು. ನಡೆದದ್ದೆಲ್ಲವೂ ಸುಳ್ಳಾಗಿ, ಅವಳು ಮತ್ತೆ ನಿನ್ನವಳೇ ಆಗಿ ಬಳಿಬಂದಂತೆ ಕನಸು ಬಿದ್ದ ಆ ಬೆಳಗಿನ ಜಾವವೊಂದರಲ್ಲಿ ಹೊದ್ದ ಹೊದಿಕೆಗಷ್ಟೇ ತಿಳಿಯುವಂತೆ ಮುಗುಳ್ನಗಬಹುದು. ಕಂಡದ್ದು ಕನಸೆಂದು ಅರಿವಾದ ಮರುಕ್ಷಣ ಬದುಕೇ ಕಳೆದು ಹೋದಂತೆ ಮಂಕಾಗಬಹುದು. ಗಂಡನ ಹೆಗಲು ತಬ್ಬಿ ನಿಂತವಳನ್ನು ಫೋಟೋವೊಂದರಲ್ಲಿ ನೋಡಿ ಜಗತ್ತಿನ ಮತ್ಯಾರಿಗೂ ಅರ್ಥವಾಗದ ವೇದನೆಯಲ್ಲಿ ಮಮ್ಮಲ ಮರುಗಬಹುದು...
ಇನ್ನೂ ಏನೇನೋ ಸಾಧ್ಯವಿದೆ!
**************
ಯಾರು ಹೇಳಿದ್ದು ಪ್ರೀತಿಸಿದವರು ಸಿಗಲೇಬೇಕು ಅಂತ?
ಒಮ್ಮೆ ಯೋಚಿಸಿ ನೋಡು? ಅವಳು ನಿನಗೆ ಸಿಕ್ಕಿದ ಮರುಕ್ಷಣ ಅವಳ ಊರಿನ ಹೆಸರು ನಿನ್ನೆದೆಯೊಳಗಿದ್ದ ತನ್ನ ಹಿಂದಿನ ವಿಶೇಷತೆಯನ್ನು ಕಳೆದುಕೊಳ್ಳುತ್ತದೆ. ಅವಳ ಪ್ರೀತಿಗಾಗಿ ಹಂಬಲಿಸಿದ ಕ್ಷಣಗಳು ಒಂದೊಂದಾಗಿ ಮರೆತುಹೋಗುತ್ತವೆ. 'ಅವಳು' ಎಂದ ಕೂಡಲೇ ಮೊಗ್ಗಂತೆ ನಾಚುವ ನಿನ್ನೀ ಗಾಢ ಆರಾಧನೆ ಕಡಿಮೆಯಾಗುತ್ತದೆ. ಮಗ್ಗುಲಲ್ಲೇ ಮಲಗಿರುವ ಮಡಿದಿ, ಅಂದೆಂದೋ ಮಿಂಚಿನಂತೆ ಬಳಿಸುಳಿದು ಮರೆಯಾದ ಪ್ರೇಯಸಿಯಂತೆ ಕಾಡಬಲ್ಲಳೇ? ಒಂದೊಂದು ದಿನವನ್ನೂ ಎಣಿಸುತ್ತಾ, ಕಾದು ಬರಮಾಡಿಕೊಂಡ ಅವಳ ಹುಟ್ಟಿದ ದಿನದಂದು ಎಂದೂ ಹೋಗದ ದೇವಸ್ಥಾನಕ್ಕೆ ಹೋಗಿ "ಅವಳು ಖುಷಿಯಾಗಿರಲಿ ದೇವರೇ" ಎಂದು ಕಣ್ಮುಚ್ಚಿ ಪ್ರಾರ್ಥಿಸುವ ಆ ನಿರ್ಮಲ ಕ್ಷಣ ಮುಗಿದೇ ಹೋಗುತ್ತದೆ. ಸಿಕ್ಕುವುದು ಹಾಗೂ ದಕ್ಕುವುದು.. ಇವೆರೆಡರ ನಡುವಿನ ವ್ಯತ್ಯಾಸ ನಿನಗೆ ಗೊತ್ತಿಲ್ಲ ಹುಚ್ಚಾ.. ಪ್ರೀತಿಸಿದವರು ಜೊತೆಗಿಲ್ಲವೆನ್ನುವುದು ಅವರನ್ನು ಅಪಾರವಾಗಿ ಪ್ರೀತಿಸುವುದಕ್ಕೆ ನಿನಗಿರುವ ದಿವ್ಯ ನೆಪ. ನಿಜ ಹೇಳಬೇಕೆಂದರೆ ಅವಳೇನಾದರೂ ಸಿಕ್ಕಿದ್ದರೆ ಎಷ್ಟು ಪ್ರೀತಿಸುತ್ತಿದ್ದೆಯೋ ಅದಕ್ಕಿಂತ ಹತ್ತು ಪಟ್ಟು ಮಿಗಿಲಾಗಿದೆ ನಿನ್ನೀ ಪ್ರೇಮ.. ಪ್ರೀತಿ ಹಾಗೂ ಪ್ರೀತಿಸುವವರು- ಇವೆರೆಡೂ ಒಟ್ಟಾಗಿರುವ ಸಂದರ್ಭಗಳು ತುಂಬಾ ಕಡಿಮೆ.
**************
ಮೊದಲೇ ಹೇಳಿಬಿಡ್ತೀನಿ, ನೀನು ಹೀಗೆ ಅವಳನ್ನು ಹಚ್ಚಿಕೊಂಡಿರುವುದರಲ್ಲಿ ಅವಳ ತಪ್ಪು ಕೊಂಚವೂ ಇಲ್ಲ. ಸಂತೆಯ ಜಂಗುಳಿಯಲ್ಲಿ ಎದುರಿಗೆ ಬರುವ ಸಾವಿರಾರು ಅನಾಮಿಕರಂತೆಯೇ ಕಣ್ಮುಂದೆ ಹಾದವಳು ಅವಳು; ಆದರೆ ಅವಳ ಹೆಸರು ತಿಳಿದುಕೊಂಡು, ಅವಳು ನಿನಗೆ ಹೀಗೆ ಎದುರಾಗಿ ಸಿಕ್ಕ ಕಾಕತಾಳೀಯಕ್ಕೆ ಯಾವ್ಯಾವುದೋ ಜನ್ಮಗಳ ಲಿಂಕ್ ಕೊಟ್ಟು, ಅವಳು ಹೆಜ್ಜೆ ಹಾಕುತ್ತಿರುವ ಹಾದಿಯ ಆಚೆ ತುದಿ ನಿನ್ನ ಬದುಕಿನ ಬಾಗಿಲೇ ಎಂದು ಭ್ರಮಿಸಿ, ಈ ಎಲ್ಲ ಪ್ರಹಸನಗಳಿಗೂ 'ಪ್ರೀತಿ' ಎಂಬ ಚಂದದ ಹೆಸರುಕೊಟ್ಟ ಅಧಿಕ ಪ್ರಸಂಗಿ ನೀನೇ. ಅವಳು ಅಂತಹಾ ಸುಂದರಿಯೇನಲ್ಲ; ಆದರೆ ಹಾಗಂತ ಒಪ್ಪಿಕೊಳ್ಳುವುದಕ್ಕೆ ನಿನಗಿಷ್ಟವಿಲ್ಲ. ಅಥವಾ ಆ ಸತ್ಯ ನಿನಿಗೆ ಗೊತ್ತೇ ಇಲ್ಲ! ಹೆಣ್ಣಿನ ಸ್ನೇಹವೆಂದರೇನೆಂದೇ ಗೊತ್ತಿಲ್ಲದ, ಅವಳ ಮುಗುಳ್ನಗು ಮಾತ್ರದಿಂದಲೇ ಹುಟ್ಟಿಕೊಳ್ಳುವ ಆ ನವಿರು ಪುಳಕಗಳನ್ನು ಹಿಂದೆಂದೂ ಅನುಭವಿಸಿರದ, ಮುಡಿದ ಹೆಣ್ಣಿನಿಂದಾಗಿ ಹೂವು ಸುಂದರವಾಯಿತೇ ಹೊರತು, ಹೂವಿನಿಂದ ಹೆಣ್ಣು ಸುಂದರವಾಗಿದ್ದಲ್ಲವೆನ್ನುವ ಪರಮ ಸತ್ಯವನ್ನು ಈಗಷ್ಟೇ ತಿಳಿದುಕೊಳ್ಳುತ್ತಿರುವ ನಿನ್ನೀ ಗಂಡು ಹೃದಯವನ್ನು ಪ್ರೀತಿಯಲ್ಲಿ ಬೀಳಿಸುವವಳು ತ್ರಿಪುರ ಸುಂದರಿಯೇ ಆಗಿರಬೇಕಿಲ್ಲ,
ಆಕೆ ಹೆಣ್ಣಾಗಿದ್ದರೆ ಸಾಕು.
ಅವಳು ಮಾಮೂಲಾಗಿಯೇ ನೋಡಿದಳು. ನಿನ್ನ ಎದೆಯಲ್ಲಿ ಮಿಂಚು ಹರಿಯಿತು. ಅವಳು ತನ್ನ ಕಪ್ಪು ಮಲ್ಲಿಗೆಯಂತಹಾ ಜಡೆಯನ್ನು ಕತ್ತಿನ ಮುಂಭಾಗದಲ್ಲಿ ಇಳಿಬಿಟ್ಟುಕೊಂಡಳು. ನಿನ್ನ ಹೃದಯ ಬಡಿತವೊಂದನ್ನು ಸ್ಕಿಪ್ ಮಾಡಿತು. ಅವಳು ಸೀರೆಯುಟ್ಟು ಕಣ್ಮುಂದೆ ಹಾದಳು. ಅಂದು ರಾತ್ರೆಯಿಡೀ ನೀನು ನಿದ್ರಿಸಲಿಲ್ಲ. ಅವಳೊಮ್ಮೆ ನಿನ್ನೆಡೆಗೆ ನೋಡಿ ಮುಗುಳ್ನಕ್ಕಳು...
ಆ ದಿವ್ಯ ಘಳಿಗೆಯನ್ನು ನೀನು ಮತ್ತೆಂದೂ ಮರೆಯಲೇ ಇಲ್ಲ.
**************
ಹೇಗೆ ತಾನೇ ಒಪ್ಪಿಯಾಳು ನಿನ್ನ?
ನಿನಗೆ ಗೊತ್ತಾ.. ಅವಳ ಕನಸಿನಲ್ಲಿ ಬರುವ ರಾಜಕುಮಾರ ಅದೆಷ್ಟು ಸುಂದರನೆಂಬುದು? ಬಡತನವನ್ನೇ ಹಾಸಿ ಹೊದ್ದವಳು ಕಲ್ಪನೆಯಲ್ಲಿ ಕಟ್ಟಿಕೊಂಡ ಅರಮನೆಯ ಒಂದು ಮೆಟ್ಟಿಲನ್ನೂ ಕಟ್ಟಲಾರೆ ನೀನು! ಇದ್ದಿರಬಹುದು, "ನಂಗೆ ಪಪ್ಪ ಇಲ್ಲ" ಎಂದು ವಿಷಾದದಿಂದ ಹೇಳಿಕೊಂಡವಳ ಎದೆಯೊಳಗೆಲ್ಲೋ ನಿನ್ನ ಬಗ್ಗೆ ಸೆಳೆತದ ಅಲೆಯೊಂದು ಎದ್ದಿರಬಹುದು. ಅಂದ ಮಾತ್ರಕ್ಕೇ ಅದು ಪ್ರೇಮವೇ ಆಗಬೇಕಿಲ್ಲ. ಅವಳನ್ನು ಪ್ರೀತಿಸುವವರು ಹಲವರು. ಆದರೆ ಅವಳಿಂದ ಪ್ರೀತಿಸಲ್ಪಟ್ಟವರು? ಅಷ್ಟಕ್ಕೂ ಅವಳು ಅರ್ಥವಾಗಿದ್ದಾದರೂ ಯಾರಿಗೆ ಹೇಳು? ಕಾಳಜಿಯ ನಾಟಕವಾಡಿ, ಪ್ರೀತಿಸುವೆನೆಂದು ನಂಬಿಸಿ ಘಾಸಿಗೊಳಿಸಿದ ಅವನಿಗೆ ಅರ್ಥವಾದಳೇ? ಹಿಂದಿನಿಂದ ಆಡಿಕೊಂಡು ನಕ್ಕ ಗೆಳೆಯ-ಗೆಳತಿಯರಿಗೆ ಅರ್ಥವಾದಳೇ? ತಂದೆಯಿಲ್ಲದ ಅವಳು ತಮಗೇ ಸೇರಬೇಕೆಂದು ಹಕ್ಕು ಚಲಾಯಿಸಿದ ಬಂಧುಗಳಿಗೆ ಅರ್ಥವಾದಳೇ?
ಬಿಡು.. ಅವಳು ಯಾರಿಗೂ ದಕ್ಕುವಳಲ್ಲ. ಅವಳ ಪಾಡು ಅವಳಿಗಿರಲಿ..
**************
ಫೋನಿನಲ್ಲಿರುವ, ಪ್ರೊಫೈಲ್ ಫೋಟೋ ಕಾಣದ ಅವಳ ವಾಟ್ಸಾಪ್ ಖಾತೆ ಹಾಗೇ ಉಳಿದುಬಿಡಲಿ. ಎಲ್ಲ ಡಿಲೀಟ್ ಮಾಡಿದ ಮೇಲೂ ಗ್ಯಾಲರಿಯ ಮೂಲೆಯೊಂದರಲ್ಲಿ ಉಳಿದು ಹೋದ, ಅವಳು ನಗುತ್ತಾ ನಿಂತಿರುವ ಆ ಚಿತ್ರ ಅಳಿಯದಿರಲಿ. ವಿಳಾಸದ ಕಾಲಂನಲ್ಲಿ ನೀನು 'ಅವಳಿಗೆ' ಎಂದು ಬರೆದಿಟ್ಟುಕೊಂಡಿರುವ ಪತ್ರಗಳು ಅವಳನ್ನೆಂದೂ ತಲುಪದಿರಲಿ. ಮುಂದೆಂದೋ ಹುಟ್ಟಲಿರುವ ನಿನ್ನ ಮಗಳಿಗೆ ಇಡಬೇಕಾದ ಅವಳ ಆ ಮುದ್ದು ಹೆಸರು ಅಲ್ಲಿ, ಇಲ್ಲಿ, ಎಲ್ಲೆಲ್ಲಿಂದಲೂ ಕೇಳಿಬಂದು ನಿನ್ನನ್ನು ಕಾಡುತ್ತಿರಲಿ..
ಪ್ರೀತಿಸಿದವಳು ಸಿಗದಿರಲಿ...
-ಅಚಿಸು, ತುಮಕೂರು
9972189131
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)