ಸೋಮವಾರ, ಏಪ್ರಿಲ್ 28, 2025

ಕಥೆ: ಗೌರಿ

18 ಮೇ 2025ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ಕಥೆ
 



ಕಿಕ್ಕಿರಿದ  ಜನರ  ನೂಕುನುಗ್ಗಲು  ಮಧ್ಯೆ  ನುಸುಳಿ  ಹೇಗೋ  ಸೀಟ್  ಹಿಡಿದ  ಕೇಶವನಿಗೆ  ಹೋದ   ಉಸಿರು  ಬಂದಂತಾಯಿತು.ಜೀವನದಲ್ಲಿ  ಸದಾ  ಹೊಸತನ  ಬಯಸುವ  ಸಾಹಸಗಾರ  ಹೋರಾಟ  ಮನೋಭಾವದ  ಬಿಸಿ  ರಕ್ತದ  ಯುವಕನಿಗೆ  ಶುರುವಿನಲ್ಲೇ  ಎದುರಾದ  ಇರುಸು  ಮುರುಸನ್ನು  ಕಿತ್  ಒಗೆಯುವಂತೆ  ಜನಜಂಗುಳಿಗೆ  ಸಿಕ್ಕಿ  ಮುದ್ದೆಯಾದ  ತನ್ನ ಇಸ್ತ್ರಿ  ಮಾಡಿದ   ಬಿಳಿ  ಅಂಗಿಯ ವಿಶ್ವಾಸದಿಂದ  ಕೊಡವಿದ.ದಕ್ಕಿಸಿಕೊಂಡ  ಒಂದು  ವಾರದ  ರಜೆಯನ್ನು  "ಈ   ಬಾರಿ  ಹಳ್ಳಿಯಲ್ಲಿ  ಕಳಿಯುವೆ"  ಅಂದು, ಮನೆಯವರಿಗೆಲ್ಲಾ  ಆಶ್ಚರ್ಯವನ್ನುಂಟು  ಮಾಡಿದ್ದ  ಕೇಶವ  ಬಸ್  ಏರಿ  ಹೊರಟಿರುವುದು ತನ್ನ  ಹುಟ್ಟೂರಿಗೆ.ಯುಗಾದಿ  ಹಬ್ಬಕ್ಕೆಂದು   ಊರುಗಳಿಗೆ  ಹೊರಟವರ  ಸಂಕೆ  ಎಂದಿಗಿಂತಲೂ  ಹೆಚ್ಚಿದ್ದರಿಂದ  ಕಡಿಬಕ್ಕೆ  ಪ್ರಯಾಣಿಕರನ್ನು ಒಯ್ಯುತ್ತಿದ್ದ  ಆ  ಬಸ್  ನವಮಾಸದ  ಗರ್ಭಿಣಿಯಂತೆ  ಮಂದ ಗತಿಯಲ್ಲಿ  ಸಾಗುತಿದೆ.



ಇತ್ತ  ಪಕ್ಕದ  ಸೀಟಿನಲ್ಲಿ   ತೂಕಡಿಸುತ್ತಿದ್ದ  ಇಳಿ  ವಯಸಿನ  ದಡೂತಿ  ಸಾಹೇಬರು, ಕೇಶವನ  ಮೈಯಿಗೆ  ಪ್ರತಿ ಬಾರಿ ಒರಗಿದಾಗ  ಅವನ  ತೊಡೆಗೆ  ಒತ್ತುತ್ತಿದ್ದ   ಕಾರ್ ಕೀ  ಬಾಲ್ಯದಂತೆ   ಊರಿಗೆ  ಬಸ್ಸಿನಲ್ಲೇ   ತೆರಳಬೇಕೆನ್ನುವ  ಆತನ   ನಿರ್ಧಾರವನ್ನು   ಅಣಿಕಿಸಿ   ಅದರ  ಫಲವಾಗಿ  ಪ್ರಾಪ್ತಿಸಿದ  ಅವಸ್ಥೆ   ನೋಡಿ  ಚುಚ್ಚಿ  ಚುಚ್ಚಿ   ಗಹಗಹಿಸಿದಂತಿದೆ.ಆದರೆ  ಅವನಿಗ್ಯಾಕೋ  ನೋವಿನಲ್ಲೂ  ಹಿತಾನುಭವ. ಕೀ ಯನ್ನ ತನ್ನ  ಜೇಬಿನಿಂದ  ತೆಗೆಯುವ ಮನಸಿರಲಿಲ್ಲ.ಆಗಾಗ   ಜೋತು  ಬೀಳುತ್ತಿದ್ದ  ಸಾಹೇಬರ  ಕುತ್ತಿಗೆಯ ತಾಳಕ್ಕೆ  ಮೂಗಿನ  ತುದಿಯವರೆಗು  ಜಾರಿ ಬರುತ್ತಿದ್ದ   ಕನ್ನಡಕವು  ತನ್ನ  ಮೂಗು  ತುದಿಯ  ಕೋಪದ  ಅಜ್ಜನ  ನೆನಪಿಸಿರಬೇಕು.ಹಾಗಾಗಿ ಅವರ  ನಿದ್ರೆಗೆಡಿಸುವ  ಉಸಾಬರಿಗೂ  ಹೋಗಲಿಲ್ಲ ಆತ. ಹಿಂದಿನ  ಸೀಟಿನಲ್ಲಿ  ಕಂಕುಳಿಗೆ  ಮಗುವನ್ನೆರಿಸಿಕೊಂಡು   ಬಾಳೆ  ಹಣ್ಣು   ತಿನ್ನಿಸುತ್ತಾ  ಮಗುವಿನ ಭಾಷೆಯಲ್ಲಿ  ಸಂವಾದಿಸುತಿರೋ ಹೆಂಗಸು  ಕೇಶವನಿಗೆ ತನ್ನಜ್ಜಿಯ ಮನೆಗೆ  ಬಂದೊಗುತ್ತಿದ್ದ   ಸಾವಿತ್ರಿ  ಅತ್ತೆಯಂತೆ  ಕಂಡಳು.ಎದುರಿನ  ಸೀಟಿನಲ್ಲಿ  ಬಾಲ್  ಆಡುತ್ತಿರುವ ಮಕ್ಕಳು  ಅವರನ್ನ ಗದರಿಸುತ್ತಿದ ವ್ಯಕ್ತಿ  ಮೂಲೆ ಮನೆಯ  ರಂಗಜ್ಜ  ಮತ್ತವನ  ಮೊಮ್ಮಕಳಲ್ಲವೇ? ಛೆ ಅವರಾಗಿರಲಿಕಿಲ್ಲ! ಅವರೆಲ್ಲ ಇಲ್ಲಿಗೇಕೆ  ಬರುತ್ತಾರೆ?ಅದು  ಅಲ್ಲದೆ  ರಂಗಜ್ಜನಿಗೆ  ಸಾವಿತ್ರತ್ತೆಗೆ  ವಯಸಾಗಿ  ಯಾವ್  ಕಾಲವಾಯ್ತು  ಬದುಕಿದ್ದಾರೋ  ಸತ್ತಿದ್ದರೋ ಎಂಬುದು   ನಿರ್ದಿಷ್ಟವಾಗಿ  ತಿಳಿದಿಲ್ಲ  ಅಂದುಕೊಂಡು  ಸುಮ್ಮನಾದ.


 ಕಿತ್ತಿಟ್ಟ  ಹೆಜ್ಜೆಯ  ಸಾಗಿ  ಬಂದ  ದಾರಿಯ  ಮತ್ತೆ  ಮೆಟ್ಟಿದಾಗಲೇ  ಜೀವನ  ನಿಜ  ಸ್ವರೂಪದಲ್ಲಿ  ಎಷ್ಟೊಂದು ಬದಲಾಗಿದೆ ಅನ್ನೋ  ವಾಸ್ತವತೆಯ  ಪರಿಚಯವಾಗೋದು. ಅಂತಹ ಬದಲಾವಣೆಯ ಅರಿಯುವ,ಸದ್ರುಷ್ಯವಾಗಿಸುವ ಹುಮ್ಮಸ್ಸಿನಿಂದ ಸಾಗಿತ್ತು  ಕೇಶವನ  ಪಯಣ.ಬಸ್ಸಿನ  ಚಕ್ರ  ಮುಂದಕ್ಕೆ  ತಿರುಗಿ  ತಿರುಗಿ  ಸಾಗಿದಂತೆ  ಕೇಶವನ  ನೆನಪಿನ  ಚಕ್ರ  ಹಿಂದಕ್ಕೆ  ತಿರುಗಿ  ತಿರುಗಿ ತಂದು  ನಿಲ್ಲಿಸಿದ್ದು  ಅಜ್ಜನ  ಮನೆಯ  ಎದುರು.

*

ಕೇಶವ  ಹುಟ್ಟಿದಾಗ  ಅವನ  ತಾಯಿಗೆ  ಬಾಣಂತಿ  ಸನ್ನಿ  ಬಡಿದ್ದಿದ್ದರಿಂದ  ಅಳಿಯನಿಗೆ  ಅವಳನ್ನು  ಮಗುವನ್ನು  ಸಂಭಾಳಿಸಲು ಕಷ್ಟವಾಗಬಹುದೆಂದು ಅಜ್ಜ ಅವರಿಬ್ಬರನ್ನು  ಕೆಲ ವರುಷಗಳು  ಕಡಿಬದಲ್ಲೇ  ಇರಿಸಿಕೊಂಡಿದ್ದರು.ತಂದೆ ವಾರಕೊಮ್ಮೆ ಬಂದು ಹೋಗಿ ಮಾಡುತ್ತಿದ್ದ.ಊರಿನ  ಪ್ರತಿಯೊಂದು  ಮರ  ಗಿಡಕ್ಕೂ  ಪಾರಿಜಾತ  ಹೂವಿನ ಸುತ್ತ  ಬೆಸ್ತು  ತಿರುಗುತ್ತಿದ್ದ  ಚಿಟ್ಟೆಗೂ   ಹೊಳೆಯಲ್ಲಿ  ಈಜುತಿದ್ದ   ಮೀನುಗಳಿಗೂ  ಬಂಡೆ  ಅಡಿಯಿಂದಲೇ ಮಿರಿ ಮಿರಿ ಇಣುಕುತ್ತಿದ್ದ  ಏಡಿಗೂ ಪುಟ್ಟ  ಕೇಶವ  ಚಿರಪರಿಚಿತ  ಮುಖ.ಅದರಲ್ಲೂ  ತೋಟದ  ಕೆಲಸಕ್ಕೆಂದು   ನೇಮಿಸಿಕೊಂಡ  ಹರಿಜನ  ಕೇರಿಯ  ಮುಬ್ಬನ  ಸಣ್ಣ  ವಯಸಿನ  ಹೆಂಡತಿ  ಗೌರಿ  ಕಂಡರೆ  ಎಲ್ಲಿಲ್ಲದ  ಆತ್ಮೀಯತೆ ಪ್ರೀತಿ. 


ಗೌರಿ ತಿಳಿಗೆಂಪು  ಮೈಬಣ್ಣದ  ಸಣ್ಣ  ನಡುವಿನ  ಮುದ್ದು  ಮೋರೆಯ ಜಿಂಕೆ  ಕಣ್ಣಿನ ಮುಗ್ದ ಹುಡುಗಿ .ಆಕೆಯ ಚಪ್ಪಟೆ  ಮೂಗಿಗೆ  ಬೆಸೆದುಕೊಂಡಿದ್ದ  ಚಂದ್ರ  ಬಣ್ಣದ  ಕಲ್ಲಿನ  ಮೂಗುತ್ತಿಯಷ್ಟೇ   ಶುಭ್ರ ವ್ಯಕ್ತಿತ್ವದ  ಚೆಲುವಿ ಅವಳು.ಅವಳ  ವಾರಿಗೆಯ   ಹುಡುಗಿಯರೆಲ್ಲಾ   ಜುಟ್ಟು  ಕುಣಿಸುತ್ತಾ  ಬಿನ್ನಾಣದ  ನಡು ಬಳುಕಿಸಿ  ಚೆಲ್ಲಾಟವಾಡಿಕೊಂಡಿದ್ದರೆ ಇವಳು  ಮಾತ್ರ  ತನ್ನುದ್ದದ ಕೂದಲನ್ನ  ಬಿಗಿದು ಗಂಟು  ಹಾಕಿ ಅದಕ್ಕೊಂದು ಮಲ್ಲೆ  ಹೂ ಸಿಕ್ಕಿಸಿಕೊಂಡು ನಡುವಿನಲ್ಲೂ  ನಡುವಳಿಕೆಯಲ್ಲೂ  ವಯಸ್ಸಿಗೆ ಮೀರಿದ ಗಾಂಭಿರ್ಯತೆ  ಕಾಪಾಡಿಕೊಂಡಿದ್ದಳು.ಮನಸಿನಂತೆ ಕೆಲಸದಲ್ಲೂ ಅಷ್ಟೇ ನಾಜೂಕು ಮಡಿಯ ಹುಡುಗಿ ಗೌರಿಯೇ ಒಂದು  ರೀತಿಯಲ್ಲಿ  ಸನ್ನಿ  ಹಿಡಿದ  ತಾಯಿ  ಮಗುವಿನ  ಆರೈಕೆ   ಮಾಡಿದ್ದು.ಮನೆ  ಒಳಕ್ಕೆ ಆಕೆಯ  ಸೇರಿಸಿಕೊಳ್ಳದಿದ್ದರು ಭಟ್ಟರ  ಮನೆಯಾಚೆಗಿನ  ಕಾರ್ಯಗಳಿಗೆ  ಇವಳದೇ ಉಸ್ತುವಾರಿಯಿತ್ತು. ವಯಿಸಿದ ಎಲ್ಲಾ  ಕೆಲಸಗಳನ್ನು  ತನ್ನ  ಒಡ  ಹುಟ್ಟಿದ  ಅಕ್ಕನ ಮನೆಯೆಂಬಂತೆ  ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು.ಯಾವ  ಹರಿಜನ  ಹೆಂಗಸಿಗೂ  ಸಿಗದ  ಭಟ್ಟರ  ಮಗುವಿನ  ಸಾಮಿಪ್ಯ  ಮಕ್ಕಳಿಲ್ಲದ  ಗೌರಿ ಪಾಲಿಗೆ  ದೊರಕಿದ್ದು  ತಿರುಕನಿಗೆ  ರಾಜ್ಯ  ಸಿಕ್ಕಿದಷ್ಟೇ  ಅತೀವ  ಹೆಮ್ಮೆ  ಖುಷಿ  ಕೊಟ್ಟಿತ್ತು.ಬಾನ ಚಂದಿರನ  ನೋಡಿ  ಆನಂದಿಸುವ  ಪ್ರೇಮಿಯಂತೆ  ಗೌರಿ  ಒಂದಡಿ  ದೂರದಿಂದಲೇ   ಕೇಶವನನ್ನು    ಮುದ್ದುಗರೆಯುತ್ತಿದ್ದಳು.ಅಂಗಳ,ತೋ
ಟದ  ಕೆಲಸದ  ನಡುವೆಯೂ  ಕೇಶವನ  ಆಟೋಪಾಚಾರಗಳನ್ನ ಅಸ್ವಾದಿಸುತ್ತಿದ್ದಳು.ಮೆಲ್ಲಗೆ ಯಾರು ಇಲ್ಲದಿದ್ದ ಸಮಯ ನೋಡಿಕೊಂಡು  ಮುತ್ತು ಕದಿಯುತ್ತಿದ್ದಳು.


 ಮದುವೆಯಾಗಿ  ನಾಲ್ಕು  ವರುಷಗಳಾದರೂ ಅವಳಿಗೆ ಮಕ್ಕಳಾಗಿರಲಿಲ್ಲ.ಗೌರಿ ಕೇಶವನನ್ನು ತೀರ ಮಗನಂತೆ ಅಚ್ಚಿಕೊಳ್ಳಲು ಆದುವು ಒಂದು ಪ್ರಮುಖ  ಕಾರಣವಾಗಿತ್ತು.ಮಗು  ಆಗಲಿಲ್ಲವೆಂದು  ಆಡಿಕೊಳ್ಳುತ್ತಿದ್ದ   ಸಮಾಜದ ನಾಲಿಗೆಗೆ  ಸಿಕ್ಕಿ ರೋಸಿ  ಹೋಗಿದ್ದ  ಗೌರಿಗೆ  ಮನೆಯಲ್ಲೂ  ಯಾವ  ನೆಮ್ಮದಿ ಪ್ರಾಪ್ತಿಯಾಗಲಿಲ್ಲ.ಕೆಡುಕ  ಗಂಡ  ದಿನ  ಕುಡಿದು  ಬಂದು  ಬಾಸುಂಡೆ   ಬರುವ  ಹಾಗೆ  ಹೊಡೆಯುತ್ತಿದ್ದ  ವಿಷಯವನ್ನು  ಸಂಕಟದಿಂದ  ಕೇಶವನ  ತಾಯಿಯೊಡನೆ  ತೋಡಿಕೊಂಡಾಗ  ಮುಬ್ಬನ  ಕರಿಸಿ  ಅಜ್ಜ  ಅದೆಷ್ಟು  ಬಾರಿ  ನ್ಯಾಯ  ತೀರ್ಮಾನ  ಮಾಡಿಸಿದರು  ಚಾಳಿ ಬಿಡದೆ  ದೌರ್ಜನ್ಯ  ನಿರಂತರವಾಗಿ   ಮುಂದುವರಿಸಿದ್ದನು .ಹೀಗೆ  ಮುಬ್ಬನ  ಕೈಯಿಂದ   ಬಡಿಸಿಕೊಂಡು ಆಗಾಗ ಜ್ವರವೇರಿ  ಮಲಗುತ್ತಿದ್ದ   ಗೌರಿಯು  ಮನೆ ಕಡೆ  ಬರದಿದ್ದಾಗ  ಏಳು  ವರುಷದ  ಕೇಶವ  ಮಕ್ಕಳ  ಕೂಡಿ  ಅಜ್ಜಿ  ಮನೆ  ಹಿಂದಿನಿಂದ  ಒಂದಷ್ಟು  ದೂರ  ಊರಿನಾಚೆ  ಮುಳ್ಳಿನ   ಕಾಲುದಾರಿಯಲ್ಲಿ  ಸಾಗಿ  ಅವಳ  ಸಂಸಾರ  ನೆಲೆನಿಂತ  ಕೇರಿ  ಮನೆಯೊಳಗೇ  'ಎಲ್ಲಿದಿಯೇ ಗೌರಿ ಯಾಕೆ ಮಲಗಿದ್ಯೆ?ಚೆಂಡಾಟ ಆಡೋಣ ಬಾ 'ಎಂದು ತುಂಟತನದಿಂದ ಆರ್ಭಟಿಸುತ್ತ  ಹೊಕ್ಕುತ್ತಿದ್ದ. ಹೀಗೆ  ಕೇರಿಗೆ  ಬಂದ್ದಿದ್ದು  ಹುಡುಗನ  ಕಡೆಯವರಿಗೆ  ತಿಳಿದರೆ  ಅವಳದೇ   ಕುಮ್ಮಕ್ಕು ಎಂದೆನಿಸಿ  ಅವನ್ನನ್ನು ಅವಳಿಂದ ಶಾಶ್ವತವಾಗಿ ದೂರ ಮಾಡಿಬಿಡುತ್ತಾರೆಂಬ  ಭಯದಿಂದ  ಆತನನ್ನು  ಆಲಂಗಿಸದೆ   'ಮೊದ್ಲು ಹೋಗ್ರಿ ಚಿಕ್ ಬುದಿ ಸಂಜಿ ಮನೆಕಡೆ ನಾನೆ ಬರ್ತೀನಿ' ಅಂತೇಳಿ  ಮನವೊಲಿಸಿ ವಲ್ಲದ  ಮನಸ್ಸಿಂದಲೇ  ಅವನ ಸಾಗ್ ಹಾಕುತ್ತಿದ್ದಳು. 

*


ಕೇಶವನ  ಮನೆ  ಕೆಲಸ  ಬಿಟ್ಟರೆ  ಗೌರಿ  ಹೆಚ್ಚು  ಸಮಯ  ಮೀಸಲಿಡುತ್ತಿದ್ದದ್ದು  ಆ  "ಜಲಪಾತಕ್ಕೆ".ಕೇಶವನ  ಅಜ್ಜನ  ಮನೆ  ಮತ್ತು  ಹೊಲಗೇರಿಯ  ಗಡಿಯಂತೆ ಅವೆರಡರ  ನಡುವಿನ ಸಾಮಾಜಿಕ ಅಂತರವನ್ನು  ಸಾರುವಂತೆ ಹರಿಯುತ್ತಿದ್ದ  ಹೊಳೆಯ  ಒಂದು  ಬದಿಯಲ್ಲಿದ್ದ  ಜಲಪಾತವದು. ಅದೇ  ಜಲಪಾತದಡಿ  ನಿಂತು ಗೌರಿ  ಗಂಗೆಗೆ  ಕೈ  ಮುಗಿದು  ಮಗುವಿಗಾಗಿ  ಪ್ರಾರ್ಥಿಸಿ ತಾಸುಗಟ್ಟಲೆ  ನೀರಿನಲ್ಲಿ  ಆಡುತ್ತಿದ್ದಳು.ನೀರಿನಿಂದ  ಎದ್ದು   ಬಂಡೆಯಾಚೆಗೆ   ನಡೆದಂಗೂ  ಗಂಟು  ತೆಗೆದ  ಆಕೆಯ  ಚೆಂಡಿ  ನೀಲಾಗೂದಳು ತೊಟ್ಟಿಕ್ಕುತ್ತಾ  ಬಂಡೆಗಳ  ಮೇಲಾಯ್ದು  ಆಕೆಯ  ಮನೆಗಿನ  ದಾರಿಯವರೆಗೂ  ಹನಿಚುಕ್ಕಿಯ  ಚಿತ್ತಾರ  ಬಿಡಿಸಿ  ಪುಟ್ಟ  ಮಕ್ಕಳನ್ನೆಲ್ಲಾ ತನ್ನೆಡೆಗೆ ಅಹ್ವಾನಿಸುತ್ತಿರುವಂತೆ  ಅನಿಸುತ್ತಿತ್ತು .


ಅಲ್ಲಿನ  ಆ ಜಲಪಾತ "ಗೌರಿ-ಜಾಲಪಾತ"ವೆಂದೆ ಪ್ರಸಿದ್ದವಾಗಿತ್ತು,ಜಲಪಾತ ನಿರ್ಮಿತ ಹೊಂಡ  ಅವಳದೇ  ಅವಿಷ್ಕಾರವೆಂದು  ಎಲ್ಲರೂ  ಮಾತಾಡಿಕೊಳ್ಳುತಿದ್ದರು.ಇನ್ನೂ  ಒಳಕ್ಕೆ   ಬಂಡೆ  ಜಿಗಿಯುತ್ತಾ   ಕಾಡಿನತ್ತ  ಡೊಂಕಿನ  ಹೆಜ್ಜೆ  ಹಾಕಿದರೆ  ಹಲವಾರು  ಚಿಕ್ಕ  ಪುಟ್ಟ  ಜಲಪಾತ  ಮಾದರಿಯ  ನೀರಿನ  ಹೊಂಡಗಳು  ಇದ್ದವು.ಆದರೆ  ಗೌರಿ ಜಲಪಾತ  ಅವೆಲ್ಲಕ್ಕಿಂತಲೂ ಎತ್ತರದ್ದು ವಿಸ್ತಾರವಾದದ್ದು.ಅದರ ಮೇಲಿನ ಬಂಡೆಗಳಿಂದ  ಪುಟಿ  ಪುಟಿದು ಹಾಲ್ನೊರೆಯಂತೆ ನೀರು ದುಮ್ಮುಕ್ಕುತಿತ್ತು. ಇಬ್ಬರು  ನಿಂತು  ಮೈ  ತಂಡಿ ಗೊಳಿಸಬಹುದಾದಷ್ಟು   ಜಾಗವನ್ನೋಳಗೊಂಡ್ದಿತ್ತು. 


ಸಾಮಾಜಿಕ ಗಡಿಯ ಅರಿವಿಲ್ಲದ ಪುಟ್ಟ ಬಾಲಕ  ಕೇಶವನಿಗೆ ಎಲ್ಲಾ ಗಡಿ ದಾಟುವ ಬಯಕೆ.ಗೌರಿ ಆಡುತ್ತಿದ್ದ   ಜಲಪಾತದಲ್ಲಿ  ತಾನು  ಮುಳುಗೇಳಾ ಬೇಕೆನ್ನೋ ಹುಚ್ಚು ಹಠ ಅವನದು.ಅದನ್ನು ಮನಗೊಂಡ ಅಜ್ಜ "ಗೌರಿಜಲಪಾತ  ನೀರು  ಮುಟ್ಟಿದರೆ  ಕೈಗೆ  ಬರೆ  ಹಾಕ್ತೀನಿ"  ಅಂದ್ದಿದ್ದ  ಮಾತನ್ನು  ಮೀರಿ  ಅಲ್ಲಿಗೆ  ಸುಮಾರು  ಬಾರಿ  ದೌಡಾಯಿಸಿದ್ದ.ಆದರೆ  ಗೌರಿ  ಸಿಟ್ಟಿನ ಯಜಮಾನ್ರು ಮಗುವಿಗೆ  ಏನ್ ಅನಾಹುತ  ಮಾಡಿಬಿಡುತ್ತಾರೋ ಎಂಬ ಭೀತಿಯಿಂದ  ಆತನನ್ನು   ಅವಳಲ್ಲಿರುವಷ್ಟು   ಸಮಯ  ಆಸು  ಪಾಸು  ಬಾರದಂತೆ  ತಡೆಯುತ್ತಿದ್ದಳು .

*

ಕೇಶವ ಎಂಟು ವರುಷದವನಿದ್ದಾಗ ಗೌರಿಗೆ ಒಂದು ಆಘಾತ ಕಾದಿತ್ತು.ಅಜ್ಜನ  ಮರಣದ  ಬಳಿಕ ಭಟ್ಟರ  ಸಂಸಾರ ಬೆಂಗಳೊರಿಗೆ ತೆರೆಳುವ ನಿರ್ಧಾರಕ್ಕೆ ಬಂದಿದ್ದರು.ಅದರಂತೆ ಅಜ್ಜಿ ಅಮ್ಮನೊಟ್ಟಿಗೆ ಅಪ್ಪನಿದ್ದ  ಬೆಂಗಳೂರಿನಲ್ಲಿ  ನೆಲೆಸಲು  ಹೊರಟಿದ್ದ  ಕೇಶವನ   ಅಗಲಿಕೆ  ತಾಳಲಾರದೆ  ಅವನಪ್ಪಿ  ಮುದ್ದಾಡುವ ಅವಕಾಶವಿಲ್ಲದೆ  ಗೌರಿ  ಎಡಬಿಡದೆ ಸುರಿಯುತ್ತಿದ್ದ  ಕಣ್ಣೀರಾ  ಮುಚ್ಚಿಡಲು  ಅಲ್ಲಿಂದ  ಹೊರಟವಳೇ  ಗೌರಿ ಜಲಪಾತದ  ನೀರಿನಲ್ಲಿ ಅದನಡಗಿಸಿ ನಿಂತು  ಬಿಟ್ಟಳು.ಅದೇ   ದಾರಿಯಲ್ಲಿ  ಬಸ್  ನಿಲ್ದಾಣದತ್ತ  ಹೋಗುತ್ತಿದ್ದ  ಕೇಶವ  ಸಪ್ಪೆ  ಮೋರೆಯೊಂದಿಗೆ  ನದಿಯಲ್ಲಿ  ನಿಂತ  ಗೌರಿಯ  ಉದ್ದೇಶಿಸಿ "ಕೊನೆಗೂ  ಅಲ್ಲಿ  ಮೀಯಲು ಬಿಡಲಿಲ್ಲ  ನೀನು'' ಅಂದ್ದಿದ್ದ .ಅದರಲ್ಲಿ ತನ್ನದೇನು ತಪ್ಪಿಲ್ಲವೆಂದು ತಿಳಿಸಲೂ ಆಗದೆ  ಅವನ  ದುಃಖದ  ಮುಖವ  ನೋಡಲೂ ಆಗದೆ ಬೆನ್  ಹಿಂದಾಕಿ ನೀರಿನಲ್ಲಿ ಕಾಣುತ್ತಿದ್ದ ಆತನ ಕದಲಿದ ಬಿಂಬವ ನೋಡುತ್ತಾ ಯಾತನೆಯೊಂದಿಗೆ"ರಜಕ್ಕೆ  ಬರ್ತಿಯಲ್ಲ  ಮಗ, ನಗ್ತಾ  ಹೋಗು.ನನ್ನಾಣೆ  ಇನ್ಮುಂದೆ  ಈ  ಜಲಪಾತಕ್ಕೆ  ವಾರಸುದಾರ  ನೀನೆ! " ಎಂದ್ದಿದ್ದಳು.


ಅದೇ ಕೊನೆ ಕೇಶವ ಗೌರಿಯನ್ನು ಮತ್ತೇನೆಂದು ಸಂದಿಸಲಿಲ್ಲ.ಅವರೂರು ಬಿಟ್ಟ  ವರ್ಷವೆ  ಗೌರಿ  ಸತ್ತ  ಸುದ್ಧಿ  ದೂರವಾಣಿ  ಮೂಲಕ  ಕೇಶವನ  ತಾಯಿಗೆ  ತಲುಪಿತು.ಇವತ್ತಿಗೂ ಅವಳ  ಸಾವಿನ  ರಹಸ್ಯ  ಒಗಟಾಗೆ  ಉಳಿದು  ಹೋಗಿದೆ.ಅತಿಯಾಗಿ  ವ್ಯಮೊಹಿಸಿದ  ನೀರೇ   ಅವಳ  ಲಾವಣ್ಯಕ್ಕೆ   ಮಾರು  ಹೋಗಿ  ಕತ್ತಲ್ಲಲ್ಲಿ   ಓಲೈಸಿ ನುಂಗಿ  ಹಾಕ್ತೋ  ಇಲವೋ  ಮಕ್ಕಳಿಲ್ಲದವಳೆಂದು  ಹೊಲಸು  ಸಮಾಜ  ತಿಂದು  ಮುಗಿಸಿತ್ತೋ  ಅಥವಾ  ಮುಬ್ಬನೆ  ಕೊಂದು  ನೀರಿಗೆಸೆದನೋ ಯಾರಿಗೂ  ಗೊತ್ತಿಲ್ಲ  ಎರಡು  ದಿನ  ಬಿದ್ದ  ದೊಡ್ಡ  ಮಳೆಗೆ  ಅವಳ  ದೇಹ  ತೇಲಿ  ಕೊಳೆತ  ಸ್ಥಿತಿಯಲ್ಲಿ  ಸಿಕ್ಕಿತ್ತು .ನಂತರ  ಅದನ್ನ  ಹೂಣಿ  ಹಾಕ್ಕಿದ್ದರು.

*

ಸಂಜೆ  ಸೂರ್ಯ  ಬಣ್ಣ  ಉಗುಳುತ್ತಿದ್ದ  ಸಮಯಕ್ಕೆ  ಬಸ್ಸು  ಊರ  ಮುಂಬಾಗಿಲಿಗೆ  ನಿಲ್ಲುತ್ತಿದ್ದಂಗೆ  ಕೇಶವ   ಬ್ಯಾಗ್  ಏರಿಸಿಕೊಂಡು  ಬಾಡಿಗೆಗೆ  ಬಿಟ್ಟಿದ್ದ  ಅಜ್ಜನ  ಹಳೆ  ಮನೆಯತ್ತ  ಸಾಗಿದ.ಇಲ್ಲೆಲ್ಲಾ  ಎಷ್ಟು ಬದಲಾಗಿದೆ ಅಂದು ಕೊಳ್ಳುತ್ತಾ ಮುನ್ನಡೆದ ಕೇಶವನಿಗೆ ಉರಾಚೆಗೆ ಯಾವುದೇ  ಕೇರಿ  ಕಾಣಲಿಲ್ಲ.ಅಲ್ಲೊಂದು ದಲಿತ ಹಕ್ಕುಗಳ ಕೇಂದ್ರ ಸ್ಥಾಪಿತವಾಗಿದೆ,ಖಾಕ ನ ಅಂಗಡಿಯಿದ್ದ  ಜಾಗದಲ್ಲಿ  ಮಹಿಳಾ ಸಂರಕ್ಷಣಾ  ಸಂಸ್ಥೆ  ಎದ್ದು  ನಿಂತಿದೆ.ಅದರ  ಪಕ್ಕದಲ್ಲೇ  ಅರೋಗ್ಯ  ತಪಾಸಣೆ  ಕೇಂದ್ರದ "ನಾವಿಬ್ಬರು  ನಮಗಿಬ್ಬರು"  ಪಲಕದ  ಕೆಳಗೆ  ಕೆಂಪಾಕ್ಷರದಲ್ಲಿ  ಮೂಡಿದ್ದ  "ಮಕ್ಕಳಾಗದಿರುವುದಕ್ಕೆ   ಹೆಣ್ಣು ಮಾತ್ರವಲ್ಲ  ಗಂಡಿನಲಿರೋ  ದೋಷವು  ಕಾರಣವಿರಬಹುದು ಅಗತ್ಯವಾಗಿ  ತಪಾಸಣೆ  ಮಾಡಿಸಿಕೊಳ್ಳಿ" ಅನ್ನೋ  ಅಡಿ  ಬರಹವ  ಮಹಿಳಾ   ಸಮಾಜದ  ಗೋಡೆಯ ಮೇಲೂ ವಿಸ್ತಾರವಾಗುವಂತೆ  ಬರೆಸಿದ್ದಾರೆ.


ಛೆ! ಗೌರಿ  ಈ  ಕಾಲಮಾನದಲ್ಲಿ  ಜನಿಸ ಬಾರದಿತ್ತ  ಮನಸಿನಲ್ಲಿ  ಮೂಡುತ್ತಿದ್ದ  ಭಾವೊದ್ವೇಗ ಭರಿತ  ಪ್ರಶ್ನೆಗಳೊಂದಿಗೆ  ಹಲವು  ಸಂವತ್ಸರಗಳ ಬಳಿಕ   ಮತ್ತದೇ   ಮನೆಯ  ಹೊಳೆಯ  ಹಾದಿ  ಮುಟ್ಟುತ್ತಿದ್ದಂತೆ ಆಹ್ವಾನಿಸಿದ  ಹೊಳೆಯಲ್ಲಿ  ಪ್ರಯಾಣದ  ದಣಿವಾರಿಸಲು  ಹಿಡಿದ  ಬ್ಯಾಗನ್ನು  ಕೆಳಗಿರಿಸಿ ನೀರಿನಲ್ಲಿ  ಕಾಲಿರಿಸಿದ್ದೇ  ತಡ  ಗೌರಿಜಲಪಾತದ   ನೆನಪಾಗಿ  ಆಚೀಚೆ   ಕಣ್ಣಾಡಿಸಿದ.


ಹಳೆ ನೀರು ಅಲಲ್ಲಿ  ಹಲವೆಡೆ ಇನ್ನಷ್ಟು ಕಲುಷಿತವಾಗಿ ಹೆಪ್ಪುಗಟ್ಟಿ ನಿಂತಿದೆ. ಆದರೆ ಗೌರಿಜಲಪಾತ  ಕುರುಹೇ  ಇಲ್ಲದಂತೆ  ಹಬೆಯಾಡುತ್ತಿದ್ದ ಬಂಡೆಗಳ  ರಾಜ್ಯದಲ್ಲಿ  ಕಾಣಿಯಾಗಿದೆ.ಮತ್ತೊಂದು ಅಂತರವ ಸೃಷ್ಟಿಸಲು ಅಲ್ಲೇ ಕಾಲು ದಾರಿಯ ಕಳ್ಳ ಕಣಿವೆಯಿಂದ  ಸಣ್ಣದಾಗಿ  ಹೊಳೆಯತ್ತ ಹೊಸ  ನೀರು  ಹರಿಯುತ್ತಿತ್ತು.ಹರಿದು  ಬರುತ್ತಿದ್ದ   ಹೊಸ  ನೀರಿಗೆ  ಅದರದೇ  ಆದ   ಹೊಸ  ಹರಿತ  ಹೊಸ  ತಿವಿತ.ಒಂದು  ಜೋರು  ಮಳೆ  ಹುಯ್ದರೆ  ಇನ್ಯಾವ  ಸಮೂಹವನ್ನಾದರು   ಸಂಮೊಹಿಸುವ  ಸಂಚೂಡಿ   ಮುಂಬರುವ  ಅಹುತಿಗಾಗಿ  ಬಂಡೆಯನ್ನ  ತಣ್ಣಗಾಗಿಸುತ್ತಾ  ತಾನು  ಬಿಸಿ  ಏರಿಸಿಕೊಂಡು  ಸಾಗುತ್ತಿದೆ.ಬೀಸುತ್ತಿದ್ದ ವೈಶಾಖ ಮಾಸದ ಗಾಳಿಯೊಂದಿಗೆ   ಬಿಸಿಲು  ಮಳೆ  ಶುರುವಾಗುತ್ತಿದ್ದಂತೆಯೇ  'ಮಗ  ಇನ್ಮುಂದೆ  ಇದರ ವಾರಸುದಾರ   ನೀನೆ" ಅನ್ನೋ  ಮಾತುಗಳು ಕೇಶವನ  ಕಿವಿಯೊಳಗೆ  ಪುನಃ  ಪುನಃ  ಉಚ್ಚರಿಸಿದಂತಾಗಿ ಬದಲಾದ ಸಮಾಜದ  ಧ್ಯೋತಕದಂತೆ  ಸಣ್ಣಗೆ  ಹರಿಯುತ್ತಿದ್ದ  ಹೊಸ ನೀರಿನ ತಿವಿತಕ್ಕೆ  ಬೆಚ್ಚಿ  ಭಾರದ  ಬ್ಯಾಗನ್ನು  ಹೆಗಲೇರಿಸಿಕೊಂಡು  ಮನೆಯತ್ತ  ವೇಗದ ಹೆಜ್ಜೆ  ಹಾಕಿದ


-ಅರೆಯೂರು ಚಿ.ಸುರೇಶ್
ತುಮಕೂರು
7090564603

ಕಥೆ: ಬೀರನ ಕನಸುಗಳ ಸುತ್ತ…

 


ಇಡೀ ಊರು ಮಳೆ ನೀರಿನಲ್ಲಿ ಅದ್ದಿ ತೆಗೆದಂತಿತ್ತು. ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಮನೆಯ ಗೂಡುಗಳಲ್ಲಿ ಅವಿತಿದ್ದ ಜನ ಹಕ್ಕಿ ಮರಿಗಳಂತೆ ಕುತ್ತಿಗೆ ಯನ್ನು ಬಾಗಿಲಿಂದ ಚಾಚಿ ಮಳೆಯ ಆರ್ಭಟವನ್ನು ನೋಡುತ್ತಿದ್ದರು. ಬರ ಎಂಬ ಶಬ್ದವನ್ನೇ ಕಳೆದ ಮೂರು ದಿನಗಳಿಂದ ಭೋರ್ಗರೆಯುತ್ತಿದ್ದ ಬಾನು ಅಳಿಸಿ ಹಾಕಿತ್ತು. ಕಳೆದ ಎರಡು ತಿಂಗಳಿಂದ ಮಡುಗಟ್ಟಿದ್ದ ಮೋಡ…. ಸಿಡಿಲಿ, ಗುಡುಗು, ಮಿಂಚುಗಳೊಂದಿಗೆ ಇಳೆಗೆ ಅಪ್ಪಳಿಸಿತ್ತು. ಮಳೆಯ ಅಬ್ಬರಕ್ಕೆ ಕಡಲು ತಾನೇನು ಕಡಿಮೆಯಲ್ಲ ಎಂಬಂತೆ ಅಲೆಗಳ ಉಬ್ಬರ ಚೆಲ್ಲಾಟ, ರೋಷ ಕಡಲದಂಡೆಗೆ ಮುತ್ತಿಡುತ್ತಿತ್ತು. ಹೀಗೇ ಮಳೇ ಬಂದರೆ ಗುಡಿಸಲೇ ಕೊಚ್ಚಿ ಹೋದೀತೆಂಬ ಭಯ ಬೀರನಿಗೆ ಆವರಿಸಿತ್ತು. ಪಕ್ಕು ಸಾವುಕಾರ ಗದ್ದೆಯನ್ನು ಹದಮಾಡಲು ಎರಡು ದಿನಗಳಿಂದ ಒತ್ತಾಯಿಸುತ್ತಲೇ ಇದ್ದ. ಹಾಳುಬಿದ್ದ ಮಳೆ ಬಿಡುವೇ ಕೊಡುತ್ತಿಲ್ಲ ಎಂದು ಪ್ರೀತಿಯಿಂದಲೇ ಶಪಿಸುತ್ತಿದ್ದ ಬೀರ. ಶಾಲೆಗೆ ಹೋದ ಮಂಜ, ಸಿರಿ ಬರುವ ಹೊತ್ತಾಗಿತ್ತು. ಬಿರುಗಾಳಿ ಮಳೆಯಲ್ಲಿ ಯಾಕಾದರೂ ಶಾಲೆಗೆ ಮಕ್ಕಳನ್ನು ಕಳುಹಿಸಿದೆನೋ ಎಂದು ಮನದಲ್ಲೇ ನೊಂದುಕೊಂಡ. ತನ್ನಂತೆ ಮಕ್ಕಳು ಪರರ ಗದ್ದೆಯಲ್ಲಿ ಗೇಯುವಂತಾಗಬಾರದು. ದೊಡ್ಡ ಮನುಷ್ಯರಾಗಬೇಕು. ಮಕ್ಕಳು ಸಾಹೇಬರಾಗಿ ಬದುಕಬೇಕೆಂಬ ತನ್ನ ದಿನದ ಕನಸನ್ನು ನೆನಪಿಸಿಕೊಂಡು ನಕ್ಕ. ಮಳೆ ಆರ್ಭಟದಲ್ಲಿ ಗುಡಿಸಲ ಕತ್ತಲಲ್ಲಿ ಆ ನಗು ಯಾರಿಗೂ ಕಾಣಿಸಲಿಲ್ಲ. ಕೇಳಿಸಲೂ ಇಲ್ಲ…. ಹರಿವ ಹಳ್ಳದ ತೊರೆ ಬೀರನಲ್ಲಿ ಸಂತಸ ಉಕ್ಕಿಸಿತ್ತು. ತುಂಬಿ ಹರಿವ ಹಳ್ಳದೊಂದಿಗಿನ ಸಂಬಂಧಗಳು ಉಕ್ಕಿಬಂದವು. ಬೀರ ಹರೆಯದ ದಿನಗಳಿಂದ ಬಾಲ್ಕಕ್ಕೆ ಜಿಗಿದ. ಅಪ್ಪನ ಜೊತೆ ಹಳ್ಳದಲ್ಲಿ ನುಗ್ಗಿ ತುಂಡು ಕಟ್ಟಿಕೊಂಡು ಈಜು ಕಲಿವ ದಿನಗಳು, ದಂಡೆಯಲ್ಲಿನ ಏಡಿಗಳನ್ನು ಹಿಡಿದು ಕ್ಷಣ ಮಾತ್ರದಲ್ಲಿ ಅವುಗಳ ಕೊಂಬು ಮುರಿಯುತ್ತಿದ್ದ ತನ್ನಪ್ಪನ ಸಾಹಸ ಮನದ ಮುಂದೆ ಸುಳಿದು ಮರೆಯಾಯಿತು. ಏಡಿ ಹಿಡಿಯಲು ಹೋಗಿ ಪಕ್ಕದ ಮನೆಯ ಹೀರನ ಕಾಲಿಗೆ ಏಡಿ ಕಚ್ಚಿ ಹಿಡಿದದ್ದು…. ಕಾಲಿಂದ ಬಳಬಳನೇ ರಕ್ತ ಹರಿದದ್ದು…. ಏಳೂರು ಗೌಡನ ಹೆಸರು ಹೇಳಿದರೆ ಏಡಿ ತನ್ನ ಹಿಡಿತ ಸಡಿಲಿಸುತ್ತದೆ ಎಂದು ತನ್ನಜ್ಜಿ ಹೇಳಿದ ಮಾತನ್ನು ನೆನಪಿಸಿಕೊಂಡು ಹೇಳಿದ್ದು…. ಆದರೂ ಏಡಿ ತನ್ನ ಹಿಡಿತ ಸಡಿಲಿಸದಿದ್ದನ್ನು ಕಂಡು ಅಪ್ಪ ಏಡಿಯ ಕೊಂಬು ಮುರಿದದ್ದು ಬೀರನಿಗೆ ನೆನಪಾಯ್ತು. ಗದ್ದೆಯ ಹೊಂಡೆದಲ್ಲಿ ಇಳಿದ ಬೀರ ದೊಂಡು, ಮುರುಗುಂಡ ಮೀನುಗಳನ್ನು ಹಿಡಿಯಲು ಕುಳಿಯನ್ನು ಮುಳುಗಿಸಿದ ತಿಳಿಯಾಗಿದ್ದ ಹೊಂಡ ಒಮ್ಮೆಲೆ ಗೊಡಗೆದ್ದಿತು. ಹೊಂಡದಲ್ಲಿ ಚಿತ್ತಾರವೊಂದು ಮೂಡಿಬಂತು. ಕಸಿವಿಸಿಗೊಂಡ ಮುರುಗುಂಡು ಮೀನುಗಳು ದಂಡು ಕುಳಿಯಲ್ಲಿ ತೇಲಿಬಂದವು. ಬೀರ ಖುಷಿಯಿಂದಲೇ ಕುಳಿಯನ್ನು ಮೇಲೆತ್ತಿದ. ಸಿಕ್ಕ ನಾಲ್ಕಾರು ಪೊಗದಸ್ತಾಗಿ ಬೆಳೆದಿದ್ದ ಮೀನುಗಳನ್ನು ಕೆಸುವಿನ ಎಲೆಯಲ್ಲಿ ಹಾಕಿ ಸುತ್ತಿ ಬೆಂಕಿಹೊತ್ತಿಸಿ ಸುಟ್ಟು ಉಪ್ಪು ಹಚ್ಚಿಟ್ಟ. ಮೀನು ಕಂಡರೆ ಮಂಜನ ಬಾಯಲ್ಲಿ ನೀರೂರುತ್ತಿತ್ತು. ಶಾಲೆಯಿಂದ ಬಂದ ಮಂಜ ಗುಡಿಸಲು ಹೊಕ್ಕವನೇ ಅಡಿಗೆ ಬಟ್ಟಲಿಗೆ ಕೈ ಹಾಕುವುದು ಅವನಿಗೆ ರೂಢಿಯಾಗಿತ್ತು. ಬೀರ ಮಗನಿಗೆ ಸುಟ್ಟ ಮೀನು ಕೊಟ್ಟು, ಮಗಳಿಗೆ ಮೀನು ತಿನ್ನಲು ಹೇಳಿ ಗದೆ ಬದು ಸರಿಮಾಡಲು ಅಡಿಕೆ ಸುಳಿ ಟೊಪ್ಪಿ ತಲೆಗಿಟ್ಟು ನಡೆದ…..

                                                             ***

ಬೀರ ಗದ್ದೆಗೆ ಆಗ ತಾನೇ ಇಳಿದಿದ್ದ. ದೂರದಲ್ಲಿ ಯಾರೋ ಬರುತ್ತಿದ್ದಂತೆ ಭಾಸವಾಯ್ತು. ಆಕೃತಿ ಸ್ವಲ್ಪ ಹೊತ್ತಿನಲ್ಲೇ ಸನಿಹ ಬಂತು. ಹತ್ತಿರ ಬರುತ್ತಿದ್ದಂತೆ ಸ್ಪಷ್ಟವಾಯ್ತು. ಮುನ್ನಾ ಸಾಬಿ. ಇನ್ನೂ ಹರೆಯದ ಹುಡುಗ. ಗ್ಯಾರೇಜ್ ಇಟ್ಟುಕೊಂಡು ದುಡಿವ ಉತ್ಸಾಹದ ಹುಡುಗ. ಸಾಬರ ಮುನ್ನಾ ತನಗಿಂತ ಕಿರಿಯರಾದ ಮಂಜ, ಸಿರಿಯರೊಂದಿಗೆ ಆಟವಾಡಲು ಬಷೀರ್ ನನ್ನು ಕಟ್ಟಿಕೊಂಡು ಆಗಾಗ ಬರುತ್ತಿದ್ದ. ಬೀರನನ್ನು ಕಂಡರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಬೀರನಿಗೂ ಅಷ್ಟೆ. ತನ್ನ ಮಕ್ಕಳಂತೆ ಅವರನ್ನು ಕಾಣುತ್ತಿದ್ದ ಬೀರ ವಯಸ್ಸು ಮರೆತು ಅವರನ್ನು ವಾರಿಗೆಯರಂತೆ ಕಾಣುತ್ತಿದ್ದ. ’ಏನೋ ಮುನ್ನಾ ಇಂಥ ಮಳೆಯಲ್ಲಿ ಈ ಕಡೆ ಬಂದೆ. ಯಾವುದು ಗಾಡಿ ಬಂದಿಲ್ವಾ ರಿಪೇರಿಗೆ’ ಎಂದು ಪ್ರಶ್ನಿಸಿದ. ’ಇಲ್ಲ ಕಾಕಾ, ಪಕ್ಕು ಮಾಮಾ ಹೊಸ ಕಾರು ತಂದವರೇ ಅಂಥ ಸುದ್ಧಿ ಬಿದ್ದಿತ್ತು. ಹೊಸ ಕಾರು ನೋಡಿಯೇ ಬಿಡೋಣ ಅಂಥ ಬಂದಿದ್ದೆ. ಪಕ್ಕು ಸಾವುಕಾರದ್ದು ದರ್ಬಾರು ನನಗಿಂತ ನಿಂಗೆ ಚೆನ್ನಾಗಿ ಗೊತ್ತಲ್ಲಾ’ ಎಂದ ಮುನ್ನಾ. ’ನಿಂಗೆ ಚೆನ್ನಾಗಿ ಗೊತ್ತಲ್ಲಾ’ ಎಂಬ ಮುನ್ನನ ಮಾತು ಹತ್ತು ವಸಂತಗಳ ಹಿಂದಕ್ಕೆ ಬೀರನನ್ನು ಕರೆದೊಯ್ತು…. ಗದ್ದೆಯ ಬದು ಸರಿ ಮಾಡುತ್ತಲೇ ಇದ್ದ ಬೀರನ ಕಣ್ಮುಂದೆ ಸಾವಿರಾರು ಚಿತ್ರಗಳು ಸುಳಿದವು….

                                                                             ***

ಪಕ್ಕು ಸಾವುಕಾರ…. ತನಗೆ ಆಶ್ರಯ ಕೊಟ್ಟ ದೊರೆ. ಗೋಕರ್ಣದಿಂದ ಓಡಿಬಂದಿದ್ದ ತನಗೆ ಆಶ್ರಯ ಕೊಟ್ಟವನು. ಜಾತಿಯ ಹಂಗು ತೊರೆದು ಸ್ವಚ್ಛಂದ ಬದುಕು ಬದುಕಿದವನು. ಗುಳ್ಳಾಪುರದ ಜನರ ಕಣ್ಣಲ್ಲಿ ಅವನದು ಹಾದರದ ಬದುಕು. ಆದರೆ ಪಕ್ಕು ಮಾಮಾ ಡೋಂಗಿ ಜೀವನ ಮಾಡಿದವನಲ್ಲ. ರಾಜಾರೋಷ ಮಾಡಿದವ. ಆಷಾಢಭೂತಿ ತನದಿಂದ ಒಳ ಹೊರಗು ಬೇರೆ ಬೇರೆಯಾಗಿ ಅವ ಬದುಕಲಿಲ್ಲ ಎಂದು ಬೀರಾ ತನ್ನಷ್ಟಕ್ಕೆ ತಾನೇ ಅಂದುಕೊಳ್ಳತೊಡಗಿದ….
***
ಪಕ್ಕು ಮಾಮಾ ನೋಡಲು ಮನೋಹರವಾಗಿದ್ದ. ತಲೆತುಂಬಾ ಕೂದಲು. ನಲವತ್ತರ ಆಜೂಬಾಜಿರಬಹುದು. ಐದೂವರೆ ಅಡಿ ಎತ್ತರದ ಆಳು. ಬಿಳಿಬಣ್ಣದ ಪಕ್ಕು ಹತ್ತು ವರ್ಷ ಬ್ಯಾಂಕ್ ನೌಕರಿ ಮಾಡಿ ರಾಜೀನಾಮೆ ಬಿಸಾಕಿ ಬಂದಿದ್ದ. ಮ್ಯಾನೇಜರ್ ಜೊತೆ ಸಣ್ಣ ವಿಷಯಕ್ಕೆ ಜಗಳ ಕಾದು ನೌಕರಿಗೆ ವಿದಾಯ ಹೇಳಿ ಬಂದಿದ್ದ ಎಂದು ಊರ ಜನ ಆಡಿಕೊಳ್ಳುತ್ತಿದ್ದರು. ಅಜ್ಜನ ಕಾಲದಿಂದ ಬಂದಿದ್ದ ಜೇನ್ಮಠದ ಆಸ್ತಿ ಕೂತುಂಡರೂ ಮೂರು ತಲೆಮಾರಿಗೂ ಕರಗದಷ್ಟಿತ್ತು. ಬೀರ ಕಳೆದ ಹತ್ತು ವರ್ಷದಿಂದ ಗದ್ದೆಯಲ್ಲಿ ಬೆವರಿಳಿಸಿ ಮೈಮುರಿದು ದುಡಿದಿದ್ದ. ತೆಂಗು ಅಡಿಕೆ ಮರಗಳು ಮುಗಿಲಾಚೆಗೆ ಬೆಳೆದು ನಿಂತಿದ್ದವು. ಮಾವು, ಹಲಸು ಪೇರಲ ಗಿಡಗಳಿಂದ ಬರುವ ಆದಾಯದ ಜೊತೆಗೆ ಸಾವಿರಾರು ತೆಂಗಿನಕಾಯಿಗಳು, ಕ್ವಿಂಟಾಲಗಟ್ಟೆಲೆ ಅಡಿಕೆ… ಶ್ರೀಮಂತಿಕೆ ಮನೆಯ ಅಂಗಳದಲ್ಲಿ ಬಿದ್ದಿತ್ತು. ಆಗತಾನೆ ಮಾರುಕಟ್ಟಿಗೆ ಬಂದಿದ್ದ ಮಾರುತ ೮೦೦ ಕಾರ್ ಗುಳ್ಳಾಪುರದ ಜನರ ಕಣ್ಣು ಕುಕ್ಕಿಸುತ್ತಿತ್ತು. ಪಕ್ಕು ತನ್ನ ಹೊಸ ಕಾರ್ ನಲ್ಲಿ ಶ್ರೀನಿವಾಸ ಡಿಲಕ್ಸ್ ಹೊಟೆಲ್ ಗೆ ಸಂಜೆ ಬಂದು ಏರ್ ಕಂಡೀಶನ್ ರೂಮ್ ನಲ್ಲಿ ಕುಳಿತು ಟೀ ಹೀರಿ, ಗೋಲ್ಡ್ ಪ್ಲ್ಯಾಕ್ ಸಿಗರೇಟ್ ಸೇದಿ, ಬಂಗ್ಲೆ ಶಿವರಾಮ ಹೆಗಡೆಯ ಫ಼್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ ನಲ್ಲಿ ಒಂದೆರಡು ತಾಸು ಇಸ್ಪೇಟ್ ಆಡಿ ರಾತ್ರಿ ಮನೆಗೆ ಬರುತ್ತಿದ್ದುದು ರೂಢಿ. ಪಕ್ಕುವಿನ ಜೀವನ ಶೈಲಿ ಇಷ್ಟೇ ಆಗಿದ್ದರೆ ವಿಶೇಷವೇನಿರಲಿಲ್ಲ. ಆದರೆ…. ಪಕ್ಕು ಬ್ಯಾಂಕ್ ನೌಕರಿಗೆ ವಿದಾಯ ಹೇಳಿದುದರ ಜೊತೆಗೆ ಅಂಕೋಲೆಯ ಹೆಣ್ಣೊಂದನ್ನು ಜೊತೆಗೆ ಕರೆದು ತಂದಿದ್ದ. ಜೇನ್ಮಠದ ತೋಟದ ಮನೆ ಆಕೆಯ ಆಶ್ರಯ ತಾಣವಾಗಿತ್ತು. ವಿವಾಹಿತ ಹೆಣ್ಣೊಬ್ಬಳು ಪಕ್ಕುವಿನ ಹಿಂದೆ ಬಿದ್ದಿರುವುದು ಊರಲ್ಲಿ ಗುಲ್ಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಪಕ್ಕುವಿನ ಹೊಸ ಸಾಹಸ ಫ಼್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ ನವರೆಗೂ ಬಂದಿದ್ದರೂ ಪಕ್ಕುವನ್ನು ಈ ಬಗ್ಗೆ ಕುತೂಹಲಕ್ಕೂ ಕೇಳುವ ಧೈರ್ಯ ಆತನ ಸಹವರ್ತಿಗಳಿಗೆ ಇರಲಿಲ್ಲ. ಪಕ್ಕುವಿನ ತೋಟದಮನೆಯ ಸಾಹಸ ಕಿರಿಕಿರಿ ತಂದದ್ದು ಆತನ ಪತ್ನಿಗೆ, ಪತ್ನಿಯ ಪ್ರಶ್ನೆಗಳಿಗೆ ಉತ್ತರಿಸಲು ಪಕ್ಕುವಿಗೆ ಸಬೂಬುಗಳಿದ್ದವು. ತೋಟದ ಮನೆಗೆ ಬಂದಾಕೆ ಬ್ಯಾಂಕ್ ಉದ್ಯೋಗಿಯ ಪತ್ನಿ. ಮಕ್ಕಳು ಹಾಗೂ ಆಕೆಯ ಪತಿರಾಯ ಸದ್ಯದಲ್ಲೇ ಬರಲಿದ್ದಾನೆ ಆತನಿಗೆ ದೂರದ ಮುಂಬೈನಲ್ಲಿ ಕೆಲಸ. ಈಗ ಇಲ್ಲಿಗೆ ವರ್ಗವಾಗಿದೆ. ನನ್ನ ನೌಕರಿ ಕಾಲದ ಗೆಳೆಯ, ಸಹೋದ್ಯೋಗಿ, ಸಹಾಯ ಮಾಡದಿರಲಾಗುತ್ತದೆಯೇ? ತುರ್ತಿಗೆ ಬಾಡಿಗೆ ಮನೆ ಸಿಗುವವರೆಗೆ ತೋಟದ ಮನೆಯಲ್ಲಿರುತ್ತಾರೆ ಎಂದು ಪಕ್ಕು ಹೆಂಡತಿಗೆ ಹೇಳಿದ್ದ… ಆದರೆ ಮುಂದೆ ಆದದ್ದೇ ಬೇರೆ. ಒಂದು ವರ್ಷದಲ್ಲಿ ಪಕ್ಕುವಿನ ಮಗುವಿಗೆ ತೋಟದ ಮನೆಯ ಹೆಂಗಸು ಜನ್ಮ ನೀಡಿದ್ದಳು. ಸರಿಯಾಗಿ ಪಕ್ಕುವಿನ ಮುಖದ ರೇಖೆಗಳನ್ನು ನೋಡದ ಪತ್ನಿ ಸುಶೀಲಾ ತೋಟದ ಮನೆಯ ಸಂಬಂಧದ ಬಗ್ಗೆ ಪ್ರಶ್ನಿಸುವುದು ದೂರದ ಮಾತಾಗಿತ್ತು. ಪಕ್ಕುವಿನ ಎಲ್ಲಾ ಬಾನಗಡಿಗಳಿಗೆ ಬೀರ ಮೂಕ ಸಾಕ್ಷಿಯಾಗಿದ್ದ. ಪಕ್ಕುವಿನ ದರ್ಬಾರು ಆ ದಿನಗಳಲ್ಲಿ ಜೋರಾಗಿತ್ತು. ಪತ್ನಿ ಸುಶೀಲಾ ತನ್ನ ಮಕ್ಕಳೊಂದಿಗೆ ಊರ ಮನೆಯಲ್ಲಿ ಉಳಿದರೆ, ಪಕ್ಕು ಹಾಯಾಗಿ ತೋಟ, ತೋಟದ ಮನೆ, ಗಳೆಯ ಮಾಧವ, ಆತನ ಪತ್ನಿ, ಬೀರಾ, ಇಸ್ಪೇಟ ಕ್ಲಬ್ ಗಳ ಲೋಕದಲ್ಲಿ ವಿಹರಿಸಿದ. ರತ್ನಕ್ಕಗೆ ಮಗುವಾದಾಗ ಊರಲ್ಲಿ ಎದ್ದ ಗುಲ್ಲು ಬಹುಕಾಲ ನಿಲ್ಲಲಿಲ್ಲ. ಸುಶೀಲಾ ಈ ವಿಷಯವಾಗಿ ಪಕ್ಕುವಿನ ಜೊತೆಗೆ ಪ್ರಸ್ತಾಪಿಸಲಿಲ್ಲವಂದೇನಿಲ್ಲ. ಒಂದು ರಾತ್ರಿ ಆಕೆ ಜೀವಮಾನದಲ್ಲಿ ಸಂಗ್ರಹಿಸಿಟ್ಟಿದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿ ಕೇಳಿದಳು. ರತ್ನಕ್ಕನ ಜೊತೆ ನಿಮ್ಮದು ಭಾರೀ ದೋಸ್ತಿಯಂತಲ್ಲಾ? ಮಗು ಸಹ ನಿಮ್ಮ ಹಾಗಿದೆ ಎಂದು ತಿಮ್ಮಿ ಹೇಳ್ತಿದ್ಲು… ಎಂದು ಸುಶೀಲ ರಾಗ ಎಳೆದಳು. ಪಕ್ಕು ಸುಶೀಲಾಳ ತೋಳತೆಕ್ಕೆಯಲ್ಲಿ ಮಲಗುತ್ತಿದ್ದುದೇ ಅಪರೂಪಕ್ಕೆ. ಅಂದು ಸುಶೀಲಾಳ ಬೆತ್ತಲೇ ದೇಹದ ಜೊತೆ ಒಂದಾಗಿದ್ದ ಆತ ಆಕೆಯ ಪ್ರಶ್ನೆಗೆ ನಸುನಕ್ಕ… ಮಾತು ಅದಕ್ಕಿಂತ ಮುಂದೆ ಹೋಗಲಿಲ್ಲ. ಪಕ್ಕು ಸಂತೃಪ್ತನಾಗಿದ್ದ. ಮೊದಲ ಮಗಳನ್ನು ಮುಂಬೈಗೆ ಮದುವೆ ಸಹ ಮಾಡಿಕೊಟ್ಟ. ಮಗ ಡಾಕ್ಟರ್ ಆಗಿ ಹೊರಬರಲು ಒಂದು ವರ್ಷ ಮಾತ್ರ ಉಳಿದಿತ್ತು. ಚಿಕ್ಕ ವಯಸ್ಸಿಗೆ ಮದುವೆಯಾಗಿದ್ದ ಪಕ್ಕು ಇದೀಗ ಗೆಳೆಯನ ಪತ್ನಿಯಿಂದ ಮಗುವೊಂದನ್ನು ಪಡೆದಿದ್ದ. ವಿಚಿತ್ರವೆಂದರೆ ಗೆಳೆಯನ ಪತ್ನಿಗೆ ಮಗುವಾದದ್ದೇ ಗುಳ್ಳಾಪುರಕ್ಕೆ ಬಂದಮೇಲೆ. ಮಾಧವ ಸಹ ಪತ್ನಿಗೆ ಮಗುವಾದ ಮೇಲೆ ಖುಷಿಯಿಂದಿದ್ದ. ಅವನ ಮುಂಬೈ ದಿನಗಳು, ಪತ್ನಿಗೆ ನೀಡಿದ್ದ ಸ್ವಾತಂತ್ರ್ಯ, ಆಗಾಗ ಆತನ ಮುಂಬೈ ಪ್ರವಾಸ ಜೋರಾಗಿತ್ತು. ಮನೆಯ ಜವಾಬ್ದಾರಿ ಬಗ್ಗೆ ಆತ ತಲೆ ಕೆಡಿಸಿಕೊಂಡಿರಲಿಲ್ಲ. ಗುಳ್ಳಾಪುರಕ್ಕೆ ಬಂದ ನಂತರವಂತೂ ಎಲ್ಲವನ್ನು ರತ್ನಕ್ಕ ನಿಭಾಯಿಸಿಕೊಂಡಿದ್ದಳು. ಪಕ್ಕು ಮತ್ತು ಆತನ ಗೆಳೆಯ ಮಾಧವನ ಸ್ನೇಹ ವಿಚಿತ್ರ ತರಂಗಗಳನ್ನು ಬೀರನಲ್ಲಿ ಹುಟ್ಟಿ ಹಾಕಿತ್ತು. ಜೇನ್ಮಠದಲ್ಲಿ ವಾಸವಾಗಿದ್ದ ಅಜ್ಜಯ್ಯ ಆಗಾಗ ಹೇಳುತ್ತಿದ್ದ ಬದುಕಿನ ಅರ್ಥ, ಪಕ್ಕು, ಮಾಧವ ಮತ್ತು ಆತನ ಪತ್ನಿ ರತ್ನಕ್ಕನ ಸಂಬಂಧಗಳು ಗದ್ದೆ ಕೆಲಸ ಮಾಡುವಾಗ ಕಾಡುತ್ತಿದ್ದ ಸಂಗತಿಗಳಾಗಿದ್ದವು. ತನ್ನ ಒಡೆಯನ ಸ್ವಚ್ಛಂದ ಬದುಕು, ಅನೈತಿಕ ಸಂಬಂಧಗಳ ಬಗ್ಗೆ ಸ್ವತಂತ್ರವಾಗಿ ತನ್ನ ಮನದ ಸ್ವೇಚ್ಛೆಗೆ ಬೀರ ತನ್ನಷ್ಟಕ್ಕೆ ತಾನೆ ಅಚ್ಚರಿಪಡುತ್ತಿದ್ದ. ಕೆಳ ಜಾತಿಯವರಾದ ತಮಗೆ ಆಶ್ರಯ ಕೊಟ್ಟವರ ಬದುಕಿನ ಬಗ್ಗೆ ಪ್ರಶ್ನಿಸುವುದಿರಲಿ, ಮನದಲ್ಲೇ ಯೋಚಿಸುವುದು ಪಾಪ ಎಂದು ನಂಬಿದ್ದ ಕಾಲವದು. ತನ್ನೂರಾದ ಗೋಕರ್ಣ ಸನಿಹ ಬೇಲಿಹಿತ್ತಲಿನಲ್ಲಿ ಅಸ್ಪೃಶ್ಯ ಜನಾಂಗದಲ್ಲಿ ಮಾತ್ರ ಇಂಥ ಅನೈತಿಕ ಸಂಬಂಧಗಳ ರೋಚಕ ಕತೆಗಳನ್ನು ಕೇಳುತ್ತಿದ್ದ ಬೀರ ತನ್ನ ಒಡೆಯನ ಬದುಕಿನ ತಿರುವುಗಳನ್ನು ಕಣ್ಣಾರೆ ಕಾಣುವಂತಾಗಿತ್ತು. ತನ್ನೊಡೆಯನನ್ನು ಒಮ್ಮೆ ರತ್ನಕ್ಕನ ಒಡನಾಟದ ಕುರಿತು ಕೇಳಿಯೇ ಬಿಡಬೇಕು ಎಂಬ ಬೀರ ಬಹುದಿನಗಳಿಂದ ಅಂದುಕೊಳ್ಳುತ್ತಿದ್ದ. ಪಕ್ಕು ಸಾವುಕಾರನ ಕಳ್ಳದಂಧೆಗಳ ಒಳಹೊರಗು ಬೀರನಿಗೆ ಗೊತ್ತಿದ್ದುದೇ ಆಗಿತ್ತು. ಪಕ್ಕು ಸಾವುಕಾರನಿಗೆ ಇಷ್ಟವಾದ ’ಕಳ್ಳು’ನ್ನು ತಳ್ಳಿಕೇರಿಯ ಸಾಬರ ಮನೆಯಿಂದ ತಂದು ಕೊಡುತ್ತಿದ್ದ ಬೀರಾ, ಒಡೆಯನ ಜೊತೆ ಕುಡಿಯುವಾಗ ಪಾಲುದಾರನೂ ಆಗುತ್ತಿದ್ದ. ಆಗ ಮಾತ್ರ ಒಡೆಯ ಪಕ್ಕು ಮತ್ತು ಬೀರನ ನಡುವೆ ಅಂತರವೇ ಇಲ್ಲವಾಗುತ್ತಿತ್ತು. ಆಗ ಪಕ್ಕು ಹೇಳುತ್ತಿದ್ದ ರಸಿಕ ಕತೆಗಳಿಗೆ ಕೊನೆಯೇ ಇರಲಿಲ್ಲ. ಬೀರ ಸಹ ಆಗಾಗ ಗೋಕರ್ಣದ ತನ್ನ ಗೆಳತಿಯೊಂದಿಗೆ ಕದ್ದು ಸಿನಿಮಾಕ್ಕೆ ಹೋದ ರಸಘಳಿಗೆಗಳನ್ನು ಪಕ್ಕುವಿನ ಎದುರುಹೇಳಿದ್ದುಂಟು. ಆದರೆ ರತ್ನಕ್ಕನ ವಿಷಯದಲ್ಲಿ ಒಮ್ಮೆ ಮುಖಾಮುಖಿಯಾಗಿ ಸಾವುಕಾರರನ್ನು ಕೇಳಿಯೇ ಬಿಡಬೇಕು ಎಂಬ ಬೀರನ ಆಸೆ ಮಾತ್ರ ಎಷ್ಟೋ ಬಾರಿ ನಾಲಿಗೆಯ ತುದಿತನಕ ಬಂದು ವಾಪಸ್ಸಾಗಿತ್ತು. ರತ್ನಕ್ಕನ ಬಗ್ಗೆ ಈ ಪಾಟೀ ಕುತೂಹಲಕ್ಕೆ ಕಾರಣವೂ ಇತ್ತು. ರತ್ನಕ್ಕಗೆ ಜೇನ್ಮಠದ ಅಜ್ಜಯ್ಯನ ಬಗ್ಗೆ ಇದ್ದ ಕಾಳಜಿ ಮುನ್ನಾ, ಅಜ್ಜಯ್ಯ ಜೇನ್ಮಠದಲ್ಲಿ ಬಂಗಾರ ಬೆಳ್ಳಿಯ ನಾಣ್ಯಗಳನ್ನಿಟ್ಟಿದ್ದಾನೆ ಎಂದು ಹೇಳುತ್ತಿದ್ದ ಕತೆಗಳು ಬೀರನಲ್ಲಿ ಗೊಂದಲ ಹುಟ್ಟಿಸಿದ್ದವು. ಅಜ್ಜಯ್ಯನ ಕೊನೆಯ ಕಾಲದಲ್ಲಿ ರತ್ನಕ್ಕ ಅಜ್ಜಯ್ಯನ ಬಗ್ಗೆ ತೋರಿದ ಪ್ರೀತಿ ಆ ಬಂಗಾರದ ನಾಣ್ಯಗಳ ಕಾರಣಾದಿಂದಲೋ ಅಥವಾ ಅದನ್ನು ಮೀರಿದ ಪ್ರೀತಿ ಇತ್ತೋ ಎಂಬ ಸಂಶಯಗಳು ಬೀರನಲ್ಲಿ ಆಗಾಗ ಸುಳಿಯುತ್ತಿದ್ದವು. ಬಾವಲಿಗಳ ವಾಸಸ್ಥಳವಾಗಿದ್ದ ಜೇನ್ಮಠದಲ್ಲಿ ಆ ಅಜ್ಜಯ್ಯ ಅದ್ಹೇಗೆ ವಾಸವಾಗಿದ್ದಾನೋ ಎಂಬ ಭಾವನೆ ಮಿಂಚಿ ಮರೆಯಾಯ್ತು. ಕತ್ತಲ ಗವಿಯಂತಿದ್ದ ಜೇನ್ಮಠದಲ್ಲಿ ಅಜ್ಜಯ್ಯ ಅದೆಷ್ಟು ಕಾಲದಿಂದ ವಾಸವಾಗಿದ್ದನೋ ಬೀರನಿಗೆ ತಿಳಿದಿರಲಿಲ್ಲ. ಅಜ್ಜಯ್ಯ ಜೇನ್ಮಠದ ಸನ್ಯಾಸಿಯಾಗಿ ಬದುಕಿದ್ದ. ಇಂಥ ಸನ್ಯಾಸಿ ಜೊತೆ ರತ್ನಕ್ಕನ ಸಂಬಂಧ ಬಿಡಿಸಲಾಗದ ಒಗಟಾಗಿತ್ತು. ರತ್ನಕ್ಕನ ಅಜ್ಜಯ್ಯನ ಜೊತೆಗಿನ ಒಡನಾಟ ಬಂದು ತೆರನಾಗಿದ್ದರೆ, ಸಾಬರ ಮುನ್ನ , ಹಾಲು ಮಾರುವ ಚಿನ್ನಕ್ಕ ಊರಲ್ಲಿ ಮಿಂಡ ಮೆರೆಯುತ್ತಿದ್ದ ಪುತ್ತು ಹೆಗಡೆಯೊಂದಿಗಿನ ವರ್ತನೆ ಬೀರನನ್ನು ಯೋಚನೆಯ ಪ್ರಪಾತಕ್ಕೆ ತಳ್ಳುತ್ತಿದ್ದವು….
***
ಬೀರ ಗದ್ದೆಯನ್ನು ಹದ ಮಾಡುತ್ತಿದ್ದ. ನಾಟ ಕಾರ್ಯಕ್ಕೆ ಕಾಲ ಸನ್ನಿಹಿಸಿತ್ತು. ಬರುವ ವರ್ಷ ತನ್ನದೇ ಗದ್ದೆಯಲ್ಲಿ ಗೇಯಬೇಕು ಎಂಬ ಕನಸು ನನಸಾಗುವ ದಿನಗಳು ಸಹ ಹತ್ತಿರ ಬಂದಿದ್ದವು. ಈ ಕಾರ್ಯಕ್ಕಾಗಿ ಕಳೆದ ಒಂದು ವರ್ಷದಿಂದ ಬೀರನ ಪತ್ನಿ ಸಸಿಹಿತ್ಲುದಲ್ಲಿ ಉಳಿದುಕೊಂಡಿದ್ದಳು. ಬೀರ ಒಡೆಯ ಪಕ್ಕುಗೆ ಆಗಾಗ ಈ ವಿಷಯ ಹೇಳುತ್ತಲೇ ಇದ್ದ. ಪಕ್ಕು ಸಾಹುಕಾರನದು ಒಂದೇ ಹಠ; ಎರಡು ಗುಂಟೆ ಗದ್ದೆಯಲ್ಲಿ ಅದೇನು ಗೆಯ್ಯುವೆ. ನಿನ್ನ ಮಕ್ಕಳ, ಹೆಂಡ್ತಿ ಹೊಟ್ಟೆಗೆ ಸಾಲಂಗಿಲ್ಲ ಬೀರಾ. ಆ ಆಸೆನೆಲ್ಲಾ ಬಿಡು, ಇಲ್ಲೇ ಉಳಿದು ಬಿಡು ಎಂಬುದು ಪಕ್ಕುವಿನ ಆಗ್ರಹಪೂರಕ ಸಲಹೆ ಯಾಗಿತ್ತು. ಪಕ್ಕು ಸಾವುಕಾರನ ಸಲಹೆ ಯಲ್ಲಿ ಸ್ವಾರ್ಥವಿದೆ ಎಂದು ಬೀರನಿಗೆ ತಿಳಿಯುತ್ತಿತ್ತು. ಆದರೆ ಬಾಯ್ಬಿಟ್ಟು ಹೇಳುತ್ತಿರಲಿಲ್ಲ. ಸಾಹುಕಾರನ ಪ್ರೀತಿಯನ್ನು ಮರೆಯಲಾರದೆ, ಆತನ ಪ್ರೇಯಸಿ ರತ್ನಕ್ಕನ ಚಂಚಲತೆಯ ಕ್ಷಣಗಳನ್ನು ನೋಡದೇ ಇರಲಾಗದ ವಿಚಿತ್ರ ಬಂಧನದಲ್ಲಿ ಬೀರ ಸಿಲುಕಿದ್ದ. ಬೀರನ ಪತ್ನಿ ಗುಳ್ಳಾಪುರ ಬಿಟ್ಟುಬರಲು ಒತ್ತಾಯಿಸುತ್ತಲೇ ಇದ್ದಳು…..
***
ಗುಳ್ಳಾಪುರದಲ್ಲಿ ಅಂದಿನ ಬೆಳಗು ಎಂದಿನಂತಿರಲಿಲ್ಲ. ಪೊಲೀಸರು ಬೆಳಿಗ್ಗೆಯೇ ಜೇನ್ಮಠದ ಕಡೆಗೆ ಲಗ್ಗೆ ಹಾಕಿದ್ದರು. ಜೇನ್ಮಠದ ಸನಿಹದಲ್ಲೇ ಇದ್ದ ಬೀರ ಆಗತಾನೆ ಗುಡಿಸಲಿಂದ ಹೊರಗೆ ಬಂದಿದ್ದ. ಪೊಲಿಸರು ತನ್ನ ಗುಡಿಸಲು ಕಡೆಗೆ ಬರುತ್ತಿದ್ದುದು ಕಂಡು ಬೀರ ’ಇದೇನು ಗ್ರಾಚಾರ ಬಂತಪ್ಪಾ’ ಅಂದುಕೊಂಡ. ಕೈಯಲ್ಲಿ ಲಾಟಿ ಹಿಡಿದಿದ್ದ, ನರಪೇತಲನಂತಿದ್ದ ಪೇದೆ ಬೀರನತ್ತ ನೋಡುತ್ತಾ ಲಾಟಿಯಿಂದ ಸನ್ನೆ ಮಾಡುತ್ತಲೇ ಹತ್ತಿರ ಬರುವಂತೆ ಕರೆದ. ’ಆ ಅಜ್ಜಯ್ಯನನ್ನು ಎಷ್ಟು ದಿನದಿಂದ ನೋಡುತ್ತಿದ್ದೀ? ಕೊನೆಯ ಬಾರಿಗೆ ನೋಡಿದ್ದು ಯಾವಾಗ’ ಎಂದು ಪ್ರಶ್ನಿಸಿದ. ಬೀರ ನಗುತ್ತಲೇ ’ಏನಾಯ್ತು ಸಾಹೆಬ್ರೆ ಅಜ್ಜಯ್ಯಗೆ, ನಾಲ್ಕುದಿನದ ಹಿಂದೆ ನೋಡಿದ್ದೆ. ಸಾವುಕಾರ ರತ್ನಕ್ಕ ಊಟಕೊಟ್ಟು ಬಂದಿದ್ರು. ಅಜ್ಜಯ್ಯ ಬಾಳದಿನ ಬದುಕಕಿಲ್ಲ ಬೀರ. ನೋಡ್ಕೊಂಡು ಬಾ ಅಂದಿದ್ರು, ಗದ್ದೆ ಕೆಲ್ಸ ನೋಡಿ ಹೋಗ್ಲಿಕ್ಕೆ ಆಗಿಲ್ಲ’ ಎಂದು ರಾಗ ಎಳೆದ. ಪೇಪರ್ ಒಂದನ್ನು ಬೀರನ ಮುಂದಿಡಿದ ಪೇದೆ ’ಇಲ್ಲಿ ಸಹಿ ಮಾಡು’ ಎಂದ. ಬೀರಾ ಹೆಬ್ಬೆಟ್ಟನ್ನು ಮುಂದೆ ಮಾಡಿದಾಗ ’ಹೆಬ್ಬೆಟ್ಟಾ, ಹಾಗಾದರೆ ಸ್ಟೇಶನ್ ಹತ್ರಾ ಬಂದ್ಬಿಡು’ ಎಂದ ಪೇದೆ ಜೇನ್ಮಠದ ಕಡೆಗೆ ನಡೆದ. ಬೀರನಿಗೆ ಕುತೂಹಲ ತಡೆಯಲಾಗದೇ ’ಏನಾಗಿದೆ ಸಾಹಿಬ್ರೇ ಅಜ್ಜಯ್ಯನಿಗೆ,’ ’ಅಯ್ಯೋ ಆ ಮುದುಕ ಬಾವಿಗೆ ಬಿದ್ದು ಸತ್ತನಲ್ಲೋ, ಅವ ಬೀಳೋದೆನೋ ಬಿದ್ದ, ನಮ್ಮ ಜೀವ ಹೋಗುತ್ತ ಕಣೋ, ಬೀರಾ. ’ ಬಾ ಹೆಣ ಎತ್ತಕೆ ಸಹಾಯ ಮಾಡುವಿಯಂತೆ. ಅಲ್ಲಿ ಸಿದ್ಧ , ಗೋರವ, ಮಾದಿಗರ ಅಮಾಸೆ ಬಂದಾರೆ ಎಂದ ಪೇದೆ. ಬೀರನಿಗೆ ಕ್ಷಣಾರ್ಧದಲ್ಲಿ ಎಲ್ಲವೂ ಹೊಳೆಯಿತು. ಅಜ್ಜಯ್ಯ ಜೇನ್ಮಠದ ವಾಸ ಮುಗಿಸಿ ತಿರುಗಿ ಬಾರದ ಹಾದಿಗೆ ಪಯಣ ಬೆಳೆಸಿದ್ದ. ಅಜ್ಜಯ್ಯ ಹೇಳುತ್ತಿದ್ದ ಮಾತು ಬೀರನಿಗೆ ನೆನಪಾಯ್ತು…. ’ಬೀರಾ ಮನುಷ್ಯನ ಆಸೆಗೆ ಮಿತಿ ಇಲ್ಲ ಕಣೋ ಮನುಷ್ಯ ಆಸೆನ ಗೆಲ್ಲಬೇಕು. ಬುದ್ಧ ಗೆದ್ದನಲ್ಲಾ ಹಾಗೆ, ಮೋಕ್ಷ ಹುಡುಕಲು ಹೋಗಿ ಮನುಷ್ಯರ ಪ್ರೀತಿಯ ಬಂಧನದಲ್ಲಿ ಸಿಕ್ಕನಲ್ಲಾ ಆ ಬುದ್ಧ. ನೀನು ಒಂಥರಾ ಹಾಗೆ. ಆ ಭೂಮಿತಾಯಿ ಜೊತೆ ಅದೆಂಥಾ ಪ್ರೀತಿನೋ ನಿಂದು.’ ಅಜ್ಜಯ್ಯ ತನ್ನೊಂದಿಗೆ ಮಾತನಾಡಿದ ಮಾತುಗಳನ್ನು ಮೆಲಕು ಹಾಕುತ್ತಲೇ ಜೇನ್ಮಠದ ಕಡೆಗೆ ನಡೆದ. ಪಕ್ಕು ಸಾವುಕಾರ ಇನ್ಸ್ಪೆಕ್ಟರಿಗೆ ಏನೋ ಹೇಳುತ್ತಿದ್ದರು. ದೊಡ್ಡ ಸಾಹೇಬರು ತಲೆ ಆಡಿಸುತ್ತಿದ್ದರು. ರತ್ನಕ್ಕ ಜೇನ್ಮಠಕ್ಕೆ ದೂರದಲ್ಲೇ ನಿಂತು ಮುಸು ಮುಸು ಅಳುತ್ತಿದ್ದಳು…. ಇತ್ತ ಸಂಜೆ ವೇಳೆಗೆ ಎಲ್ಲವೂ ಮುಗಿದು ಹೋಗಿತ್ತು. ಜೇನ್ಮಠ ಈಗ ಖಾಲಿಯಾಗಿತ್ತು. ಅಜ್ಜಯ್ಯನ ಬಂಗಾರ-ಬೆಳ್ಳಿ ನಾಣ್ಯಗಳು ಏನಾದವು ಎಂಬ ಕುತೂಹಲ ಮಾತ್ರ ಬೀರನಿಗೆ ಪ್ರಶ್ನೆಯಾಗಿ ಉಳಿದವು. ರತ್ನಕ್ಕ ಎಲ್ಲವನ್ನು ಕಬಳಿಸಿದಳೇ? ಅಜ್ಜಯ್ಯನನ್ನು ಕಾಡಿಸುತ್ತಿದ್ದ ಸಾಬರ ಮುನ್ನಾ ಏನಾದರೂ ಕಿತಾಪತಿ ಮಾಡಿದನೆ? ಆವ ಮೊನ್ನೆ ನಾಲ್ಕಾರು ಹುಡುಗರನ್ನು ಕಟ್ಟಿಕೊಂಡು ಜೇನ್ಮಠದ ಕಡೆಗೆ ಅಡ್ಡಾಡಿದ್ದು ಬೀರ ನೋಡಿದ್ದ. ಅಂತು ಎಲ್ಲವೂ ನಿಗೂಢವಾಗಿಯೇ ಉಳಿದವು…. ನಾಲ್ಕಾರು ದಿನಗಳಲ್ಲಿ ಅಜ್ಜಯ್ಯನನ್ನು ಕೈಕಾಲು ಕಟ್ಟಿ ಯಾರೋ ಜೇನ್ಮಠದ ಆಳ ಬಾವಿಗೆ ಹೊತ್ತು ಹಾಕಿದ್ದರು ಎಂಬ ಸುದ್ದಿ ಗುಳ್ಳಾಪುರದ ತುಂಬಾ ಹಬ್ಬಿತು. ನಿಶಕ್ತನಾಗಿದ್ದ ಅಜ್ಜಯ್ಯ ಅಂತು ಕೊಲೆಯಾದ ಎಂಬ ಸತ್ಯ ಅಡಗಿಹೋಯ್ತು. ಸಾವಿನ ಸತ್ಯ ಮಾತ್ರ ಜೇನ್ಮಠದ ಸನಿಹದ ಗುಡ್ಡಗಳಲ್ಲಿ ಅಡಿಗಿತ್ತು. ಬೀರ ಮಾತ್ರ ಅಜ್ಜಯ್ಯನ ಸಾವಿನನಂತರ ಪಕ್ಕುವಿನ ಗದ್ದೆ ತಾಣವನ್ನು ಬದಲಿಸಲು ನಿರ್ಧರಿಸಿದ್ದ. ರತ್ನಕ್ಕನ ಚಂಚಲತೆ ಮಾತ್ರ ಆತನನ್ನು ಬಹುವಾಗಿ ಕಾಡಿತು. ತನ್ನ ಮಕ್ಕಳು ಗುಡಿಸಲಲ್ಲಿ ಅಜ್ಜಯ್ಯನ ಸಾವಿನ ನಂತರ ಹೆದರುತ್ತವೆ ಎಂಬ ಸಬೂಬು ಬೀರನಿಗೆ ಸಿಕ್ಕಿತ್ತು.

* * *


ಬೀರ ಗದ್ದೆಯಲ್ಲಿ ಭತ್ತ ನಾಟ ಕಾರ್ಯದಲ್ಲಿ ನಿರತನಾಗಿದ್ದ. ಮುನ್ನ ಓಡೋಡಿ ಬರುತ್ತಿದ್ದ ಬಿರುಸಿಗೆ ಭತ್ತ ನಾಟ ಮಾಡುತ್ತಿದ್ದ ಒಕ್ಕಲಗಿತ್ತಿಯರು ದಂಗಾದರು. ’ಏ ಬೀರಾ ಬೇಗ ಬಾರೋ. ಪಕ್ಕು ಸಾವುಕಾರನಿಗೆ ಲಕ್ವಾ ಹೊಡೆದಿದೆ,’ರತ್ನಕ್ಕ ಹೇಳಿ ಕಳಿಸಿದಾರೆ. ಸಾಹುಕಾರರಿಗೆ ಲಕ್ವಾ ಹೊಡೆದಿದೆ ಎಂದು ಕೇಳಿದ ಬೀರ ಕುಸಿದುಹೋದ. ಸುಶೀಲಕ್ಕ ಹಿಡಿಶಾಪ ಹಾಕುತ್ತಾ ತೋಟದ ಮನೆಗೆ ಧಾವಿಸಿದರು. ರತ್ನಕ್ಕ ತುಟಿಬಿಚ್ಚದ ದುಃಖ ಅದಿಮಿಟ್ಟುಕೊಂಡಿದ್ದರು. ಮುನ್ನ ಶೆಡ್ ನಲ್ಲಿಟ್ಟಿದ್ದ ಕಾರ್ ಹೊರತೆಗೆದ. ಮತ್ತು ಹೆಗಡೆ, ಬಶೀರ, ಪಕ್ಕುವನ್ನು ಹಿಡಿದುಕೊಂಡು ಬಂದ್ರು. ಬೀರ ಸಾಹುಕಾರನನ್ನು ಮನೆಯಿಂದ ಹೊರತರಲು ನೆರವಾದ. ಪಕ್ಕು ಸಾವುಕಾರ ಆಸ್ಪತ್ರೆ ಸೇರಿದ್ರು. ರತ್ನಕ್ಕ ತೋಟದ ಮನೆಯಲ್ಲಿ ದಿನದೂಡುತ್ತಿದ್ದರು. ಪುತ್ತು ಹೆಗಡೆ ಆಗಾಗ ಬಂದು ಹೋಗುತ್ತಲೇ ಇದ್ದಾರೆ…. ಬೀರ ತನ್ನ ಸಾವುಕಾರನೊಂದಿಗೆ ಮುಖಾಮುಖಿ ಯಾಗಿ ಕೇಳಬೇಕೆಂದ ಮಾತುಗಳು ಗದ್ದೆ ಯಲ್ಲಿ ಬಿದ್ದು ಹೊರಳಾಡುತ್ತಿವೆ… ರತ್ನಕ್ಕನ ಚಂಚಲತೆ ಸಹ ಬೀರನಿಗೆ ಬಿಡಿಸಲಾಗದ ಒಗಟಾಗಿ ಉಳಿದುಬಿಟ್ಟಿದೆ. ಬೀರಾ ಸಸಿಹಿತ್ಲುಗೆ ತೆರಳಿ ಸ್ವಂತ ಗದ್ದೆ ಗೇಯುವ ಕನಸು ಕಾಣುತ್ತಲೇ ಇದ್ದಾನೆ. ಗುಡಿಸಲ ಮುಂದೆ ಸಿರಿ, ಮಂಜ ಆಟವಾಡುತ್ತಲೇ ಇದ್ದಾರೆ…..

-ಅರೆಯೂರು ಚಿ.ಸುರೇಶ್
ವರದಿಗಾರರು
ಪ್ರಜಾಮನ ದಿನಪತ್ರಿಕೆ
2ನೇ ಅಡ್ಡ ರಸ್ತೆ,  ಹಟ್ ಹೋಟೆಲ್ ಎದುರು
ಎಂಜಿ ರಸ್ತೆ,  ತುಮಕೂರು  ಮೋ: 7090564603

ಕಥೆ: ಹೊಸ ಬೆಳಕು

 



ಹೊಲಿಗೆ ಯಂತ್ರವನ್ನು ತುಳಿಯುತ್ತಾ ಜಲಜ ಯೋಚಿಸತೊಡಗಿದಳು. ಯೋಚನೆಗಿಳಿದರೆ ಅವಳಿಗೆ ಹೊಲಿಗೆ ಯಂತ್ರದ ಸದ್ದು ಪಕ್ಕವಾದ್ಯದ ಹಾಗೆ ಕೇಳಿಸುತ್ತಿತ್ತು. ಒಮ್ಮೊಮ್ಮೆ ಲಹರಿ ಬಂದರೆ ಸಣ್ಣದಾಗಿ ಅವಳು ಹಾಡಿಕೊಳ್ಳುವುದಿತ್ತು. ಆಗ ಯಾರಾದರೂ ಗಿರಾಕಿಗಳು ಬಂದರೆ, ’ಏನು ಜಲಜಕ್ಕಾ, ಬಹಳ ಖುಷಿಯಲ್ಲಿರುವಂತಿದೆ’ ಎಂದು ಕೇಳುವುದುಂಟು. ಆಗ ಅವಳು ನಗುತ್ತಾ, ’ಇದು ನಿಮ್ಮನ್ನು ನೋಡಿದ ನಂತರ ಆದ ಖುಷಿ’ ಎಂದು ಉತ್ತರಿಸುತ್ತಿದ್ದಳು. ಲಂಗ ಬ್ಲೌಸ್ ಹೊಲಿಸಲು ಬಂದ ಹೆಂಗಸರು ಅವಳು ನಗುವಿನಲ್ಲಿ ಪಾಲ್ಗೊಳ್ಳುತ್ತಿದ್ದರು.

 ಜಲಜ ಹಳೆಯದನ್ನೆಲ್ಲಾ ಒಮ್ಮೊಮ್ಮೆ ಯೋಚಿಸುವುದುಂಟು. ’ಕಳೆದ ಹೋದ ದಿನಗಳೇ ಒಳ್ಳೆಯ ದಿನಗಳು’ ಎಂದು ಅವಳು ಅದೆಷ್ಟೋ ಬಾರಿ ಅಂದುಕೊಂಡಿದ್ದಿದೆ. ಬದುಕಿನ ಆಕಾಶದಲ್ಲಿ ಕರಿಯ ಮೋಡಗಳೇ ಆವರಿಸಿಕೊಂಡಂತೆ ಅವಳಿಗೆ ಅನಿಸುತ್ತಿತ್ತು. ಹಾಗಂತ ಅವಳ ವೈವಾಹಿಕ ಜೀವನ ದುಃಖದಾಯಕವಾಗೇನೂ ಇರಲಿಲ್ಲ. 

ಅವಳ ಪತಿ ಮೋನಪ್ಪ ಅಡಿಕೆ ಕೊಯ್ಯುವ ಕೆಲಸ ಮಾಡುತ್ತಿದ್ದ. ಕೂಯ್ಲಿನ ಸಮಯದಲ್ಲಿ ಕೈತುಂಬ ಸಂಬಳ, ಮಳೆಗಾಲದಲ್ಲಿ ಔಷಧಿ ಹೊಡೆಯುವ ಸಮಯ. ಅದರಲ್ಲೂ ಸಾಕಷ್ಟು ಗಳಿಕೆ. ತೆಂಗಿನ ಮರವನ್ನೇರುವುದಲ್ಲಿ ಮಂಗನನ್ನೂ ಮೀರಿಸಬಲ್ಲ ಮೋನಪ್ಪ ಆದರಿಂದಲೂ ಸಾಕಷ್ಟು ಗಳಿಸುತ್ತಿದ್ದ. ಕೆಲಸವೇ ಇಲ್ಲದ ದಿನಗಳಲ್ಲಿ ಯಾವುದಾದರೂ ತೆಂಗಿನ ಮರವೇರಿ ಒಂದಷ್ಟು ಕಾಯಿಕಿತ್ತು ಮಾರಾಟ ಮಾಡಿ ಬದುಕುವ ಕಲೆಯೂ ಅವನಿಗೆ ಸಿದ್ಧಿಸಿತ್ತು. ಮೋನಪ್ಪನಿಗೆ ನಾಟಕದ ಹುಚ್ಚು. ಅವನ ಸಂಜೆಹೊತ್ತು ಸ್ವಲ್ಪ ಹಾಕಿಯೇ ಬರುತ್ತಿದ್ದ. ಜಲಜಾಳನ್ನು ನೋಡಿದೊಡನೆಯೇ, ಚಿಕ್ಕ ಪ್ರಾಯದ ಬಾಲೆ ಚದುರೆ, ನಿನ್ನಂಗವ ಒರೆಯಲೇನೇ’ ಎಂದು ರಸವತ್ತಾಗಿ ಹಾಡಿಬಿಡುತ್ತಿದ್ದ. ಆಗೆಲ್ಲಾ ಇವಳ ಕೆನ್ನೆಗಳು ಕೆಂಪೇರುತ್ತಿದ್ದವು.’ಹಗಲೇ ಶುರುವಾಯಿತು ಇವರದ್ದು’ಎಂದು ಹುಸಿಕೋಪ ನಟಿಸುತ್ತಿದ್ದಳು. ಅಂತಹ ಮೋನಪ್ಪ ಒಂದು ಕರಾಳ ದಿನ ತೆಂಗಿನ ಮರದಿಂದ ಬಿದ್ದು ವಿಪರೀತ ಏಟು ತಗುಲಿ ಒಂದು ವಾರ ಆಸ್ಪತ್ರೆಯಲ್ಲಿದ್ದು ಅವಳ ಹಣೆಯ ಬೊಟ್ಟನ್ನು ಅಳಿಸಿ ಕಾಣದ ಲೋಕಕ್ಕೆ ಹೊರಟು ಹೋಗಿದ್ದ.

 ಅವಳಲ್ಲಿದ್ದ ಉಳಿತಾಯ ಅವನ ಚಿಕಿತ್ಸೆಗೆಂದು ಮುಗಿದು ಹೋಗಿತ್ತು. ದಿನವಿಡೀ ಅತ್ತು ಅತ್ತು ಅವಳು ದುಃಖ ಮರೆಯಲು ಯತ್ನಿಸುತ್ತಿದ್ದಳು. ಸಂಜೆಯ ವೇಳೆಗೆ ಮೋನಪ್ಪ ಹೇಳುತ್ತಿದ್ದ. ’ಗಜಮುಖದವಗೆ, ಚಿಕ್ಕಪ್ರಾಯದ ಬಾಲೆ ಚದುರೆ’ ಮನೆಯಲ್ಲೆಲ್ಲಾ ಪ್ರತಿಧ್ವನಿಸುವಂತಾಗುತ್ತಿತ್ತು. ಒಂದೆಡೆ ಒಂಟಿತನ ಕಾಡಿದರೆ ಇನ್ನೊಂದೆಡೆ ಮುಂದೆ ಬದುಕು ಹೇಗೆಂಬ ಪ್ರಶ್ನೆ ಬೃಹದಕಾರವಾಗಿ ಅವಳನ್ನು ಕಾಡತೊಡಗಿತ್ತು.

 ಜಲಜಾಳ ಅಪ್ಪ ಒಂದು ಸಲ ಅವಳನ್ನು ನೋಡಲು ಬಂದಿದ್ದವರು, ’ನೀನಲ್ಲಿಗೆ ಬಂದುಬಿಡು ಮಗಾ, ಇಲ್ಲಿ ಯಾಕಿರ್ತೀಯಾ, ಹೆತ್ತ ನಮಗೆ ನೀನೇನು ಹೊರೆ ಯಾಗುತ್ತಿಯಾ’ ಎಂದು ಪ್ರಶ್ನಿಸಿದ್ದರು. ಅವಳಿಗೂ ಹೋಗಿ ಬಿಡಲೇ ಎನಿಸಿತ್ತು. ಆದರೆ ಅತ್ತಿಗೆಯ ನೆನಪಾಗಿ ಮನಸ್ಸು ಹಿಂದೆಕ್ಕೆಳೆಯಿತು.ಅಣ್ಣ ಎಳವೆಯಲ್ಲಿ ತುಂಬಾ ಪ್ರೀತಿಯಿಂದ ಅವಳನ್ನು ನೋಡಿಕೊಳ್ಳುತ್ತಿದ್ದ.  ಅವನಿಗೆ ಮದುವೆಯಾಗುವವರೆಗೂ ಸಮಸ್ಯೆಯೇನು ಬಂದಿರಲಿಲ್ಲ. ಅತ್ತಿಗೆ ಬಂದಿದ್ದೇ ಶುರುವಾಯಿತು. ಮನೆಯ ಪ್ರಶಾಂತ ವಾತಾವರಣವೇ ಕದಡಿಹೋಯಿತು.’ಈ ಮುದುಕರದ್ದು ಮಾತ್ರವಲ್ಲದೆ ನಿಮ್ಮ ತಂಗಿಯ ಸೇವೆಯನ್ನು ನಾನು ಮಾಡಬೇಕು. ನಾನೇನು ಕೆಲಸದವಳಾ? ಈ ಭಾಗ್ಯಕ್ಕೆ ನನ್ನನ್ನು ಯಾಕೆ ಕಟ್ಟಿಕೊಂಡಿರಿ?’ಎಂದು ದೊಡ್ಡ ಸ್ವರದಲ್ಲಿ ಆಗಾಗ ಹೇಳುವುದು. ಅಣ್ಣ ಗದರಿದರೆ ’ ಸೊರ್ ಸೊರ್’ ಸದ್ದು ಹೊರಡಿಸಿವುದು ಕೇಳಿ ಕೇಳಿ ಜಲಜಾಳಿಗೆ ಸಾಕಾಗಿ ಹೋಗಿತ್ತು.

 ಯಾರು ಬಂದರೂ ಒಪ್ಪಿಕೊಳ್ಳುವ ಹಂತಕ್ಕೆ ಅವಳು ಮುಟ್ಟಿದ್ದಳು. ಆ ಕಾಲಕ್ಕೆ ಸರಿಯಾಗಿ ಮೋನಪ್ಪ ಬಂದಿದ್ದ. ಅವನ ಕೈಕಾಲುಗಳು ಕಡ್ಡಿಗಳಂತಿದ್ದವು. ಮುಖ ಹೆಚ್ಚು ಕಡಿಮೆ ಆದಿಮಾನವನನ್ನು ಹೋಲುತ್ತಿತ್ತು. ಈಗ ಬಂದದ್ದು ಬಿಟ್ಟರೆ ಮುಂದೆ ಪಶ್ಚಾತ್ತಾಪ ಪಡಬೇಕಾದಿತು. ಎಲ್ಲಕ್ಕಿಂತ ಹೆಚ್ಚಾಗಿ ಅತ್ತಿಗೆಯ ಪಿರಿಪಿರಿಯಿಂದ ದೂರಾಗಲು ಇರುವ ಏಕೈಕ ದಾರಿ ಇದೊಂದೇ ಎಂದು ಅವಳ ಮನಸ್ಸು ಹೇಳಿದ್ದಕ್ಕೆ ಅವಳು ಅವನನ್ನು ಒಪ್ಪಿಕೊಂಡಿದ್ದಳು. ಅಪ್ಪ ಅಣ್ಣನಿಗೆ ಮನಸ್ಸೇ ಇರಲಿಲ್ಲ. ಅತ್ತಿಗೆ, ’ಅವಳಿಗೇ ಒಪ್ಪಿಗೆಯಾದ ಮೆಲೆ ನಿಮ್ಮದೇನು?” ಎಂದು ಆಕ್ಷೇಪಿಸಿದ್ದಳು. ಕೊನೆಗೂ ಜಲಜಾ ಮೋನಪ್ಪನ ಮಡದಿಯಾಗಿ ಆ ಮನೆಯನ್ನು ತುಂಬಿದ್ದಳು. ಮೋನಪ್ಪ ನೋಡಲು ಹೇಗಿದ್ದರೂ ಅವನಲ್ಲಿ ಪ್ರೀತಿಗೆ ಬರವಿರಲಿಲ್ಲ , ಮೋನಪ್ಪನಿಗೆ ಅಪ್ಪ-ಅಮ್ಮ ಇರಲಿಲ್ಲ. ಇರುವ ಒಬ್ಬ ತಂಗಿಯನ್ನು ಮದುವೆ ಮಾಡಿಕೊಟ್ಟಿದ್ದ. ಹಾಗಾಗಿ ಮನೆಯಲ್ಲಿ ಇವರಿಬ್ಬರೇ. ಜಲಜಾಳ ಮೇಲೆ ಪ್ರೀತಿಯ ಧಾರೆಯನ್ನೇ ಎರೆದಿದ್ದ. ವೈವಾಹಿಕ ಜೀವನ ಇಷ್ಟೊಂದು ಚೆನ್ನಾಗಿರುತ್ತದೆಂದು ಅವಳಿಗೆ ಅರಿವಾದದ್ದೇ ಆಗ. ಅಂತಹ ಪತಿರಾಯ ಒಂದು ದಿನ ಬೆಳಿಗ್ಗೆಯೇ ಹಾಕಿದ್ದ. ತೆಂಗನ್ನು ಹತ್ತುವಾಗ ಅದ್ಯಾವ ಲಹರಿಯಲ್ಲಿದ್ದನೋ, ಜಾರಿ ಬಿದ್ದಿದ್ದ. ಅಲ್ಲಿಗೆ ತನ್ನ ಬಾಳೆ ಕಮರಿ ಹೋಯಿತೆಂದು ಅವಳು ಕಂಗಾಲಾಗಿದ್ದಳು. ಒಂದುದಿನ ಪಂಚಾಯಿತಿ ಸದಸ್ಯ ತಿಮ್ಮಣ್ಣ ಅವಳ ಮನೆಗೆ ಬಂದಿದ್ದ. ಅದು-ಇದು ಪ್ರಸ್ತಾಪ ಮಾಡಿ, `ಎಷ್ಟು ದಿನಾಂತ ಹೀಗಿರ್ತೀಯಾ ಜಲಜಕ್ಕ. ಪಂಚಾಯಿತ್ ನಲ್ಲಿ ಏನಾದರೂ ನಿನಗೆ ಕೆಲಸ ಕೊಡಿಸಲು ಯತ್ನಿಸುತ್ತೇನೆ. ಅದಕ್ಕೆ ನಿನ್ನ ಸಹಕಾರ ಅಗತ್ಯ’ ಎಂದ. ಅವಳು ಅರ್ಥವಾಗದೇ ಕಣ್ಣು ಪಿಳಿಪಿಳಿ ಬಿಟ್ಟಾಗ ಹತ್ತಿರಬಂದು, ’ಏನು ಜಲಜಕ್ಕ ಮದುವೆಯಾದವಳು ನೀವು, ನಿನಗೆ ನಾನು ಬಿಡಿಸಿ ಹೇಳಬೇಕಾ? ನಾಳೆದಿನ ಹೆಚ್ಚು ಕಡಿಮೆಯಾದರೂ ಅದು ಮೋನಪ್ಪನದೇ ಎಂದು ಜನ ಆಡಿಕೊಳ್ಳುತ್ತಾರೆ. ನೀನ್ಯಾಕೆ ಹೆದರಬೇಕು’ ಅಂದಿದ್ದ. ಜಲಜಾಳಿಗೆ ಅವನ ಬಗ್ಗೆ ಅಸಹ್ಯ ಹುಟ್ಟಿತು. ಅವನು ಕೇಳಿದ್ದಕ್ಕಲ್ಲ. ಹೆಣ್ಣೊಬ್ಬಳು ಸೋತಾಗ ಅವಳನ್ನು ದುರುಪಯೋಗಪಡಿಸಬಹುದೆಂದು ಅವನು ಭಾವಿಸಿದನಲ್ಲಾ ಆ ಭಾವನೆಗೆ. ಅವಳು ಕೈ ಮುಗಿದು ಹೇಳಿದಳು. “ನೀವು ಗೌರವಾನ್ವಿತ ಪಂಚಾಯಿತಿ ಸದಸ್ಯರು. ಇನ್ನು ಇಲ್ಲಿಗೆ ಬರಬೇಡಿ, ಬದುಕುವ ದಾರಿ ನನಗೂ ಗೊತ್ತಿದೆ.” ಅವಳಿಗೆ ಸ್ತ್ರೀ ಶಕ್ತಿ ಗುಂಪೊಂದನ್ನು ಪರಿಚಯಿಸಿದ್ದು ಶಾಲಾ ಮೇಸ್ಟ್ರು ಸುಂದರ ಎಂಬುವರು. ಒಂದು ದಿನ ಅವಳನ್ನು ಶಾಲೆಗೆ ಕರೆಸಿ ಅವರು ಹೇಳಿದರು. ’ನೋಡು ಜಲಜ, ಜೀವನ ಮುಗಿಯಿತು ಎಂದು ಭಾವಿಸಿಬೇಡ ನೀನು. ಮನಸ್ಸು ಮಾಡಿದರೆ ಬದುಕಲು ನೂರಾರು ದಾರಿಗಳಿವೆ. ಮಹಿಳಾ ಸಮಾಜದಲ್ಲಿ ಹೊಲಿಗೆ ಕ್ಲಾಸ್ ನಡೆಸುತ್ತಾರೆ. ನೀನು ಸೇರಿಕೋ. ಸ್ವಲ್ಪ ಉಳಿತಾಯ ಮಾಡಿದರೆ ಸ್ತ್ರೀ ಶಕ್ತಿ ಗುಂಪಿನಿಂದ ಒಂದು ಹೊಲಿಗೆ ಮೆಶಿನನನ್ನು ತೆಗೆದುಕೊಳ್ಳಬಹುದು. ಆಗ ನೀನು ಯಾರಿಗೂ ಹೆದರುವ ಅಗತ್ಯವೂ ಇಲ್ಲ.’ ಹಾಗೆ ಬಂದದ್ದು ಈ ಮಿಶನ್ನು.

 ಆರಂಭದ ದಿವಸಗಳನ್ನು ನೆನಪಿಸಿಕೊಳ್ಳುವಾಗ ಅವಳಿಗೆ ನಗು ಬರುತ್ತಿತ್ತು. ಅಳತೆ ನೋಡುವ ಟೇಪಿನಲ್ಲಿ ಹುಡುಗಿಯರ-ಹೆಂಗಸರ ಬ್ಲೌಸ್ ಗೆ ಅಳತೆ ತೆಗೆದುಕೊಳ್ಳುವಾಗ ತನ್ನ ಬಾಲ್ಯ, ಯೌವನದ ನೆನಪಾಗುತ್ತಿತ್ತು. ಅವಳು ಊರಿನ ದರ್ಜಿಯ ಬಳಿ ಲಂಗ-ಬ್ಲೌಸ್ ಹೊಲಿಸಲೆಂದು ಹೋದಾಗ ಅವನು ಅಳತೆ ತೆಗೆಯಲು ಅಗತ್ಯಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ. ಆಗೆಲ್ಲಾ ಏನೋ ನಾಚಿಕೆ. ಜೊತೆಗೆ ರೋಮಾಂಚನ. ಆ ಪ್ರಾಯವೇ ಹಾಗಿತ್ತು. ಈಗ ತಾನು ಹೆಂಗಸರ ಲಂಗ ಬ್ಲೌಸ್ ಹೊಲಿಯುತ್ತಿದ್ದೇನೆ. ತಾನು ಅಳತೆ ತೆಗೆದುಕೊಳ್ಳುವುದು ಇವರಲ್ಲಿ ರೋಮಾಂಚನ ಮೂಡಲಾರದು ಎಂದುಕೊಂಡು ಅವಳು ತುಟಿಯಂಚಿನಲ್ಲಿ ನಗುತ್ತಿದ್ದಳು. 

ಅಂದು ಸಂಜೆ ಶಾಲಾ ಮಾಸ್ತರರು ಅವಳಲ್ಲಿಗೆ ಬಂದಾಗ ಅವಳಿಗೆ ಅಚ್ಚರಿ. ಅವಳಿಗೆ ಗಂಡಸರ ಡ್ರೆಸ್ ಹೊಲಿಯಲು ಗೊತ್ತಿರಲಿಲ್ಲ. ಯಾಕೆ ಬಂದರು ಇವರು? ಅವಳು ಗಡಬಡಿಸಿ ಎದ್ದು ನಮಸ್ಕರಿಸಿ,’ಬನ್ನಿ ಮಾಸ್ಟ್ರೇ, ಯಾಕೆ ಬಂದಿರಿ ಎಂದೇ ಗೊತ್ತಾಗಲಿಲ್ಲ.’ ಎಂದಳು. ಮೇಸ್ಟ್ರು ಎದುರಿದ್ದ ಸ್ಟೂಲ್ ನಲ್ಲಿ ಕುಳಿತರು. ’ಏನಿಲ್ಲ ಜಲಜ, ಹೇಗಿದೆ ನಿನ್ನ ಕೆಲಸ ಎಂದು ನೋಡಿಕೊಂಡು ಹೋಗೋಣಾಂತ ಬಂದೆ.’ ಅವಳು ನಕ್ಕಳು.’ಎಲ್ಲಾ ನಿಮ್ಮ ಆಶೀರ್ವಾದ ಸರ್, ನೀವು ಹೇಳಿದ್ದಕ್ಕೆ ಹೊಲಿಗೆ ಕಲಿತೆ. ಈಗ ಮೆಶಿನ್ನೂ ಬಂದಿದೆ. ಸಾಲ ಪೂರ್ತಿ ತೀರಿಸಿದ್ದೇನೆ. ಸ್ವಲ್ಪ ಉಳಿತಾಯವೂ ಇದೆ. ನೆಮ್ಮದಿಯಾಗೇ ಇದ್ದೇನೆ.’ಅಂದಳು. ಮೇಸ್ಟ್ರು ಅದೂ-ಇದೂ ಮಾತನಾಡಿ ವಿಷಯಕ್ಕೆ ಬಂದರು.’ನಾನೊಂದು ಮಾತು ನಿನಗೆ ಹೇಳಬೇಕು ಜಲಜಾ. ಆದರೆ ಅದು ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾರಿಗೂ ತಿಳಿಯಲೇಬಾರದು. ನಿನಗೆ ಈ ಮಾತು ಇಷ್ಟವಾಗದಿದ್ದರೆ ನೇರವಾಗಿ ಹೇಳಿಬಿಡು. ನನಗೇನೂ ಬೇಸರವಿಲ್ಲ.’ ಎಂದರು. ಜಲಜ ಆಶ್ಚರ್ಯದಿಂದ ಅವರ ಮುಖವನ್ನೇ ನೋಡುತೊಡಗಿದಳು. `ನಿನಗೆ ಗೊತ್ತಲ್ವ ಜಲಜ, ಮಗಳು ಶ್ವೇತಾ ತುಂಬ ಹಠ ಮಾಡುತ್ತಿದ್ದಾಳೆ. ತಾಯಿ ಇಲ್ಲದ ಮಗು ತಾನೇ? ಈ ಶಾಲೆಯ ಕೆಲಸ, ಗಣತಿ ಕೆಲಸ, ಬಿಸಿಯೂಟದೆ ತಯಾರಿ, ಚುನಾವಣೇ ಎಂದು ಅವಳನ್ನು ಗಮನಿಸಲು ಸಮಯವೇ ಸಿಗುತ್ತಿಲ್ಲ. ನೇರವಾಗಿ ಕೇಳುವುದಕ್ಕೆ ಕ್ಷಮಿಸು. ನೀನು ಒಪ್ಪಿದರೆ ಅವಳಿಗೆ ತಾಯಿ ಸಿಕ್ಕಂತಾಗುತ್ತದೆ.’ ಜಲಜಾಳ ಮೈ ಒಮ್ಮೆ ಥರಗುಟ್ಟಿತು. ನಾಚಿಕೆಯಿಂದ ಕೆನ್ನೆಗಳಲ್ಲಿ ರಂಗು ಸುಳಿಯುತು. ಅವಳು ತಲೆ ತಗ್ಗಿಸಿ ಹೇಳಿದಳು,’ ಈಕ್ಷಣಕ್ಕೆ ಹೇಗೆ ಉತ್ತರಿಸಲಿ ಮೇಸ್ಟ್ರೆ, ನಾಳೆ ಉತ್ತರಿಸುತ್ತೇನೆ.” ಮೇಸ್ಟ್ರು ನಕ್ಕರು. ’ಸ್ಪಷ್ಟವಾಗಿ ಹೇಳುತ್ತೇನೆ ಜಲಜ. ನಾನು ನೇರ ಮನುಷ್ಯ. ನಿನಗೆ ಒಪ್ಪಿಗೆಯಿಲ್ಲದಿದ್ದರೆ ಏನೊ ಬೇಸರವಿಲ್ಲ. ಶ್ವೇತಾಳಿಗೆ ತಾಯಿ ಬೇಕೆಂದೇ ನಿನ್ನನ್ನು ನಾನು ಕೇಳುತ್ತಿರುವುದಲ್ಲ. ನನಗೂ ಒಬ್ಬಳು ಜೊತೆಗಾತಿ ಬೇಕು ಎನಿಸಿದೆ. ಮನಸ್ಸಿಗೆ ಇಷ್ಟವಾದ ಹೆಣ್ಣು ಕೊಡಬಹುದಾದ ಸಮಾಧಾನ ಬೇರೆ ಯಾರಿಂದಲೂ ಸಿಗಲಾರದು.’ ಎಂದು ಹೇಳುತ್ತಾ ಎದ್ದು ಹೊರಗೆ ಕಾಲಿಟ್ಟರು. ಅವರು ಹೊರಗೆ ಬರುತ್ತಿರುವಂತೆ ಜಲಜ ಮೃದುವಾಗಿ ಹೇಳುತ್ತಿರುವುದು ಅವರ ಕಿವಿಗೆ ಬಿತ್ತು. ’ನಾನು ಒಪ್ಪಿದ್ದೇನೆ.’ ಮೇಸ್ಟ್ರು ತಿರುಗಿ  ನೋಡಿದರು. ಜಲಜಾಳ ಕಣ್ಣುಗಳಲ್ಲಿ ಸಾವಿರ ಕ್ಯಾಂಡಲ್ಲಿನ ದೀಪ ಉರಿಯುತ್ತಿರುವಂತೆ ಅವರಿಗೆ ಭಾಸವಾಯಿತು!

-ಅರೆಯೂರು ಚಿ.ಸುರೇಶ್
ತುಮಕೂರು
7090564603

ಕಥೆ: ಪ್ರೀತಿಯ ಭಾವನೆ



 

ನನಗೆ ತುಂಬಾ ದುಃಖ ಆಗುತ್ತಿದೆಅಳು ತಡೆಯಲಿಕ್ಕೆಆಗುತ್ತಿಲ್ಲಗಂಟಲು ಟ್ಟಿ ಬರುತ್ತಿದೆಹೊಟ್ಟೆ ಒಳಗಿಂದಸಂಕಟ ಉಕ್ಕಿ ಬರುತ್ತಿದೆಹೃದಯ ನೀನಿಲ್ಲದೆ ರೋಧಿಸುತ್ತಿದೆಯಾಕೆ ನನ್ನಿಂ ನೀ ದೂರ ಹೋದೆ?ನಾ ಏನು ತಪ್ಪುಮಾಡಿದೆಎಲ್ಲಿ ಅಂತ ಹುಡುಕಲಿ ನಾನುನೀ ಇಲ್ಲದೆ ನನಗೆಇರೋದಕ್ಕಾಗಲ್ಲ ಅನ್ನುವುದು ನಿನಗೆ ಚೆನ್ನಾಗಿ ಗೊತ್ತುನೀಇಲ್ಲದೆ ಇದ್ದರೆ ನಾನು ತುಂಬಾ ಅಳ್ತೀನಿ ಅನ್ನೋದೂ ನಿನಗೆಗೊತ್ತುನಿನ್ನಿಂದಾಗಿ ನಾ ಜೀವನದಲ್ಲಿ ಗೆಲುವಾಗಿದ್ದೀನಿಆರೋಗ್ಯ ಸುಧಾರಿಸುತ್ತಿದೆಸದಾ ನಗತಾ ಇರ್ತೀನಿಅನ್ನೋದೆಲ್ಲ ಗೊತ್ತಿದ್ದೂ ಯಾಕೆ ನನ್ನಿಂದ ದೂರ ಹೋದೆಹೇಳುಒಂದೇ ಒಂದು ಸಾರಿ ಮಾತಾಡುನಿನ್ನ ಮಾತಿಲ್ಲದೆಸತ್ತೇ ಹೋಗ್ತೀನೆನೊ ಅನಿಸುತ್ತಿದೆನನ್ನ ಹೃದಯದ ತುಂಬಾನೀನೆ ತುಂಬಿದಿಯಾಹೇಗೆ ಮರಿಲಿನನಗೆ ಗಲ್ಲ ಕಣೊಒಂದು ಸಾರಿ ಮಾತಾಡೂಡೂಡೂ…. ನನ್ನ ಹೃದಯ ತಂಪುಮಾಡೂಡೂಡೂ‌‌‌.‌‌‌‌……..

ಅವಳು ಹುಚ್ಚಿ ತರ ಮೌನವಾಗಿ ರೋಧಿಸುತ್ತಿದ್ದಾಳೆ ಮಂಚದಮೂಲೆಯಲ್ಲಿ ತಲೆ ಹುದುಗಿಸಿಬಿಕ್ಕಿ ಬಿಕ್ಕಿ ಅಳುವ ಶಬ್ ಸ್ವಲ್ಪಜೋರಾಗೆ ಇದೆಆದರೆ ಬೀಕೊ ಅಂತಿರೊ ಮನೆಯಲ್ಲಿಅವಳೊಬ್ಬಳೆ ಒಂಟಿ ಪಿಶಾಚಿನಾಲ್ಕು ಗೋಡೆಯ ಮದ್ಯಅವಳದೊಂದು ಒಂಟಿ ಬದುಕು.

ಅವನಿರುವಷ್ಟು ದಿನ ಆಗಾಗ ಮಾತನಾಡುತ್ ತನ್ನದೆಲೋಕದಲ್ಲಿ ಹಕ್ಕಿಯಂತೆ ಗರಿ ಬಿಚ್ಚಿ ಹಾರಾಡುತ್ತಿದ್ದ ಮನಸ್ಸುಈಗ ನಡೆದ ದಿನಗಳ ನೆನೆಸಿಕೊಂಡು ದುಃಖಿಸುತ್ತಾಳೆ.

ಅವನ ಅಗಲಿಕೆಯ ದಿನಗಳಲ್ಲಿ ಮನಸು ರೋದಿಸುವ ಪರಿಇದುಅವನ ಮೌನದ ದಿನಗಳಲ್ಲಿ ಆಗಾಗ ಆತಂಕದಮಡುವಿನಲ್ಲಿ ಕುಸಿದು ಹೋಗುತ್ತಾಳೆಮರೆತುಬಿಡುವಮನುಷ್ಯ ಅವನಲ್ಲಆದರೂ ಅವನಿಲ್ಲದಿದ್ದರೆ ಹಾಗೆಮನದೊಳಗೆ ಅದೇನೊ ಅಂಜಿಕೆನಂಬಿಕೆ ಗೊತ್ತಿಲ್ಲದಂತೆಮನ ಅಲ್ಲಾಡಿಸಿಬಿಡುತ್ತದೆಯಾಕೆಮನ ಅವನಿಲ್ಲದದಿನಗಳ ಕಲ್ಪನೆ ಕೂಡಾ ಮಾಡಲು ರೆಡಿ ಇಲ್ಲ.

ಗುಯ್ಯ ಗುಡುವ ದುಂಬಿಯಂತೆ ಆಗಾಗ ಮಾತಿನ ಸುರಿಮಳೆಸುರಿಸುತ್ತ ಹತಾಷೆಯ ಒಕ್ಕೊರಳ ರೋದನಕ್ಕೆ ಕಿವಿಗೊಟ್ಟುಸಂತೈಸುತ್ತ ಹಂತ ಹಂತವಾಗಿ ಭರವಸೆಯ ಪಸೆ ಒಸರಲುಕಾರಣನಾದವನು ಅವನುನಂಜು ಕುಡಿದನಂಜುಂಡೇಶ್ವರನಂತೆ ಅವಳ ದುಃಖವೆಲ್ಲ ತನ್ನದೆಂಬಂತೆಭಾಗಿಯಾದವನು ಅವನುಅದೆಷ್ಟು ಕರುಣೆ ಅವಳ ಬಗ್ಗೆ .

 ಕರುಣೆ ಪ್ರೀತಿ ಮಮತೆ ವಾತ್ಸಲ್ಯಭರವಸೆಯ ಮಾತುಗಳು; ” ಏನಾದರೇನಂತೆ ನಾವಿಬ್ಬರೂಮದುವೆ ಆಗೋನನಗೆ ಎರಡು ಮಕ್ಕಳು ಬೇಕು ನಿನ್ನಿಂದಎಲ್ಲಾದರೂ ದೂರ ದೇಶ ಬಿಟ್ಟು ನಿನ್ನನ್ನು ಕರೆದುಕೊಂಡುಹೋಗಿ ಸದಾ ನಿನ್ನೊಂದಿಗೆ ನಾ ಇರಬೇಕುಇದುವರೆಗೂನಿನಗೆ ಸಿಗಲಾರದ್ದುನಿನ್ನ ಆಸೆಗಳನ್ನೆಲ್ಲ ನಾನು ಪೂರೈಸುತ್ತೇನೆನಮ್ಮಿಬ್ಬರಲ್ಲಿ ಅದೆಷ್ಟು understanding ಇದೆಜೀವನವೆಲ್ಲಮಾತಾಡಿದರೂ ಮುಗಿಯದಷ್ಟು ಮಾತು ನಮ್ಮಿಬ್ಬರ ಮದ್ಯೆ.ಎಷ್ಟು ಮಾತಾಡಿದರೂ ಸಾಕು ಅನಿಸೋದಿಲ್ಲಸದಾ ನಿನ್ನಜೊತೆ ರಬೇಕು. I love you my sweet heart ” ಅಂತಅದೆಷ್ಟು ಸಾರಿ ಉಸುರಿಲ್ಲ!

ಉದ್ವೇಖದ ಭರದಲ್ಲಿ ಆಡಿದ ಮಾತುಗಳೆ ರಬಹುದೇನೊಆದರೆ ಅವನಂತರಾಳದಲ್ಲಿ ಪ್ರೀತಿಸುವ ತನ್ನ ಹುಡುಗಿಯ ಬಗ್ಗೆಇರುವ ಹೃದಯದ ಮಾತುಗಳಲ್ಲವೆಕನಸು ವಾಸ್ತವವನ್ನುಒಂದರೆಗಳಿಗೆ ಮರೆಸಿದರೂ ಜವಾಬ್ದಾರಿ ಅರಿತ ಅದ್ಭುತವಾದವ್ಯಕ್ತಿ ವನುಇದೆ ಅವಳಿಗೆ ಅಚ್ಚು ಮೆಚ್ಚು.

ಇವೆಲ್ಲ ಮರೆಯುವ ಮಾತುಗಳಾ? Never.  ನೆನಪುಗಳೆನನ್ನ ಬೆನ್ನೆಲುವಾಗಿಸಿದೆಏನಾದರೂ ಸಾಧಿಸಿಬಿಡಬೇಕೆನ್ನುವಛಲ ಮನೆ ಮಾಡಿದೆಪ್ರತಿಭೆ ಅನಾವರಣವಾಗಲುನೀನೊಂದು ಕಾರಣವಾದರೆ ಭಕ್ತಿಯಿಂದ ಪರಮಾತ್ಮನಿಗೆನಮಿಸುವಷ್ಟು ಲೆ ಬಾಗಿದೆ ತನುಇಲ್ಲಿ ಶಾಂತಿ ಇದೆಸಂತೃಪ್ತಿಇದೆನನ್ನ ಕನಸಿನಲ್ಲಿ, ವಾಸ್ತವದಲ್ಲಿ ಮರೆಯಾಗಿ ನೀನಿರುವುದೆನನಗೊಂದು ಶಕ್ತಿ.

ಅವನ ಆಗಮನ ಮಡುಗಟ್ಟಿದ ಪ್ರೀತಿಯ ಸೆಲೆ ಸುನಾಮಿ ತರಉಕ್ಕಿ ತನ್ನೊಡಲೊಳಗಿಂ ಚಿಮ್ಮಿ ಹರಿಯುತ್ತಿದೆಅವಳಿಗೆಆಶ್ಚರ್ಯಸಂತೋಷ ಎರಡೂ ಒಟ್ಟಿಗೆ ಮುನ್ನುಗ್ಗಿ ಮನಸ್ಸುಖುಷಿ ಪಡುತ್ತಿದೆವನಿಂದ ದೂರಾಗಿ ಇರಬೇಕಾದ ತನ್ನ ಸ್ಥಿತಿಅವನೊಂದಿಗಿನ ಬದುಕು ಕಳೆದುಕೊಂಡದ್ದು ನುಂಗಲಾರದತುತ್ತುಇಷ್ಟೊಂದು ಪ್ರೀತಿಗೆ ಹಪ ಹಪಿಸುವ ಜೀವತನ್ನೊಳಗಿತ್ತೆಹಮ್ಮಾ^^^^ ಅದೆಷ್ಟು ಸಂತೋಷ ನನ್ನೊಳಗೆಕೂಡಿಹಾಕಿಬಿಟ್ಟೆ ನೀನುಆಸೆಗಳ ಮೂಟೆ ಭೂಮಂಡಲದತುಂಬಾ ಚೆಲ್ಲಾಡಿ ಬಿಟ್ಟೆಈಗ ಎಲ್ಲಿ ನೋಡಿದರೂ ಕಾಮನಬಿಲ್ಲಿನ ರಂಗೋಲಿಒಂದೊಂದು ಬಣ್ಣದಲ್ಲೂ ನಿನ್ನದೆ ಛಾಯೆಕರಿಮೋಡದ ಚಲಿಸುವ ಪತದೊಳಗಿಂದ ತುಂತುರು ಮಳೆಸುರಿಸುವಂತೆ ಮನ ಹಕ್ಕಿಯಂತೆ ಹಾರಾಡುವ ಕುಣಿ ಕುಣಿದುನಲಿದಾಡುವ ರಂಗೇರಿದ ಕಲ್ಪನೆಯ ಸುಂದರ ಲೋಕತೋರಿಸಿಬಿಟ್ಟೆಯಲ್ಲಅಡಿಗೊಂದು ಹೆಜ್ಜೆ ನಮಸ್ಕಾರ ನಾನಿನಗೆ ಹಾಕಲೆಇಲ್ಲ ಕೆಂದುಟಿಯ ಹೂ ನಗುವಿನಲ್ಲಿನಿನ್ನದರದ ತುಂಬ ಮುತ್ತಿನ ಮಳೆಗರೆಯಲೆಹೇಳು ಎಲ್ಲಿನೀನುಎಲ್ಲಿ ನಾನುಮೌನದ ಮೆರವಣಿಗೆಯ ಸಂಗಾತಿನೀನುನಿನ್ನ ಮೌನವೆ ಆಬರಣ.

 ಮನಸೆ ಹಾಗೆಸದಾ ನೆನಪುಗಳ ಗುಂಗಿನಲ್ಲೆಮುಳುಗಿರುತ್ತದೆಸಂತಸದ ಕ್ಷಣಗಳ ಮೆಲುಕು ಹಾಕುತ್ತತನ್ನೊಳಗೆ ತಾ ನಗುತ್ತ ಒಮ್ಮೊಮ್ಮೆ ಅದೆ ನೆನಪಲ್ಲಿ ದುಃಖಿಸುತ್ತಹೇಳಲಾರದ ಗುಟ್ಟು ತನ್ನಲ್ಲೆ ಬಚ್ಚಿಟ್ಟುಕೊಂಡು ತಾನೊಬ್ಬನೆಅನುಭವಿಸುತ್ತ ಜೀವನದ ಜೋಕಾಲಿ ಜೀಕುವ ಕಸರತ್ತುಪ್ರತಿಯೊಬ್ಬ ಮನುಷ್ಯನದು.

ಮುಗ್ದ ಮನಸ್ಸು ಯಾವಾಗಲೂ ಕಲ್ಪನೆಯ ಲೋಕದಲ್ಲೆವಿಹರಿಸುತ್ತಿರುತ್ತದೆಅದಕ್ಕೆ ಮೋಸಕಪಟವಂಚನೆಯತಿಳುವಳಿಕೆ ರುವುದಿಲ್ಲಅದಕ್ಕೆ ಇಷ್ಟವಾದವರನ್ನುಪ್ರೀತಿಸುವುದೊಂದೆ ಗೊತ್ತುನಿಷ್ಕಲ್ಮಶ ಮನಸ್ಸು ಜೀವನಲ್ಲಿಎಲ್ಲರಿಗು ದೊರೆಯುವುದು ಕಷ್ಟ. “ಋಣಾನುಬಂಧ ರೂಪೇಣಪಶುಪತ್ನಿಸುತಆಲಯ” ಹಿರಿಯರ ಗಾದೆ ಸುಳ್ಳಲ್ಲ.

ಜೀವನದಲ್ಲಿ ಸಿಗಬೇಕಾದ್ದು ಸಿಗದೆ ಇರುವಾಗತಡೆಯಲಾರದಷ್ಟು ನಿರಾಸೆಅದೆ ಎಂದಾದರೊಮ್ಮೆ
ಸಿಕ್ಕಾಗ ಹಿಡಿಸಲಾರದಷ್ಟು ಸಂತೋಷ ಹಪಿಸುವಮನಸ್ಸಿಗೆ ಆಕಾಶದಲ್ಲಿಯ ನಕ್ಷತ್ರವೆ ಕೈಗೆ ಸಿಕ್ಕಷ್ಟು ಸಡಗರಆಗಮನಸ್ಸು ಸದಾ ಹಸನ್ಮುಕಿಆದರೆ ಯಾರಿಗೂ ನಿರಾಸೆಯಬದುಕು ಬೇಡಎಲ್ಲರೂ ಆನಂದದ ಕಡಲಲ್ಲಿ ತೆಲುತ್ತಿರುವಂತೆಕಾಣುವ ಅವಳೊಂದು ಮುಗ್ದ ಹೆಣ್ಣು.

ಆದರೆ ಅವಳಿಗೇ ಸುತ್ತಿಕೊಂಡಿದೆ ನಿರಾಸೆ ಹೀಗೆ ಬಂದು ಹಾಗೆಹೋದ ಅವನ ಮುಖ ರಿಚಯವಿಲ್ಲಅಲ್ಲೊಂದುಇಲ್ಲೊಂದು ನಗೆ ಚುಟುಕು ಮಾತನಾಡಿ ನಗಿಸಿ ತನ್ನ ಅಸ್ತಿತ್ವಛಾಪಿಸಿ ವಿರಳವಾಗುತ್ತ ನಡೆದ ವನನ್ನು ಅವಳಿಗೆಮರೆಯುವ ಮನಸ್ಸಿಲ್ಲ. ಮನಸ್ಸು ಮಾಡೋದೂ ಇಲ್ಲ.

ಅವನು ಭೂಮಿ ಮೇಲೆ ಎಲ್ಲಾದರೂ ಇರಲಿ ಸಾಕುನಾನೂ ಭೂಮಿ ಮೇಲೆ ಇದ್ದೀನಲ್ಲಾಅಂದರೆ ನನ್ನೊಂದಿಗೆ ಎಲ್ಲೊಅವನೂ ದ್ದಾನೆನೆನಪಾದಾಗ ಬಂದೇ ಬರುತ್ತಾನೆ ಅನ್ನುವಭರವಸೆಸಾಕು ಇಷ್ಟಿದ್ದರೆಮುಗಿಯುವ ಕಾಲಸನ್ನಿಃಹಿತವಾಗುವವರೆಗೂ  ನೆನಪಿನ ಗುಂಗಿನಲ್ಲೆ ಅವನಅಸ್ತಿತ್ವ ಆಗಾಗ ತಿಳಿದರೆ ಸಾಕಲ್ಲವೆದುಃಖಿಸುವ ಮನಸ್ಸಿಗೆಸಾಂತ್ವನಸಮಾಧಾನ.

ಹೀಗೆ ಹೇಳ್ತಿಯಾ ಮತ್ತೆ ನೆನಪಿಸಿಕೊಂಡು ಅಳ್ತೀಯಾ.ಯಾಕೆ? ” ಒಳ ಮನಸ್ಸಿನ ಪ್ರಶ್ನೆ‌ ಅವಳಿಗೇ ನಾಚಿಕೆಛೆ ಅವನುದೂರ ಹೋಗೇ ಬಿಟ್ಟ ಅನ್ನೋ ಹಾಗೆ ಕೊರಗಿಬಿಟ್ಟೆನಲ್ಲಮೊನ್ನೆತಾನೆ ನೋಡಿಕೊಂಡು ಹೋಗಿಲ್ವಾ ಮನಃ ಪರದೆ ಸರಿಸಿಅದೆಷ್ಟು ಕುಣಿದಾಡಿದ್ದೆಹೌದುನಾನು ತಪ್ಪು ಮಾಡಿದೆವನನ್ನು ಸಂಶಯಿಸಿದಂತೆ ನಾನು ಅತ್ತರೆಅದವನಿಗೂಇಷ್ಟನೆ ಅಗ್ತಿರಲಿಲ್ಲನಾನು ಇನ್ಮೇಲೆ ಅಳಲೇಬಾರದುಹಾಗೆಅವಳದೆ ಒಂದು ಹೊಸ ಕೆಲಸದಲ್ಲಿ ತಲ್ಲೀನಳಾಗುತ್ತಾಳೆ.

ಬದುಕೊಂದು ನಿಂತ ನೀರು ಕೆಲವರ ಜೀವನ. ಯಾವುದೆಬದಲಾವಣೆ ಇಲ್ಲದೆ ದಿನ ದೂಡು ನೆಪ ಬದುಕುಅವಳಿದ್ದದ್ದೂ ಹಾಗೆ. ಋಣವಿರುವ ಕಾಲ ಬಂದಾದ ಮೇಲೆಅವನವಳ ಸಂಗಾತಿಭರವಸೆಯ ಮಾತು ಮುಗ್ದಮನಸಿನೊಳಗೆ ಪಡಿಯಚ್ಚುಮನಸು ಮನಸುಗಳ ಮಾತಿಗೆಸಂಬಂಧ ಬರಿ ಮಾತಿನಲ್ಲೆಆದರೆ ಅನುಭವಿಸಿದ ಗಳಿಗೆಗಳ ಮಧುರ ಕ್ಷಣ ಹೃದಯದಲ್ಲಿ ಸುವಣಾ೯ಕ್ಷರಗಳಲ್ಲಿಬರೆದುಕೊಂಡಿದ್ದಾಳೆಬಹುಶಃ ನಿರಂತರ ಬದುಕುಅವನಪ್ಪಿಕೊಂಡಿದ್ದರೆ  ಮಧುರ ಕ್ಷಣಗಳು ಒಮ್ಮೆಯಾದರೂಆಯ ತಪ್ಪಿಬಿಡುತ್ತಿತ್ತೇನೊಆದರೆ ಪ್ರೀತಿಸುವ ಹೃದಯದೂರವಿದ್ದಷ್ಟೂ ಅದು ಅತೀ ಹತ್ತಿರಅಲ್ಲಿ ಬರೀ ಎರಡುಜೀವಗಳು ಮಾತ್ರ ಮೂರನೆಯ ವ್ಯಕ್ತಿ ಶೂನ್ಯ.

ಬಹುಶಃ ಸಂಸಾರದಲ್ಲಿ ಎರಡು ಜೀವಗಳ ಮದ್ ಮನಸ್ಥಾಪಕ್ಕೆಮೂರನೆಯ ವ್ಯಕ್ತಿ ಕಾರಣಇಲ್ಲಿ ಅದಕ್ಕೆಲ್ಲ ಅವಕಾಶವಿಲ್ಲಕೇವಲ ಅವಳಿಗೆ ಅವನುಅವನಿಗೆ ಅವಳುಆದುದರಿಂದಪ್ರೀತಿಯ ದಾರಿ their is no end.

ಅಪರೂಪದಲ್ಲಿ ಅಪರೂಪಮುಖಾರವಿಂದದಲ್ಲಿ ಅದೇನೊಆಕಷ೯ಣೆಆದರೆ ಅವನಿಗೊ ನಾನು ಚೆನ್ನಾಗಿ ಇಲ್ಲ ಅನ್ನೊಕೊರಗಿದೆ. ಅವಳು ಬಿಡ್ತು ಅನ್ನುರೂಪಕ್ಕಿಂತ ಗುಣ ಮುಖ್ಯನಡೆ ಮುಖ್ಯಅಂತಹ ಅಪರೂಪದ ವ್ಯಕ್ತಿ ಕಣೊ ನೀನುಒಳಮನಸ್ಸಿನ ಪರಿಚಯ ಆದ ಯಾವ ವ್ಯಕ್ತಿಯೂ ನಿನ್ನಿಂ ದೂರಹೋಗೊ ಪ್ರಯತ್ನ ಮಾಡೋದೆ ಇಲ್ಲ. ಯಾಕೆ ಗೊತ್ತಾ ನಿನ್ನಲ್ಲಿಕಷ್ಟಕ್ಕೆ ಕರುಣೆಯ ನುಡಿ ಇದೆಸೌಂದರ್ಯ ಗೌರವದಿಂದಪೂತಿ೯ ಆಸ್ವಾಧಿಸುವ ಒಳ್ಳೆಯ ವ್ಯಕ್ತಿತ್ವ ಇದೆಅವಕಾಶದುರುಪಯೋಗಪಡಿಸಿಕೊಳ್ಳುವ ಕೆಟ್ಟ ಮನಸ್ಸಿಲ್ಲ. ಮನಸ್ಸಿಗೆಅನಿಸಿದ್ದು ಸ್ಪಷ್ಟವಾಗಿ ಹೇಳುತ್ತೀಯಾಸುಳ್ಳು ಹೇಳೋದಿಲ್ಲಹೀಗೆ ಎಷ್ಟೆಲ್ಲಾ ಒಳ್ಳೆಯ ಗುಣ ಇದೆ. ಯಾರಿಗೂತೊಂದರೆಕೊಡದೆ ನಿನ್ನಷ್ಟಕ್ಕೆ ನೀನು ಇರುವ ಸ್ವಭಾವ ನಿನ್ನದುನ್ನು ಸೌಂದರ್ಯ ಯಾವ ಲೆಕ್ಕವಿದ್ಯೆಬುದ್ದಿ ಇರುವ ವ್ಯಕ್ತಿವಿಚಾರವಂತ ಇಷ್ಟೆಲ್ಲಾ positive ಗುಣ ಇರುವಂಥ ನೀನುನಿನ್ನನ್ನೆ ಯಾಕೆ ದೂರಿಕೊಳ್ತೀಯಾವಿಚಾರ ಮಾಡುನನಗೆನೀನೇನು ಅಂತ ಚೆನ್ನಾಗಿ ಅಥ೯ ಆಗಿದೆಅದಕ್ಕೆ ನನಗೆ ನೀನುಸುರಸುಂದರಾಂಗಹೀಗೆ ಹಲವಾರು ಬಾರಿ ಹೇಳಿ ಹೇಳಿಅವನಿಗದೆಷ್ಟು ಸಾರಿ ಸಮಾಧಾನ ಮಾಡಿಲ್ಲ ನಾನು‌.

ಪಾಪಕೆಲವರಿಗೆ ತಾನು ಬಾಹ್ಯ ಸೌಂದರ್ಯವಂತ ಅಲ್ಲ.ಬೆಳ್ಳಗಿಲ್ಲಎತ್ತರವಿಲ್ಲಕುಳ್ಳಗಿದ್ದೀನಿಹೀಗೆ ಲವು negative ವಿಚಾರದಲ್ಲಿ ಮುಳಗಿರುತ್ತಾರೆಆದರೆ  ಸಮಾಜದಲ್ಲಿಗೌರವದಿಂದ ಬದುಕಲು ಒಳ್ಳೆಯ ಗುಣನಡತೆಮಾತುವಿನಯ ಇಂಥ ನಡೆ ಮನುಷ್ಯನನ್ನು ಸಮಾಜ ಉನ್ನತಸ್ಥಾನದಲ್ಲಿ ನಿಲ್ಲಿಸುತ್ತದೆಎಷ್ಟೋ ಸಾರಿ ಮದುವೆ ಮನೆಯಲ್ಲಿಕೇವಲ ಹೆಣ್ಣು ಗಂಡಿನ ರೂಪಅದ್ದೂರಿತನ ಇವಿಷ್ಟೆ ಗಣನೆಗೆಬರೋದುಆದರೆ ಮದುವೆ ಆದ ಮೇಲೆ ಅವರಿಬ್ಬರಹೊಂದಾಣಿಕೆ ಹೇಗಿದೆಅವಳ ಗುಣ ಹೇಗೆಇಂತಹ ವಿಚಾರದಕುರಿತು ಮಾತಾಡುತ್ತಾರೆರೂಪದ ಬಗ್ಗೆ ಯಾರೂಕೇಳೋದಿಲ್ಲಏನಾದರೂ ಏರುಪೇರಾದಲ್ಲಿ “ಅಯ್ಯ ರೂಪಇದ್ದರೆ ಏನು ಬಂತುಒಳ್ಳೆ ಗುಣನೆ ಇಲ್ವಲ್ಲ” ಇಂತಹಮಾತುಗಳು ಅನಾಯಾಸವಾಗಿ ಬಾಯಲ್ಲಿ ಹರಿದಾಡುತ್ತದೆ.

 ರೀತಿಯ ವಿಚಾರಗಳು ಜನ ಯಾಕೆ ಅಥ೯ಮಾಡಿಕೊಳ್ಳುತ್ತಿಲ್ಲಹಲವು ಬಾರಿ ಅವನೂ ನನ್ನಲ್ಲಿ ತನ್ನನೋವು ತೋಡಿಕೊಂಡಿದ್ದಿದೆ ಸಮಾಜ ಏನು ಗೊತ್ತಾ ಬರೀHiFಜೀವನದತ್ತ ವಾಲುತ್ತಿದೆ‌. ಅದಕೆ ನಗೀ ಸಮಾಜಕಂಡರೆ ಆಗೋದಿಲ್ಲದಿನ ದಿ ಹೆಚ್ಚೆಚ್ಚುಒಂಟಿಯಾಗುತ್ತಿದ್ದೇನೆಎಲ್ಲೂ ಹೋಗೋದಿಲ್ಲ‌ ನೆಂಟರಮನೆಗೂ ಹೋಗೋದಿಲ್ಲ‌ ಅವರ ನಡೆ ನನಗೆ ಬೇಸರತರಿಸುತ್ತದೆ‌. ತನ್ನನ್ನು ಒಂದು ರೀತಿ ವಿಚಿತ್ರವಾಗಿ ನೋಡುತ್ತಾರೆ.ನಾನೇನು ತಪ್ಪು ಮಾಡಿದೆನಾನು ಹೀಗಿರೋದು ನನಗೆ ಕೋಪತರಿಸುತ್ತದೆ. But I am helpless. ನನ್ನ ಕನಸುಗಳುನೂರಾರುಯಾವುದು ಇಡೇರುವ ಲಕ್ಷಣ ಇಲ್ಲಬರೀ ನಿರಾಸೆಸಿಗದಿರುವ ನಿನ್ನ ನನಗೆ  ದೇವರು ತೋರಿಸಿಬಿಟ್ಟತುಂಬಾhigh think ಮಾಡಿದೆಅಷ್ಟೇ ಬೇಗ ಪಾತಾಳಕ್ಕೆ ಇಳಿದೆ.ಆದರೂ ನಿನ್ನ ಪ್ರೀತಿಸುತ್ತೆನೆಯಾಕೆ ಗೊತ್ತಾ ? ನೀನೆಂದರೆತುಂಬಾಇಷ್ಟಹೀಗೆ ಇರುವುದರಲ್ಲಿ ಸಮಾಧಾನ ಕಾಣುತ್ತೇನೆ.

ನೋವಿನಲ್ಲೂ ನಗುವ ಅವನ ರೀತಿಜೀವನವನ್ನು ಅಥ೯ಮಾಡಿಕೊಳ್ಳುವ ರೀತಿತಾಳ್ಮೆತಿಳುವಳಿಕೆಅವನಲ್ಲಿ ಆದಅನೇ ಬದಲಾವಣೆ ನನ್ನಲ್ಲಿ ಬಿಚ್ಚಿಟ್ಟುಕೊಂಡಾಗ ಕೆಲವುಸಂದರ್ಭದಲ್ಲಿ ನಾನೆಷ್ಟು ಅನಾಗರಿಕಳುಎಷ್ಟು ವಿಚಾರತಿಳಿದುಕೊಳ್ಳುವುದಿದೆ ಅನಿಸುತ್ತಿತ್ತುಆಗೆಲ್ಲ ನನ್ನೊಳಗೆ ನಾನುಹೆಮ್ಮೆ ಪಟ್ಟೆನನಗೆ ಸಿಕ್ಕ ವ್ಯಕ್ತಿ ಸಾಮಾನ್ಯದವನಲ್ಲಅವನಿಂದನಾನು ಹೊಸ ವ್ಯಕ್ತಿ ಆಗಬೇಕುಅವನ ಒಳ್ಳೆ ತನ ನನ್ನಲ್ಲೂರೂಢಿಸಿಕೊಳ್ಳಬೇಕುನಾನು ನಾನಾಗಿರುವ ಪಾಠ ಅವನಲ್ಲಿದೆ ಯೋಚನೆಗಳು ಅವನಲ್ಲಿ ಇನ್ನೂ ಹೆಚ್ಚಿನ ಮಾತಿಗೆಪ್ರೇರೇಪಣೆ ನೀಡಿತುನನಗರಿವಾಗದ ಅದೆಷ್ಟೋವಿಚಾರಗಳಿಗೆ ಅವನಲ್ಲಿ ಒಂದು ರೀತಿ ಹೊಸತನದ ಉತ್ತರಪಡೆಯುತ್ತಿದ್ದೆ‌ ಹೌದು ಅವನಿಂದಾಗಿ ನನ್ನ ಬದುಕಿನ ಚಿತ್ರಣವೆಬದಲಾಗಿ ಹೋಯಿತುಕೊನೆ ಕೊನೆಗೆ ಮಾತು ನನ್ನಲ್ಲಿಕಡಿಮೆಯಾಯಿತುತೀ ಹೆಚ್ಚು ಮಾತನಾಡಿ ಗೋಳುಹೋಯ್ದುಕೊಳ್ಳುವ ಪೃವೃತ್ತಿ ನನ್ನದುಅವನು ನನ್ನಿಂದನಿರೀಕ್ಷಿಸಿದ ಮಟ್ಟದಲ್ಲಿ ನಾನು ಬದಲಾಗುತ್ತ ಬಂದೆಬಹುಶಃಅವನಿಗೂ ರಿವಾಗಿರಬೇಕುಅದಕ್ಕೆ ನನ್ನ ಸುಧಾರಣೆಅವನು ನನಗೆ ಅಪರೂಪವಾಗುತ್ತ ಬಂದ. ಇಲ್ಲಿ ಮಾತಿಗಿಂತಮೌನದಲ್ಲಿ ಉಲಿಯುವ ನಿಶ್ಯಬ್ದ ಸಂಭಾಷಣೆ ಹೆಚ್ಚಿನ ನೆಮ್ಮದಿತರಲು ಶುರುವಾಯಿತುಈಗ ನನ್ನಲ್ಲಿ ಹೆಚ್ಚಿನ ಮನಸ್ಥೈಯ೯ಬಂದಿದೆಮೊದಲಿನ ಅಳು ಇಲ್ಲನೆನಪು ಮನ ಕದಡಿದಾಜೋರಾಗಿ ಕೂಗಿ ಕರೆಯುತ್ತದೆ ಮನ ಮೌನವಾಗಿ ಅವನನ್ನುಅದು ಅವನಿಗೂ ನಿಗೂಢವಾಗಿ ಕೇಳುತ್ತದೆಹಾಗೆ ಮರೆಯಲ್ಲಿಪರದೆ ಸರಿಸಿ ಬಂದು ಕೆಲವು ದಿನಗಳ ವಿಚಾರಗಳಿಗೆಸಂಗಾತಿಯಾಗಿ ಮನ ತಣಿಸುವ ವನ ಇರುವು ಹೊಸಹುರುಪಿನ ಸಂಗಾತಿಮುಗ್ದ ಮನಸಿನ ಹೆಣ್ಣಿನ ಮರೆಯಾಗದಜೊತೆಗಾರ.

ಜಗತ್ತು ವಿಶಾಲವಾಗಿದೆಇರುವ ಕೋಟಿ ಕೋಟಿ ಜನರಲ್ಲಿಪ್ರೀತಿಸುವ ಹೃದಯಗಳು ಪ್ರೀತಿಯ ಕಲರವದ ಜೊತೆಗೂಡಿಉಲಿಯುವ ಮಾತುಗಳು ಕೋಗಿಲೆಯ ಗಾನದಂತೆ ಮನತಣಿಸುವಮುದದಿಂದ ಗರಿಬಿಚ್ಚಿ ಹಾರಾಡಲು ಇಂಬುಕೊಟ್ಟಂತಿರುವ ಜೀವದ ಸಂಗಾತಿಗಳಿಗೆ ಅಕ್ಷರಶಃಬದುಕಿನುದ್ದಕ್ಕೂ ಬಚ್ಚಿಟ್ಟುಕೊಂಡು ಅನುಭವಿಸುವ ಆತ್ಮಸಂಗಾತಿಪ್ರೀತಿಗೆ ಭಾವನೆ ಮುಖ್ಯ ಉಳಿದೆಲ್ಲ ಗೌಣಭಾವನೆಗಳ ಹೊಡೆತವೆ ಪ್ರೀತಿಗೆ ನಾಂದಿಪ್ರೀತಿಯನ್ನುಪ್ರೀತಿಯಿಂದ ಪ್ರೀತಿಯಲ್ಲಿ ಬದುಕು ಕಾಣುವ ಜೀವಗಳು ಸದಾಸುಖಿ.

-ಅರೆಯೂರು ಚಿ.ಸುರೇಶ್
ವರದಿಗಾರರು
ಪ್ರಜಾಮನ ದಿನಪತ್ರಿಕೆ
2ನೇ ಅಡ್ಡ ರಸ್ತೆ,  ಹಟ್ ಹೋಟೆಲ್ ಎದುರು
ಎಂಜಿ ರಸ್ತೆ,  ತುಮಕೂರು  ಮೋ: 7090564603