BREKING NEWS

ಭಾನುವಾರ, ಡಿಸೆಂಬರ್ 9, 2018

9-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು





ಸಂಜೆಯ ಸೂರ್ಯ


ಮುಳುಗುತಿರುವ ಸೂರ್ಯ, ಮತ್ತೆ ಎದ್ದು ಬರುವ,
ಇಂದು ಸಂಜೆ ಕತ್ತಲಾದರು, ನಾಳೆ ಹೊಂಗಿರಣ ತರುವ…
ನಡೆಯುವ ಪಯಣದಲಿ, ಎಲ್ಲೆಲ್ಲಿಯೂ ಜೊತೆಯಲಿರುವ,
ಸುಖ, ದುಃಖ ಎಲ್ಲವನು ಒಂದೆ ಪ್ರಕಾಶದಿ ಸಮನಾಗಿ ತೋರುವ…
ದೂರಾತಿ ದೂರದಲಿ 
ಅಂಬರ ದಿಗಂತಗಳು 
ಕೂಡುವೆಡೆಯಲ್ಲಿ ಸಾಗರ 
ಭುವಿಯ ಸಂಗಮದಲ್ಲಿ 
ಮೂಡಿರುವ 
ಬೆಳ್ಳಿ ಕಡಲಂಚು 
ನೀಲಿ ಬಟ್ಟಲನು 
ಬೋರಲಿಟ್ಟಂತೆ
ಅವ್ಯಕ್ತ ಅನಂತ ದಿಗಂತ
ಪಡುವಣದ ದಿಶೆಗೆ 
ಸರಿದ ನೇಸರ
ಕೆಂಪಾದ ರಂಗಾದ 
ಸುವರ್ಣ ವರ್ಣದಳೆದ 
ದಿನಕರನ ವಿಧ ವಿಧದ 
ರೂಪಗಳ ಅನಾವರಣ 
ಸಂಜೆಯ ಸೂರ್ಯ 
ಬೋರಲಾಗಿಟ್ಟ ಕುಂಭ
ಗಗನದಂಗಣದಲ್ಲಿ 
ತಿರುಗುವ ಬುಗುರಿ 
ಅಂಡಾಕಾರ
ಸಣ್ಣಾತಿ ಸಣ್ಣ ಗೆರೆಯಾಗಿ 
ಕಡಲಲ್ಲಿ ಲೀನ
ಗಗನದ ತುಂಬೆಲ್ಲ 
ಆವರಿಸಿದೆ  
ಬಂಗಾರ ಬಣ್ಣದ ಛಾಯೆ
ಮೋಡಗಳ ಅಂಚಿಗೆ 
ಸುವರ್ಣ ರೇಖೆ
ಸೂರ್ಯಬಿಂಬ ಕಣ್ಮರೆಯಾಗಿ 
ಊದು ಬಣ್ಣದ ಛಾಯೆ 
ನೀಲ ವರ್ಣದ ಮಬ್ಬು 
ಮಬ್ಬಾದ ಅವಕುಂಠನ 
ದೂರದ ಬಾನಿನಲಿ 
ಚುಕ್ಕಿಗಳು ಅರಳಿ 
ನಿಶೆಯು ಆವರಿಸಿದಳು 
ಜಗದ ತುಂಬ
ಮೂಕ ವಿಸ್ಮಿತನಿಲ್ಲಿ 
ಭಾವುಕ ನೋಡುಗ 
ದೇವನ ವಿಸ್ಮಯ ಸೃಷ್ಟಿಗೆ

-ಅರೆಯೂರು ಚಿ.ಸುರೇಶ್
ತುಮಕೂರು



ಸೂರ್ಯಾಸ್ತ
Imageಪಡುವಣ  ಬಾನಲಿ  ಮೂಡಿದೆ ನಸುಗೆಂಪು
ಧರೆಯಂಗಳಕಿದೊ ದುಮ್ಮಿ ಕ್ಕಿದೆ ಇರುಳ ಕಪ್ಪು
ಆವರಿಸಿದೆ ಆಗಸಕೆ ಕೌತುಕಗಳ ಬೆಡಗು
ಮುಸುಕಿದ ಮಸುಕಿನಲು ಕಾಡು ಸೊಬಗು
ಬಲೆಯೊಡ್ಡಿದೆ, ಕರೆನೀಡಿದೆ, ಬನ್ನಿರೋ ಬೇಗ
ಕಾದೊಡಲಿನ ಕಾತುರಕೆ  ಉಣಿಸಿರೆ, ಎಲೆ ಮೇಘ
ಹೆಪ್ಪಿಟ್ಟಿಹ ಕತ್ತಲಲಿ ಸೆಲೆಯೊಡೆಯಲಿ ಜೀವ
ಬರಡು ರೆಂಬೆ  ಕೊಂಬೆಯಲಿ ಹರಡಲಿ  ಕೊರಳ ರವ

ಕಪ್ಪಿನಲ್ಲಿ  ಅಚ್ಚಾಗಿಹ  ಹಚ್ಚ ಹಸಿರು
ಒಣಮೈಯ  ಕಾಷ್ಟದಲು ಬಸಿರಾಗಲು ಬಿಸಿಯುಸಿರು
ಅಸ್ತಮದ ಕಣ್ಣಂಚಿನಲಿ ಒಪ್ಪಿಗೆಯ  ಶುಭ
ಬೆಳಗಾಗುವ ಮುನ್ನ, ಹೊಸತಾಗಲು ಭವ!

ಕರೆಯುಲಿಯ ಬಟ್ಟಲ ಮೇಲ್ಚಾಚಿ ನೀಡಿ
ಮುಳುಗುತಿಹ ಸೂರ್ಯನಿಗೆ ವಿದಾಯ ಹಾಡಿ
ಧರೆಯಾಗಿ ತಟಸ್ಥ ಚಿತ್ರ, ಕೋಡಿ
ಹರಿಸಿದೆ ನಸುಗೆಂಪು, ಬಾನ ವೈಚಿತ್ರ್ಯ !

ಸಂಜೆಗೆಂಪು  ತುಂಬಲು ಬಾನೊಡಲು
ಅಸ್ತಮಿಪ ರವಿಗೆ ಕಾಡು, ನಾಡಾದರೇನು
ಮೂಡಿದರು ಇರುಳು, ರವಿ  ಕಾಣದ್ದೇನು?
ಕಣ್ತೆರೆದಿದ್ದರು, ದಿಗಂತದಲಿ  ಮರೆಯಾಗುವನವನು!

-ಅರೆಯೂರು ಶ್ರೀವೈದ್ಯಸುತ 
ಅರೆಯೂರು ವೈದ್ಯನಾಥಪುರ