BREKING NEWS

ಸೋಮವಾರ, ಏಪ್ರಿಲ್ 28, 2025

ಕಥೆ: ನಿರ್ಮಲ ಪ್ರೀತಿ

 



ಯಾವುದೋ ಯೋಚನೆಯಲ್ಲಿ ಮನೆಯತ್ತ ಸಾಗುತ್ತಿದ್ದವಳು ಹತ್ತಿರದಲ್ಲೇ ಕೇಳಿ ಬಂದ ಬುಲೆಟ್ ಸದ್ದಿಗೆ ಅಲ್ಲೇ ನಿಂತಳು. ಆ ಸದ್ದು ಅವಳಿಗೆ ಐದು ವರ್ಷದ ಹಿಂದಿನ ಘಟನೆಯನ್ನು ನೆನಪಿಸಿತ್ತು. ಯಾಕೋ ಅಲ್ಲಿ ನಿಲ್ಲಬೇಕೆಂದು ಅನಿಸದೆ ಮುಂದೆ ಹೆಜ್ಜೆ ಹಾಕ ಹೋದವಳು ಯಾವುದೋ ಬೈಕಿಗೆ ತಾಗಿ ಇನ್ನೇನು ಬೀಳಬೇಕು ಅಷ್ಟರಲ್ಲಿ ಬಲವಾದ ಕೈಯ್ಯೊಂದು ಅವಳನ್ನು ಬೀಳದಂತೆ ತಡೆದು ನಿಲ್ಲಿಸಿತ್ತು.

'ಹೇಗಿದ್ದೀಯಾ ದೃಷ್ಟಿ...?' ಮೃದು ದನಿ ಕೇಳಿ ಅಚ್ಚರಿಯಿಂದ ನಿಮಿರಿತು ಅವಳ ಕರ್ಣಗಳು.

'ನಿ.. ನಿ..ನಿರ್ಮಲ್?' ತಡೆ ತಡೆದು ಹೊರ ಬಂದಿತ್ತು ಮಾತು.

'ಹೌದು ನಾನೇ. ನಿನ್ನ ಜೊತೆ ಮಾತನಾಡೋಣ ಎಂದು ಬಂದರೆ, ನೀನು ನಿಲ್ಲದೆ ಓಡುತ್ತಿರುವೆ...' ಅವನು ಆಕ್ಷೇಪಿಸುವಂತೆ ನುಡಿದರೆ,

'ಐ ಯಾಮ್ ಸಾರಿ...' ಎಂದಳು ಅವಳು.

'ಪರ್ವಾಗಿಲ್ಲ ಬಾ...' ಕೈ ಹಿಡಿದು ಬೈಕೇರಲು ಸಹಾಯ ಮಾಡಿದವನು ಬುಲೆಟನ್ನು ಪಾರ್ಕ್ ಕಡೆಗೆ ಟರ್ನ್ ಮಾಡಿದ್ದ.

'ಎಲ್ಲಿಗೆ ಹೋಗುತ್ತಿದ್ದೇವೆ...?'

'ನಿನ್ನ ಜೊತೆ ಮಾತನಾಡಬೇಕು ತುಂಬಾ. ಅದಿಕ್ಕೆ ಪ್ರಶಾಂತವಾದ ಜಾಗ ಹುಡುಕುತ್ತಿದ್ದೇನೆ...' ಅವಳು ಮೌನಿಯಾದಳು. ಅವಳ ಮನಸ್ಸು ಐದು ವರ್ಷಗಳ ಹಿಂದಕ್ಕೋಡಿದ್ದವು.



ಪ್ರೀತಿಗೆ ಕಣ್ಣಿಲ್ಲ ನಿಜ ಆದರೆ ಪ್ರೀತಿಸುವವರಿಗೆ ಕಣ್ಣಿಲ್ವಾ..? ಎಂಬ ಮಾತೊಂದಿದೆ. ಆದರಿಲ್ಲಿ, ಪ್ರೀತಿಗೆ ಮಾತ್ರ ಅಲ್ಲ ತಾನು ಪ್ರೀತಿ ಮಾಡುತ್ತಿರೋ ಹುಡುಗಿಗೂ ಕಣ್ಣಿಲ್ಲ ಎಂಬ ಸತ್ಯ ತಿಳಿಯದ ನಿರ್ಮಲ್, ಪ್ರೀತಿಗೆ ಬಿದ್ದಿದ್ದ..!!

ದಿನವಿಡೀ ಗೆಳೆಯರು, ಮೋಜು-ಮಸ್ತಿಯೆಂದು ತಿರುಗಾಡುವ ಅವನಿಗೆ ಆಕಸ್ಮಿಕವಾಗಿ ಕಣ್ಣಿಗೆ ಕಂಡಿದ್ದಳು ದೃಷ್ಟಿ. ಹುಟ್ಟು ಅಂಧೆಯಲ್ಲದ ದೃಷ್ಟಿ, ಅವಳ ಜೀವನದಲ್ಲಿ ನಡೆದ ಘಟನೆಯ ಕಾರಣದಿಂದ ಅಂಧೆಯಾಗಿದ್ದಳು.

ಅವಳನ್ನು ಮನಸಾರೆ ಪ್ರೀತಿಸುತ್ತಿದ್ದವನು ನಿಜ ತಿಳಿದ ನಂತರವೂ ಅದನ್ನು ಮುಂದುವರಿಸಿದ್ದ.

ದಿನಗಳು ಉರುಳಿ ತಿಂಗಳು ಕಳೆದರೂ ಅವಳಲ್ಲಿ ತನ್ನ ಪ್ರೀತಿ ಹೇಳುವ ಧೈರ್ಯ ಬಂದಿರಲಿಲ್ಲ. ಕೊನೆಗೊಂದು ದಿನ ಧೈರ್ಯ ಮಾಡಿ ಅವಳ ಮುಂದೆ ನಿಂತೇ ಬಿಟ್ಟಿದ್ದ.

'ಹ್.. ಹಾಯ್, ಐ ಯಾಮ್ ನಿರ್ಮಲ್..' ತನ್ನ ಪರಿಚಯ ಹೇಳಿಕೊಂಡ.

'ಹೇಳಿ ಏನಾಗ್ಬೇಕು..?' ಬೇಬಿ ಸಿಟ್ಟಿಂಗಲ್ಲಿ ಕೆಲಸ ಮಾಡುತ್ತಿದ್ದವಳಿಗೆ ಅಂದು ತಡವಾಗಿತ್ತು.

'ಐ... ಐ ಲವ್ ಯೂ' ತಡೆ ತಡೆದು ನೇರವಾಗಿ ಹೇಳಿದ್ದ. ಅವನ ಮಾತು ಕೇಳಿ ಒಂದು ಕ್ಷಣ ಗಾಬರಿಗೊಂಡವಳಂತೆ ನಿಂತ ದೃಷ್ಟಿ,

'ವ್ಹಾಟ್...?' ಎಂದಿದ್ದಳು.

'ನನಗೆ ನಿಮ್ಮ ಬಗ್ಗೆ ಎಲ್ಲಾ ಗೊತ್ತು. ಆದರೂ ನನಗೆ ನಿಮ್ಮನ್ನು ಪ್ರೀತಿಸದೆ ಇರಲು ಸಾಧ್ಯವಿಲ್ಲ. ನಾನು ನಿನಗೆ ಬಾಳು ಕೊಡುತ್ತೇನೆ, ದಿನ ನಿತ್ಯ ಈ ರೀತಿ ಕೆಲಸ ಮಾಡೋ ಯಾವುದೇ ಅಗತ್ಯ ಇಲ್ಲ. ಆ ರೀತಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ...' ಪಟಪಟನೇ ಹೇಳಿದ ಮಾತು ಕೇಳಿ ಅವಳಿಗೆ ಕೋಪ ಬಂದಿದ್ದವು.

'ನೋಡಿ ಮಿಸ್ಟರ್, ನನಗೆ ಈ ಕೆಲಸ ಅಗತ್ಯ ಎಂದು ನಾನು ಮಾಡುತ್ತಿಲ್ಲ. ನನ್ನ ತಂದೆಗೆ ನನ್ನನ್ನು ನೋಡಿಕೊಳ್ಳೋ ತಾಕತ್ತಿದೆ, ಅದು ಬೇರೆ ವಿಷಯ. ನಾನು ಈ ಕೆಲಸ ನನ್ನ ಮನದ ತೃಪ್ತಿಗಾಗಿ ಮಾಡುತ್ತಿದ್ದೇನೆ, ಮಾತನಾಡುವಾಗ ಯೋಚಿಸಿ ಮಾತನಾಡಿ.

ನನ್ನನ್ನು ಚೆನ್ನಾಗಿ ನೋಡಿಕೊಳ್ಳುವುದು ಆ ನಂತರದ ಮಾತಲ್ವಾ..? ಮೊದಲು ನೀವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ. ಎಷ್ಟು ದಿನ ಎಂದು ಹೆತ್ತವರ ದುಡಿಮೆಯಲ್ಲಿ ಬದುಕ್ತೀರಿ..? ಮೊದಲು ನೀವು ನಿಮ್ಮ ಕಾಲ ಮೇಲೆ ನಿಂತು ಜೀವನದಲ್ಲಿ ಏನಾದರೂ ಸಾಧಿಸಿ, ಆ ಮೇಲೆ ಬನ್ನಿ ನನ್ನ ಮುಂದೆ.

ಇರುವುದು ಒಂದು ಜೀವನ ಯಾಕೆ ಅದನ್ನು ಈ ರೀತಿ ವೇಸ್ಟ್ ಮಾಡ್ಕೋತಿದ್ದೀರಿ...??

ಬಿಡಿ ಜಾಗ, ನನಗೆ ತಡವಾಗಿದೆ. ನಿಮ್ಮ ಜೊತೆ ಹರಟೆ ಹೊಡೆಯಲು ಸಮಯವಿಲ್ಲ...' ಅವನ ಜೀವನದ ಬಗ್ಗೆ ಗೆಳತಿಯರಿಂದ ತಿಳಿದಿದ್ದ ದೃಷ್ಟಿ ಬೇಕೆಂದೇ ಆ ರೀತಿಯ ಮಾತುಗಳನ್ನಾಡಿದ್ದಳು. ಅವಳ ಮಾತುಗಳು ಚಾಟಿ ಏಟಿನಂತೆ ಅವನ ಮನದ ಮೇಲೆ ಬೀಸಿ ಹೋಗಿದ್ದವು.

ಬೇಸರವೂ ಅಲ್ಲ, ಕೋಪವೂ ಅಲ್ಲ ಎಂಬಂತಹ ಹತಾಶೆಯ ಮುಖ ಹೊತ್ತು ಅಲ್ಲಿಂದ ವಾಪಾಸ್ಸಾಗಿದ್ದ ನಿರ್ಮಲ್.



'ದೃಷ್ಟಿ... ದೃಷ್ಟಿ, ಏನು ಯೋಚಿಸ್ತಿದ್ದೀಯಾ?' ಬೈಕ್ ಪಾರ್ಕ್ ಮಾಡಿ ಅವಳನ್ನು ಕೂಗುತ್ತಿದ್ದ ನಿರ್ಮಲ್.

'ಅಹ್...' ಎಂದವಳು ವಾಸ್ತವಕ್ಕೆ ಬಂದಿದ್ದಳು.

'ಏನ್ ಯೋಚಿಸ್ತಿದ್ದೆ..? ಇಳಿ ಕೆಳಗೆ, ಪಾರ್ಕ್ ಬಂತು' ಕೈ ಹಿಡಿದು ಇಳಿಯಲು ಸಹಾಯ ಮಾಡಿದ ನಿರ್ಮಲ್ ತಾನೂ ಇಳಿದಿದ್ದ.

'ನಿರ್ಮಲ್, ಯಾವಾಗ ಬಂದೆ ನೀನು ದಿಲ್ಲಿಯಿಂದ?' ಮೆಲ್ಲಗೇ ಕೇಳಿದ್ದಳು.

'ನಿನ್ನೆಯಷ್ಟೇ ಬಂದೆ...' ಎಂದವನು,

'ಈ ಕಡೆ ಬಾ...' ಎನ್ನುತ್ತಾ ಅವಳ ಕೈ ಹಿಡಿದು ನಡೆಸಿದ್ದ. ಪಾರ್ಕ್ ಒಳಗೆ ಬಂದವನು ಯಾರಿಲ್ಲದ ಪ್ರಶಾಂತ ಜಾಗವೊಂದನ್ನು ನೋಡಿ ಅವಳನ್ನು ಅಲ್ಲಿಗೆ ಕರೆ ತಂದು ಬೆಂಚ್ ಮೇಲೆ ಕೂರಿಸಿದ್ದ.

'ಹೇಗಿದ್ದೀಯಾ ದೃಷ್ಟಿ..?' ಕೇಳಿದ.

'ಹೀಗಿದ್ದೀನಿ ನೋಡು...' ಎಂದಾಗ ನಗು ಬೀರಿದ ಅವನು.

'ಯಾಕೆ ಸಂಕೋಚ ಪಡ್ತಿದ್ದೀಯಾ..? ಅಂದು ಅಷ್ಟೆಲ್ಲಾ ಮಾತನಾಡಿದೆ. ಇಂದು ನೋಡಿದ್ರೆ...' ಅವಳು ಉತ್ತರಿಸಲಿಲ್ಲ. ಕಂಗಳಲ್ಲಿ ತೆಳುವಾಗಿ ನೀರಾಡಿತು.

'ಅರೇ, ಯಾಕೆ ಅಳ್ತಿದ್ದೀಯಾ..?' ಕಣ್ಣೊರೆಸುತ್ತ ಕೇಳಿದ.

'ನಾನಂದು ಹಾಗೇ ಮಾತನಾಡಬಾರದಿತ್ತು. ಐ ಯಾಮ್ ಸಾರಿ...' ಸಣ್ಣಗೆ ನುಡಿದಳು.

'ಇಲ್ಲ. ನಿಜ ಹೇಳಬೇಕು ಅಂದ್ರೆ ನೀನಂದು ಹಾಗೇ ಮಾತನಾಡಿದ್ದೇ ಸರಿ ಇತ್ತು. ಐ ಸ್ವೇರ್ ಕಣೋ, ನನಗೆ ನಿನ್ನ ಮೇಲೆ ಯಾವುದೇ ಕೋಪವಿಲ್ಲ. ಅಂದು ನಿನ್ನ ಮಾತು ಕೇಳಿ, ನೀನು ನನ್ನ ಹಂಗಿಸ್ತಿದ್ದೀಯಾ ಅಂತ ಒಂದು ಬಾರಿ ಕೋಪ ಬಂದಿದ್ದು ನಿಜ. ಆದರೆ ಕುಳಿತು ಯೋಚಿಸಿದಾಗ ನಿನ್ನ ಮಾತು ನಿಜವಾಗಿತ್ತು. ಅದೇ ಮಾತನ್ನು ನಮ್ಮ ಮನೆಯಲ್ಲಿ, ಫ್ಯಾಮಿಲಿ ಯಲ್ಲಿ ಸಾಕಷ್ಟು ಮಂದಿ ಹೇಳಿದ್ದಾರೆ ನನಗೆ. ಆದರೆ ಆಗ ಆ ಮಾತು ತಲೆಗೆ ಹೋಗಿರಲಿಲ್ಲ. ಎಲ್ಲದಕ್ಕೂ ಒಂದು ಸಮಯ ಅನ್ನುವುದು ಬರಬೇಕು ಅಂತಾರಲ್ಲ ಹಾಗೇ...!

ನಿನಗೊಂದು ಸತ್ಯ ಹೇಳ್ಲಾ..?' ಅವಳ ಗಲ್ಲವನ್ನೆತ್ತಿ ಕೇಳಿದ.

'ಏನು...?'

'ನಿಜ ಹೇಳಬೇಕು ಅಂದ್ರೆ ನನ್ನ ಮೇಲೆ ನಿನ್ನ ಮಾತುಗಳು ಅಷ್ಟೇನೂ ಪ್ರಭಾವ ಬೀರಲಿಲ್ಲ. ನಿನ್ನ ಜೀವನ ನನ್ನ ಮೇಲೆ ಪ್ರಭಾವ ಬೀರಿತು. ನನ್ನನ್ನು ನಿನಗೆ ಹೋಲಿಸಿದರೆ, ನನ್ನ ಎಲ್ಲಾ ಅಂಗಾಂಗಗಳು ನೆಟ್ಟಗಿದೆ. ಆದರೆ ಯೋಚನೆಯಲ್ಲಿ, ಜೀವನ ಶೈಲಿಯಲ್ಲಿ ನೀನು ನನಗಿಂತ ಉತ್ತಮ ಜೀವನ ನಡೆಸುತ್ತಿದ್ದೆ. ನಿನಗೆ ಕಣ್ಣು ಕಾಣಿಸೋದಿಲ್ಲ, ಅಂದ್ರೆ ಏನಾಯಿತು..? ನೀನು ಬೇರೆಯವರಿಗಿಂತ ಯಾವುದರಲ್ಲಿ ಕಡಿಮೆ ಇದ್ದೀಯಾ...? ಹೇಳು.

ಇದೇ ಜೀವನ ನನಗೆ ಸ್ಫೂರ್ತಿ ನೀಡಿತು. ನಾನೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹುಟ್ಟಿಸಿತು. ಇವತ್ತು ನಾನು ಏನೇ ಆಗಿದ್ದರೂ ನಿನ್ನ ಆ ಮಾತು ಮತ್ತು ನಿನ್ನ ಈ ಜೀವನವೇ ಸ್ಫೂರ್ತಿ ನನಗೆ. ನೀನಿಲ್ಲದಿದ್ದರೆ ಇವತ್ತೂ ನಾನು ಅದೇ ಹಳೆಯ ನಿರ್ಮಲ್ ಆಗಿರುತ್ತಿದ್ದೆನೇ ವಿನಃಹ, ಇಂದಿನ ಯೂತ್ ಐಕಾನ್ ನಿರ್ಮಲ್ ಆಗ್ತಿರಲಿಲ್ಲ...!' ಅವನ ಮಾತಿಗೆ ಕಿವಿಯಾಗಿದ್ದವಳು.

'ಇಲ್ಲ ನಿರ್ಮಲ್, ಇದರಲ್ಲಿ ನನ್ನದೇನೂ ಪಾತ್ರವಿಲ್ಲ. ಇಲ್ಲಿ ನಾನು ಕೇವಲ ನಿಮಿತ್ತ ಮಾತ್ರ. ನಾನಲ್ಲದಿದ್ದರೆ ಇನ್ಯಾರೋ ಇರುತ್ತಿದ್ದರು. ಆದರೆ ಇವತ್ತು ನೀನು ಆ ಸ್ಥಾನದಲ್ಲಿ ಇದ್ದೀಯಾ ಅಂದ್ರೆ ಅದು ನಿನ್ನ ಶ್ರಮಕ್ಕೆ ದೊರೆತ ಫಲ. ನೀನು ಸುಮ್ಮನೇ ನನ್ನ ಹೊಗಳುತ್ತಿರುವೆ ಅಷ್ಟೇ...!' ಕ್ರೆಡಿಟ್ ಬೇಕಿರಲಿಲ್ಲ ಅವಳಿಗೆ.

'ಸರಿ, ನಿನಗೆ ಕ್ರೆಡಿಟ್ ಬೇಡದಿದ್ದರೆ ನಾನು ಹೊಗಳೋದಿಲ್ಲ. ಆದರೆ ಈ ಬಾರಿ ನಮ್ಮ ಮದುವೆಯ ದಿನಾಂಕ ನೀನು ಮುಂದೂಡುವಂತಿಲ್ಲ. ನಿನ್ನ ಆಸೆಯಂತೆ ಈಗ ನೀನೇ ಸ್ವಂತ ಬೇಬಿ ಸಿಟ್ಟಿಂಗ್ ಕೇರ್ ನಡೆಸ್ತಿದ್ದೀಯಾ. ಇದೇ ದಿನಕ್ಕಾಗಿ ತಾನೇ ಕಾದಿದ್ದು...?

ಅಂದು ನೀನು ಹೇಳಿದಂತೆ ನಾನು ನನ್ನ ಜೀವನದಲ್ಲಿ ಒಂದು ಹಂತಕ್ಕೆ ಸಾಧಿಸಿ ನಿನ್ನ ಮುಂದೆ ನಿಂತಾಗ ನೀನು ನನ್ನಲ್ಲಿ ಕೇಳಿಕೊಂಡಿದ್ದೆ, ನಾನೂ ಸ್ವಂತದಾಗಿ ಒಂದು ಬೇಬಿ ಸಿಟ್ಟಿಂಗ್ ಕೇರ್ ಸಂಸ್ಥೆ ನಡೆಸಬೇಕು. ಅಲ್ಲಿಯವರೆಗೆ ನೀವು ಕಾಯುವಿರಿ ಎಂದಾದರೆ ನನಗೇನೂ ತೊಂದರೆ ಇಲ್ಲ ಎಂದು. ನಿನಗೆ ಕೊಟ್ಟ ಮಾತಿನಂತೆ ಅಂದು ಹೋದವನು ಇಂದು ಮರಳಿ ಬಂದಿದ್ದೇನೆ, ಈಗ ನಿನ್ನಾಸೆಯೂ ಈಡೇರಿದೆ. ಈಗಲಾದರೂ ಒಪ್ಪಿಗೆ ಕೊಡು...' ಪುಟ್ಟ ಮಗು ಚಾಕಲೇಟಿಗೆ ರಚ್ಚೆ ಹಿಡಿಯುವಂತೆ ಕೇಳಿದ ಅವನ ಮಾತಿಗೆ ನಗು ಬಂದಿತ್ತು ಅವಳಿಗೆ.

'ಸರಿ. ನಾಳೆ ಬಂದು ಮನೆಯಲ್ಲಿ ಮಾತನಾಡಿ... ' ಕೊನೆಗೂ ಒಪ್ಪಿಗೆ ನೀಡಿದ್ದಳು.

'ಯಾಹ್... ' ಸಂತಸದಿ ಕೇಕೆ ಹಾಕಿ ಮೇಲಕ್ಕೆ ಜಿಗಿದಿದ್ದ ನಿರ್ಮಲ್.

ಒಬ್ಬರಿಗೊಬ್ಬರು ಹೆಗಲಾಗಿ ನಡೆಯುವೆವು ಎಂಬ ನಿರ್ಧಾರಕ್ಕೆ ಇಬ್ಬರ ಒಪ್ಪಿಗೆಯ ಮುದ್ರೆಯೂ ಬಿದ್ದಿತ್ತು. ನಿರ್ಮಲ್- ಪ್ರೀತಿ ಮತ್ತು ಯೋಚನಾ ಶಕ್ತಿ ದೃಷ್ಟಿಯಾದರೆ, ಅವಳ ಕಣ್ಣ ದೃಷ್ಟಿ ಅವನಾಗಿದ್ದ.

ಜೀವನದುದ್ದಕ್ಕೂ ಕೈ ಹಿಡಿದು ನಡೆಸುತ್ತೇನೆ ಎಂದು ನುಡಿದ ಅವನ ಮಾತು ಇಂದು ನಿಜವಾಗುತ್ತಿದೆ ಎಂಬ ಹರ್ಷಕ್ಕೆ ಅವನ ಗಂಟಲಿನಿಂದ ಮಾತೇ ಹೊರಡುತ್ತಿಲ್ಲ.

'ನಿರ್ಮಲ್.. ಆಗಲೇ ತಡವಾಗಿದೆ. ಮನೆಗೆ ಹೋಗೋಣ್ವಾ..?' ಅವಳ ಪ್ರಶ್ನೆಗೆ ಸರಿಯೆಂದು ತಲೆದೂಗಿ ಅವಳನ್ನು ಕೈ ಹಿಡಿದೇ ನಡೆಸಿದ್ದ ಬುಲೆಟಿನೆಡೆಗೆ. ಜೊತೆಯಾಗಿ ಹೆಜ್ಜೆ ಹಾಕಿದ ಗುರುತಿಗೆಂಬಂತೆ ನಡೆದು ಬಂದ ದಾರಿಯಲ್ಲಿ ಮೂಡಿದ ಹೆಜ್ಜೆ ಗುರುತು ಅವರ ಪ್ರೀತಿಗೆ ಅಸ್ತು ಎಂದಿತ್ತು.

ಜೋಡಿಯನ್ನು ಹೊತ್ತ ಬುಲೆಟ್ ಮನೆಯೆಡೆಗೆ ಸಾಗಿತ್ತು

-ಅರೆಯೂರು ಚಿ.ಸುರೇಶ್
ತುಮಕೂರು

ಸಣ್ಣ ಕಥೆ: ಆತ್ಮದ ಸ್ವಗತ

 

 



ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕೊಂಡಂತೆ ಸುರಿಸುತ್ತಿದ್ದ ಮಳೆಯಿಂದ ಮಾವಿನ ತೋಪಿನ ಕಾಲುವೆಗಳು ತುಂಬಿ ದಾಸನ ಕಟ್ಟೆಯೆತ್ತ ಹರಿಯುತ್ತಿತ್ತು.

          ಅವತ್ತಿನ ಮಧ್ಯಾಹ್ನ ಯಮಕರೆದ ಕೂಗಿನಂತಹ ಕೂಗೊಂದು ತಲೆಯೊಳಗೆ ಸಿಡಿದು ಈ ಲೋಕವೇ ಬೇಡವಾಗಿ ಮನೆಯಲ್ಲಿದ್ದ ದನದ ಹಗ್ಗವೊಂದನ್ನು ಹೆಗಲಿಗೆಸೆದುಕೊಂಡು ಮುದ್ರಾಮಕ್ಕರ ಮಾವಿನ ತೋಪಿನತ್ತ ಹೊರಟು ಬರೀ  ನೆಲದಲ್ಲೇ ಹರಡಿ ನಿಂತ ಮಾವಿನ ಮರಗಳಿರುವ ಆ ತೋಪಿನಲ್ಲಿ ನನ್ನ ಹೆಣದ ಭಾರ ಹೊರುವಂತಹ ಗಟ್ಟಿ ರೆಂಬೆಯ ಮರವನ್ನು ಹುಡುಕುತ್ತಾ ಅಲೆದು ಅಲೆದು ಕೊನೆಗೂ ಸಿಕ್ಕ ದಷ್ಟ ಪುಷ್ಟ ಮಾವಿನ ಮರದ ದಪ್ಪನೆ ಕೊಂಬೆಯೊಂದಕ್ಕೆ ನೇಣು ಹಾಕಿಕೊಂಡು ವಿಲವಿಲ ಒದ್ದಾಡಿ ಸತ್ತು ಹೋದೆ. ನಾನು ಸತ್ತಿದ್ದು ಸಹಿಸಲಾರದೇನೆ ಏನೋ ಎಂಬಂತೆ ಆಕಾಶ ಕಣ್ಣೀರಿನಂತೆ ಮಳೆ ಸುರಿಸಿದ್ದು.        ಮಳೆ ನಿಂತ ಮೇಲೆಯೂ ಕೂಡ ಮರ ನನ್ನ ಸಾವಿಗೆ ಕಣ್ಣೀರು ಸುರಿಸುತ್ತಲೇ ಇತ್ತು ಅದೆಲ್ಲಿಂದಲೋ ಹಾರಿಬಂದ ಕಾಗೆಯೊಂದು ಶವವಾಗಿ ನೇತಾಡುತ್ತಿದ್ದ ನನ್ನ ತಲೆಯ ಮೇಲೆ ಕುಳಿತು ಸ್ಪ್ರಿಂಗಿನಂತಹ ಅದರ ಕೊರಳನ್ನು ಅತ್ತಿತ್ತ ತಿರುಗಿಸಿ ತನ್ನ ಕಪ್ಪು ಕೊಕ್ಕನ್ನು ನನ್ನ ಹಣೆಯ ಮೇಲಿಟ್ಟು ಗಸಗಸನೆ ಕತ್ತಿ ಮನೆಯುವಂತೆ ಆಡಿಸಿತು. ಆಹಾ! ದುರ್ವಿಧಿಯೇ ಬದುಕಿದ್ದಾಗ ಕಾಗೆಯೆಂಬ ಕಾಗೆ ತಲೆಗೆ ಬಡಿದರೆ ಕಷ್ಟಗಳು ಬರುವವಂತೆ ಹಾಗಾದರೆ ಸತ್ತ ನನಗೆ ಇನ್ನೆಷ್ಟು ಕಾಟವೋ ಕಾಣೆನಲ್ಲ.

ಮಳೆ ಸುರಿದ ತಂಪಿಗೇನೋ ಎಂಬಂತೆ ಸಂಜೆ ಸೂರ್ಯ ನಿಂದ ಆಗಸವೆಲ್ಲ ಕೆಮ್ಮುಗಿಲಿನಿಂದ ಕಂಗೊಳಿಸುತ್ತಿತ್ತು ಅಂಥ ದೈವದತ್ತ ಪ್ರಕೃತಿ ಸಹಜ ಕತ್ತಲು ತನ್ನ ಸುತ್ತ ಆವರಿಸುತ್ತಿದ್ದರು ಯಾವ ಬಯವೂ ಇಲ್ಲದೆ ಹೀಗೆ ಜಂಟಿಯಾಗಿ ಮುದ್ರಾಮಕ್ಕನ ಮಾವಿನ ತೋಪಿನಲ್ಲಿ ರಾತ್ರಿಯೆಲ್ಲಾ ಒಬ್ಬನೇ ಕಳೆಯುವ ಅವಕಾಶ ನೆನೆದು ನನ್ನೀ ಸಾಹಸಕ್ಕೆ ನನಗೆ ಬೆರಗಾಯಿತು.

          ದನದ ಹಗ್ಗದಿಂದ ಈ ಮಾವಿನ ಮರದ ರೆಂಬೆಗೆ ಸುತ್ತಿ ಕುಣಿಕೆಯ ಕೊರಳಿಗೆ ಸುತ್ತಿಕೊಂಡು ಸುಮ್ಮನೆ ಕೆಳಗೆ ಜಿಗಿದು ಗಂಟಲ ನರಗಳು ಉಬ್ಬಿ ಬಿಗಿಯಾದ ಹಗ್ಗ ಹಿಡಿತದಿಂದ ವಿಲವಿಲ ಒದ್ದಾಡುತ್ತಾ ಪ್ರಾಣ ಬಿಡುವಾಗಲೂ ಕೂಡ ಈ ಭೂಮಿಯ ಯಾವೊಬ್ಬ ನರಪಿಳ್ಳೆಯೂ ನೆನಪಾಗಲಿಲ್ಲವಲ್ಲ ನನಗೆ ಆತ್ಮಹತ್ಯೆಗೆ ನಿರ್ಧರಿಸುವುದು ಒಂದು ಸಾಹಸ.

ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನವಾದರೂ ಹೀಗೆ ನೇಣು ಕುಣಿಕೆಗೆ ಕೊರಳೊಡ್ಡುವಷ್ಟು ದಿವ್ಯವಾಗಿ ನೆಮ್ಮದಿಯಿಂದ ಒದ್ದಾಡುತ್ತಾ ಇನ್ನೇನು ನಿಲ್ಲುವ ಉಸಿರಿಗಾಗಿ ಕಾಯುವುದು ಸಮಾಧಿಯ ಪರಮ ಸಾಹಸ. ಅಂತಹ ಸಮಾಧಿಯನ್ನು ಹೊಂದಿದ ನಾನು ಖಂಡಿತ ಯಾವೊಬ್ಬ ಋಷಿ ಮುನಿಗೂ ಕಮ್ಮಿಯಿಲ್ಲವೆಂಬುದು ಮನದಟ್ಟಾಗಿ ನನ್ನ ಬಗ್ಗೆಯೇ ನನಗೆ ಹೆಮ್ಮೆಯೆನಿಸುತ್ತಿತ್ತು.

ಕಗ್ಗತ್ತಲಿನಲ್ಲಿ ಹೀಗೆ ಅನಾಥ ಹೆಣವಾದುದ್ದಕ್ಕೆ ಯಾವ ದುಃಖವೂ ಇಲ್ಲದೆಯೇ ನಿರಾಳವಾಗಿ ಕಾಲ ಕಳೆಯುತ್ತಿದ್ದರೆ ಬೆಳಗಿನ ಜಾವ ಮೂಡಣದಿ ಮೂಡಿದ ಭಾಸ್ಕರ ಇಡೀ ಮಾವಿನ ತೋಪಿಗೆ ನನ್ನ ಹೆಣವನ್ನು ತೋರಿಸಿದ.

ಅಂದು ನಾನು ಸತ್ತ ದಿನದ ಮೊದಲ ಬೆಳಗು ಸತ್ತ ಹಬ್ಬ! ಬದುಕಿದ್ದಾಗ ಎಂದಿಗೂ ಜನರ  ಚರ್ಚೆಗೆ ಗ್ರಾಸವಾಗದ ನಾನು ಸತ್ತ ಮೇಲೆ ಈ ಬೆಳಗಿನಲ್ಲಿ ಖಂಡಿತವಾಗಿಯೂ ಊರಿನವರಿಗೆಲ್ಲಾ ಚರ್ಚಾಸ್ಪದ ವಿಷಯವಾಗಲಿದ್ದೇನೆಂಬ ಖುಷಿಯ ತಳಮಳದ ಜೊತೆಗೆ ಯಾರ್ಯಾರು ಏನೇನೆಲ್ಲಾ ಅಂದು ಕೊಳ್ಳ ಬಹುದೆಂದು ಯೋಚಿಸತೊಡಗಿದೆ.

ಬೆಳಗಿನ ಬಹಿರ್ದೆಸೆಗೆಂದು ಅತ್ತ ಬಂದಿದ್ದ ವಡ್ಡರ ಗ್ಯಾಸ್ ದೊಡ್ಡನ ಕಣ್ಣಿಗೆ ನನ್ನ ಶವ ಬಿತ್ತು ವಿಚಿತ್ರವಾಗಿ ಗಾಬರಿಗೊಂಡ ಗ್ಯಾಸ್ ದೊಡ್ಡ ಸ್ವಲ್ಪ ತುಸು ಮುಂದಕ್ಕೆ ಬಾಗಿ ಕ್ಷಣ ನಿಂತು ನನ್ನ ಶವದತ್ತಲೇ ದಿಟ್ಟಿಸುತ್ತಾ ಹೆಜ್ಜೆ ಮೇಲೆ ಹೆಜ್ಜೆಗಳನ್ನಿಡುತ್ತಾ ಮೆಲ್ಲನೆ ಸುಮಾರು ಹತ್ತು ಮಾರುಗಳಷ್ಟು ನನ್ನ ಶವದ ಹತ್ತಿರ ಬಂದವನು ತನ್ನ ಮುಖವನ್ನು ಭೀಭತ್ಸ ಭಾವದಲ್ಲಿ ವಿಕೃತಗೊಳಿಸಿಕೊಂಡು ಎದುಸಿರು ಬಿಡುತ್ತಾ ವಾಪಾಸ್ಸು ತಿರುಗಿ ಎದ್ದು-ಬಿದ್ದು ಓಡತೊಡಗಿದ ಅವನ ಈ ದಯನೀಯ ಸ್ಥಿತಿ ನನಗೆ ನಗು ಬರಿಸುತ್ತಿತ್ತು.

ಅವನು ಓಡಿಹೋಗಿ ಊರವರಿಗೆ ನನ್ನ ಸಾವಿನ ಸುದ್ದಿ ಮುಟ್ಟಿಸುತ್ತಿದ್ದಂತೆ ನನ್ನ ಹುಡುಗಿ ಓಡಿ ಬರಬಹುದು ಬಂದು ಗೊಳೋ ಎಂದ ಅಳಬಹುದೇ? ಇಲ್ಲ ದೂರದಲ್ಲಿ ನಿಂತು ನೋಡಿ ಸುಮ್ಮನೆ ಹೊರಟು ಹೋಗಬಹುದಾ? ನಿಜಕ್ಕೂ ನನ್ನ ಸಾವು ಅವಳಿಗೆ ಕಣ್ಣೀರು ತರಿಸಬಹುದೇ? ಮನಸ್ಸು ಒಂದು ಕ್ಷಣ ವಿಚಲಿತಗೊಂಡಿತ್ತು. ಮರುಕ್ಷಣವೇ ಎಲ್ಲಾ ಮನವೆಂಬ ಮರ್ಕಟವೇ ಸತ್ತು ಹೆಣವಾದರೂ ನಿನ್ನೀ ಆಸೆ ಹೋಗಲಿಲ್ಲವಲ್ಲ ಎನಿಸಿತು.

ಅಷ್ಟರಲ್ಲಿ ಊರಿನ ಕಡೆಯಿಂದ ಗುಂಪೊಂದು ಮಾವಿನ ತೋಪಿನತ್ತ ಧಾವಿಸುತ್ತಿತ್ತು ಮೂಡಣದ ಭಾಸ್ಕರನ ಎಳೆಬಿಸಿಲ ಝಳ ನನ್ನ ಶವಕ್ಕೆ ರಾಚುತ್ತಿತ್ತು ಗುಂಪು ಹತ್ತಿರವಾಗುತ್ತಿದ್ದಂತೆಲ್ಲಾ ನನ್ನ ಕಣ್ಣುಗಳು ಮಂಜಾಗುತ್ತಿದ್ದವು. . .

                                          

 -ಅರೆಯೂರು ಚಿ.ಸುರೇಶ್ 

7090564603